ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Tuesday, December 29, 2009

ಹೊಸ ವರ್ಷದ ಹೊಸ ಸಂಭ್ರಮದಲ್ಲಿ

ಮೂಡುತಿರಲಿ ಆಶಾಕಿರಣ, ಇರುಳ ಹಿಂದೆ ಬೆಳಕಿದೆ.

ಹೂವಿನ ಹಾದಿಯಂತ ಹೊಸ ವರುಷದಲ್ಲಿ ಮೃದುವಾದ ಹೆಜ್ಜೆಯನ್ನಿಡುತ್ತಾ ಸಂಭ್ರಮ ಶುಭಾಶಯಗಳೊಂದಿಗೆ ಹೊಸ ವರುಷವನ್ನು ಸ್ವಾಗತಿಸೋಣ.ಇನ್ನೇನು ನೋಡು ನೋಡುತ್ತಿದ್ದಂತೆ ಹೊಸ ವರ್ಷ ಬಂದೇ ಬಿಡುತ್ತದೆ,ಆದರೆ ಹಿಂದಿನ ವರುಷದ ಗುಂಗಿನಲ್ಲೇ ಇದ್ದ ನಾವು ಹೊಸ ವರ್ಷದ ಮಧುರ ಕ್ಷಣಗಳನ್ನು ಸವಿಯಲು ಸಿದ್ಧರಾಗೋಣ.

     ದಿನಗಳು ಉರುಳುತ್ತಿವೆ, ಹೊಸ ವರುಷ ಬಂದು ಹೋಗುತ್ತಲೇ ಇವೆ, ಆದರೆ ನಾವು ಇಷ್ಟು ವರ್ಷಗಳಲ್ಲಿ ಸಾದಿಸಿದ್ದೇನೆಂದು ಒಂದು ನಿಮಿಷ ಕುಳಿತು ಆಲೋಚಿಸೋಣ, ಏಕೆಂದರೆ ಈಗಿನ ಯುವ ಜನತೆ ಹೊಸ ವರ್ಷದ ಹೆಸರಿನಲ್ಲಿ ವರ್ಷದ ಕೊನೆಯ ದಿನದಂದು ಮೋಜು ಮಸ್ತಿಯಲ್ಲೆ ದಿನ ಕಳೆಯುತ್ತಾರೆ, ಇದು ಎಷ್ಟರ ಮಟ್ಟಿಗೆ ಸರಿ? ಬರೀ ಪಾರ್ಟಿ ಮಾಡುವುದರೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಗಳು ಮುಗಿದು ಹೋಗಬೇಕಾ? ಇಷ್ಟಕ್ಕೆ ಸೀಮಿತವಾಗಬಾರದು ನಮ್ಮ ಯೋಜನೆಗಳು, ಕನಸುಗಳು, ಎಷ್ಟೋ ವ್ಯಕ್ತಿಗಳು ಹಲವು ತರಹದ ಕನಸುಗಳನ್ನು ಕಂಡಿರುತ್ತಾರೆ ಉದಾಹರಣೆಗೆ ಅನೇಕ ವಿಧ್ಯಾರ್ಥಿಗಳು ಚನ್ನಾಗಿ ಓದಿ ಹೆಸರುಗಳಿಸಬೇಕೆಂದಿರುತ್ತಾರೆ, ಇನ್ನು ಓದಿ ಮುಗಿದವರು ಒಳ್ಳೆಯ ಕೆಲಸವನ್ನು ಪಡೆಯಬೇಕೆಂದಿರುತ್ತಾರೆ.

     ಹೊಸ ವರ್ಷ ಬಂತೆಂದು ಖುಷಿ ಪಡುತ್ತಿರುವಾಗ ಕನಸಾಗಿ ಉಳಿದ ಅನೇಕ ಸಂಗತಿಗಳು ನೆನಪಿಗೆ ಬಂದು ನಮ್ಮನ್ನು ಕಾಡುತ್ತವೆ. ಹೊಸ ವರುಷದಲ್ಲಿ ನಿಮ್ಮ ಕನಸುಗಳನ್ನೆಲ್ಲಾ ನನಸಾಗಿಸಿಕೊಳ್ಳಿ, ನಾವು ಹೊಸ ವರುಷವನ್ನು ನಗು ನಗುತ್ತಾ ಸ್ವಾಗತಿಸುವುದರ ಜೊತೆಗೆ ನಮ್ಮ ಕನಸುಗಳನ್ನು ಯೋಜನೆಗಳನ್ನು ಸಾಧಿಸುವತ್ತ ದಾಪುಗಾಲಿಡೋಣ, ನನ್ನ ನೆಚ್ಚಿನ ಕಾದಂಬರಿಕಾರರಾದ ಯಂಡಮೂರಿ ವೀರೇಂದ್ರನಾಥರು ಹೇಳುವಂತೆ ಯಾವುದೇ ಕೆಲಸವನ್ನು ಕಷ್ಟಪಟ್ಟು ಮಾಡದೆ ಇಷ್ಟ ಪಟ್ಟು ಮಾಡಿದರೆ ಮಾತ್ರ ನಾವು ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರಬಹುದು.

ಎಲ್ಲರೂ ನಿಮ್ಮ ಕನಸುಗಳನ್ನು ನನಸಾಗಿಸುವತ್ತ ಯೋಚಿಸಿ.. ನಿಮ್ಮ ಕನಸುಗಳೆಲ್ಲಾ ನನಸಾಗಲಿ ಎನ್ನುವ ಹಾರೈಕೆಯೊಂದಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮುಂಚಿತವಾಗಿ- ಚೈತ್ರಿಕಾ ಆದಿತ್ಯ


ಮನಸ್ವಿಯ ಮಾತು:-
    
     ಪ್ರಿಯ ಬ್ಲಾಗ್ ಓದುಗರೆ, ಬರೀ ಓದುಗರೇ ಅಂದ್ರೆ ಸಾಕಾಗೋದಿಲ್ಲ, ಪ್ರೀತಿಯ ಸ್ನೇಹಿತರೆ/ಸ್ನೇಹಿತೆಯರೇ... ಇದು ನನ್ನ ಅರ್ಧಾಂಗಿಯ ಮೊದಲನೇ ಲೇಖನ ನನ್ನ ಬ್ಲಾಗ್ನಲ್ಲಿ, ಇನ್ನು ಮುಂದೆ ಇದು ನಮ್ಮಿಬ್ಬರ ಬ್ಲಾಗ್ ಆಗಿರುತ್ತೆ, ಈ ಬ್ಲಾಗ್ ನ ಫಾಲೋವರ್ ೨೩ ಜನರಿದ್ದಾರೆ ಅನ್ನೋದು ಮತ್ತೊಂದು ಖುಷಿಯ ವಿಚಾರ, ನಾನು ತುಂಬಾ ದಿನದಿಂದ ಬರಿಬೇಕು ಅಂತ ಇದ್ದೆ ಆದ್ರೆ ಆಗಲೇ ಇಲ್ಲ, ಕಾರಣ ಕೊಡಲಿಕ್ಕೆ ಸುಮಾರು ಇದೆ, ಆದರೆ ಕಾರಣ ಕೊಡೋದಿಲ್ಲ, ಆದಷ್ಟು ಬೇಗ ನಾನು ಲೇಖನ ಬರಿತೀನಿ, ಪ್ರೀತಿ ಸದಾ ಹೀಗೆ ಇರಲಿ, ಮತ್ತೊಮ್ಮೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮುಂಚಿತವಾಗಿ.

Saturday, October 10, 2009

ಡೈರೆಕ್ಟ್ ಟು ಹೋಮ್(DTH) ಸೇವೆ ಬರುವ ಮುನ್ನ ಹಳ್ಳಿಗಳಲ್ಲಿ ಟೀವಿ ವೀಕ್ಷಣೆ ಹೇಗೆ ಸಾಧ್ಯವಿತ್ತು

ಡೈರೆಕ್ಟ್ ಟು ಹೋಮ್




 (ಉಪಗ್ರಹದಿಂದ ನೇರ ಮನೆಗೆ) ಸೇವೆಯನ್ನು ವಿಸ್ತರಿಸಿ ಹೇಳುವುದಾದರೆ ಉಪಗ್ರಹದಿಂದ ನೇರವಾಗಿ ನಿಮ್ಮ ಮನೆಗೆ ಡಿಶ್ ಮತ್ತು ರಿಸೀವರ್ ನ ಮೂಲಕ ನಿಮ್ಮ ಆಯ್ಕೆಯ ಎಲ್ಲಾ ಚಾನಲ್ಲುಗಳನ್ನು! (ಸೇವಾದಾರರು ನೀಡಿದ ಪ್ಯಾಕೇಜ್ ಆಯ್ಕೆ ಮಾಡಿಕೊಂಡು) ದುಡ್ಡು ಕಟ್ಟಿ ನೋಡಬಹುದು, ಡಿಟಿಹೆಚ್ ಬಗ್ಗೆ ಯಾರಿಗೆ ಗೊತ್ತಿಲ್ಲ ಮತ್ತೆ ಯಾಕೆ ಹೇಳ್ತಾ ಇರಬಹುದು ಯೋಚಿಸುತ್ತಿರುವಿರಾ?

     ಹೌದು ನಾನು ಹೇಳಲಿಕ್ಕೆ ಹೊರಟಿರೋದು ಉಪಗ್ರಹದಿಂದ ನೇರ ಮನೆಗೆ ಉಚಿತವಾಗಿ ಲಭ್ಯವಿದ್ದ ಸೇವೆಯ ಬಗ್ಗೆ! ಡಿಟಿಹೆಚ್ ಸೇವೆ ಭಾರತದಲ್ಲಿ ಆರಂಭವಾಗಿ ಅಬ್ಬಬ್ಬಾ ಎಂದರೂ ಎರಡರಿಂದ ಮೂರು ವರ್ಷ ಆಗಿರಬಹುದು,ಆದರೆ ನಮ್ಮ ದೇಶದ ಹಳ್ಳಿಗಳಲ್ಲಿ ಡಿಟಿಹೆಚ್ ಸೇವೆ ಆರಂಭವಾಗುವ ಮೊದಲು ಮತ್ತು ಕೇಬಲ್ ಸೇವೆ ಲಭ್ಯವಾಗದಂತಹ ಪ್ರದೇಶಗಳಲ್ಲಿ ಟಿವಿ ಚಾನಲ್ಲುಗಳನ್ನು ಹೇಗೆ ನೋಡುತ್ತಿದ್ದರು ಎಂದು ನಿಮ್ಮಲ್ಲಿ ಅನೇಕ ಜನರಿಗೆ ಕುತೂಹಲ ಇರಬಹುದು, ಹಳ್ಳಿಗಳಲ್ಲಿ ಅತಿ ಹೆಚ್ಚಿನ ಮನೆಗಳಲ್ಲಿ ಉಪಗ್ರಹದಿಂದ ನೇರ ಮನೆಗೆ ಸಂಪೂರ್ಣ ಉಚಿತ ಸೇವೆ ಬಳಸುತ್ತಾ ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ವರ್ಷಗಳು ಕಳೆದಿವೆ, ಇದನ್ನು ಕೇಳಿ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ನಿಜ. ನನಗೆ ಗೊತ್ತಿರುವ ಪುಟ್ಟ ಮಾಹಿತಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ. ಮೊದಲು ಹಳ್ಳಿಗಳಲ್ಲಿ ಮನೋರಂಜನೆಗಾಗಿ ಟಿವಿ ಮಾಧ್ಯಮದ ವೀಕ್ಷಣೆಗಾಗಿ ಅತಿ ಹೆಚ್ಚು ಖರ್ಚು ಮಾಡಬೇಕಾಗಿದ್ದು ಅನಿವಾರ್ಯವಾಗಿತ್ತು...


     ಹಳ್ಳಿಗಳಲ್ಲಿ ಮೊದಲು ಬಂದಿದ್ದು ದೂರದರ್ಶನ್ ( ಇದು ಡಿಡಿ) ಚಾನಲ್ಲುಗಳು, ಆರು ಅಡಿಯ ಡಿಶ್ ಹಾಗೂ ಎಸ್ ಬ್ಯಾಂಡಿನ  ಎಲ್ ಎನ್ ಬಿ (LNB)  ಮತ್ತು   ಅನಲಾಗ್ ರಿಸೀವರ್ ಮೂಲಕ ಡಿಡಿ ನ್ಯಾಶನಲ್ ಹಾಗೂ ಇನ್ನೊಂದು ಪ್ರಾದೇಶಿಕ ಚಾನಲ್ಲು ಒಟ್ಟು ಎರಡು ಟಿವಿ ಚಾನಲ್ ನೋಡಬಹುದಾದ ಉಚಿತ ಉಪಗ್ರಹ ಸೇವೆ ಲಭ್ಯವಿತ್ತು, ಅದಕ್ಕೆ ತಗಲುತ್ತಿದ್ದ ವೆಚ್ಚ ಸುಮಾರು ಆರರಿಂದ ಎಂಟು ಸಾವಿರ ರೂಪಾಯಿಗಳಿರಬೇಕು ಅಷ್ಟು ಸರಿಯಾಗಿ ನೆನಪಿಗೆ ಬರುತ್ತಿಲ್ಲ, ಅದು ಅಷ್ಟು ಜನಪ್ರಿಯವಾಗಲೂ ಇಲ್ಲ, ನಂತರ ಬಂದಿದ್ದು ಸಿ-ಬ್ಯಾಂಡ್ ಎಲ್ ಎನ್ ಬಿ ಮತ್ತು ಅನಲಾಗ್ ರಿಸೀವರ್, ಇದು ಅನೇಕ ವರ್ಷಗಳವರೆಗೆ ಚಾಲ್ತಿಯಲ್ಲಿ ಇತ್ತು, ಇದರಲ್ಲಿ ಡಿಶ್ ಹನ್ನೆರಡು ಅಡಿ ಅಥವಾ ಎಂಟು ಅಡಿಯದ್ದಾಗಿದ್ದು ಅದನ್ನು ಬೇರೆ ಬೇರೆ ಸ್ಯಾಟಲೈಟ್ ಗಳ ದಿಕ್ಕಿಗೆ ಹೊಂದಿಸಿ ಬೇರೆ ಬೇರೆ ಚಾನಲ್ಲುಗಳ ತರಂಗಾಂತರಗಳನ್ನು ಪಡೆಯಲು ಶಕ್ತವಾಗಿದ್ದವು ಆದರೆ ಈಗಿನ KU-BAND DTH ಸೇವೆ ಪಡೆಯಲು ಕೇವಲ ಎರಡು ಅಡಿಯ ಡಿಶ್ ಇದ್ದರೆ ಸಾಕು, ಆದರೆ ಸಿ ಬ್ಯಾಂಡಿನ ಸಿಗ್ನಲ್ ಪಡೆಯಲು ದೊಡ್ಡದಾದ ಡಿಶ್ ಅವಶ್ಯವಾಗಿ ಬೇಕಾಗಿತ್ತು,

ಅದರಲ್ಲಿ ಮೊದಲು ಬಂದ ಮಾದರಿಯಲ್ಲಿ ಡಿಶ್ ಅನ್ನು ಎಡಕ್ಕೆ ಮತ್ತು ಬಲಕ್ಕೆ ತಿರುಗಿಸಲು ಮತ್ತು ಮೇಲೆ ಕೆಳಗೆ ಅಡ್ಜಸ್ಟ್ ಮಾಡಲು ಬೇರೆ ಬೇರೆ ಎರಡು ಹ್ಯಾಂಡಲ್ ಗಳಿದ್ದವು ಇದು ಸ್ವಲ್ಪ ಕಷ್ಟಕರವಾಗಿತ್ತು,


 ನಂತರದ ದಿನಗಳಲ್ಲಿ ಆ ಮಾದರಿಯಲ್ಲಿ ಸುಧಾರಣೆಯಾಗಿ ಸಿಂಗಲ್ ಪೋಲ್ ಡಿಶ್ ಗಳು ಚಾಲ್ತಿಗೆ ಬಂದವು, ಸಿಂಗಲ್ ಪೋಲ್ ಎಂದರೆ ಡಿಶ್ ನ ಒಂದು ಹ್ಯಾಂಡಲನ್ನು ತಿರುಗಿಸುವ ಮೂಲಕ ಡಿಶ್ ನ ದಿಕ್ಕು ಮತ್ತು ಎತ್ತರವನ್ನು ಹೊಂದಿಸಿ ಬೇರೆ ಬೇರೆ ಉಪಗ್ರಹಗಳಿಂದ ಟೀವಿ ಚಾನಲ್ ಗಳನ್ನು ನೋಡಬಹುದಾಗಿತ್ತು,


 ಇದರಲ್ಲಿ ಲಭ್ಯವಾಗುತ್ತಿದ್ದುದು ಬರೀ ದೇಶೀಯ ಚಾನಲ್ಲುಗಳಲ್ಲದೆ ಅಂತರರಾಷ್ಟ್ರೀಯ ಚಾನಲ್ಲುಗಳು ಲಭ್ಯವಾಗುತ್ತಿತ್ತು, ನೂರಕ್ಕೂ ಹೆಚ್ಚು ದೇಶೀಯ ವಿದೇಶೀಯ ಚಾನಲ್ಲುಗಳು ಉಚಿತವಾಗಿ ಲಭ್ಯವಾಗುತ್ತಿದ್ದವು ಮೊದಲು ಸ್ಟಾರ್ ನವರ ಎಲ್ಲಾ ಚಾನಲ್ಲುಗಳು, ಜೀ ಟೀವಿಯವರ ಅನೇಕ ಚಾನಲ್ಲುಗಳು ಉಚಿತವಾಗಿ ಲಭ್ಯವಾಗುತಿತ್ತು.ಇದೆಲ್ಲವೂ ಅನಲಾಗ್ ತಂತ್ರಜ್ಞಾನದಲ್ಲಿ ಲಭ್ಯವಾಗುತಿತ್ತು. ಅನಲಾಗ್ ತಂತ್ರಜ್ಞಾನದಲ್ಲಿ ಇದ್ದ ಒಂದು ಕೊರತೆಯೆಂದರೆ ಉಪಗ್ರಹದ ಒಂದು ಟ್ರಾನ್ಸ್ಪಾಂಡರಿನಲ್ಲಿ ಒಂದೇ ಚಾನಲ್ಲು ಪ್ರಸಾರವಾಗುತ್ತಿತ್ತು...ಭಾರತದ ಉಪಗ್ರಹದಲ್ಲಿ ಹೆಚ್ಚೆಂದರೆ ೧೨ ಟ್ರಾನ್ಸ್ಪಾಂಡರ್ ಇರುತ್ತಿದ್ದುದರಿಂದ ಕೇವಲ ಹತ್ತು, ಹನ್ನೆರಡು ಚಾನಲ್ ಪ್ರಸಾರ ಸಾಧ್ಯವಾಗುತಿತ್ತು, ಚಾನೆಲ್ಲಿನ ಒಡೆಯರು ತಮ್ಮ ಒಂದೊಂದು ಚಾನಲ್ಲನ್ನು ಪ್ರಸಾರ ಮಾಡಲು ಒಂದು ಟ್ರ್ಯಾನ್ಸ್ಪಾಂಡರನ್ನು ಬಾಡಿಗೆಗೆ ಪಡೆಯುವುದು ಅನಿವಾರ್ಯವಾಗಿತ್ತು.. ಅದಕ್ಕೆ ಅನೇಕ ಚಾನಲ್ ಮಾಲಿಕರುಗಳು ವಿದೇಶಿ ಉಪಗ್ರಹದ ಮೂಲಕ ಚಾನಲ್ಲುಗಳನ್ನು ಪ್ರಸಾರಮಾಡುತ್ತಿದ್ದರು.. ಹೊಸದೊಂದು ಉಪಗ್ರಹ ಉಡಾವಣೆಯಾದ ತಕ್ಷಣ ಅದರಲ್ಲಿ ಬಾಡಿಗೆ ಕಡಿಮೆಯಿದ್ದರೆ ತಮ್ಮ ಚಾನಲ್ ಹೊಸ ಉಪಗ್ರಹಕ್ಕೆ ಬದಲಾಯಿಸುವುದು ಸಾಮಾನ್ಯವಾಗಿತ್ತು... ನನ್ನ ಅನಿಸಿಕೆಯ ಪ್ರಕಾರ ಕೆಲವು ಚಾನಲ್ಲಿನ ಮಾಲಿಕರುಗಳು ಮೊದಲು ಬಾಡಿಗೆ ಕಟ್ಟುತ್ತಿದ್ದ ಉಪಗ್ರಹದವರಲ್ಲಿ ಒಂದು ತಿಂಗಳ ಬಾಡಿಗೆ ಕಟ್ಟದೇ ಬಾಕಿ ಉಳಿಸಿಕೊಂಡು ಮತ್ತೊಂದು ಉಪಗ್ರಹಕ್ಕೆ ಹಾರುತ್ತಿದ್ದರೋ ಏನೋ?... ಟೆಲಿ ಕಮ್ಯುನಿಕೇಶನ್ ನ ಒಳಗಿನ ವಿಚಾರಗಳನ್ನು ಕಲ್ಪಿಸಿಕೊಂಡು ಏನೇನೋ ಬರೆದರೆ ತಪ್ಪಾದೀತು.. ಇರಲಿ ನಮಗೇಕೆ!!
ಅನಲಾಗ್ ರಿಸೀವರಿನಲ್ಲಿ ರೇಡಿಯೋದಲ್ಲಿರುವ ಟ್ಯೂನರಿನಂತೆ ವೀಡಿಯೋ ಮತ್ತು ಆಡಿಯೋ ಟ್ಯೂನಿಂಗ್ ಸ್ಕ್ರೋಲಿಂಗ್ ನಾಬ್ ಇರುತ್ತದೆ ಅದನ್ನು ತಿರುಗಿಸುತ್ತಾ ಹೋದರೆ ಚಾನಲ್ ಟ್ಯೂನ್ ಆಗುತಿತ್ತು.. ಪ್ರತಿ ಚಾನೆಲ್ಲಿಗೂ ವೀಡಿಯೋ ಮತ್ತು ಆಡಿಯೋ ನಾಬ್ ತಿರುಗಿಸ ಬೇಕಾಗಿತ್ತು, ಏಕೆಂದರೆ ದೄಶ್ಯ ಮತ್ತು ದ್ವನಿ ಬೇರೆ ಬೇರೆ ತರಂಗಾಂತರಗಳಲ್ಲಿ ಪ್ರಸಾರವಾಗುತ್ತಿತ್ತು, ಇದರಲ್ಲಿನ ತೊಂದರೆಯೆಂದರೆ ಪದೇ ಪದೇ ಟ್ಯೂನ್ ಮಾಡುವುದರಿಂದ ನಾಬ್ ಸಡಿಲಗೊಂಡು ಟೀವಿಯಲ್ಲಿ ಚುಕ್ಕೆಗಳು ಮತ್ತು ದ್ವನಿ ಸರಿಯಾಗಿ ಕೇಳದೇ ಕರ್ಕಶವಾಗಿ ಕೇಳತೊಡಗುತ್ತದೆ ಮತ್ತು ಇದಕ್ಕೆ ರಿಮೋಟ್ ಸಹ ಇರದೇ ಇದ್ದದ್ದು ಅತಿ ದೊಡ್ಡ ತೊಂದರೆಯಾಗಿತ್ತು, ನಂತರದ ದಿನಗಳಲ್ಲಿ ಅನಲಾಗ್ ರಿಸೀವರಿನ ಯುಗಕ್ಕೆ ಮುಕ್ತಾಯ ಹಾಡಲು ಅವತರಿಸಿದ್ದು ಡಿಜಿಟಲ್ ರಿಸೀವರ್, ಇದರಲ್ಲಿ ಉತ್ಕೃಷ್ಟ ಗುಣಮಟ್ಟದ ವೀಡಿಯೋ ಮತ್ತು ಆಡಿಯೋ ಸೇವೆ ಪಡೆಯಲು ಸಾದ್ಯವಾಯಿತು, ಇದರಲ್ಲಿ ಅತ್ಯುತ್ತಮ ವೀಡಿಯೋ ಆಡಿಯೋ ಸ್ಪಷ್ಟತೆ ಮೊದಲನೆಯದಾದರೆ.. ಉಪಗ್ರಹದ ಒಂದು ಟ್ರಾನ್ಸ್ಪಾಂಡರಿನಲ್ಲಿ ಒಂದಕ್ಕಿಂತ ಹೆಚ್ಚು ಚಾನಲ್ಲುಗಳನ್ನು ಒಂದೇ ತರಂಗಾಂತರದಲ್ಲಿ ಪ್ರಸಾರ ಮಾಡಲು ಶಕ್ತವಾಗಿದ್ದವು.. ಸ್ಯಾಟಲೈಟ್ ಚಾನಲ್ಲಿನ ಒಡೆಯರಿಗೆ ಇದೊಂದು ವರಧಾನವಾಯಿತು.. ಮೊದಲಾದರೆ ಪ್ರತಿ ಚಾನಲ್ಲಿಗೆ ಒಂದೊಂದು ಟ್ರಾನ್ಸ್ಪಾಂಡರಿಗೆ ಉಪಗ್ರಹ ಬಾಡಿಗೆ ಕಟ್ಟಬೇಕಾಗಿತ್ತು.. ಅದೇ ಈಗ ಒಂದು ಟ್ರಾನ್ಸ್ಪಾಂಡರಿಗೆ ಬಾಡಿಗೆ ಕಟ್ಟಿದರೆ ತಮ್ಮೆಲ್ಲಾ ಚಾನಲ್ಲುಗಳನ್ನು ಒಟ್ಟಿಗೆ ಒಂದೇ ಟ್ರಾನ್ಸ್ಪಾಂಡರಿನ ಮೂಲಕ ಪ್ರಸಾರ ಮಾಡಬಹುದು... ಡಿಜಿಟಲ್ ರಿಸೀವರ್ ಗೆ ಡಿಶ್ ಮತ್ತು ಎಲ್ ಎನ್ ಬಿ ಮುಂಚಿನದೆ ಆಗಿದ್ದು ಕೇವಲ ಅನಲಾಗ್ ರಿಸೀವರ್ ಬದಲು ಡಿಜಿಟಲ್ ರಿಸೀವರ್ ಬದಲಾಗಿ ಸ್ಥಾನ ಅಲಂಕರಿಸಿದ್ದು ವಿಶೇಷ.


ಡಿಜಿಟಲ್ ರಿಸೀವರ್ ನಲ್ಲಿ ಚಾನಲ್ ವೀಕ್ಷಿಸಲು ಚಾನೆಲ್ಲಿನ ತರಂಗಾಂತರ(ಫ್ರೀಕ್ವೆನ್ಸಿ) ಮತ್ತು ಸಿಂಬಲ್ ರೇಟ್ ಒಮ್ಮೆ ಫೀಡ್ ಮಾಡಿದರಾಯಿತು. ಪ್ರತಿಯೊಂದು ಗ್ರೂಪ್ ನ ಚಾನೆಲ್ ಗೆ ಬೇರೆ ಬೇರೆ ಫ್ರೀಕ್ವೆನ್ಸಿ ಮತ್ತು ಸಿಂಬಲ್ ರೇಟ್ ಇರುತ್ತದೆ ಅದು ಅಂತರ್ಜಾಲದಲ್ಲಿ ಸಿಗುತ್ತದೆ ಅಥವಾ ಸೆಟಲೈಟ್ ಎಂಡ್ ಕೇಬಲ್ ಟೀವಿಯಂತಹ ಅನೇಕ ಮ್ಯಾಗಜೀನ್ ಗಳಲ್ಲಿ ಅವುಗಳ ಪಟ್ಟಿಯೇ ದೊರೆಯುತ್ತದೆ, ಡಿಜಿಟಲ್ ರಿಸೀವರಿನ ಬಗ್ಗೆ ಹೆಚ್ಚು ಹೇಳಲು ಹೋದರೆ ಸುಮ್ಮನೆ ಬೋರ್ ಹೊಡೆಸಿದಂತಾಗುತ್ತದೆ,ಉಚಿತವಾಗಿ ದೊರೆಯುವ ಚಾನಲ್ಲುಗಳನ್ನು ಫ್ರೀ ಟು ಏರ್ ಚಾನೆಲ್ ಮತ್ತು ದುಡ್ಡು ಕಟ್ಟಿದರೆ ಮಾತ್ರ ನೋಡಬಹುದಾದ ಚಾನಲ್ಲುಗಳನ್ನು ಸ್ಕ್ರ್ಯಾಂಬಲ್ಡ್ ಚಾನೆಲ್ ಅಥವಾ ಪೇ ಚಾನೆಲ್ ಎಂದು ಕರೆಯುತ್ತಾರೆ. ಡಿಟಿಹೆಚ್ ಭಾರತದಲ್ಲಿ ಕಣ್ತೆರೆಯುವ ಮುನ್ನ ದುಡ್ಡು ಕಟ್ಟಿ ನೋಡುವ, (ಸ್ಕ್ರಾಂಬಲ್ಡ್ ) ಪೇ ಚಾನಲ್ ಗಳನ್ನು ಒಬ್ಬ ಗ್ರಾಹಕ ಸ್ವಂತವಾಗಿ ಪಡೆಯುವುದು ಅಸಾಧ್ಯದ ಮಾತಾಗಿತ್ತು, ಪೇ ಚಾನಲ್ ಗಳು ಕೇಬಲ್ ಸೇವೆ ಒದಗಿಸುವವರಿಗೆ ಮಾತ್ರ ಲಭ್ಯವಿತ್ತು ಅದರಲ್ಲಿಯೂ ಕನಿಷ್ಟ ೫೦೦ ಜನ ಗ್ರಾಹಕರನ್ನು ಹೊಂದಿರಬೇಕೆಂಬ ಶರತ್ತು ಅನ್ವಯವಾಗುತಿತ್ತು, ಏಕೆಂದರೆ ಇಂದು ಡಿ.ಟಿ.ಹೆಚ್ ಸೇವೆ ಉಪಯೋಗಿಸುತ್ತಿರುವ ಮನೆಗಳಲ್ಲಿ ಟೀವಿಯ ಜೊತೆ ಬಂದು ಕುಳಿತಿರುವ ಪುಟ್ಟ ಬಾಕ್ಸ್ ಗೆ ಸೆಟ್ ಟಾಪ್ ಬಾಕ್ಸ್ ಎಂದು ಕರೆಯಲಾಗುತ್ತಿದೆ ಅದು ಡಿಜಿಟಿಲ್ ರಿಸೀವರಿಗೆ ದೊರೆತಿರುವ ಮತ್ತೊಂದು ಹೆಸರಾಗಿದೆ.

  ಯಾವುದೇ ಒಂದು ಚಾನಲ್ ಬೇರೆ ಉಪಗ್ರಹದಿಂದ ಪ್ರಸಾರ ಆರಂಭಿಸಿದಾಗ ಹೊಸ ತರಂಗಾಂತರ(ಫ್ರೀಕ್ವೆನ್ಸಿ)ಯಲ್ಲಿ ಟೀವಿ ಚಾನಲ್ ಗಳು ಲಭ್ಯವಾಗುತ್ತವೆ, ಅವುಗಳು ಕೇಬಲ್ ಟೀವಿ ಉದ್ಯಮಕ್ಕೆ ಸಂಬಂದಪಟ್ಟ ಅನೇಕ ಮ್ಯಾಗ್ ಜೀನ್ ಗಳಲ್ಲಿ ಎಲ್ಲಾ ಉಪಗ್ರಹದ ಡೌನ್ ಲೋಡ್ ಪ್ರೀಕ್ವೆನ್ಸಿ ಮತ್ತು ಸಿಂಬಲ್ ರೇಟ್ ಸಿಗುತ್ತವೆ, ಬೇರೆ ಬೇರೆ ಉಪಗ್ರಹಗಳನ್ನು ಹುಡುಕಿ ಚಾನಲ್ ನೋಡುವ ಹವ್ಯಾಸ ಉಳ್ಳವರು ತಮ್ಮನ್ನು ಸ್ಯಾಟ್ ಟ್ರ್ಯಾಕರ್ ಎಂದು ಕರೆದುಕೊಳ್ಳುತ್ತಾರೆ, ಉದಾಹರಣೆಗೆ ಎಲ್ಲಾ ಉಪಗ್ರಹಗಳಿಂದ ಎಲ್ಲಾ ಕಡೆ ಚಾನಲ್ಲುಗಳು ಸಿಗುವುದಿಲ್ಲ, ಅವುಗಳ ಪ್ರಸಾರ ಯಾವ ಯಾವ ಖಂಡಗಳಲ್ಲಿ ಲಭ್ಯವಾಗುತ್ತವೆ ಎನ್ನುವುದನ್ನು ಫೂಟ್ ಪ್ರಿಂಟ್ ಎಂದು ಕರೆಯಲಾಗುತ್ತದೆ, ಇನ್ನು ಪ್ರಸಾರ ಯಾವ ತರಹದ್ದು ಎನ್ನುವುದರ ಮೂಲಕ ಅವುಗಳು ಎಲ್ಲೆಲ್ಲಿ ಲಭ್ಯವಾಗುತ್ತವೆ ಎಂದು ತಿಳಿದುಕೊಳ್ಳಬಹುದು, ವೈಡ್ ಬೀಮ್ ನಲ್ಲಿ ಚಾನಲ್ಲ್ ಪ್ರಸಾರವಾಗುತ್ತಿದ್ದರೆ ಹಲವು ದೇಶಗಳಿಗೆ ಖಂಡಗಳಿಗೆ ಆ ಚಾನಲ್ ಲಭ್ಯವಾಗುತ್ತವೆ, ಇನ್ನು ಝೋನ್ ಬೀಮ್ ಅಥವಾ ಏಶಿಯಾ ಬೀಮ್ ಹೀಗೆ ಎಲ್ಲೆಲ್ಲಿಗೆ ತಮ್ಮ ಚಾನಲ್ಲುಗಳು ಲಭ್ಯವಾಗುತ್ತವೆ ಎನ್ನುವುದನ್ನು ಫೂಟ್ ಪ್ರಿಂಟ್ ಮ್ಯಾಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ.


     ಆದರೆ ಡಿಟಿಹೆಚ್ ಸೇವೆ ಸಂಪೂರ್ಣವಾಗಿ ಗ್ರಾಹಕನ ಇಚ್ಚೆಗೆ ತಕ್ಕಂತೆ ಸೇವೆ ಪಡೆಯಲು ಸಾದ್ಯವಾಗಿಲ್ಲ, ಸದ್ಯಕ್ಕೆ ಲಭ್ಯವಿರುವಂತ ಬೇರೆ ಬೇರೆ ಡಿಟಿಹೆಚ್ ಸೇವೆ ಒದಗಿಸುತ್ತಿರುವವರು ಪ್ರೀಪೇಯ್ಡ್ ಮೊಬೈಲ್ ಸೇವೆಯಂತೆಯೇ ಡಿ.ಟಿ ಹೆಚ್ ಸೆಟ್ ಟಾಪ್ ಬಾಕ್ಸ್ ನ ಜೊತೆಗೊಂದು ಸ್ಮಾರ್ಟ್ ಕಾರ್ಡ್ ಅನ್ನು ಒದಗಿಸುತ್ತಾರೆ ಅದು ಪ್ರೀಪೇಯ್ಡ್ ಸಿಮ್ ಕಾರ್ಡನಂತೆ ದುಡ್ದಿದ್ದರೆ ಮಾತ್ರ ಚಾನಲ್ ಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ, ಇದರಲ್ಲಿ ಬೇಸರದ ವಿಚಾರವೆಂದರೆ ಪ್ರತಿ ಸೇವಾದಾತರು ಬೇರ‍ೆ ಬೇರೆ ಸ್ಕ್ರ್ಯಾಂಬ್ಲಿಂಗ್ ಟೆಕ್ನಾಲಜಿ ( ಪೇ ಚಾನಲ್ ಎನ್ ಕೋಡಿಂಗ್) ಬಳಸುತ್ತಿರುವುದರಿಂದ ಒಮ್ಮೆ ಒಂದು ಡಿ.ಟಿ ಹೆಚ್ ಸೇವೆ ಪಡೆದ ಮೇಲೆ ಮತ್ತೊಂದು ಡಿಟಿಹೆಚ್ ಸೇವೆ ಪಡೆಯಲು ಅಸಾದ್ಯ, ಬೇಕೇ ಬೇಕೆಂದರೆ ಹೊಸದಾಗಿ ಸೆಟ್ ಟಾಪ್ ಬಾಕ್ಸ್ ಮತ್ತು ಡಿಶ್ ಅನ್ನು ಹೊಸದಾಗಿ ಖರೀದಿ ಮಾಡಬೇಕಾಗುತ್ತದೆ, ಇನ್ನು ಅಂಗಡಿಯಾತ ತುಂಬಾ ಪರಿಚಯದವನಿದ್ದರೆ ೫೦೦ರೂಪಾಯಿ ಕಡಿಮೆ ಮಾಡಿ ಹೊಸ ಡಿಶ್ ಇಟ್ಟು ಕೊಂಡು ಬರೀ ರಿಸೀವರ್ ಒಂದನ್ನು ಕೊಡಬಹುದು, ಆದರೂ ದುಭಾರಿ ಎನಿಸದೇ ಇರಲಾರದು, ಉದಾಹರಣೆಗೆ ಒಂದು ಕಂಪೆನಿಯ ಡಿವಿಡಿ, ಅಥವಾ ಸೀಡಿ ಪ್ಲೇ ಮಾಡಲು ಅದೇ ಕಂಪನಿಯ ಪ್ಲೇಯರ್ ಅಥವಾ ಒಂದು ಕಂಪೆನಿಯ ಸಿಮ್ ಕಾರ್ಡ್ ನ ಸೇವೆ ಪಡೆಯಲು ಅದೇ ಕಂಪನಿಯ ಮೊಬೈಲ್ ಫೋನ್ ಬಳಸುವುದು ಅನಿವಾರ್ಯವಾಗಿದ್ದರೆ? (ರಿಲಾಯನ್ಸ್ ಮತ್ತು ಟಾಟಾ ಇಂಡಿಕಾಮ್ ಸಿ.ಡಿ ಎಮ್.ಎ ಸೇವೆ ಇದೇ ತರಹದ್ದಾಗಿತ್ತು ಈಗ ಅವೆರೆಡೂ ಕಂಪೆನಿಗಳು ಜಿ.ಎಸ್ ಎಮ್ ಸೇವೆ ಓದಗಿಸುತ್ತಿವೆ) ಸೀಡಿ ಕಂಪೆನಿಗಳು ಮತ್ತು ಮೊಬೈಲ್ ಸೇವೆ ಒದಗಿಸುತ್ತಿರುವ ಕಂಪೆನಿಗಳು ಖಂಡಿತಾ ಉದ್ದಾರವಾಗುತ್ತಿರಲಿಲ್ಲವೇನೋ! ಆದರೆ ಡಿ.ಟಿ ಹೆಚ್ ಕಂಪೆನಿಗಳು ಡಿಶ್ ಮತ್ತು ಸೆಟ್ ಟಾಪ್ ಭಾಕ್ಸನ್ನು ಗ್ರಾಹಕನಿಗೆ ಬಾಡಿಗೆ ಆಧಾರದ ಮೇಲೆ ಒದಗಿಸುತ್ತಿವೆ ಜಾಹೀರಾತಿನಲ್ಲಿ ಮಾತ್ರ ಸೆಟ್ ಟಾಪ್ ಬಾಕ್ಸ್ ಮತ್ತು ಡಿಶ್ ಉಚಿತ ಎಂದು ಬರೆದಿರುತ್ತದೆ ಅದರ ಜೊತೆಗೆ * ಚಿಹ್ನೆ ಇದ್ದು ಶರತ್ತುಗಳು ಅನ್ವಯಿಸುತ್ತವೆ ಎಂದು ಬರೆದಿರುತ್ತಾರೆ!, ಸೆಟ್ ಟಾಪ್ ಭಾಕ್ಸ್ ಮೇಲೆ ಸಂಪೂರ್ಣವಾದ ಹಕ್ಕು ಡಿ.ಟಿ ಹೆಚ್ ಸೇವಾದಾರರದ್ದೆ ಆಗಿರುತ್ತದೆ.ಪೇ ಚಾನಲ್ ಗಳನ್ನು ನಿರ್ದಿಷ್ಟವಾದ ಸ್ಕ್ಯಾಂಬ್ಲಿಗ್ ಟೆಕ್ನಾಲಜಿಯಲ್ಲಿ ಮಾತ್ರ ಸೇವೆ ಓದಗಿಸುವಂತೆ ಮತ್ತು ಗ್ರಾಹಕನಿಗೆ ತನಗಿಷ್ಟವಾದ ಕಂಪೆನಿಯ ಸೇವೆ ಪಡೆಯಲು ಬರಿ ಸ್ಮಾರ್ಟ್ ಕಾರ್ಡನ್ನು ಮಾತ್ರ ಪಡೆದು ಕೊಂಡು(ಮೊಬೈಲ್ ಸಿಮ್ ಖರೀದಿಸಿದಂತೆ) ಸೇವೆ ಪಡೆದುಕೊಳ್ಳುವಂತೆ ಮಾಡಲು ಟ್ರಾಯ್ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲವೇ ಎನ್ನುವುದು ಆಶ್ಚರ್ಯಕರ ವಿಚಾರ. ಬೇಕಾದರೆ ಸೆಟ್ ಟಾಪ್ ಭಾಕ್ಸ್ ಗೆ ಇನ್ನು ಸ್ವಲ್ಪ ಹೆಚ್ಚಿನ ಹಣ ಪಡೆಯಲಿ, ಆದರೆ ಯಾವ ಶರತ್ತನ್ನು ವಿಧಿಸುವಂತಿಲ್ಲ ಹಾಗು ಯಾವ ಸೇವೆಯನ್ನು ಪಡೆದುಕೊಳ್ಳುವ ಹಕ್ಕು ಸಂಪೂರ್ಣ ಹಕ್ಕು ಗ್ರಾಹಕನದ್ದಾಗಿರುತ್ತದೆ ಎಂದು ಬರೆದುಕೊಡಲಿ, ಎಲ್ಲಾ ಕಂಪೆನಿಯವರ ಸ್ಮಾರ್ಟ್ ಕಾರ್ಡ್ ಗಳು ಒಂದೇ ಗ್ಲೋಬಲ್ ಸ್ಟ್ಯಾಂಡರ್ಡ್ ಗೆ ತರಬೇಕು ಇಲ್ಲವಾದಲ್ಲಿ ಸೇವೆ ಚನ್ನಾಗಿಲ್ಲದಿದ್ದರೂ ಅದನ್ನೆ ನೋಡುತ್ತಾ ಕೂರುವುದು ಅನಿವಾರ್ಯವಾಗುತ್ತದೆ.ಅಥವಾ ಇನ್ಯಾವುದೇ ಅತಿ ಕಡಿಮೆ ದರದಲ್ಲಿ ಅತ್ಯಂತ ಒಳ್ಳೆಯ ಪ್ಯಾಕೇಜ್ ಬೇರೆಯ ಕಂಪನಿಯವರು ನೀಡಿದರೆ ಅದರ ಪ್ರಯೋಜನ ಪಡೆಯಲು ಮತ್ತೆ ಹೊಸದಾಗಿ ರಿಸೀವರ್ ಎಲ್ಲವನ್ನು ಖರೀದಿಸುವುದು ದುಬಾರಿಯಾಗುತ್ತದೆ.

     ಡಿಟಿಹೆಚ್ ಸೇವಾದಾರರು ಗ್ರಾಹಕರಿಂದ ಭಾರಿ ಪ್ರಮಾಣದ ಹಣವನ್ನು ದೋಚುತ್ತಿದ್ದಾರೆ, ತಿಂಗಳಿಗೆ ಕನಿಷ್ಟವೆಂದರೂ ೧೦೦ ರಿಂದ ೩೦೦ ರೂಪಾಯಿಯ ತನಕ ಗ್ರಾಹಕ ಖರ್ಚು ಮಾಡಲೇ ಬೇಕಾಗಿದೆ, ಜೊತೆಗೆ ತೆರಿಗೆ ೧೨.೫ ಕಟ್ಟುವುದು ಅನಿವಾರ್ಯವಾಗಿದೆ.ಇದು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೊರೆಯಾಗಿದೆ, ನೋಡಿದ್ದಕ್ಕಷ್ಟೆ ದುಡ್ಡು ಕಟ್ಟುವ(Pay per view) ಸೇವೆ ಆರಂಭವಾಗಬೇಕು ಅಥವಾ ಪ್ಯಾಕೇಜ್ ಬದಲು ಬೇಕಾದ ಚಾನಲ್ಲುಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇನ್ನೂ ಲಭ್ಯವಾಗಿಲ್ಲ, ಉದಾಹರಣೆಗೆ ಯಾವುದೋ ಒಂದು ಚಾನೆಲ್ ಬೇಕಾದಲ್ಲಿ ಆ ಚಾನೆಲ್ ಒಂದನ್ನು ನೋಡಲು ಇಡೀ ಪ್ಯಾಕೇಜ್ ಗೆ ಹಣ ವ್ಯಯಿಸಬೇಕು ಇಡೀ ಪ್ಯಾಕೇಜ್ ನಲ್ಲಿ ಉಳಿದ ಚಾನಲ್ ಗಳನ್ನು ನೀವು ನೋಡುವ ಆಸಕ್ತಿಯಿಲ್ಲದಿದ್ದರೂ ದುಡ್ಡು ಕಟ್ಟಲೇ ಬೇಕು, ಕೆಲವು ಒಂದೇ ಚಾನಲ್ ಆಯ್ಕೆ ಲಭ್ಯವಿದೆ ಆದರೆ ಕನಿಷ್ಟವೆಂದರೂ ೨೫ ರಿಂದ ೩೦ರೂಪಾಯಿ ಒಂದು ತಿಂಗಳಿಗೆ ವ್ಯಯಿಸಬೇಕು, ಇದು ದುಬಾರಿ ಲೆಕ್ಕಾಚಾರವೇ ಆಯಿತು, ಇನ್ನು ಕೆಲವು ಪ್ಯಾಕೇಜ್ ಆಯ್ಕೆ ಮಾಡಿಕೊಂಡರೆ ಅದನ್ನು ಮತ್ತೆ ಅಷ್ಟು ಸುಲಭದಲ್ಲಿ ನಿಶ್ಕ್ರೀಯ ಗೊಳಿಸಲು ಸಾಧ್ಯವಿಲ್ಲ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾದಾಗ ಮಾತ್ರ ಆ ಪ್ಯಾಕೇಜ್ ಕೊನೆಗೊಳ್ಳುತಿತ್ತು.. ಸನ್ ಡೈರೆಕ್ಟ್ ನಲ್ಲಿ ಈಗ ಸ್ವಲ್ಪ ಬದಲಾವಣೆಯಾಗಿವೆ, ಒಂದು ತಿಂಗಳಿಗೆ ಚಂದಾದಾರರಾಗುತ್ತೀರೋ ಅಥವಾ ಯಾವಾಗಲೂ ಚಂದಾ ಹಣ ಕಟ್ಟುತ್ತಲೇ ಇರುತ್ತೀರೋ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಲಾಗಿದೆ! ಒಮ್ಮೆ ನೀವು ನಿಮ್ಮ ಚಂದಾ ಹಣ ಕಟ್ಟುವುದು ಒಂದು ದಿನ ತಡವಾದರೂ ಮುಂದಿನ ೨೪ ಘಂಟೆಗಳ ವರೆಗೆ ನಿಮಗೆ ಯಾವುದೇ ಚಾನಲ್ ಲಭ್ಯವಾಗುವುದಿಲ್ಲ.. ಉಚಿತವಾಗಿ ಪ್ರಸಾರವಾಗುತ್ತಿರುವ ಡಿಡಿ ಡೈರೆಕ್ಟ್ ಪ್ಲಸ್ ನ ಚಾನಲ್ಲುಗಳನ್ನು ಸಹ ಬ್ಲಾಕ್ ಮಾಡುತ್ತಾರೆ, ಇವಕ್ಕೆಲ್ಲ ಕಡಿವಾಣ ಹಾಕಲು ಸೂಕ್ತ ಕ್ರಮ ಟ್ರಾಯ್ ಕೈಗೊಳ್ಳಬೇಕಿದೆ.

     ಇನ್ನು ನಾನು ಅತಿ ಆಸಕ್ತಿಯಿಂದ ಕಾಯುತ್ತಿರುವುದು ಡಿಟಿ ಹೆಚ್ ನ ಮೂಲಕ ಬ್ರಾಡ್ ಬ್ಯಾಂಡ್ ಸೇವೆಗೆ, ನನ್ನಂತೆ ಬಿಎಸ್ ಎನ್ಎಲ್ ನ ಕೇಬಲ್ ಸೇವೆಯಿಂದ ಬ್ರಾಡ್ ಬ್ಯಾಂಡ್ ಸೇವೆ ಪಡೆಯುವ ಹಕ್ಕಿನಿಂದ ವಂಚಿತರಾದ ಮತ್ತು ವೈರ್ ಲೆಸ್ ಲ್ಯಾಂಡ್ ಲೈನ್ ನ ಮೂಲಕ ಫಾಸ್ಟ್ ಇಂಟರ್ನೆಟ್ ಎನ್ನುವ ಹೆಸರಿನ ಅನಿಯಮಿತ ಅತಿ ನಿಧಾನಗತಿಯ ಡಯಲ್ ಅಪ್ ಸೇವೆಯಿಂದ ಬೇಸತ್ತಿರುವ ಗ್ರಾಹಕರಿಗೆ ಬ್ರಾಡ್ ಬ್ಯಾಂಡ್ ಅನುಭವ ಸಿಗಲಿ ಎನ್ನುವ ಆಶಯ. ( ಇದ್ದಿದ್ದರಲ್ಲಿ ಫೊನ್ ಬಿಲ್ ಜೊತೆ ೨೫೦ರುಪಾಯಿ ಮಾಸಿಕ ಬಾಡಿಗೆ ಮಾತ್ರ ಹೆಚ್ಚುವರಿಯಾಗಿ ಕಟ್ಟಬೇಕು) Anyways Thanks to BSNL WLL fast internet serviece! ಕೊನೆಯ ಮಾತು ಡೈರೆಕ್ಟ್ ಟು ಹೋಮ್ ಸರ್ವೀಸ್ ನಲ್ಲಿ ಕೈಗೆಟಕುವ ಬೆಲೆಗೆ ಇಂಟರ್ನೆಟ್ ಸೇವೆ ಬಂದರೆ ಮಾತ್ರ ಚಂದಾದಾರರಾಗಿ, ಲೆಕ್ಕಾಚಾರ ಇರಬೇಕಲ್ವಾ ಎಲ್ಲದಕ್ಕೂ.ನಾನು ಬರೆದದ್ದರಲ್ಲಿ ಸಾಕಷ್ಟು ಮಾಹಿತಿ ದೊರೆತಿರಬಹುದು ಎಂದುಕೊಳ್ಳುತ್ತೇನೆ.

Monday, October 5, 2009

ಬ್ಲಾಗೋತ್ತಮ/ಉತ್ತಮ ಬ್ಲಾಗರ್ ಪ್ರಶಸ್ತಿಗೆ ಅರ್ಜಿ ಆಹ್ವಾನ

ಇತ್ತೀಚಿಗೆ ಅನೇಕ ಬ್ಲಾಗಿಗರು ಬರೆಯುವುದನ್ನು ಕಡಿಮೆ ಮಾಡುತ್ತಿದ್ದಾರೆ ಅಂತವರಿಗಾಗಿ ಉತ್ತಮ ಬ್ಲಾಗಿಗ/ ಬ್ಲಾಗ್ ಓಡತಿ ಎನ್ನುವ ಪ್ರಶಸ್ತಿಯನ್ನು ಆನ್ ಲೈನ್ ಲಾಟರಿ ಮೂಲಕ ಆರಿಸಬೇಕೆಂದಿದ್ದೇನೆ( ಆನ್ ಲೈನ್ ಲಾಟರಿಗೆ ರಾಜ್ಯ ಸರ್ಕಾರ ನಿಷೇದ ಹೇರಿದೆ)

ಮೂರಂಕಿ ಲಾಟರಿಯಲ್ಲಿ ಆರಿಸೋಣ ಬಿಡಿ!

ಪ್ರಶಸ್ತಿ ಅಂದ ಮೇಲೆ ಶರತ್ತು ಹಾಗು ಅರ್ಹತೆಗಳು ಸಾಮಾನ್ಯ ಅಲ್ಲವೆ

ಬ್ಲಾಗೋತ್ತಮ ಅಥವಾ ಉತ್ತಮ ಬ್ಲಾಗರ್ ಪ್ರಶಸ್ತಿ ಪಡೆಯಲು ಈ ಕೆಳಗಿನ ಅರ್ಹತೆ ಮತ್ತು ಶರತ್ತುಗಳು ಅನ್ವಯಿಸುತ್ತದೆ

1) ಬ್ಲಾಗ್ ಆರಂಭಿಸಿ ೮ ತಿಂಗಳು ೨೫ ದಿನಗಳು ಮೀರಿರಬಾರದು (ಪ್ರಸವ ವೇದನೆಯ ಕಾಲ ಶುಭ ಕಾಲವೆಂದು ಪರಿಗಣಿಸಲಾಗಿದೆ)

2) ಬ್ಲಾಗರ್ ವಯಸ್ಸು ಯುವಕನಾಗಿದ್ದರೆ 35 ಮೀರಿರಬಾರದು, ಮಹಿಳೆಯಾದರೆ 42 ಮೀರಿರಬಾರದು

3) ತಿಂಗಳಿಗೆ ವಾರಕ್ಕೊಂದರಂತೆ 4 ಅಥವಾ 5 ಲೇಖನಗಳು ಮೀರಿರಬಾರದು (ಅತಿ ಹೆಚ್ಚಿನ ಪೋಸ್ಟ್ ಮಾಡಿದ್ದರೆ ಅವರು ಉತ್ತಮ ಬ್ಲಾಗರ್ ಪ್ರಶಸ್ತಿಗೆ ಅನರ್ಹರು! ಏಕೆಂದರೆ ಹಿಂದಿನ ಲೇಖನಗಳನ್ನು ಓದಲು ಬಿಡದೆ ಹೊಸ ಹೊಸ ಲೇಖನ ಬರೆದರೆ ಯಾವುದನ್ನು ಓದೋದು ಎನ್ನುವ ದ್ವಂದ್ವಕ್ಕೆ ಓದುಗರು ಬೀಳುತ್ತಾರೆ)

4) ಪ್ರತಿ ಲೇಖನಕ್ಕೆ ಕಡ್ಡಾಯವಾಗಿ ಒಂದಾದರು ಕಮೆಂಟ್ ಬಂದಿರಬೇಕು, ಒಬ್ಬರೇ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ಲೇಖನಕ್ಕೆ ಕಮೆಂಟಿರಬಾರದು.
5) ನಿಮ್ಮ ಬ್ಲಾಗ್ ನಲ್ಲಿ ಬೇರೆಯವರ ನಿಮಗಿಷ್ಟವಾದ ಒಂದು ಬ್ಲಾಗ್ ನ ಲಿಂಕ್ ಆದರೂ ಕೊಟ್ಟಿರಬೇಕು (ಇಲ್ಲವಾದಲ್ಲಿ ಓದುಗರನ್ನು ಕಟ್ಟಿ ಹಾಕಿದ ಅಥವಾ ಇನ್ನೊಂದು ಉತ್ತಮ ಬ್ಲಾಗ್ ಗೆ ದಾರಿ ಮಾಡಿಕೊಡಲಿಲ್ಲ ಎನ್ನುವುದನ್ನು ಪರಿಗಣಿಸಿ ಅನರ್ಹರು ಎಂದು ತೀರ್ಮಾನಿಸಲಾಗುತ್ತದೆ.

6) ನಿಮ್ಮ ಬ್ಲಾಗ್ ನ ಫಾಲೋವರ್ ಗಳ ಸಂಖ್ಯೆ ೧೨ ದಾಟಿರಬಾರದು (ನೀವು ನನ್ನ ಬ್ಲಾಗ್ ನ್ನು ಫಾಲೋ ಮಾಡುವ ಮೂಲಕ ನನಗೆ ಪ್ರಶಸ್ತಿ ಸಿಗದಂತೆ ಮಾಡಬಹುದು!)

7) ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ ಲೇಖನಗಳು ಬೇರೆ ಯಾವುದೇ ಪತ್ರಿಕೆಗಳಲ್ಲಿ ಈ ಮೊದಲು ಪ್ರಕಟವಾಗಿರಬಾರದು

8) ಅರ್ಜಿ ಸಲ್ಲಿಸುವವರು ನಿಮ್ಮ ಅರ್ಜಿಯ ಜೊತೆ ಉತ್ತಮ ಬ್ಲಾಗರ್ ಎನಿಸಿಕೊಳ್ಳಲು ಬೇಕಾದ ಕನಿಷ್ಟ 5 ಅರ್ಹತೆಯ ಪಟ್ಟಿ ಸೇರಿಸಿ ಅರ್ಜಿ ಸಲ್ಲಿಸಬಹುದು.



ಏನು ಪ್ರಶಸ್ತಿ ಬೇಕೆಂದು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು!

ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಬಾಕಿ ಇವೆ.

Thursday, July 9, 2009

ಅಪರೂಪದ ಕೆಲವು ಆಣಿಮುತ್ತುಗಳು!!

ಕೆಲವು ಆಣಿಮುತ್ತುಗಳು ಹೀಗಿವೆ
ನಾನು: ಏ ಸುರೇಶಾ... ಸತೀಶ ಎಲ್ಲಿಗೆ ಕೆಲ್ಸಕ್ಕೆ ಹೋಗ್ತಾ ಇದಾನೆ?
ಸುರೇಸ: ಸತೀಸ ಮುಚ್ಚೇಂದ್ರ ರಾಯ್ರ ಮನೆಗೆ ಕೆಲಸಕ್ಕೆ ಹೋಗ್ತಾ ಐದಾನೆ.
( ಸುರೇಶ ಅನ್ನೋದನ್ನು ಸುರೇಸ ಮತ್ತು ಸತೀಶ ಎನ್ನುವುದನ್ನು ಸತೀಸ ಅಂದದ್ದರಲ್ಲಿ ಏನೂ ವಿಚಿತ್ರವಿಲ್ಲ.. ಅದು ಕೆಲವರಿಗೆ ಶ ಉಚ್ಚಾರ ಕಷ್ಟವಾದಾಗ "ಸ" ಕಾರ ಬರುತ್ತದೆ.. ಇಲ್ಲಿ ನಾನು ಅದನ್ನು ಹೇಳುತ್ತಿಲ್ಲ.. ಮುಚ್ಚೇಂದ್ರ ಎನ್ನುವ ಹೆಸರಿನ ಬಗ್ಗೆ ಹೇಳುತ್ತಿದ್ದೇನೆ.... ಮೃತ್ಯುಂಜಯ ಎನ್ನುವ ಹೆಸರನ್ನು ಕರೆಯಲು ಬಾರದೇ ಇದ್ದವರು ನಾಮಕರಣ ಮಾಡಿದ ಹೊಸಾ ಹೆಸರು ಮುಚ್ಚೇಂದ್ರ!)
ಅಂತಹದೇ ಮತ್ತೊಂದು ಹೆಸರು ಯೇದಾವತಿ =ವೇದಾವತಿ
ನಮ್ಮ ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ಬರುತ್ತಿದ್ದ ಗೋಪಾಲ ತಾನು ಕಾಯಂ ಕೆಲಸ ಮಾಡುವ ಮನೆಯ ಯಜಮಾನರನ್ನು ಭೂಚು ಹೆಗ್ಡೇರು ಎಂದು ಕರೆಯುತ್ತಾನೆ,
ಆದದ್ದು ಹೀಗೆ, ನಾಗಭೂಷಣ ಎನ್ನುವವರಿಗೆ ಮನೆಯಲ್ಲಿ ಪ್ರೀತಿಯಿಂದ ಕರೆದ ಹೆಸರು ಭೂಚು, ಅದೀಗ ಭೂಚು ಹೆಗಡೆಯಾಗಿದೆ.
ನಮ್ಮ ಮನೆಗೆ ಬರುವ ಒಬ್ಬ ಶೇರೇಗಾರ ಹೇಳಿದ ಮಾತು... ಭಟ್ರೇ ಸ್ಟಾರ್ ಮೇಲೆ ಸ್ಟಾರ್ ಮಾಡಿದ್ರೆ ಸಾಕಿತ್ರಿ.. ಅಷ್ಟೂ ಕಿತ್ತಾಹ್ಕ್ಯಾರೆ( ಕಿತ್ತು ಹಾಕಿದ್ದಾರೆ)
(ನಮ್ಮೂರಿನ ರಸ್ತೆಯನ್ನು ಎರಡು ವರ್ಷಗಳ ಕಾಲ ರಿಪೇರಿ ಮಾಡುತ್ತಿದ್ದಾಗ ಟಾರ್ ರೋಡಿನ ಮೇಲೆ ಮತ್ತೆ ಟಾರ್ ಹಾಕಿದ್ದರೆ ಸಾಕಾಗಿತ್ತು ಎಂದು ಹೇಳಿದ್ದು ನೆನೆಸಿಕೊಂಡು ನಗುತ್ತಿರುತ್ತೇನೆ.. ಅವನು ಟಾರ್ ಎಂದು ಹೇಳಲು ಸ್ಟಾರ್ ಎನ್ನುತ್ತಾನೆ.)
ಅವನದೇ ಮತ್ತೊಂದು ನುಡಿಮುತ್ತಿದೆ, ಅದು ಅವನೊಬ್ಬನ ಬಾಯಲ್ಲಿ ಮಾತ್ರ ಕೇಳಲು ಸಾಧ್ಯ.. ಒಂದು ದಿನ ಬಂದವನು ನಮ್ಮನೆ ಮಿಸ್ ಸರಿ ಇಲ್ಲ, ಮಿಸ್ ಎಲ್ಲಿ ರಿಪೇರಿ ಮಾಡಿಸಲಿ ಎಂದು ವಿಚಾರಿಸಿದ, ನಾವೆಲ್ಲ ತಲೆ ಕೆರೆದುಕೊಂಡು ಮಿಸ್ ಎಂದರೇನು ಎಂದು ವಿಚಾರಿಸಿದಾಗ ಅವನು ಹೇಳಿದ್ದು ಅದೇ ಅರ್ಯದು!(ಅರೆಯುವುದು).. ಮಿಸ್ ಮಾಡದು ಮಿಸ್ಸು ಅಂದ... ಸುಮಾರು ಹೊತ್ತಾದ ಮೇಲೆ ಗೊತ್ತಾಗಿದ್ದು ಅವನು ಹೇಳುತ್ತಿರುವುದು ಮಿಕ್ಸರ್ ಬಗ್ಗೆ ಎಂದು.
ಕಳೆದ ಒಂದು ವರ್ಷದ ಹಿಂದೆ ನಮ್ಮ ಊರಿನಲ್ಲೇ ಒಂದು ದೇವರ ಕಾರ್ಯ ಒಬ್ಬರ ಮನೆಯಲ್ಲಿತ್ತು.. ಊರಿನವರೇ ಹೋಗಿ ಊಟಕ್ಕೆ ಬಡಿಸುವುದು ವಾಡಿಕೆ.. ನಾನು ಹೋಗಿದ್ದೆ ಎಲ್ಲಾ ಸೇರಿ ಬಾಳೆ ಎಲೆ ಹಾಕಿಯಾಗಿತ್ತು.. ಉಪ್ಪು ಹಾಕಲು ಉಪ್ಪಿನ ಪಾತ್ರೆಯನ್ನು ಕೈಗೆ ತೆಗೆದುಕೊಂಡೆ, ಅಷ್ಟರಲ್ಲಿ ಮನೆಯ ಯಜಮಾನರು ಉಪ್ಪಿನ ಪಾತ್ರೆಯನ್ನು ನೋಡಿ ಹೇಳಿದ್ದು ಅಪೀ.. ಅದಲ್ದ ಸಾಲ್ಟ್ ಉಪ್ಪಿದ್ದು ಅದನ್ನ ಹಾಕಲಕ್ಕು ತಡಿ" ಎಂದರು!, ನನಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ ಆಮೇಲೆ ಸಾಲ್ಟ್ ಉಪ್ಪು ತಗ ಎಂದು ಅವರು ತಂದು ಕೊಟ್ಟಾಗ ಎಲ್ಲಾ ಅರ್ಥವಾಯಿತು.. ಮುಂಚೆ ನನ್ನ ಕೈಯಲ್ಲಿದ್ದದ್ದು ಹರಳುಪ್ಪಿನ ಪಾತ್ರೆ ಅವರು ತಂದು ಕೊಟ್ಟಿದ್ದು ರಿಪೈನ್ಡ್ ಟೇಬಲ್ ಸಾಲ್ಟ್! ಅದಕ್ಕೆ ಅವರು ಹೇಳಿದ್ದು ಸಾಲ್ಟ್ ಉಪ್ಪು.
ಇದರಂತೆಯೇ ಡೋರ್ ಬಾಗಿಲು ಹಾಕು, ಸ್ಟ್ರೀಟ್ ಲೈಟ್ ದೀಪ ಹಾಕಿದ್ದ ನೋಡು, ಹುಡುಕುತ್ತಾ ಹೋದರೆ ಅದೆಷ್ಟಿದೆಯೋ ಇದೇ ತರಹದ್ದು.

Friday, May 22, 2009

ಛಾಯಾಚಿತ್ರಗಳಿರುವ ಒಂದು ಬ್ಲಾಗ್ ಪರಿಚಯ

ಛಾಯಚಿತ್ರಗಳನ್ನು ನೋಡುವ ಆಸಕ್ತಿಯಿರುವವರಿಗೆ ಒಂದು ಬ್ಲಾಗ್ ಪರಿಚಯ..ನಾಗರಾಜ್ ಫೋಟೋ ಗ್ಯಾಲರಿ ಯನ್ನು ನೋಡಿ, ಇಲ್ಲಿ ನೀವು ಸಂಪೂರ್ಣವಾದ ಪ್ರಾಕೃತಿಕ ಛಾಯಚಿತ್ರಗಳು, ಪ್ರಾಣಿ, ಪಕ್ಷಿಗಳ ಫೋಟೋಗಳು ನೋಡಬಹುದು.. ಚನ್ನಾಗಿದೆ ಎನಿಸಿದರೆ ಅಲ್ಲಿಯೇ ಕಮೆಂಟಲು ಮರೆಯಬೇಡಿ.

ಕೊನೆಯಮಾತು:

ಬ್ಲಾಗ್ ವಿಳಾಸ ನೀಡಿದ್ದು ಅನುಕೂಲವಾಯಿತು ಎಂದೆನಿಸಿದವರು ಇಲ್ಲಿ ಕಮೆಂಟಬಹುದು...

Wednesday, May 13, 2009

ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಬರೆಯೋದನ್ನು ನಾನು ನಿಲ್ಲಿಸೋದು ಯಾವಾಗ?!

ನಾನು ಬ್ಲಾಗಿನಲ್ಲಿ ಬರೆಯುವಾಗ ಅನೇಕ ತಪ್ಪು ತಪ್ಪು ಪದಗಳನ್ನು ಬರೆದುಬಿಡುತ್ತೇನೆ.. ನಾನು ಬರೆಯುವಾಗ ಗೊಂದಲಕ್ಕೆ ಬೀಳುವುದುಂಟು.. ಸರಿಯಾಗಿ ಬರೆದವನು ಮತ್ತೆ ಅದು ಸರಿಯಲ್ಲವೆಂದು ಬೇಡದಲ್ಲೆಲ್ಲಾ ದೀರ್ಘಾಕ್ಷರಗಳನ್ನು ಬರೆದುಬಿಡುತ್ತೇನೆ, ಸಣ್ಣ ಅಕ್ಷರಗಳು ಇರುವಲ್ಲಿ ದೊಡ್ಡ ಅಕ್ಷರಗಳನ್ನು ಬರೆದು ಪ್ರಮಾದವಾಗುವುದೂ ಉಂಟು, ಹೀಗೆ ಯಾಕೆ ಎಂದು ನನಗೂ ಅರ್ಥವಾಗುತ್ತಿಲ್ಲ, ಆದರೆ ನಾನು ಬರೆದ ಪದ ತಪ್ಪು ಎಂದು ಬೇರೆಯವರು ಹೇಳಿದಾಗ(ಬೈದಾಗ!), ನಿನ್ನ ಸರಿಮಾಡಲು ಸಾಧ್ಯವೇ ಇಲ್ಲ ಎಂದು, ತಪ್ಪು ತಪ್ಪಾಗಿ ಬರೆಯುತ್ತೀಯ ಎಂದು ಹೇಳುವುದನ್ನು ಬಿಟ್ಟ ಗೆಳೆಯರು ಇಲ್ಲವೆಂದಿಲ್ಲ.. ನಾನು ಮತ್ತೆ ನನ್ನ ಬ್ಲಾಗಿನಲ್ಲಿ ಬರೆದದ್ದನ್ನು ಅಪ್ಪಿ ತಪ್ಪಿ ಮತ್ತೆ ಓದಿದರೆ ನಾನು ಬರೆದ ತಪ್ಪು ಅಕ್ಷರಗಳು ನನ್ನನ್ನು ನೋಡಿ ನಗುತ್ತವೆ... ಆಗ ನನ್ನ ಮನಸ್ಸಿನೊಳಗೆ ಬರುವುದಿಷ್ಟೆ... ಇಂಗ್ಲಿಷ್ ಭಾಷೆಯಲ್ಲಿ ಮೈಕ್ರೋ ಸಾಫ್ಟ್ ವರ್ಡ್ ನಲ್ಲಿ ಬರೆಯುವಾಗ ತಪ್ಪು ಪದಗಳನ್ನು ಬರೆದರೆ ಅಕ್ಷರಗಳ ಕೆಳಗೆ ಕೆಂಪು ಗೆರೆ ಬಂದು ಅದರ ಮೇಲೆ ಇಲಿಯ ಬಲಭಾಗದ(ರೈಟ್ ಕ್ಲಿಕ್!) ಗುಂಡಿಯನ್ನು ಅದುಮಿದಾಗ ಸರಿಯಾದ ಪದ ಯಾವುದೆಂದು ತೋರಿಸುವಂತೆ ಕನ್ನಡದ ಪದಗಳನ್ನು ತಪ್ಪಾಗಿ ಬರೆದರೆ ಅದನ್ನು ಗುರುತಿಸುವ ತಂತ್ರಾಂಶವಿದ್ದಿದ್ದರೆ ನನ್ನಂತೆ ಇನ್ನೂ ತುಂಬಾ ಜನರಿಗೆ ಸಹಾಯವಾಗುತಿತ್ತು ಅಂತಹ ಯಾವುದಾದರೂ ತಂತ್ರಾಂಶವಿದೆಯೇ?... ನಾನು ಇತ್ತೀಚೆಗೆ ಬರಹ ಡಾಟ್ ಕಾಮ್ ನ ಪ್ರೊ.ಜಿ, ವೆಂಕಟಸುಬ್ಬಯ್ಯನವರ ಆನ್ ಲೈನ್ ಕನ್ನಡ ನಿಘಂಟಿನ ಸಹಾಯ ಪಡೆಯುತ್ತಿದ್ದೇನೆ,, ನಿಮಗೂ ಸಹಾಯಕ್ಕೆ ಬರಬಹುದು.. ಬರಹ ಡಾಟ್ ಕಾಂ ನಿಘಂಟು ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ.. ನೀವು ಬರೆದ ಪದ ಸರಿಯಿದ್ದರೆ ಅದಕ್ಕೆ ಸಮಾನಾರ್ಥಕ ಪದವನ್ನು ತೋರಿಸುತ್ತದೆ.. ನೀವು ಬರೆದ ಪದ ತಪ್ಪಿದ್ದಲ್ಲಿ ಯಾವುದೇ ಫಲಿತಾಂಶಗಳಿಲ್ಲ ಎಂದು ತೋರಿಸುತ್ತದೆ. ಪ್ರಯತ್ನಿಸಿ.. ನಾನು ಬರೆದದ್ದರಲ್ಲಿ ತಪ್ಪುಗಳು ಇದ್ದಲ್ಲಿ ಕ್ಷಮೆ ಇರಲಿ... ನಿಮ್ಮ ಪ್ರೀತಿ ಸದಾ ಹೀಗೆ ಇರಲಿ .

Monday, April 13, 2009

ಬಂಗಲೆ ಮನೆ ರಹಸ್ಯ ಭಾಗ -2

ಊಟಕ್ಕೆ ಎದ್ದು ಹೋಗಿ ಊಟದ ತಟ್ಟೆಯಲ್ಲಿನ ಅನ್ನವನ್ನು ಕಲಸುತ್ತಿರುವಾಗಲೂ ಮನಸ್ಸು ಬಂಗಲೆಯ ಬಗೆಗೆ ಯೋಚಿಸುತ್ತಿದೆ, ಸೀತಜ್ಜ ಏ ಅಜಿತ ಯಾಕೋ ಏನಾಯ್ತೋ ಊಟ ಮಾಡೋ ಎಂದು ಹೇಳಿದಾಗಲೇ ವಾಸ್ತವ ಪ್ರಪಂಚಕ್ಕೆ ಬರುತ್ತಾನೆ, ಅಜಿತನು ಸಮರ್ಥ ಮತ್ತು ಪುಟ್ಟಿಯ ಜೊತೆ ತಾನು ತನ್ನ ಮೊಬೈಲ್ ನಲ್ಲಿ ನೋಡಿದ್ದೆಲ್ಲವನ್ನೂ ವಿವರಿಸುತ್ತಾನೆ, ಸಮರ್ಥ ಅಣ್ಣನನ್ನು ಉದ್ದೇಶಿಸಿ "ನಿನ್ನ ಮೊಬೈಲ್ ನಲ್ಲಿ ಈ ಹಳ್ಳಿಯ ಮ್ಯಾಪ್ ಕಾಣಿಸಿತಾ?, ನನ್ನ ಫ್ರೆಂಡ್ ಹತ್ತಿರ ಯಾವುದೋ ಜಿ.ಪಿ.ಎಸ್ ಸೆಟ್ ಇದೆ ಅದರಲ್ಲಿ ನಮ್ಮ ನಗರದ ದಾರಿಗಳೆ ಕಾಣೋಲ್ಲವಂತೆ" ಎಂದು ಹೇಳುತ್ತಾನೆ, ಅದಕ್ಕೆ ಅಜಿತ ಇದು ಸೊನಾಕಿಯಾ ವೈನ್ 79 ಇಲ್ನೋಡು ಮೊಬೈಲ್ ಸ್ಕ್ರೀನ್ ಎಷ್ಟು ದೊಡ್ಡದಿದೆ ಅಂತ, ಅದೂ ಅಲ್ದೆ ಇದು ಡ್ಯುಯಲ್ ಲೇಯರ್ ಎಲ್ಸೀಡಿ ಸ್ಕ್ರೀನ್ ಕಣೋ ಎಂದು ಹೇಳಿದಾಗ ಸಮರ್ಥನಿಗೆ ಅರ್ಥವಾಗುತ್ತದೆ ಅವನ ಅಣ್ಣನ ಮೊಬೈಲ್ ಪವರ್!.

ಅಜಿತ ತಾನು ಬಂಗಲೆಯನ್ನು ನೋಡಲು ಹೋಗುವುದಾಗಿ ತಮ್ಮ ಮತ್ತು ತಂಗಿಗೆ ಹೇಳುತ್ತಾನೆ, ಸಮರ್ಥ ತಾನು ಬರುತ್ತೇನೆ ನನಗೂ ನೋಡವ ಹಂಬಲವಿದೆ ಎಂದು ಹೇಳುತ್ತಾನೆ, ಪುಟ್ಟಿಗೂ ಬಂಗಲೆ ಮನೆಯನ್ನು ನೋಡಬೇಕೆನ್ನುವ ಕುತೂಹಲವಿದ್ದರೂ.. ಭೂತ ಪ್ರೇತದಿಂದ ತೊಂದರೆಯಾದರೆ ಎಂದು ಮನಸಿನಲ್ಲೆ ಒಂದು ಕ್ಷಣ ಯೋಚಿಸುತ್ತಾಳೆ, ಆದರೆ ತನ್ನ ಇಬ್ಬರು ಅಣ್ಣಂದಿರು ಜೊತೆಗಿದ್ದಾರೆನ್ನುವ ದೈರ್ಯದಿಂದ ತಾನು ಬರುವುದಾಗಿ ಹೇಳುತ್ತಾಳೆ, ಅಜಿತ ಮೊದಲಿನಿಂದಲೂ ಭೂತ ಪ್ರೇತವೆಂದರೆ ಹೆದರುವವನೇ ಅಲ್ಲ, ಅದೂ ಆದುನಿಕ ಯುಗದ ಹುಡುಗರು ಭೂತಕ್ಕೆಲ್ಲ ಹೆದರುತ್ತಾರಾ? ಊಹೂಂ... ಮೂವರು ಸೇರಿ ಮರುದಿನ ಸರಿಯಾಗಿ ರಾತ್ರಿ ಹನ್ನೊಂದು ಗಂಟೆಗೆ ಬಂಗಲೆ ಮನೆಗೆ ಹೋಗುವುದೆಂದು ತೀರ್ಮಾನಿಸುತ್ತಾರೆ, ಏಕೆಂದರೆ ಅವರ ಅಜ್ಜನ ಮನೆಯಲ್ಲಿ ರಾತ್ರಿ 10:30ಕ್ಕೆಲ್ಲ ಎಲ್ಲರು ಮಲಗಿಬಿಡುತ್ತಾರೆ.
---------------------------------*****-----------------------------------------------------
ಅಂದು ಶನಿವಾರ ಅಮಾವಾಸ್ಯೆಯ ರಾತ್ರಿ ದೂರದಲ್ಲಿ ನಾಯಿಗಳು ಊಳಿಡುವ ಶಬ್ದ ಕೇಳಿಸುತ್ತಿದೆ... ಸೀತಜ್ಜನ ಮನೆಯಲ್ಲೆಲ್ಲರೂ ಮಲಗಿದ್ದಾರೆ.. ಅಜಿತ, ಸಮರ್ಥ ಮತ್ತು ಸುನಯನ ಮಾತ್ರ ನಿದ್ರೆ ಬಂದವರಂತೆ ಮಲಗಿದ್ದಾರೆ... ಎಲ್ಲರಿಗೂ ನಿದ್ರೆ ಬಂದಿದೆಯಾ ಎಂದು ನಿಧಾನವಾಗಿ ಪರೀಕ್ಷಿಸುತ್ತಾ ಸದ್ದಾಗದಂತೆ ಮೂವರು ಮನೆಯಿಂದ ಹೊರಗೆ ಬಂದಿದ್ದಾರೆ... ಕೈಯಲ್ಲಿ ಅತ್ಯುತ್ತಮ ಗುಣಮಟ್ಟದ ಅತಿ ದುಬಾರಿಯಾದ 500 ಅಡಿ ದೂರ ಬೆಳಕು ಚೆಲ್ಲುವ ಬ್ಯಾಟರಿಯಿದೆ, ಚಿಕ್ಕ ಮಕ್ಕಳ ಹತ್ತಿರ ಅಷ್ಟೊಂದು ಬೆಲೆಬಾಳುವ ಮೊಬೈಲ್ ಮತ್ತು ಈ ತರಹದ ಬ್ಯಾಟರಿ ಇರಲು ಸಾದ್ಯವಾ ಎಂದು ಊಹಿಸಲು ಕಷ್ಟ ಆದರೆ ಇದು ನಿಜ ಕಾರಣ ಇವರ ಅಪ್ಪ ದೊಡ್ಡ ವ್ಯಾಪಾರಸ್ಥ.. ಕೋಟಿ ಕೋಟಿ ರೂಪಾಯಿಗಳ ವ್ಯವಹಾರ ಮಾಡುವವರಿಗೆ ಸಾವಿರ, ಲಕ್ಷವೆಲ್ಲ ಅಲಕ್ಷ್ಯ.

ಮೂವರು ನಕ್ಷೆಯನ್ನು ಆದರಿಸಿಕೊಂಡು ನೆಡೆದುಕೊಂಡು ಬಂದು ಬಂಗಲೆ ಮನೆಯ ಆವರಣ ತಲುಪಿದ್ದಾರೆ...ಬಂಗಲೆ ಮನೆ ನೋಡಲು ತುಂಭಾ ವಿಶಾಲವಾಗಿದ್ದು ಎರಡು ಅಂತಸ್ತಿನ ಮನೆಯಾಗಿದೆ, ಆಗ ಅಲ್ಲಿ ಗುಡುಗು ಸಿಡಿಲು ಜೊತೆಗೆ ಬಿರುಗಾಳಿ ಆರಂಭವಾಗುತ್ತಿದೆ, ಜಡಿ ಮಳೆ ಸುರಿವ ಲಕ್ಷಣ ಕಾಣಿಸುತ್ತಿದೆ, ಪುಟ್ಟಿಗೆ ಹೆದರಿಕೆಯಾಗಿ ಅಣ್ಣಂದಿರ ಕೈ ಹಿಡಿದುಕೊಂಡು ಹೆದರಿಕೆಯಾಗುತ್ತಿದೆ ಎಂದು ಹೇಳುತ್ತಾಳೆ, ಅದಕ್ಕೆ ಸಮರ್ಥ ಅವಳನ್ನು ಸಮಾಧಾನ ಪಡಿಸುತ್ತಾನೆ "ಇಲ್ಲಾ ಪುಟ್ಟಿ ನಾವು ಬಂಗಲೆಯ ಒಳಗೆ ಹೋಗಿಬಿಟ್ಟರೆ ಅಲ್ಲೇನು ತೊಂದರೆಯಿಲ್ಲ" ಎಂದು, ಆದರೆ ಅಲ್ಲಿ ಅವರಿಗೆ ಕಾದಿದೆ ದೊಡ್ಡದೊಂದು ಅಪಾಯ!.

ಅಜಿತ ಸಮರ್ಥ, ಸುನಯನ ಮೂವರೂ ಆ ಬಂಗಲೆಯ ಬಾಗಿಲ ಹತ್ತಿರ ಬಂದು ನಿಂತಿದ್ದಾರೆ, ಅದು ವಿಶಾಲವಾದ ಪ್ರವೇಶದ್ವಾರ ಅದಕ್ಕೆ ಎರಡು ಎತ್ತರದ ಭಾಗಿಲುಗಳು.. ಅದನ್ನು ನರಮಾನವರಿಂದ ಅಲುಗಾಡಿಸಲು ಸಾಧ್ಯವೇ ಇಲ್ಲ ಅಂತಹ ಬಾಗಿಲು..ಅದನ್ನು ತಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.. ಊಹೂಂ ಸ್ವಲ್ಪವೂ ಮಿಸುಕಾಡುತ್ತಿಲ್ಲ.. ಅಷ್ಟರಲ್ಲಿ ಪುಟ್ಟಿಗೆ ಆಯಾಸವಾಗಿ ತಳ್ಳುವುದನ್ನು ಬಿಟ್ಟು ಕಣ್ಣುಗಳು ಬಾಗಿಲಿನ ಬಲಭಾಗದಲ್ಲಿ ವಿಚಿತ್ರವಾದ ರಾಕ್ಷಸನ ತರಹದ ಕೆತ್ತನೆಯನ್ನು ಗಮನಿಸುತ್ತದೆ, ಬೇರೆಲ್ಲಾ ಚಿತ್ರಗಳು ಸುಂದರವಾಗಿದ್ದು ಈ ಚಿತ್ರ ಮಾತ್ರ ತುಂಭಾ ವಿಚಿತ್ರವಾಗಿದೆ ಎಂದುಕೊಂಡು ಅದನ್ನು ಹೆದರುತ್ತಲೇ ಮುಟ್ಟುತ್ತಾಳೆ.. ಆಗ ಬಾಗಿಲುಗಳು ಕಟ ಕಟ ಸದ್ದು ಮಾಡುತ್ತಾ ತೆರೆದುಕೊಳ್ಳುತ್ತದೆ, ಮನೆಯ ಓಳ ಆವರಣ ತುಂಭಾ ವಿಶಾಲವಾಗಿದ್ದು ಯಾರೂ ವಾಸವಾಗಿರದ ಮನೆಯಂತೆ ದೂಳು ಮತ್ತು ಜೇಡರ ಬಲೆಯಿಂದ ಕೂಡಿಲ್ಲ.. ಅಲ್ಲಿ ಯಾರೋ ವಾಸವಾಗಿರುವ ಲಕ್ಷಣದಂತೆ ಅತ್ಯಂತ ಶುಭ್ರವಾಗಿದೆ... ಜಗಮಗಿಸುವ ದೀಪಗಳು ಉರಿಯುತ್ತಿದೆ ಅಲ್ಲಿ ಗೋಡೆಯ ಮೇಲೆ ಅನೇಕ ಚಿತ್ರವಿಚಿತ್ರವಾದ ಕಲಾಕೃತಿಗಳನ್ನು ನೇತು ಹಾಕಲಾಗಿದೆ, ಕ್ರೂರ ಮೃಗಗಳ ತಲೆ ಬುರುಡೆಯ ಆಕೃತಿಗಳು ಭಯಾನಕವಾಗಿದೆ, ಅಲ್ಲಿ ಕಾಡು ಕೋಣದ ಆಕೃತಿಯ ಕಣ್ಣುಗಳು ಕೆಂಡದಂತೆ ಉರಿಯುತ್ತಿದೆ ಅದು ಈ ಮೂವರ ಚಲನವಲನಗಳನ್ನು ಗಮನಿಸುತ್ತಿದೆ... ಬಂಗಲೆಯ ಪ್ರವೇಶ ದ್ವಾರ ಮತ್ತೆ ಕಟ ಕಟನೆ ಶಬ್ದ ಮಾಡುತ್ತಾ ಮುಚ್ಚಿಕೊಳ್ಳುತ್ತದೆ, ಈಗ ಒಳಗೆ ಇದುವರೆಗೂ ಉರಿಯುತ್ತಿದ್ದ ದೀಪಗಳು ನಿಧಾನವಾಗಿ ಆರಿಹೋಗುತ್ತಿವೆ ಇಡಿ ಆವರಣ ಕತ್ತಲೆಯ ಗೂಡಾಗಿ ಪರಿವರ್ತನೆಯಾಗುತ್ತಿದೆ, ಆಗ ಗೋಡೆಯ ಮೇಲಿನ ಆಕೃತಿಗಳ ಮೇಲೆ ಕೆಂಪು ಬೆಳಕು ಎಲ್ಲಿಂದಲೋ ಬೀಳುತ್ತಿದೆ, ಆ ಆಕೃತಿಗಳು ಜೀವಬಂದತೆ ಘೋರವಾದ ಗರ್ಜನೆ ಮಾಡುತ್ತಿವೆ... ಮೂವರು ಹೆದರಿಕೆಯಿಂದ ಕೂಗಿಕೊಳ್ಳುತ್ತಾರೆ. ನಿಂತ ನೆಲ ಬಿರುಕು ಬಿಟ್ಟು ಈ ಮೂವರನ್ನು ಒಳಕ್ಕೆಳೆದುಕೊಂಡಿದೆ.

-------------------------------*******-------------------------

ಬೆಳಗಿನ ಜಾವ ಸೀತಜ್ಜ ಏಳುತ್ತಿದ್ದಂತೆ ತಲೆ ಭಾರವಾದಂತೆ ಅನಿಸುತ್ತದೆ, ಸೀತಜ್ಜನಿಗೆ ಬೆಳಗಿನ ಜಾವ ಎದ್ದಾಕ್ಷಣ ತಲೆ ಭಾರವಾಯಿತೆಂದರೆ ಆವತ್ತು ಏನೋ ಅವಗಡ ಸಂಭವಿಸುತ್ತದೆಯೆಂತಲೇ ಅವನ ಲೆಖ್ಖ, ತಕ್ಷಣ ಅವನಿಗೆ ತನ್ನ ಮೊಮ್ಮಕ್ಕಳು ಕ್ಷೇಮವಾಗಿದ್ದರೆ ಸಾಕೆಂದು ಅವರನ್ನು ನೋಡಲು ಕೋಣೆಗೆ ಹೋಗಿ ನೋಡುತ್ತಾನೆ, ಅಲ್ಲಿ ಮೂವರೂ ಇಲ್ಲದ್ದು ನೋಡಿ ಸೀತಜ್ಜನಿಗೆ ಭಯವಾಗಿ ಹೆಂಡತಿ ಮತ್ತು ಮಗಳನ್ನು ಕೂಗುತ್ತಾನೆ... ಅವರಿಬ್ಬರೂ ಗಾಬರಿಯಿಂದ ಏನಾಯಿತೆಂದು ಓಡಿ ಬರುತ್ತಾರೆ.. ಅವರಿಗೂ ಮಕ್ಕಳು ಇಲ್ಲದ್ದು ನೋಡಿ ತುಂಬಾ ಭಯವಾಗುತ್ತದೆ,ಮನೆಯ ಬಾಗಿಲು ತೆರೆದಿರುವುದನ್ನು ನೋಡಿ ಮಕ್ಕಳು ಬಂಗಲೆ ಮನೆಗೆ ಹೋಗಿ ಅಪಾಯ ತಂದುಕೊಂಡಿದ್ದಾರ ಅಥವಾ ಯಾರಾದರೂ ಮಕ್ಕಳನ್ನು ಅಪಹರಿಸಿದ್ದಾರಾ ಅಜ್ಜ ಅಜ್ಜಿ ಮತ್ತು ತಾಯಿಯ ಮನಸ್ಸು ಹಪಹಪಿಸುತ್ತದೆ.ಸುದಾರಿಸಿಕೊಂಡು ಸೀತಜ್ಜ ಮಗಳ ಹತ್ತಿರ ಅಳಿಯಂದರಿಗೆ ಪೋನ್ ಮಾಡಿ ಮಂತ್ರವಾದಿಯನ್ನು ಹಾಗೂ ಪೋಲೀಸರನ್ನು ಕರೆದುಕೊಂಡು ಬರುವಂತೆ ಹೇಳಲು ಹೇಳುತ್ತಾನೆ, ಏಕೆಂದರೆ ಸ್ಥಳೀಯ ಆರಕ್ಷರಿಗೆ ಪ್ರಾಣ ಭಯದಿಂದ ಇತ್ತ ಸುಳಿಯಲು ಹೆದರುತ್ತಾರೆ ಜೊತೆಗೆ ವೀರಭದ್ರ ಗೌಡರು ಕಟ್ಟಪ್ಪಣೆ ಮಾಡಿದ್ದಾರೆ ಯಾವುದೇ ಕಾರಣಕ್ಕೂ ಪೋಲೀಸರು ಊರಿನೊಳಗೆ ಪ್ರವೇಶ ಮಾಡಬಾರದೆಂದು.! ಎಷ್ಟಾದರೂ ಭೂತ ಪ್ರೇತವಿಲ್ಲವೆಂದರೂ ಮನಸ್ಸಿನಲ್ಲಿ ಊರಿನ ಘಟನೆಗಳನ್ನು ಕಣ್ಣಾರೆ ಕಂಡಿರುವುದರಿಂದ ಮಂತ್ರವಾದಿಯನ್ನು ಕರೆಸಬೇಕೆಂದು ಸೀತಜ್ಜನ ಮನಸ್ಸು ಬಯಸುತ್ತಿದೆ.ಊರವರು ಜೀವ ಭಯದಿಂದ ಯಾರೂ ಸಹಾಯಕ್ಕೆ ಬರುವುದಿಲ್ಲವೆಂದು ಯಾರಿಗೂ ತಿಳಿಸದೇ ಇರುವುದೇ ಒಳಿತು ಎನಿಸುತ್ತದೆ.
-------------------------------------------------*****------------------
ಬಂಗಲೆ ಮನೆಯ ನೆಲ ಮಾಳಿಗೆಯಲ್ಲಿ ಮೂವರೂ ಮಕ್ಕಳು ಬಂದಿತರಾಗಿದ್ದಾರೆ, ಅದು ವಿಶೇಷವಾದ ಎಲೆಕ್ಟ್ರಾನಿಕ್ ನಂಬರ್ ಲಾಕ್ ಹೊಂದಿದ ಕೊಠಡಿಯ ಕಂಬಿಗಳ ಒಳಗೆ ಬಂದಿಗಳಾಗಿದ್ದಾರೆ, ಅಲ್ಲಿ ಕಾಣುತ್ತಿರುವುದೇನು ದೃಶ್ಯ, ಅಲ್ಲಿ ಜನರು ಮದ್ದು ಗುಂಡುಗಳನ್ನು ತಯಾರಿಸುತ್ತಿದ್ದಾರೆ, ಅತ್ಯಾಧುನಿಕ ಮಾದರಿಯ ಬಂದೂಕುಗಳನ್ನು ತಯಾರಿಸಲಾಗುತ್ತಿದೆ, ವ್ಯವಸ್ಥಿತವಾದ ದೇಶ ದ್ರೋಹಿಗಳಿಗೆ ಬಂದೂಕು, ಮದ್ದು ಗುಂಡು ತಯಾರಿಸಿ ಮಾರುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಸಿಸಿಟಿವಿ ಕ್ಯಾಮರಾಗಳು ಹೊರಭಾಗದ ಜನರ ಚಲನವಲನಗಳನ್ನು ಗಮನಿಸಿ ಕಂಪ್ಯೂಟರಿನಲ್ಲಿ ದಾಖಲಿಸುತ್ತಿವೆ, ಅತ್ಯಾಧುನಿಕವಾದ ಸ್ಯಾಟಲೈಟ್ ಪೋನುಗಳನ್ನು ಬಳಸಲಾಗುತ್ತಿದೆ ಅನೇಕ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಸಾದಿಸಿ ಅವರಿಗೆ ಬೇಕಾದ ಮದ್ದು ಗುಂಡು, ಗ್ರಾನೇಡ್ ಗಳನ್ನು ಪೂರೈಕೆ ಮಾಡುವ ಕೆಲಸ ನಿರಂತರವಾಗಿ ನೆಡೆಯುತ್ತಿದೆ, ಕೆಲ ಶತಮಾನಗಳ ಕೆಳಗೆ ಈ ಊರು ನಾಡ ಬಂದೂಕು, ತೋಟಾ ಗುಂಡುಗಳನ್ನು ತಯಾರಿಸುತ್ತಿದ್ದುದರಿಂದ ಈ ಊರಿಗೆ ತೋಟಾಪುರ ಎನ್ನುವ ಹೆಸರು ಬಂದಿದೆ ಎನ್ನುವ ರಹಸ್ಯ ಈಗ ಬಯಲಾಗುತ್ತಿದೆ.

ಬೀರ ಕ್ಯಾಂಟೀನಿನಲ್ಲಿ ಚಹಾ ಹೀರುತ್ತಾ ದಿನ ಪರ್ತಿಕೆ ತೆಗೆದುಕೊಂಡು ಓದ ತೊಡಗುತ್ತಾನೆ, ಕಾಕತಾಳೀಯವೆಂಬಂತೆ ವಿಜಯವಾಣಿ ಎನ್ನುವ ದೈನಿಕ ಪತ್ರಿಕೆಯಲ್ಲಿ ವದಾಮುಂಬಯಿ ನಗರದಲ್ಲಿ ಬಾರ್ ನರ್ತಕಿಯ ಬರ್ಬರ ಕೊಲೆಯ ಸಚಿತ್ರ ಮಾಹಿತಿ ಪ್ರಕಟವಾಗಿದೆ.. ಬೀರನಿಗೆ ಕೊಲೆಯಾದವಳ ಮುಖವನ್ನು ಎಲ್ಲೋ ಹತ್ತಿರದಿಂದ ನೋಡಿದಂತೆ ಅನಿಸುತ್ತದೆ, ನಿಧಾನವಾಗಿ ಯೋಚಿಸಿದಾಗ ತಾನು ನೋಡಿದ ಮೋಹಿನಿಯ ಮುಖ ಮತ್ತು ಕೊಲೆಯಾದ ಬಾರ್ ನರ್ತಕಿಯ ಮುಖದಂತೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.ಮುಂದಿನ ವರದಿಯನ್ನು ಓದುತ್ತಾ ಹೋಗುತ್ತಾನೆ, ಪೋಲೀಸರು ಅತಿಯಾಗಿ ಕುಡಿದು ಬರ್ಬರವಾಗಿ ಹತ್ಯೆ ಮಾಡಿದ ವ್ಯಕ್ತಿಯನ್ನು ಬಂದಿಸಿದ್ದಾರೆ ಆ ವ್ಯಕ್ತಿಯ ಹೆಸರು ಕಾಳ ತೋಟಾಪುರ ಎನ್ನುವುದು ತಿಳಿದು ಬಂದಿದೆ, ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವುದನ್ನು ಓದಿ ಬೀರನಿಗೆ ಕಣ್ಣ ಮುಂದೆ ವೀರಭದ್ರ ಗೌಡರ ಬಲಗೈ ಬಂಟ ಕಾಳನ ಚಿತ್ರ ಹಾದು ಹೋದಂತಾಗುತ್ತದೆ.
------------------------------------**********--------------------------------
ಇಷ್ಟೆಲ್ಲಾ ನೆಡೆಯುತ್ತಿರುವಾಗ ಸೀತಜ್ಜನ ಅಳಿಯ ರಾಜೇಶ್ ತನಗೆ ಪರಿಚಯದ ಪೋಲೀಸ್ ವರಿಷ್ಠ ಅದಿಕಾರಿಗೆ ದೂರವಾಣಿಯ ಮುಖಾಂತರ ಮಾತನಾಡಿ ತನ್ನ ಮಕ್ಕಳು ಕಾಣೆಯಾಗಿದ್ದಾರೆ, ಇದಕ್ಕೆ ಕಾರಣ ಊರಿನ ಗೌಡ ವೀರಭದ್ರನೇ ಎಂದು ಆವೇಶದಲ್ಲಿ ಕೂಗುತ್ತಾನೆ, ಆತನು ಮಾಡಿದ ಅವ್ಯವಹಾರಗಳನ್ನು ಮುಚ್ಚಿಡಲು ಇನ್ನುಮುಂದೆ ಸಹಾಯ ಮಾಡವುದಿಲ್ಲ ಎಂದಿದ್ದಕ್ಕೆ ನನ್ನ ಮಕ್ಕಳನ್ನು ಅಪಹರಿಸಿದ್ದಾನೆ, ಎಂದು ಬಾಯಿ ತಪ್ಪಿ ಹೇಳಿ ಬಿಡುತ್ತಾನೆ.

ಬಂಗಲೆ ಮನೆಯ ನೆಲಮಾಳಿಗೆಯಲ್ಲಿ ಒಬ್ಬ ರೌಡಿ ಈ ಮೂವರು ಮುಗ್ದ ಮಕ್ಕಳನ್ನು ಉದ್ದೇಶಿಸಿ ಹೇಳುತ್ತಾನೆ ಇವತ್ತು ನೀವು ನೋಡುವ ಸೂರ್ಯಾಸ್ಥ ನಿಮ್ಮ ಕೊನೆಯ ಸೂರ್ಯಾಸ್ಥವಾಗುತ್ತೆ, ರಾತ್ರಿ ಬಂದು ಇದೇ ಹರಿತವಾದ ಚಾಕುವಿನಿಂದ ಇರಿದು ಕೊಲ್ಲುತ್ತೇನೆ ಎಂದು ಹೇಳುತ್ತಾನೆ. ಬೆಳಗಿನ ಜಾವವಾದ್ದರಿಂದ ಈ ಮೂವರನ್ನು ಮಾತ್ರ ಹಾಗೆಯೇ ಬಿಟ್ಟು ಎಲ್ಲರೂ ಹೊರಟುಹೋಗುತ್ತಾರೆ, ಪುಟ್ಟಿ ಹೆದರಿಕೊಂಡು ಅಳುತ್ತಾಳೆ, ಸಮರ್ಥನಿಗೂ ಆ ರೌಡಿಯ ಮಾತು ಮತ್ತು ವಿಕಾರ ಮುಖ ಜೀವ ಭಯ ಹುಟ್ಟಿಸುತ್ತದೆ ಆದರೆ ಅಜಿತನಿಗೆ ಮಾತ್ರ ಹೆದರಿಕೆಯಾಗುತ್ತಿಲ್ಲ, ಅವನು ತಾವು ಪಾರಾಗಲು ಇರುವ ಸಮಯದ ಬಗ್ಗೆ ಯೋಚಿಸುತ್ತಾನೆ, ತಕ್ಷಣ ತನ್ನ ಮೊಬೈಲ್ ತೆಗೆಯುತ್ತಾನೆ, ಊಹೂಂ ಅಲ್ಲಿ ಮೊಬೈಲ್ ಜಾಮರುಗಳನ್ನು ಅಳವಡಿಸಿದ್ದಾರೆ ಯಾರಿಗೂ ಕರೆ ಮಾಡಲು ಅಸಾಧ್ಯ, ಆದರೆ ಮೊಬೈಲ್ ಸಾಧನ ಜೀವರಕ್ಷಕ ಸಲಕರಣೆಯಾಗಿ ಉಪಯೋಗಕ್ಕೆ ಬರುತ್ತಿದೆ, ಮೊಬೈಲ್ನಲ್ಲಿರುವ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಎನ್ನುವ ಅಪ್ಲಿಕೇಶನ್ ಆನ್ ಮಾಡುತ್ತಾನೆ ಅದು ಯಾವುದೇ ವಸ್ತುವಿನ ಮೇಲಿರುವ ಬೆರಳಗುರುತುಗಳನ್ನು ಓದಬಲ್ಲದು ಕ್ಯಾಮರಾದ ಸಹಾಯದಿಂದ ತಮ್ಮ ಕೊಠಡಿಯ ಹೊರಬಾಗದಲ್ಲಿರುವ ಎಲೆಕ್ಟ್ರಾನಿಕ್ ನಂಬರ್ ಪ್ಯಾಡಿನ ಚಿತ್ರವನ್ನು ಸೆರಿಹಿಡಿಯುತ್ತಾನೆ, ಅದು ಯಾವ ಯಾವ ನಂಬರಿನ ಮೇಲೆ ಬೆರೆಳ ಗುರುತುಗಳು ಮೂಡಿವೆಯೆಂದು ತೋರಿಸುತ್ತಿದೆ ಅದು 7394251 ನಂಬರುಗಳ ಮೇಲೆ ಬೆರಳಚ್ಚು ಮೂಡಿದೆ, ಊಹೂಂ ಎಷ್ಟೇ ಕಾಂಬಿನೇಶನ್ ಗಳನ್ನು ಮಾಡಿದರೂ ಡೋರ್ ಓಪನ್ ಆಗುತ್ತಿಲ್ಲ, ಈಗ ಅಜಿತ ಹತಾಶನಾಗಿ ಕುಳಿತು ಬಿಡುತ್ತಾನೆ. ತಂತ್ರಜ್ಞಾನವೊಂದನ್ನೆ ನಂಬಿಕೊಂಡರೆ ಆಗುವುದಿಲ್ಲವೆಂದು.
--------------------------------------------*****--------------------------------------ಪೋಲೀಸರು ಕಾಳನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಪೋಲೀಸರ ತರ್ಡ್ ಡಿಗ್ರಿ ಟ್ರೀಟ್ಮೆಂಟ್ ಆರಂಭವಾಗಿದೆ, ಬೂಟು ಕಾಲಿನಿಂದ ಒದೆಯುತ್ತಿದ್ದಾರೆ, ಯಾಕೆ ಕೊಲೆ ಮಾಡಿದೆ, ಯಾರೂ ಹೇಳಿದರು ಬೊಗಳು, ಇಲ್ದೆ ಹೋದ್ರೆ ಇಲ್ಲೇ ನಿನ್ನ ಹುಟ್ಲಿಲ್ಲ ಅನ್ನಿಸಿ ಬಿಡ್ತೀನಿ ಏ ಪಿ.ಸಿ 109 ಏರೋಪ್ಲೇನ್ ಹತ್ತಿಸೋ ಈ ಬೋ... ಮಗನನ್ನು ಎಂದು ಪೋಲೀಸರ ದರಿದ್ರವಾದ ಭಾಷೆಯಲ್ಲಿ ಹೇಳುತ್ತಿದ್ದನೆ... ನೋವು ತಾಳಲಾರದೆ ಕಾಳ ಬಾಯಿಬಿಡುತ್ತಾನೆ, ತೋಟಾಪುರದ ವೀರಭದ್ರ ಗೌಡರ ಅಪ್ಪಣೆಯಂತೆ ನಾನು ಅವಳನ್ನು ಮತ್ತೆ ತೋಟಾಪುರದಲ್ಲಿ ಮೋಹಿನಿಯಂತೆ ರಾತ್ರಿ ಹೊತ್ತು ಜನರನ್ನು ಹೆದರಿಸಬೇಕೆಂದು ಕರೆದುಕೊಂಡು ಹೋಗಲು ಬಂದಿದ್ದೆ ಅವಳು ಹತ್ತು ಲಕ್ಷ ಹಣ ಕೇಳಿದಳು, ಕೊಡದಿದ್ದಲ್ಲಿ ಪೋಲೀಸರಿಗೆ ಕಂಪ್ಲೆಂಟ್ ಕೊಡುತ್ತೇನೆಂದು ಹೆದರಿಸಲು ಬಂದಳು, ನಾನು ಕುಡಿದದ್ದು ಅತಿಯಾಗಿತ್ತು ನಶೆಯಲ್ಲಿ ಕೊಲೆ ಮಾಡಿದೆ ಎಂದು ಒಪ್ಪಿಕೊಳ್ಳುತ್ತಾನೆ, ಹಾಗು ತೋಟಾಪುರದಲ್ಲಿ ಬಂಗಲೆ ಮನೆಯಲ್ಲಿ ನೆಡೆಯುತ್ತಿರುವ ಕಳ್ಳ ದಂದೆಯ ವಿಚಾರವನ್ನು ಬಾಯಿ ಬಿಡುತ್ತಾನೆ.ಅವನನ್ನು ಹೆಚ್ಚಿನ ತನಿಖೆಗಾಗಿ ನಿಜ್ಮಂಗಳೂರು ಪೋಲೀಸರ ಸುಪರ್ದಿಗೆ ಕಳಿಸುತ್ತಾರೆ.

ಇತ್ತ ಸಮರ್ಥ ಕಂಬಿಗಳ ಹೊರಗಡೆ ನೋಡುತ್ತಾನೆ, ಅಲ್ಲಿ ಬೆಂಕಿ ಹತ್ತಿಕೊಂಡರೆ ಅಗ್ನಿ ಅವಗಡಗಳಿಂದ ತಪ್ಪಿಸಿಕೊಳ್ಳಲು ಪೈರ್ ಅಲರಾಮ್ ಸಿಸ್ಟಂ ಹಾಗು ಪೈರ್ ಎಕ್ಸಿಟ್ ಇರುವುದು ಕಣ್ಣಿಗೆ ಬೀಳುತ್ತದೆ, ಏನೋ ವಿಚಾರ ತಲೆಯಲ್ಲಿ ಹೊಳೆದಂತಾಗಿ ಮುಖದಲ್ಲಿ ಮಂದಹಾಸ ಮೂಡುತ್ತದೆ, ತನ್ನ ಬ್ಯಾಗಿನಲ್ಲಿದ್ದ ಲೈಟರನ್ನು ತೆಗೆಯುತ್ತಾನೆ, ಅಣ್ಣ ಮತ್ತು ತಂಗಿಯನ್ನು ಉದ್ದೇಶಿಸಿ ಹೇಳುತ್ತಾನೆ.. ನಾವು ಬದುಕಿಕೊಳ್ಳಲು ಕೊನೆಯ ಅವಕಾಶವಿದೆ, ನಮ್ಮ ರೂಂ ನ ಮೇಲೆ ಪೈರ್ ಸೆನ್ಸರ್ ಇದೆ ಅದಕ್ಕೆ ಬೆಂಕಿ ಅಥವಾ ಹೊಗೆ ಮುಟ್ಟಿದರೆ ಎಲ್ಲಾ ಡೋರ್ ಲಾಕ್ ಮತ್ತು ಪೈರ್ ಎಕ್ಸಿಟ್ ಗಳು ತೆರೆದುಕೊಳ್ಳಬಹುದು ಎಂದು ಹೇಳುತ್ತಾನೆ. ಈಗ ತನ್ನ ಬ್ಯಾಗಿನಲ್ಲಿದ್ದ ವಸ್ತುಗಳನ್ನು ಹೊರಗೆ ತೆಗೆದು ಬ್ಯಾಗಿಗೆ ಬೆಂಕಿ ಹೊತ್ತಿಸಿ ಸೆನ್ಸರ್ ಕಡೆಗೆ ಹಿಡಿಯುತ್ತಾನೆ... ಸೆನ್ಸರ್ ಪ್ರಾಮಾಣಿಕವಾಗಿ ತನ್ನ ಕೆಲಸ ಆರಂಬಿಸುತ್ತಿದೆ ಮೊದಲು ಕಂಪ್ಯೂಟರಿಗೆ ಕೊಠಡಿಯ ತಾಪಮಾನ ಏರುತ್ತಿರುವ ಬಗ್ಗೆ ಮುನ್ಸೂಚನೆ ನೀಡುತ್ತಿದೆ, ಈಗ ಕೊಠಡಿಯಲ್ಲಿ ಬೆಂಕಿ ಹೊತ್ತಿರುವುದನ್ನು ಖಚಿತ ಗೊಳಿಸಿಕೊಂಡು ಮಾಹಿತಿಯನ್ನು ಕಂಪ್ಯೂಟರಿಗೆ ಕಳುಹಿಸಿದೆ, ಕಂಪ್ಯೂಟರ್ ಪರದೆಯ ಮೇಲೆ ತೋರಿಸುತ್ತಿದೆ ಪೈರ್ ಅಲರಾಂ ಮತ್ತು ಎಮರ್ಜನ್ಸಿ ಎಕ್ಸಿಟ್ ಡೋರ್ ಲಾಕ್ಗಳನ್ನು ಅನ್ ಲಾಕ್ ಮಾಡಲಾಗುತ್ತಿದೆ ಇನ್ನು ೧೦ ಸೆಕೆಂಡುಗಳಲ್ಲಿ ಎಂದು ಕೌಂಟ್ ಡೌನ್ ಆರಂಭಿಸಿದೆ, ನಂತರ ದೊಡ್ಡದಾದ ಸೈರನ್ ನೊಂದಿಗೆ ಎಲ್ಲಾ ಕೊಠಡಿಯ ಭಾಗಿಲು ತೆರೆದುಕೊಳ್ಳುತ್ತಿದೆ... ಪೈರ್ ಎಕ್ಸಿಟ್ ಗಳು ತೆರೆದುಕೊಂಡಿವೆ. ಅಜಿತ ತಕ್ಷಣ ಕಂಪ್ಯೂಟರಗಳಲ್ಲಿ ಶೇಖರಿಸಲಾದ ಗುಪ್ತ ಮಾಹಿತಿಗಳನ್ನು ಸೈಬರ್ ಕ್ರೈಮ್ ವಿಭಾಗಕ್ಕೆ ಕಳಿಸುತ್ತಾನೆ.ಮೂವರು ಸುರಕ್ಷಿತವಾಗಿ ಬಂಗಲೆ ಮನೆಯಿಂದ ಹೊರಗೆ ಬಂದಿದ್ದಾರೆ.
------------------------------------------******-----------------------------------------

ಇವೆಲ್ಲಾ ಬೆಳವಣಿಗೆಗಳು ಕೆಲವೇ ಗಂಟೆಗಳಲ್ಲಿ ನೆಡೆದು ಹೋಗಿವೆ,ಪೋಲೀಸ್ ಇಲಾಖೆ ರಾಜೇಶನನ್ನು ಬಂದಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದೆ, ಸೈಬರ್ ಕ್ರೈಮ್ ವಿಭಾಗಕ್ಕೆ ಅಜಿತ ಕಳುಹಿಸಿದ ಮಾಹಿತಿ ತಲುಪಿದೆ, ನಿಜ್ಮಂಗಳೂರಿನ ಪೋಲೀಸ್ ತಂಡ ಬಂಗಲೆ ಮನೆಯನ್ನು ಸುತ್ತುವರೆದು ಮನೆಯನ್ನು ವಶಕ್ಕೆ ತೆಗೆದುಕೊಂಡಿದೆ ವೀರಭದ್ರ ಗೌಡನನ್ನು ಬಂದಿಸಿದ್ದಾರೆ, ಊರಿನಲ್ಲಿನ ಸಂಶಯಾಸ್ವದ ವ್ಯಕ್ತಿಗಳನ್ನು ಬಂದಿಸಿದ್ದಾರೆ, ಪೋಲೀಸ್ ಅದಿಕಾರಿ ಊರವರೆಲ್ಲರನ್ನು ಕರೆಯಿಸಿ ಅಜಿತ, ಸಮರ್ಥ ಹಾಗೂ ಸುನಯನ ಮೂರು ಜನ ಮಕ್ಕಳ ಸಾಹಸ ಮತ್ತು ಒದಗಿಸಿದ ಪುರಾವೆಯನ್ನು ಶ್ಲಾಘಿಸಿ, ವೀರಭದ್ರ ಗೌಡರ ಕಡೆಯವರ ಕೈವಾಡ ಇಂತದಕ್ಕೆಲ್ಲ ಹೆದರಬೇಡಿ, ಊರಿನಲ್ಲಿ ಯಾವುದೇ ಭೂತ ಪ್ರೇತವಿಲ್ಲ ಎಲ್ಲಾ ಎಂದು ಹೇಳುತ್ತಿರುವಾಗ ದೂರದಲ್ಲಿ ಬಿಳಿ ಸೀರೆಯುಟ್ಟ ಸುಂದರವಾದ ಯುವತಿ ನೆಡೆದು ಹೋದಂತೆ, ಕಾಲ್ಗೆಜ್ಜೆಯ ಸದ್ದು ಹತ್ತಿರದಲ್ಲೇ ಯಾರೋ ನೆಡುದುಹೋಗುತ್ತಿರುವಂತೆ ಭಾಸವಾಗುತ್ತದೆ, ತನ್ನದು ಭ್ರಮೆ ಎಂದು ಕೊಳ್ಳುತ್ತಿರುವಾಗಲೇ ನಾಯಿಗಳು ಊಳಿಡಲು ಆರಂಭಿಸುತ್ತದೆ, ಭೂತ ಪ್ರೇತಗಳು ಮೊದಲು ಕಾಣಿಸಿಕೊಳ್ಳುವುದು ನಾಯಿಗಳಿಗೆ ಎಂದು ಓದಿದ ನೆನಪಾಗುತ್ತದೆ, ಇದ್ದಕ್ಕಿದ್ದಂತೆ ದೂರದಲ್ಲಿರುವ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸುತ್ತದೆ.
ಇದು ಮುಕ್ತಾಯವಲ್ಲ ಆರಂಭ, ಇದು ಆರಂಭವಲ್ಲ ಮುಕ್ತಾಯ~! ಮುಗಿಯಿತು...

Thursday, April 2, 2009

ಬಂಗಲೆ ಮನೆ ರಹಸ್ಯ ಭಾಗ -1

ಅದೊಂದು ಮಲೆನಾಡಿನ ಪುಟ್ಟ ಹಳ್ಳಿ.. ಹೆಸರು ತೋಟಾಪುರ, ಈ ಊರು ಕಾಡು, ಬೆಟ್ಟ, ಹೊಳೆ,ಕೆರೆ ಹಾಗೂ ಎಲ್ಲಿ ನೋಡಿದರೂ ಹಚ್ಚ ಹಸಿರಿನ ತೋಟ ಗದ್ದೆಗಳ ಸಾಲುಗಳು ಕಣ್ಮನ ಸೆಳೆಯುತ್ತವೆ, ಆದರೂ ಆ ಊರಿನಲ್ಲೇನೋ ತೊಂದರೆ ಇದೆ. ತೋಟಾಪುರದ ಊರಿನ ಕೊನೆಯಲ್ಲಿರುವ ಪುರಾತನ ಕಾಲದ ಭವ್ಯ ಬಂಗಲೆ ಎರಡು ಅಂತಸ್ಥಿನ ಮನೆ ಅತ್ಯಂತ ದೊಡ್ಡದಾಗಿದ್ದು ಬರೀ ಮನೆಯೆಂದು ಕರೆಯುವಂತಿಲ್ಲ ಅದು ಅರಮನೆಗಿಂತಲೂ ಭವ್ಯ ಬಂಗಲೆ, ಆದರೂ ಇದಕ್ಕೆ ಬಂಗಲೆ ಮನೆಯಂತಲೇ ಹೆಸರು ಬಂದಿದೆ, ಅಲ್ಲಿ ಒಳಗೆ ಏನಿದೆ, ಅಲ್ಲಿ ಮನುಷ್ಯರು ವಾಸವಿದ್ದಾರ?, ಎಲ್ಲವೂ ನಿಗೂಡ, ರಾತ್ರಿಯ ಹೊತ್ತಿನಲ್ಲಿ ಚಿಕ್ಕವರಿರಲಿ ದೊಡ್ಡವರು ಈ ಬಂಗಲೆಯ ಹತ್ತಿರ ಬರಲು ಹೆದರುತ್ತಾರೆ.. ಅದಕ್ಕೂ ಅನೇಕ ಕಾರಣಗಳಿವೆ,ಬಂಗಲೆ ಮನೆಯ ಬಗ್ಗೆ ಹಳ್ಳಿಯವರು ಒಬ್ಬೊಬ್ಬರು ಒಂದೊಂದು ತರಹ ಮಾತನಾಡಿಕೊಳ್ಳುವುದು ಕೇಳಸಿಗುತ್ತದೆ, ಜನರಲ್ಲಿ ಅದೇನೋ ಭಯವಿದೆ.. ಆ ಮನೆಯಲ್ಲಿ ಭೂತವಿದೆ, ನಿಧಿ ಕಾಯುವ ಸರ್ಪವಿದೆ ಎನ್ನುವ ಮಾತು ಕೇಳಿಬರುತ್ತಿವೆ,ಆ ಮನೆಯ ಒಳಗೆ ಪ್ರವೇಶ ಮಾಡಿದವರಿಗೆ ಹಲವು ಸಂಕಷ್ಟಗಳು ಎದುರಾಗುತ್ತವೆ.. ಬಂಗಲೆಯೊಳಗೆ ಏನಿದೆ ಎಂದು ಪರೀಕ್ಷೆ ಮಾಡಲು ಹೋದವರು ಜೀವಂತವಾಗಿ ಹೊರಗೆ ಬಂದಿಲ್ಲವಂತೆ... ಹೀಗೆ ಏನೇನೋ ವದಂತಿಗಳು, ಗಾಳಿ ಸುದ್ದಿ ಹಬ್ಬಿಕೊಂಡಿದೆ. ಇವೆಲ್ಲಕ್ಕೂ ಸಾಕ್ಷಿಯೆಂಬಂತೆ ಅನೇಕ ಘಟನೆಗಳು ಆಗಲೇ ನೆಡೆದು ಹೋಗಿದೆ.

--------------------------------------********-------------------------------------------- ತೋಟಾಪುರ ಎಂದಾಕ್ಷಣ ಮೊದಲಿಗೆ ಬರುವ ಹೆಸರು ವೀರಭದ್ರ ಗೌಡರದು.... ವೀರಭದ್ರ ಗೌಡರೆಂದರೆ.. ಇಡೀ ಊರಿನ ಜನರ ಹಿತ ಕಾಯುವ ಯಜಮಾನರಂತೆ.. ಇವರ ಮನೆಯಲ್ಲಿ ದಿನವೂ ಏನಿಲ್ಲವೆಂದರೂ ೨೫ ಜನರಿಗೆ ಅನ್ನ ಸಂತರ್ಪಣೆ ಇರುತ್ತದೆ, ಯಾರಿಗೇ ಏನಾದರು ತೊಂದರೆಯಾದರೆ ಹಣಕಾಸಿನ ಮುಗ್ಗಟ್ಟಿದ್ದರೆ ಗೌಡರ ಹತ್ತಿರ ಹೇಳಿಕೊಂಡರೆ ಅವರಿಗೆ ಇಲ್ಲಾ ಎನ್ನುವ ಜಾಯಮಾನದವರೇ ಅಲ್ಲ.. ವೀರಭದ್ರ ಗೌಡರ ಅಪ್ಪಣೆಯಿಲ್ಲದೆ ಯಾವುದೇ ಕೆಲಸ ಕಾರ್ಯಗಳು ಆರಂಭಗೊಳ್ಳುವುದಿಲ್ಲ... ವೀರಭದ್ರ ಗೌಡರ ಭಾವಚಿತ್ರ ಅನೇಕರ ಮನೆಯ ದೇವರ ಮನೆಯ ದೇವರ ಕೆಳಗಿನ ಸ್ಥಾನವನ್ನು ಪಡೆದುಕೊಂಡಿದೆಯೆಂದರೆ ತಪ್ಪಾಗಲಾರದು,ನಂತರದ ಸ್ಥಾನ ಊರಿನ ಹಿರಿಯ ಶಿವರಾಮನದು, ಶಿವರಾಮ ಎನ್ನುವ ಹೆಸರು ಮೊದಲು ಸಿವರಾಮ ಎಂದಾಯಿತು, ಸಿವರಾಮಯ್ಯ ಎಂದು ಕರೆಯುವುದು ಸಹ ಜನರಿಗೆ ಕಷ್ಟವಾದುದರಿಂದ ಸೀತಜ್ಜ ಎಂದು ಕರೆಯುವುದನ್ನು ರೂಡಿಸಿಕೊಂಡರು, ಸೀತಜ್ಜನನ್ನು ಕಂಡರೆ ಊರಿನವರಿಗೆಲ್ಲ ಅಚ್ಚು ಮೆಚ್ಚು, ಏಕೆಂದರೆ ಸೀತಜ್ಜ 35 ವರ್ಷದಿಂದ ನಾಟಿ ವೈದ್ಯನಾಗಿ ಅನೇಕ ಜನರ, ಬಸರಿ, ಬಾಣಂತಿಯರನ್ನು ಕಾಯಿಲೆ ಕಸಾಲೆಗಳಿಂದ ಕಾಪಾಡುತ್ತಾ ಬಂದಿದ್ದಾನೆ.

ಸೀತಜ್ಜ ೩ ಜನ ಮೊಮ್ಮಕ್ಕಳು ನಿಜ್ಮಂಗಳೂರು ಎನ್ನುವ ದೊಡ್ಡ ಪಟ್ಟಣವೊಂದರಲ್ಲಿ ತಮ್ಮ ತಂದೆ ತಾಯಿಯ ಜೊತೆಗೆ ವಾಸವಾಗಿದ್ದಾರೆ,ಮೊದಲನೇಯವನು ಅಜಿತ ಹತ್ತನೆ ತರಗತಿಯಲ್ಲಿ ಓದುತ್ತಿದ್ದಾನೆ , ೨ನೇಯವನು ಸಮರ್ಥ ೯ನೇ ತರಗತಿಯಲ್ಲಿ ಓದುತ್ತಿದ್ದಾನೆ, ೩ನೇಯವಳು ಮತ್ತು ಚಿಕ್ಕವಳು ಸುನಯನ(ಅವಳ ಕಣ್ಣುಗಳು ಅತ್ಯಂತ ಸುಂದರವಾಗಿದೆ ಅವಳ ಕಣ್ಣುಗಳನ್ನು ನೋಡಿಯೇ ಈ ಹೆಸಿರಿಟ್ಟರೇನೋ ಅನ್ನಿಸದೇ ಇರದು. )೭ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಮನೆಯಲ್ಲಿ ಅವಳನ್ನು ಪ್ರೀತಿಯಿಂದ ಪುಟ್ಟಿ ಎಂದೇ ಕರೆಯುತ್ತಾರೆ, ಇವರೆಲ್ಲರಿಗೂ ಬೇಸಿಗೆಯ ರಜೆ ಆರಂಭವಾಗಿದೆ, ಅಜ್ಜನ ಮನೆಗೆ ಹೋಗಲು ಅತ್ಯಂತ ಉತ್ಸಹಿತರಾಗಿದ್ದಾರೆ. ಈ ಮೂವರು ಕಿಲಾಡಿಗಳ ಅಪ್ಪ ತನ್ನ ಹೆಂಡತಿ ಮತ್ತು ಮಕ್ಕಳ ಜೊತೆ ಬರುತ್ತಿಲ್ಲವಾದ್ದರಿಂದ ಮಕ್ಕಳಿಗೆ ಹಿತವಚನ ನೀಡುತ್ತಿದ್ದಾರೆ, "ಅಜ್ಜ ಅಜ್ಜಿಗೆ ತೊಂದರೆ ಕೊಡಬಾರದು.. ಮತ್ತು ಬಂಗಲೆ ಮನೆಯ ಕಡೆಗೆ ಹೋಗಬಾರದು" ಎಂದು. ಮಕ್ಕಳು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದಾರೆ.. ಏನಿರಬಹುದು ಆ ಮನೆಯಲ್ಲಿ ಎನ್ನುವ ಕೂತುಹಲ ಮೂವರಲ್ಲಿ ಹುಟ್ಟಿಕೊಳ್ಳುತ್ತಿದೆ, ಅಪ್ಪ ಬೈಯ್ಯುತ್ತಾರೆನ್ನುವ ಹೆದರಿಕೆಗೆ ಆಯ್ತಪ್ಪ ಎಂದು ಮೂರು ಜನರು ತಲೆ ಅಲ್ಲಾಡಿಸುತ್ತಾರೆ. ಯಾವಾಗ ಅಜ್ಜನ ಮನೆ ತಲುಪುತ್ತೀವೋ, ಬಂಗಲೆ ಮನೆ ಹೇಗಿರಬಹುದು ಎನ್ನುವ ಆಲೋಚನೆ ಆರಂಭವಾಗಿದೆ. ಹೊರಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಬಟ್ಟೆ ಬರೆಗಳನ್ನು ಜೋಡಿಸಿಕೊಳ್ಳುತ್ತಿದ್ದಾರೆ. ಬರುವ ಗುರುವಾರಕ್ಕೆ ಬಸ್ಸಿನ ಟಿಕೆಟ್ಟು ತೆಗೆಸಿಟ್ಟಿದ್ದಾರೆ.

-----------------------------------*********-------------------------------------------------
ಇತ್ತ ಬಂಗಲೆ ಮನೆಯ ಹತ್ತಿರ ಒಂದು ಅವಘಡ ಸಂಭವಿಸಿ ಹೋಗಿದೆ, ಅಪರಿಚಿತ ವ್ಯಕ್ತಿಯೊಬ್ಬ ರಕ್ತ ಖಾರಿಕೊಂಡು ಸತ್ತುಹೊಗಿದ್ದಾನೆ,ಮೈ ಮೇಲೆ ಯಾವುದೋ ಹರಿತವಾದ ಆಯುಧದಿಂದ ತಿವಿದ ಆಳವಾದ ಗುರುತು ಹಾಗೇ ರಕ್ತದಿಂದ ಹೆಪ್ಪುಗಟ್ಟಿ ಹೋಗಿದೆ, ಜನರ ಬಾಯಲ್ಲಿ ಆಗಲೇ ಹಲವು ಕತೆ ಪ್ರಾರಂಭವಾಗಿಬಿಟ್ಟಿವೆ.."ಬಂಗಲೆ ಮನೆಯ ನಿಧಿ ಕದಿಯಲು ಬಂದ ಕಳ್ಳನಿರಬೇಕು ಅಥವಾ ಬಂಗಲೆ ಮನೆಯ ಪರೀಕ್ಷೆ ಮಾಡಲು ಹೋಗಿರಬೇಕು ಅದಕ್ಕೇ ಈ ಶಿಕ್ಷೆ ಆಗಿದೆ ಎಂದು ಮಾತನಾಡಿಕೊಳ್ಳುತ್ತಾರೆ.. ಪೊಲೀಸರೂ ಈ ವಿಚಾರದಲ್ಲಿ ತಲೆ ಹಾಕಲು ಹೆದರುತ್ತಾರೆ, ಏಕೆಂದರೆ, ಎರಡು ವರ್ಷದ ಹಿಂದೆ ಹೊಸದಾಗಿ ಬಂದ ಎಸ್.ಐ ಕೂತೂಹಲ ತಾಳಲಾರದೆ ಬಂಗಲೆಗೆ ರಾತ್ರಿ ಯಾರಿಗೂ ಹೇಳದೆ ಒಬ್ಬನೇ ಬಂದಿದ್ದ, ಒಂದು ವಾರದ ನಂತರ ಅವನ ಹೆಣ ಪಕ್ಕದ ಕೆರೆಯಲ್ಲಿ ಕೊಳೆತು ನಾರುತ್ತಿತ್ತಂತೆ. ಅದು ಊರಿನವರೆಲ್ಲರಿಗೂ ತಿಳಿದ ವಿಷಯವಾಗಿದೆ.. ಅದಕ್ಕಾಗಿಯೇ ಪೋಲಿಸರಿಗೆ ಇತ್ತ ಸುಳಿಯಲು ಹೆದರುತ್ತಾರೆ.. ತಮ್ಮ ಹೆಂಡತಿಯ ತಾಳಿ ಗಟ್ಟಿಯಾಗಿರಲಿ ಎಂದು ಬೇಡಿಕೊಳ್ಳುತ್ತಿರುತ್ತಾರೆ.

ಕೆಳಗಿನ ಮನೆಯ ಬೀರ ಮಾದೇಶನನ್ನು ಉದ್ದೇಶಿಸಿ ಹೇಳುತ್ತಾನೆ "ನಾನು ನಿನ್ನೆ ರಾತ್ರಿ ತೋಟದ ಕಡೆ ಹೊಂಟಿದ್ನ ಬಂಗ್ಲೆ ಮನೆ ಎದ್ರಿಗೆ ನೋಡ್ತಿವ್ನಿ ಮನೆ ಹತ್ರ ಹೊಗೆ ಬರಕೆ ಸುರು ಆತು.. ನಿದಾನಕ್ ಗೆಜ್ಜೆ ಶಬ್ದ ನನ್ನ ಕಿವಿಗೆ ಬಿಳಕ್ ಹತ್ತು ಅಂತ್ನಿ... ನಾನು ಮರದ ಮರೆನಾಗೆ ನಿಂತ್ಕಂಡು ನೋಡ್ತಿವಿನಿ.. ನಿದಾನಕ್ಕೆ ಬಂಗ್ಲೆ ಮನೀದು ಬಾಗ್ಲು ಕಿಟಾ....ರ್ ಅಂತ ತೆಗಿತಲೆ... ಒಬ್ಳು ಬೆಳ್ಳಗಿರ ಐನಾತಿ ಹುಡ್ಗಿ ೧೮ ವರ್ಷ ಆಗಿರ್ಬೈಯ್ದು..ಹೊರಗೆ ಬಂದು ನಿಂತ್ಕಂಡ್ಲು,ಬಿಳೇ ಸೀರೆನ ಆಳವಾದ ಹೊಕ್ಕಳ ಕೆಳಗೆ ಉಟ್ಗಂಡಿದ್ಲು ಕಣ್ಲಾ.. ಆಹಾ ಎಂತ ಮೈಕಟ್ಟು ಅನ್ತಿಯಾ ನೋಡಿರೆ ನೋಡ್ತಾನೆ ಇರನಾ ಅಂತ ಅನ್ಸಂಗೆ ಐದಾಳಪಾ.. ನಂಗೆ ಮೈಯಲ್ಲ ಜುಂ ಗುಟ್ಟೋತು ಅಂತೀನಿ..ಎಂದು ಎಲೆ ಅಡಿಕೆಯ ಕವಳದಿಂದ ಇಡೀ ಬಾಯಿ ಕೆಂಪಗಾಗಿದೆ.. ತುಟಿಯಂಚಿನಲ್ಲಿ ನಗುತ್ತಾ ಕವಳ ತುಪ್ಪಿ ಕೇಳ್ಲಾ ಮುಂದೆ ಇಲ್ಲಿ.. ಅವ್ಳು ನನ್ನ ಕಡಿಗೆ ತಿರುಗಿ ನೆಡ್ಯಕ ಹತ್ತಿದ್ಲು,ಗೆಜ್ಜೆ ಗಲ್ ಗಲ್ ಅಂತ ಶಬ್ದ ಹತ್ರಾ ಆಗ್ತಾ ಆಗ್ತಾ ಒಂತರಾ ಎದೆ ಮೇಲೆ ಆಕಿ ನೆಡ್ಯಾಕ್ ಹತ್ತಾಳೇನೊ ಅನ್ನಂತಾ ಅನುಭವ ಸುರು ಆತು, ಆಕಿ ಹತ್ರಾ ಬಂದು ವಯ್ಯಾರದಿಂದ ಬಾಯಾಗೆ ನನ್ನ ನೋಡ್ತಾ ಉಗುರು ಕಡ್ಯಾಕೆ ಹತ್ತಿದ್ಲು.. ಕಡೀಕೆ ಎನಾತ್ಲಾ ಬೀರಾ...... ತಡಿಲಾ ಅದನ್ನೆ ಹೇಳಾಕ್ ಹೊಂಟೇನಿ.. ನಾನು ಗೆಜ್ಜೆ ನೋಡವ ಅಂತ ಕಾಲು ನೋಡ್ತ್ನಿ ........... ಪಾದ ಹಿಂದೆ ಮುಂದೆ ಐತೆ, ನಂಗೆ ಹೆದ್ರಿಕೆ ಸುರು ಆತು ಓಡಿ ಬಂದ್ಬಿಟ್ಟೆ.." ಮದೇಶ ಕಣ್ಣು ಕಣ್ಣು ಬಿಡುತ್ತಾನೆ. ಏನಾಗುತ್ತಿದೆಯೆಂದು ಆತನಿಗೆ ಅರ್ಥವಾಗುತ್ತಿಲ್ಲ
--------------------------------------------******---------------------------------------------

ಮಗಳು ಮೊಮ್ಮಕ್ಕಳ ಆಗಮನದಿಂದ ಸೀತಜ್ಜನ ಮನೆಯಲ್ಲಿ ಹಬ್ಬದ ವಾತವರಣ ಏರ್ಪಟ್ಟಿದೆ.. ಸೀತಜ್ಜನ ಹೆಂಡತಿ ರಮಾಮಣಿ ಸಂಭ್ರಮದಿಂದ ಅಡುಗೆ ಮನೆಯಲ್ಲಿ ಓಡಾಡುತ್ತಿದ್ದಾಳೆ, ಒಬ್ಬಟ್ಟು ಹೋಳಿಗೆಯ ಊಟ ಸಿದ್ಧವಾಗುತ್ತಿದೆ "ಅಳಿಯಂದರು ಬರಬಹುದಿತ್ತು" ಎಂದು ಮಗಳನ್ನು ಸೀತಜ್ಜ ವಿಚಾರಿಸುತ್ತಾರೆ ಅದಕ್ಕೆ ಮಗಳು ಸರಸ್ವತಿ ಹೇಳುತ್ತಾಳೆ "ಅವರಿಗೆ ತುಂಬಾ ಕೆಲಸ ಅಪ್ಪಯ್ಯ ಅದಕ್ಕೆ ಅವರು ನಮ್ಮ ಜೊತೆ ಬರಲಿಲ್ಲ" ಎಂದು. ಅಜಿತ ಅಪ್ಪ ಕೊಡಿಸಿದ(ಹಠ ಮಾಡಿ ತೆಗಿಸಿಕೊಂಡ) ಹೊಸ ಸೊನಾಕಿಯ ವೈನ್ 79 ಮೊಬೈಲ್ನಿಂದ ಅಪ್ಪನಿಗೆ ಫೋನ್ ಮಾಡಿ ಕ್ಷೇಮವಾಗಿ ತಲುಪಿದ್ದೆವೆಂದು ಹೇಳುತ್ತಾನೆ.. ಆ ಮೊಬೈಲಿನಲ್ಲಿ ಜಿ.ಪಿ.ಎಸ್(Global positioning system ಸೌಲಭ್ಯವನ್ನು ಹೊಂದಿದ್ದು ಯಾವುದೇ ಸ್ಥಳದ ನಕ್ಷೆಯನ್ನು ಉಪಗ್ರಹದ ಸಹಾಯದಿಂದ ತೋರಿಸುತ್ತದೆ..ಅಜಿತನಿಗೆ ಏನೋ ನೆನಪಾದಂತಾಗಿ ಮೊಬೈಲ್ ನಲ್ಲಿ ಮೆನು ಗೆ ಹೋಗಿ ಜಿ,ಪಿ.ಎಸ್ ಸಾಧನವನ್ನು ಉಪಗ್ರಹಕ್ಕೆ ಸಂಪರ್ಕಿಸಿ.. ಭಾರತದ ನಕ್ಷೆ ಗೆ ಹೋಗಿ ಅಲ್ಲಿಂದ ಕರ್ನಾಟಕದ ಇರುವ ಅಜ್ಜನ ಮನೆಯಾದ ತೋಟಾಪುರವನ್ನು ಹುಡುಕುತ್ತಿದ್ದಾನೆ... ಹೃದಯ ಬಡಿತ ಹೆಚ್ಚಾಗುತ್ತಿದೆ ನಿಧಾನವಾಗಿ ಭಾರತ-> ಕರ್ನಾಟಕ ಎಂದು ತೋರಿಸುತ್ತಿದೆ.. ಈಗ zoom ಮಾಡಿ ಹುಡುಕುತ್ತಿದ್ದಾನೆ ಕರ್ನಾಟಕದ ಕಿಡ್ನಿ! ಭಾಗದಲ್ಲಿರುವ ಊರು ತೋಟಾಪುರದ ಬಂಗಲೆ ಮನೆ ಎಲ್ಲಿದೆ ಎಂದು..ಊರಿನ ಕೆಲವು ಸ್ಥಳಗಳ ಗುರುತು ಸಿಗುತ್ತಿದೆ.. ರಸ್ತೆಯ ಪಕ್ಕದಲ್ಲಿರುವ ತೋಟಾಪುರದ ಬಸ್ಸ್ಟ್ಯಾಂಡ್ ಕಾಣಿಸುತ್ತಿದೆ ಜೊತೆಗೆ ಮಣ್ಣಿನ ರಸ್ತೆ ಕೇಸರಿ ಬಣ್ಣದಲ್ಲಿ ಎದ್ದು ಕಾಣುತ್ತಿದೆ ಹಾಗೆ ಮುಂದೆ ಬಲಭಾಗದಲ್ಲಿ ಕಾಣುತ್ತಿರುವ ಮಣ್ಣಿನ ದಾರಿ ಪಕ್ಕದಲ್ಲೊಂದು ಕಾಲುದಾರಿ ಶ್ರೀರಂಗ ಸ್ವಾಮಿ ದೇವಸ್ತಾನಕ್ಕೆ ಹೋಗುತ್ತದೆ..ಅದನ್ನು ದಾಟಿಕೊಂಡು ಹೋದರೆ ತೋಟಾಪುರದ ದಾರಿ.. ಮುಂದೆ ಬಂದರೆ ಒಟ್ಟಿಗೆ ೪ ಮನೆ ಕಾಣುತ್ತಿದೆ.. ಅದರ ಪರಿಚಯವೂ ಗೊತ್ತಾಗುತ್ತಿದೆ ಎರಡನೇ ಮನೆಯೇ ತನ್ನ ಅಜ್ಜನ ಮನೆ ಎಂದು. ಹಾಗೆ ಮುಂದೆ ಹೋದರೆ ಒಂದೇ ರಸ್ತೆ ಊರ ಕೊನೆಯ ಪ್ರದೇಶದಲ್ಲಿ ಒಂದು ಕೆರೆ ಕಾಣಿಸುತ್ತಿದೆ.. ಅದರ ಪಕ್ಕದಲ್ಲಿ ಒಂದು ದೊಡ್ಡದಾದ ಮನೆ ಹಳೆಯಮನೆಯೆಂದು ಗೊತ್ತಾಗುತ್ತಿದೆ.. ಇದೆ ಬಂಗಲೆ ಮನೆ ಆಗಿರಬಹುದೆಂದು ಅವನ ಮನಸ್ಸು ಹೇಳುತ್ತದೆ.. ಅಷ್ಟರಲ್ಲಿ ತಾಯಿ ಊಟಕ್ಕೆ ಕರೆಯುತ್ತಾಳೆ.. ಉಫ್ ಎಂದು ಹೊಸದೊಂದು ಲೋಕದಿಂದ ಹೊರಬಂದಂತ ಅನುಭವ ಅಜಿತನಿಗೆ ಆಗುತ್ತದೆ... ಮೊಬೈಲನ್ನು ಮಡಚಿಟ್ಟು ಊಟಕ್ಕೆ ಏಳುತ್ತಾನೆ.. ಮನಸ್ಸು ಬಂಗಲೆ ಮನೆಯನ್ನು ನೋಡಲೆ ಬೇಕು.. ಅಲ್ಲೇನಿರಬಹುದು ಎಂಬ ಕುತೂಹಲ ತಲೆಯೊಳಗೆ ಕೊರೆಯುತ್ತಿದೆ... ಇನ್ನೆಷ್ಟು ದಿನ ಕಾಯಬೇಕು.. ಆದರೂ ಕಾಯಲೇ ಬೇಕು....

ಮುಂದುವರೆಯುತ್ತದೆ................

Sunday, February 22, 2009

ಅದು ಇದು!!

ಅರೆ, ನನ್ನ ಬ್ಲಾಗ್ ಇದಾಗದೆ ತುಂಬಾ ದಿನ ಆಯ್ತು, ಏನಾದರೂ ಇದಾಗಿ ಬರಿಬೇಕು ಅಂತ ಅನಿಸುತ್ತಾ ಇದೆ, ನನ್ನ ತಲೆ ತುಂಬಾ ಅದೇ ವಿಚಾರ ತುಂಬಿಕೊಂಡಿದೆ, ಅದರ ಬಗ್ಗೆ ಬರೆಯಲೋ ಅಥವಾ ಇದರ ಬಗ್ಗೆ ಬರೆಯಲೋ ಅನ್ನೋದರಲ್ಲೆ ನನ್ನ ಬ್ಲಾಗ್ ಇದಾಗೋದೆ ಇಲ್ಲ... ಏನಾದರೂ ಆಗಲಿ ನಿಮಗೆ ತುಂಬಾ ಇದು ಮಾಡಬಾರದು, ಏನಾದರು ಬರೆಯಲೇ ಬೇಕು ಅಂತ ಬರಿತಾ ಇದೀನಿ, ಹ್ಮ್ ಗೊತ್ತಾಯ್ತು ನಿಮ್ಗೆ ಮೂಗಿನ ಮೇಲೆ ಅದು ಬರ್ತಾ ಇದೆ, ಕಿವಿ ಕೆಂಪಾಗ್ತ ಇದೆ.. ಅದು ಒಳ್ಳೇದಲ್ಲ.. ಬೀಪಿ ಇದಾಗುತ್ತೆ.. ಆಯಾಸ ಆಗುತ್ತೆ, ಅದಕ್ಕಿಂತ ಇದನ್ನ ಅದಾಗಿ ತಗೋಳೋದಕ್ಕಿಂತ ಸ್ವಲ್ಪ ಇದಾಗಿ ತಗೊಂಡು ನಕ್ಕು ಬಿಡಿ, ಹೌದು ನನ್ನ ಮೇಲೆ ಇದಿಲ್ಲ ಅಲ್ವ.. ಇದಾಗಿದ್ರೆ ಕ್ಷಮಿಸಿ... ನಿಮಗೆ ಅದು ಮಾಡ್ಬೇಕು ಅಂತ ಖಂಡಿತ ನನಗೆ ಇರಲಿಲ್ಲ..
ಓದೋಕೆ ಕಷ್ಟ ಆಗ್ತಿದೆಯಾ ಕ್ಷಮಿಸಿ... ನಾವು ದಿನ ನಿತ್ಯ ಕೆಲವು ಕಡೆ ಶಬ್ದಗಳು ನೆನಪಾಗದೆ ಹೋದಾಗ ಅದು ಇದು ಎನ್ನುವ ಪದ ಬಳಕೆ ಮಾಡುತ್ತೇವಲ್ಲವೆ ಅದು ಇದುವಿನ ಬದಲು ಅಲ್ಲಿ ಸೂಕ್ತವೆನಿಸಿದ ಪದ ಬಳಸಿ ಓದಲು ಪ್ರಯತ್ನಿಸಿ.
ಕೊನೆಯಮಾತು... ಏನಾದ್ರು ಓದೋ ಅಂತದ್ದು ಬರೆದಿರಬಹುದು ಎಂದು ಬಂದು ಬೇಸರ ಮಾಡಿಕೊಂಡಿದ್ದರೆ ಮತ್ತೊಮ್ಮೆ ನಿಮ್ಮ ಸ್ನೇಹಿತನ/ಸಹ ಬ್ಲಾಗಿಗನನ್ನು ಮನ್ನಿಸಿ.. ದಯವಿಟ್ಟು ತಮಾಷೆಯಾಗಿ ತೆಗೆದುಕೊಳ್ಳಿ ಎನ್ನುವ ಕೋರಿಕೆಯನ್ನು ತಮ್ಮ ಮುಂದಿಡುತ್ತ.. ಆದಷ್ಟು ಬೇಗ ಒಳ್ಳೆಯ ಲೇಖನ ಬರಿಯೋಕೆ ಪ್ರಯತ್ನ ಮಾಡ್ತೀನಿ. ಪ್ರೀತಿ ಸದಾ ಇರಲಿ.. ಹ್ಮ್.. ಅನಿಸಿಕೆ ಬರೆಯೋಕೆ ಮರೆಯಬೇಡಿ...

Sunday, February 8, 2009

ನನಗೆ ಇಷ್ಟವಾದ ನನ್ನ ಎರಡು ಕಮೆಂಟುಗಳು ನಿಮಗಾಗಿ!

ನಾನು ಮೊದಲು ಬ್ಲಾಗ್ ಗಳಲ್ಲಿ ನನ್ನ ಅನಿಸಿಕೆಗಳನ್ನು ಅತಿ ಚಿಕ್ಕದಾಗಿ ಬರೆಯುತ್ತಿದ್ದೆ ಚನ್ನಾಗಿದೆ ಅಂತಲೋ.. ಇಷ್ಟವಾಯಿತು ಅಂತಲೋ ಬರೆಯುತ್ತಿದ್ದೆ, ಆಗ ನಾನು ಯಾರದ್ದಾದರೂ ಬ್ಲಾಗಿನಲ್ಲಿ ದೀರ್ಘವಾದ ಅನಿಸಿಕೆ ಬರೆದಿರುವುದನ್ನು ನೋಡಿ ಅವರ ಬ್ಲಾಗಿನಲ್ಲೆ ಬರೆದಿದ್ದರೆ ಒಳ್ಳೆಯ ಲೇಖನವೇ ಆಗುತ್ತಿತ್ತು ಎಂದು ಮನಸಿನಲ್ಲಿ ಯೋಚಿಸುತ್ತಿದ್ದೆ, ಆದರೆ ಇತ್ತೀಚೆಗೆ ನಾನಗೂ ಅದೇ ಚಾಳಿ ಹತ್ತಿಕೊಂಡಿದೆ, ಬ್ಲಾಗುಗಳಿಗೆ ಅನಿಸಿಕೆ ಬರೆಯುತ್ತಾ ಬರೆಯುತ್ತಾ ನನ್ನ ಬ್ಲಾಗ್ ಅಪ್ಡೇಟ್ ಮಾಡೋದೆ ಮರೆತು ಬಿಡ್ತೀನಿ! ಅರೆ ತುಂಬಾ ಬರೆದಂತಿತ್ತು ನನ್ನ ಬ್ಲಾಗಲ್ಲಿ ಅಲ್ವಾ ಅಂತ ಯೋಚನೆ ಕಾಡೋಕೆ ಶುರುವಾಗುತ್ತೆ. ಮೊನ್ನೆಯೂ ಹಾಗೇ ನಗೆ ನಗಾರಿ ಬ್ಲಾಗಿನಲ್ಲಿದ್ದ ಸಚಿನ್ ಗೆ ಪ್ಯಾಡು ದೋಷ ಅಂತ ಒಂದು ಪೋಸ್ಟ್ ಗೆ ದೀರ್ಘವಾದದ್ದೊಂದು ಕಮೆಂಟನ್ನು ಕುಟ್ಟಿದ್ದೆ.. ಅದನ್ನು ನಗೆ ಸಾಮ್ರಾಟರು ಹೀಗೊಂದು ಪೂರಕ ಮಾಹಿತಿ ಒದಗಿಸಿದ್ದೇನೆಂದು ಕಮೆಂಟನ್ನು ಅಲ್ಲಿ ಪಬ್ಲಿಷ್ ಮಾಡಿದ್ದರು.. ಅದನ್ನು ಓದಿದ ನನಗೂ ಓಹ್ ಪರವಾಗಿಲ್ಲ ಕಮೆಂಟನ್ನು ಸ್ವಲ್ಪ ಮಟ್ಟಿಗೆ ಚನ್ನಾಗಿ ಬರೆದಿದ್ದೇನೆ ಎನಿಸಿತು.. ನನಗೆ ಇಷ್ಟವಾದ ನನ್ನ ಎರಡು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ, ನಿಮಗೂ ಇಷ್ಟ ಆಗಬಹುದೇನೋ.....
ನಗೆ ನಗಾರಿ ಬ್ಲಾಗ್ ನ ಸಚಿನ್ ಗೆ ಪ್ಯಾಡು ದೋಷ ಎನ್ನುವ ಪೋಸ್ಟಿಗೆ ನಾನು ಕಮೆಂಟಿನಲ್ಲಿ ಕುಟ್ಟಿದ್ದು... ಯತಾವತ್ ಕತ್ತರಿಸಿ ಅಂಟಿಸಿದ್ದೇನೆ
ಹೌದು ಕೆಲವು ಅಂಪೈರುಗಳಿಗೆ ತೋರು ಬೆರಳಲ್ಲಿ ಕಂಟಕ ಇದೆ,ಒಟ್ಟು ಮೂರು ಬಾರಿ ಮಹಾನ್ ಆಟಗಾರನಿಗೆ ತೊಂದರೆ ಮಾಡಲು ಹೋಗಿ ತಮ್ಮ ಘನತೆ ಗೌರವ ಮಣ್ಣು ಪಾಲು ಮಾಡಿಕೊಂಡು ಆ ಮಹಾನ್ ಆಟಗಾರನ ಅಭಿಮಾನಿಗಳಿಂದ ಹಾಗೂ ಜನಸಾಮಾನ್ಯರಿಂದ ಛೀಮಾರಿ ಎಂದು ನಕಲಿಬಂಗಾರದ ಮಲೆಯಾಳಿಗಳ ಒಡೆತನದ ಕನ್ನಡ ಚಾನಲಿನಲ್ಲಿ ಮಹಾನ್ ಜೋತಿಷಿಯವರು ಅನೇಕ ತಿಂಗಳುಗಳ ಹಿಂದೆಯೇ ತಮ್ಮ ಕಾರ್ಯಕ್ರಮದಲ್ಲಿ ತಿಳಿಸಿದ್ದರು…!!
ಹೌದು ನವಗ್ರಹದ ಕನ್ನಡ ಚಾನಲ್ ನವರು ಸೆಹವಾಗ್ ಬೋಲ್ಡ್ ಆಗಿ ಔಟ್ ಆಗಿದ್ದರ ಬಗ್ಗೆ ಕೆಲವು ತಿಂಗಳ ಹಿಂದೆ ಬೌಂಡರಿ ಲೈನ್ ಎನ್ನುವ ಕಾರ್ಯಕ್ರಮದಲ್ಲಿ ವರದಿಗಾರರಿಂದ ಆಟದ ಮೈದಾನದಿಂದ ನೇರವಾದ ಆಂಕೋ ದೇಖಾ ಹಾಲ್!(ಇದು ಆಕಾಶವಾಣಿಯವರ ಕಣ್ಣಲ್ಲಿ ನೋಡಿದ್ದನ್ನು ಕೇಳುಗರಿಗೆ ಯತಾವತ್ ವಿವರಣೆ ನೀಡುವುದು) ನಂತೆ ಹೇಳಿದ
ಸ್ಟುಡಿಯೋ: ಬನ್ನಿ ಈಗ ನೇರವಾಗಿ ನಮ್ಮ ವರದಿಗಾರ ಮಣ್ಣಪ್ಪನವರಿಂದ ಸ್ಟೇಡಿಯಂ ನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳೋಣಮಣ್ಣಪ್ಪನವರೇ…….. ಅಲ್ಲಿ ಏನು ನೆಡಿತಾ ಇದೆ ಮಣ್ಣಪ್ಪನವರೇ ನನ್ನ ಧ್ವನಿ ಕೇಳ್ತಾ ಇದೆಯಾ(ಮತ್ತೆ ಅದೇ ಮೇಲೆ ಕೇಳಿದ ಪ್ರಶ್ನೆ ರಿಪೀಟ್!)
ವರದಿಗಾರ (ನೇರ.. ಮೈದಾನದಿಂದ) ಹಾ.. ಕೇಳ್ತಾ ಇದೆ..ಸಣ್ಣಪ್ಪನವರೇ ಏನಾಗ್ತ ಇದೆ ಎಂದರೆ… ಆಟ ತುಂಬಾ ರೋಚಕ ಘಟ್ಟ ಕ್ಕೆ ಬಂದಿದೆ ನೋಡಿ ಸ್ಟೇಡಿಯಂ ನ ತುಂಬಾ ಕ್ರಿಕೆಟ್ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ.. ಬಾರೀ ಸಂಖ್ಯೆಯಲ್ಲಿ ಕ್ರಿಕೆಟ್ ವೀಕ್ಷಕರು ಬಂದಿದ್ದಾರೆ
ಸ್ಟುಡಿಯೋ ವರದಿಗಾರ: ಕ್ರಿಕೆಟ್ ವೀಕ್ಷಕರು ಬರದೇ ಇನ್ನು ಹಾಕಿ ವೀಕ್ಷಕರು ಬರುತ್ತಾರ ಎಂದು ಕೇಳುವಷ್ಟು ಸಿಟ್ಟು ಬರುತ್ತಿದೆ, ಅರ್ಧದಲ್ಲಿಯೇ ವರದಿಗಾರನ ಮಾತಿಗೆ ತಡೆಯೊಡ್ಡಲು ಮತ್ತೊಂದು ಪ್ರಶ್ನೆಯನ್ನು ಕೇಳಿಯೇ ಬಿಟ್ಟ ) ಸೆಹವಾಗ್ ಔಟ್ ಆಗಲು ಏನು ಕಾರಣ ಅವರು ಉತ್ತಮ ಫಾರಂ ನಲ್ಲಿ ಇದ್ರು??!! ಯಾಕೆ, ಯಾಕೆ ಹೀಗಾಯ್ತು ಅಂತೀರಿ?? ಚಂಡು ನೇರವಾಗಿ ಅವರ ವಿಕೇಟಿಗೆ ಬಡಿತಾ ಅಂತಾ? ಪ್ಯಾಡ್ ಅಡ್ಡಾ ಕೊಟ್ಟಿದ್ರೆ ಆಗ್ತಿರ್ಲಿಲ್ವಾ ಅಂತಾ?!!
ವರದಿಗಾರ (ನೇ.. ಮೈ, ಏರಿದ ಧ್ವನಿಯಲ್ಲಿ) ನೋಡಿ ಸಣ್ಣಪ್ಪನವರೆ ಅದೇನಾಯ್ತು ಅಂದ್ರೆ ಸೆಹವಾಗ್ ಉತ್ತಮ ಫಾರಂ ನಲ್ಲೇ ಇದ್ರೂ ಆದ್ರೆ ಅವರ ಬ್ಯಾಟು ಮತ್ತೆ ಪ್ಯಾಡಿನ ನಡುವೆ ಗ್ಯಾಪ್ ಜಾಸ್ತಿ ಇದ್ದಿದ್ರಿಂದ ಬೌಲ್ಡ್ ಆದ್ರೂ.. ಬೇಲ್ಸ್ ಗೆ ನೇರವಾಗಿ ಚಂಡು ಬಡೀತು…
ತಾಂತ್ರಿಕ ವರ್ಗ ಇವರ ಕರ್ಮಕಾಂಡ ನೋಡಲಾಗದೆ ಸಂಪರ್ಕ ಕಡಿತಗೊಳಿಸಿದರು…ಸ್ಟುಡಿಯೋದವ: (ಉಸ್ಸಪ್ಪಾ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ…) ಸಂಪರ್ಕ ಕಡಿತಗೊಂಡಿದೆ ಸಂಪರ್ಕ ಸಾಧ್ಯವಾಗುತ್ತಿಲ್ಲ, ಇನ್ನು ಕೆಲ ನಿಮಿಷಗಳ ನಂತರ ಮತ್ತೆ ನಮ್ಮ ಮಣ್ಣಪ್ಪನವರಿಂದ ನೇರವಾದ ಮಾಹಿತಿ ಪಡೆಯೋಣ,ಈಗ ಸಣ್ಣದೊಂದು ಬ್ರೇಕ್…..
ಹಾಗೆಯೇ ಪ್ರಕಾಶ್ ರವರ ಇಟ್ಟಿಗೆ ಸಿಮೆಂಟು ಬ್ಲಾಗ್ ನಲ್ಲಿ ನಾನು ಕರೆಯೋದು ಹೆಚ್ಚೋ..? ನೀನು ಬರುವದು ಹೆಚ್ಚೋ..? ಎನ್ನುವ ಪೋಸ್ಟಿಗೆ ಬರೆದ ದೀರ್ಘವಾದ ಕಮೆಂಟು ಹವ್ಯಕ ಭಾಷೆಯಲ್ಲಿದೆ, ಹವ್ಯಕ ಅರ್ಥವಾಗದವರು ಕ್ಷಮಿಸಿ, ಎನಪ್ಪಾ ಹವ್ಯಕರ ಹಾವಳಿ ಹೆಚ್ಚಯ್ತು ಅಂತ ಕೊರಗೋಕು ಹೋಗಬೇಡಿ
ಹಹ್ಹಹ್ಹ.. ಬಿಸಿ ಬೇಳೆ ಸಿಮ್-ಬ್ಳಬಾತ್...... ಚನಾಗಿ ಬರದ್ದೆ.. ಹಂಗೆ ಪ್ಲೇಟ್ ಕೆಡಗಿದ ತಕ್ಷಣ ಇನ್ನು ದೊಡ್ಡ ಪ್ಲೇಟ್ ತುಂಬಾ ಅದೇ ಲೋಳೆ ಬಾತ್ ತಂದು ಕೈಗೆ ಕೊಟ್ಟಿದ್ರೆ ಎಂತ ಮಾಡ್ತಿದ್ದೆ? ಅಂದಂಗೆ ಯಾವ ಫೋಟೋ ಬಗ್ಗೆ ಇಷ್ಟೆಲ್ಲ ಚರ್ಚೆ ಗೊತಾಗ್ಲೆ,ಬೇಲೂರು ಹಳೆ ಬೀಡು ನೆನ್ಪಿಟ್ಗಳಕ್ಕೆ ಆಗಲ್ಯ ಛೇ!
ಸೂಚನೆ: ಉದ್ದಿನ ವಡೆ ಮತ್ತೆ ಮಸಾಲೆ ದೋಸೆ ಪ್ರಿಯರು ಇದನ್ನ ಓದ್ಕ್ಯಂಡು ನಂಗೆ ಬೈಯ್ಯಡಿ,
ನನ್ನ ಅತ್ತೆ ಮಗಳು ಮಸಾಲೆ ದೋಸೆ ಮಾತ್ರ ತಿನ್ನದಿಲ್ಲೆ ಹೇಳ್ತ ಯಾವಗಲೂ, ಎಂತಕ್ಕೆ ಅಂತ ವಿಚಾರ್ಸಿರೆ, ಅವಳ ಪ್ರೆಂಡ್ ಅಪ್ಪಂದು ಒಂದು ಹೋಟಲ್ ಇದ್ದಡ, ಅವಳ ಮನೆಗೆ ಇವಳು ಒಂದಿನ ಹೋಗಿದ್ಲಡ ಅವ್ರ ಮನೇಲಿ ಆಲೂಗಡ್ಡೆನ ಪಲ್ಯಕ್ಕಾಗಿ ನುರಿತಾ ಇದಿದ್ವಡ ಅದನ್ನ ನೋಡ್ಕ್ಯಂಡು ಬಂದ ಮೇಲಿಂದ ಇವಳು ಮಸಾಲೆ ದೋಸೆ ಅಂದ್ರೆ ದೂರ ಓಡಿ ಹೋಗ್ತ.. ಎಂತಕ್ಕೆ ಅಂತ ಅರ್ಥ ಆಗಲ್ಲೆ ಅಲ್ದ... ಅವರ ಮನೇಲಿ ಪಲ್ಯಕ್ಕಾಗಿ ಆಲೂ ಗಡ್ಡೆನ ನೆಲದಮೇಲೆ ರಾಶಿ ಹಾಕ್ಯಂಡು ತುಳಿತಾ ಇದಿದ್ವಡ ಮೂರು ನಾಲ್ಕು ಜನ ಬರಿಗಾಲಲ್ಲಿ... ! ಇನ್ನು ಕೆಲವು ಕಡೆ ರಾಗಿ ಮುದ್ದೆ ರಾಶಿ ರಾಶಿ ಮಾಡಿ ಇಡ್ತ್ವಡ ಅದನ್ನ ನೋಡಿರೂ ಯಾರು ರಾಗಿ ಮುದ್ದೆ ತಿಂತ್ವಲ್ಲೆ.
ಹಂಗೆ ನನ್ನ ಸೋದರಮಾವ ಯಾವಾಗಲು ಹೇಳ ಹೋಟೆಲ್ ಜೋಕ್ ಬರ್ತಿ ಇಷ್ಟ.. ಅದನ್ನ ಸ್ಪಲ್ಪ ಬಿಡಿಸಿ ದೊಡ್ಡಕ್ಕೆ ಮಾಡಿ ನಿಂಗೂ ಹೇಳವು ಅನುಸ್ತಾ ಇದ್ದು..ಒಂದು ಹೋಟೆಲ್ ಇತ್ತಡ ಅಲ್ಲಿ ವಡೆ ತುಂಬಾ ರುಚಿ ಇರ್ತಿತ್ತಡ, ಅದೂ ಅಲ್ದೆ ವಡೆ ಮಾಡ ಭಟ್ಟಂಗೆ ಎಡಗೈ ಇರ್ಲ್ಯಡ ಆದ್ರೂ ವಡೆನ ರುಚಿ ರುಚಿಯಾಗಿ ಮಾಡ್ತಿದ್ನಡ..ಅಡುಗೆ ಮನೆಗೆ ಯಾರನ್ನು ಬಿಡ್ದೆ ಬಾರಿ ಸೀಕ್ರೇಟ್ ಆಗಿ ಇಟ್ಟಿದ್ವಡ ವಡೆ ಮಾಡ ವಿಧಾನನ, ಒಂದಿನ ಎರಡು ಜನ ಪ್ರೆಂಡ್ಸ್ ಮಾತಡ್ಕ್ಯಂಡ್ವಡ ಹೆಂಗಾರು ಮಾಡಿ ಅಡುಗೆ ಮನೆಗೆ ಹೋಗಿ ನೋಡಕ್ಕು ಅಂತ ಹೋಟೆಲ್ ಹಿಂಬಾಗಕ್ಕೆ ಹೋಗಿ ನೋಡಿದ್ವಡ ಇವರ ಅದೃಷ್ಟಕ್ಕೆ ಒಂದು ಕಿಟಕಿ ಓಪನ್ ಆಗಿತ್ತಡ ಹಣಕಿ ನೋಡಿರೆ ಅಲ್ಲಿ ಮೂರು ಜನ ಅಡುಗೆ ಬಟ್ಟರು ಇದಿದ್ವಡ ಒಬ್ಬವ ಹಿಟ್ಟು ಬೀಸ್ತಾ ಇದಿದ್ನಡ ಬೀಸಿ ಬೀಸಿ ಸುಸ್ತಾಗಿ ಅವನ ಮೈ ಪೂರ್ತಿ ಬೆವರಿ ಹೋಗಿತ್ತಡ ಹಣೆ ಮೇಲೆ ಬೆವರು ನೀರು ಸಾಲು ಗಟ್ಟಿತ್ತಡ. ತಕ್ಷಣ ಉಸ್ ಅಂತ ಆ ಹಣೆ ಮೇಲಿನ ನೀರನ್ನ ಕೈಯಾಗೆ ವರಸ್ಕ್ಯಂಡು ಕೈಲಿದ್ದ ನೀರನ್ನ ಒರಳಿಗೆ ಪ್ರೋಕ್ಷಣ್ಯ ಮಾಡಿಕ್ಯಂಡು ಹಿಟ್ಟು ಬೀಸದರಲ್ಲಿ ಬಿಜಿ ಆಗಿದ್ನಡ.. ಅದನ್ನ ನೋಡಿದವ್ರು ಇಬ್ಬರೂ ಓಡಿ ಹೋಗಿಬಿಟ್ವಡ, ಅವ್ವು ಎಲ್ಲರ ಹತ್ರನೂ ನಾವು ವಡೆ ತಿನ್ನದಾರೆ ಇದೆ ಹೋಟಲ್ಲೆ ಸೈ ಅಂತ ಹೇಳ್ಕ್ಯಂಡ್ ಬಿಟಿದ್ವಡ ಅದಕ್ಕಾಗಿ ಯಾರತ್ರನೂ ವಡೆ ಮಾಡವ ಹಂಗೆ ಮಾಡ್ತ ಅಂತ ಹೇಳಕ್ಕೆ ಸುಮಾರಾತು ಅಷ್ಟರ ಮೇಲೆ ಆ ಹೋಟ್ಲಿಗೆ ಹೋದ್ರು ವಡೆ ಮಾತ್ರ ತಿಂತಿರ್ಲ್ಯಡ, ಸ್ಪಲ್ಪ ದಿನ ಆತಡ ದಿನದಿಂದ ದಿನಕ್ಕೆ ವಡೆ ರುಚಿ ಹೆಚ್ತಾನೆ ಹೋತಡ..
ಅಡುಗೆ ಮನೆ ಬಾಗಿಲಿಗೆ ಮುಂಚೆ ಇದಿದ್ದಕ್ಕಿಂತ ದೊಡ್ಡ ಬೋರ್ಡ್ ಹಾಕಿದ್ವಡ ಅದೂ ಕೆಂಪಿ ಅಕ್ಷರದಲ್ಲಿ.. ಕಡ್ಡಾಯವಾಗಿ ಅಡುಗೆ ಬಟ್ಟರನ್ನು ಬಿಟ್ಟು ಮತ್ಯಾರಿಗು ಪ್ರವೇಶವಿಲ್ಲ ಅಂತ, ಮೇಲೆ ಹೇಳಿದಂಗೆ ಮತೊಬ್ಬವಂಗೂ ಏನಪಾ ಇಷ್ಟು ಗುಟ್ಟು ಮಾಡ್ತ್ವಲಾ ಅಂತ ಹಿಂದಿನ ಕಿಟಕಿಲಿ ಹಣಕಿ ನೋಡಿದ್ನಡಒಬ್ಬವ ಅಲ್ಲಿ ಹಿಂದಿನ ದಿನ ರಾತ್ರಿ ಬೀಸಿಟ್ಟ ಹಿಟ್ಟನ್ನ ಕೈಯಾಗೆ ಒಂದ್ಸರಿ ತೊಳಸ್ತಾ ಇದಿದ್ನಡ, ಅವ ತುಂಬಾ ಹುಷಾರಿದಿದ್ನಡ.. ಹಿಟ್ಟಲ್ಲಿ ಎನಾರು ಬಿದಿದ ಪರಿಶೀಲನೆ ಮಾಡಕ್ಕಾಗಿ ಕೈಹಾಕಿ ತೊಳಸ್ತಿದ್ನಡ, ಹಾ ಸಿಕ್ಕೇ ಬಿಡ್ತು ಅಂತ ಮತೋಬ್ಬವ ಅಡುಗೆ ಭಟ್ಟಂಗೆ ತೋರ್ಸಿದ್ನಡ ಇಲಿ ಬಾಲ ಹಿಡಿದು.. ಅದ್ರ ಮೈಗೆ ಬಡ್ಕಂಡಿರ ಹಿಟ್ಟನ್ನ ಪಾತ್ರಿಗೆ ಸವರಿ ಹಾಕ್ಯಂಡು ಇಲಿ ತಗಂಡು ಹೋಗಿ ಹೊರಗೆ ವಗದಿಕ್ಕಿ ಬಂದ್ನಡ, ಅಲ್ಲೆ ಪಕ್ಕದಲ್ಲಿ ವಡೆನ ಕೈ ಇಲ್ದೇ ಹೋದ ಭಟ್ಟ ಕಟ್ತಾ ಇದಿದ್ನಡ ಅವ ಬಲಗೈಲಿ ಹಿಟ್ಟಿನ ಉಂಡೆ ಕಟ್ಗ್ಯಳದು ಎಡಗಡೆ ಕಂಕಳಲ್ಲಿ ಇಟ್ಗಂಡು ಅದಕ್ಕೆ ವಡೆ ಆಕಾರ ಕೊಡ್ತಿದ್ನಡ ಅದ್ಕೆ ವಡೆ ಅಷ್ಟು ರುಚಿ!
ಮತ್ತೆ ಹೇಳ್ತಿ ಈಗ ಈ ಕಮೆಂಟ್ ಓದಿದವ್ರು ಯಾರು ನಂಗೆ ಬೈಯಲೆ ಇಲ್ಲೆ... ಆನಂತು ಮುಂಚೇನೆ ಹೇಳಿಗಿದಿ, ಎನಗೆ ಬೈಯ್ಯಲಿಲ್ಲೆ ಅಂತ..

Saturday, February 7, 2009

ಹೊಸಾ ಎಲೆಕ್ಟ್ರಾನಿಕ್ ಗಾದೆಗಳು!

1)ಬಾಯಲ್ಲಿ ಬಿಳಿ ಹಲ್ಲು(Tooth) ಇಲ್ಲದೆ ಹೋದರೂ ಪರವಾಗಿಲ್ಲ ಮೊಬೈಲಿಗೆ ನೀಲಿ ಹಲ್ಲು (Blue Tooth) ಇರಲೇಬೇಕು.

2)ಪೆನ್ ಡ್ರೈವ್ ಕಳ್ಳ ಅಂದ್ರೆ ಯೂಎಸ್ ಬಿ ಮುಟ್ಟಿ ನೊಡ್ಕೊಂಡ್ರಂತೆ..(ಮೊನ್ನೆ ಗೆಳೆಯ ಹೇಳಿದ್ದು).


3)ಭ್ರಾಡ್ ಬ್ಯಾಂಡಲ್ಲಿ ಆಗದ್ದು ಡಯಲ್ ಅಪ್ ಅಲ್ಲಿ ಆಗುತ್ತಾ?.

4)ಆಫೀಸಿಂದ ಮನೆಗೆ ಬಂದ್ರೂ ಪ್ರಾಕ್ಸಿ ಸರ್ವರ್ ಹುಡ್ಕೋದು ಬಿಡ್ಲಿಲ್ಲ.

5)ಹಳೆಯ ಪಿಲ್ಮ್ ಹಾಕೋ ಕ್ಯಾಮರಾಕ್ಕೆ ಎಷ್ಟು ಜೀಬಿ ಮೆಮೊರಿ ಕಾರ್ಡ ಇದೆ ಹುಡ್ಕಿದಂತೆ.

6)ಎದೆ ಬಗೆದರೆ ಮೂರು ಅಕ್ಷರ ಇಲ್ಲಾ.. ಕಾರ್ಡ್ ಸುಗದ್ರೆ ಮೂರು ಕಾಸಿಲ್ಲ.

7)ಸಾಪ್ಟ್ ವೇರ್ ಗೆ ಹೋದ ಮಾನ ಹಾರ್ಡ್ ವೇರ್ ಕೊಟ್ಟರು ಬಾರದು.

8)ಗೂಗಲ್ ಟಾಕ್ ಗೆ ಬಾ ಪ್ರೈವೇಟಾಗಿ ಮಾತಾಡ್ಬೇಕು ಅಂದ್ರೆ ಆರ್ಕುಟ್ಟಿಗೆ ಬರ್ತೀನಿ ಅಂದಂತೆ.

Wednesday, February 4, 2009

ನಾನು, ನನ್ನ ರಿಲಾಯೆನ್ಸ್ ಪೋನ್ ಮತ್ತು ಸ್ಪಾರ್ಕ್… !!

ತುಂಬಾ ದಿನದ ನಂತರ ನನ್ನ "ಮನಸ್ವಿ ಮೊಬೈಲ್ ಟಾಕ್" ಎನ್ನುವ ಮತ್ತೊಂದು ಬ್ಲಾಗನ್ನು ಅಪ್ಡೇಟ್ ಮಾಡಿದ್ದೇನೆ, ಏನೂ ವಿಷಯ ಇರಲಿಲ್ಲ ಅಂತಾನೋ, ಸೋಮಾರಿತನ ಅಂತಾನೋ, ಬ್ಲಾಗ್ ಅಪ್ಡೇಟ್ ಮಾಡಿರಲೇ ಇಲ್ಲ, ಆದರೆ ಕಳೆದ ಒಂದು ವಾರದಲ್ಲಿ ನೆಡೆದ ಘಟನೆಗಳು..ನಿನ್ನೆ ನೆಡೆದ ಅಂತಿಮ ಸುತ್ತಿನ ಮಾತುಕತೆಯಿಂದ ನನಗೆ ಸಂತೋಷ ಉಂಟಾಗಿದೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು, ಇದು ನನಗೆ ಮತ್ತು ನೊಂದ ಗ್ರಾಹಕರಿಗೆ ಸಿಕ್ಕ ಗೆಲುವು.
ಮುಂದೆ ಓದಲು ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ ನಾನು, ನನ್ನ ರಿಲಾಯೆನ್ಸ್ ಪೋನ್ ಮತ್ತು ಸ್ಪಾರ್ಕ್… !!

Friday, January 30, 2009

ಕೇರಳ ನಾ ಕಂಡಂತೆ..

ಇದು ಒಂದು ಸಂಪೂರ್ಣವಾದ ಮಾಹಿತಿ ಹೊತ್ತ ಪ್ರವಾಸ ಕಥನವಾಗಲಾರದು ಏಕೆಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಇರುವ ದೂರ ನೆನಪಿನಲ್ಲಿಟ್ಟುಕೊಳ್ಳುವುದು, ಒಂದೂರಿನಿಂದ ಇನ್ನೊಂದು ಊರಿನ ರಸ್ತೆಯ ಮಾರ್ಗವನ್ನು ತಿಳಿಸುವುದು ನನ್ನ ಜಾಯಮಾನಕ್ಕೆ ಹೊಂದುವಂತದ್ದಲ್ಲ.

ನಾನು ಡಿಸೆಂಬರ್ ೨೬ರಂದು ನನ್ನ ನೆಂಟರಿಷ್ಟರ ಜೊತೆ ಕೇರಳಕ್ಕೆ ಹೋಗಿ ೫ದಿನಗಳ ಪ್ರವಾಸ ಮಾಡಿಬಂದಿದ್ದೇನೆ, ನಾವು ಒಟ್ಟು ಹದಿನೈದು ಜನರು ಮಿನಿ ಬಸ್ಸು ಮಾಡಿಸಿಕೊಂಡು ಬೆಂಗಳೂರಿನಿಂದ ೨೬ರ ರಾತ್ರಿ ಹೊರಟೆವು.. ಶ್ರೀರಂಗ ಪಟ್ಟಣ, ಮೈಸೂರು ಮಾರ್ಗವಾಗಿ ಹೊರಟೆವು.. ರಾತ್ರಿ ೨ಗಂಟೆಯ ಸುಮಾರಿಗಿರಬಹು... ನಮಗೆಲ್ಲಾ ಗಾಢ ನಿದ್ದೆ ಹತ್ತಿದ್ದ ಸಮಯ, ನಮ್ಮ ಬಸ್ಸು ವಿಚಿತ್ರವಾಗಿ ಓಡುತ್ತಿರುವಂತೆ ಮುಂದೆ ಕುಳಿತಿದ್ದ ನನ್ನ ಮಾವನಿಗೆ ಭಾಸವಾಯಿತಂತೆ, ತಕ್ಷಣ ಪಕ್ಕದಲ್ಲಿ ಕುಳಿತಿದ್ದ ಅಣ್ಣನನ್ನು ಎಬ್ಬಿಸಿದರು, ಮುಂದೆ ಕುಳಿತಿದ್ದ ಅವರಿಬ್ಬರಿಗೆ ಏನಾಗುತ್ತಿರಬಹುದು ಎನ್ನುವುದು ಅರಿವಿಗೆ ಬಂದಾಗಿತ್ತು ಅದೇನೆಂದರೆ ಬಸ್ಸಿನ ಡ್ರೈವರನಿಗೆ ನಿದ್ದೆಯ ಜೊಂಪು ಹತ್ತಲು ಆರಂಭವಾಗಿತ್ತು ಆದ್ದರಿಂದ ಬಸ್ಸು ರಸ್ತೆಯ ಬಲಭಾಗಕ್ಕೆ ಬರುವುದು.. ವೇಗ ಕಳೆದುಕೊಳ್ಳುವುದು ಮತ್ತೆ ಎಡಭಾಗಕ್ಕೆ ಬಂದು ವೇಗವಾಗಿ ಓಡುವುದು ಆಗುತ್ತಿತ್ತು.. ತಕ್ಷಣವೇ ಅವರು ಎದ್ದು ಹೋಗಿ ಡೈವರನನ್ನು ಮಾತನಾಡಿಸಿ ರಸ್ತೆಯ ಪಕ್ಕದಲ್ಲಿ ಬಸ್ಸನ್ನು ನಿಲ್ಲಿಸಿ ನಿದ್ರಿಸಲು ಸೂಚಿಸಿದರು.. ಆದರೆ ಡ್ರೈವರನಿಗೆ ಆಯಾಸವಾಗಿ ನಿದ್ರೆ ಬರುತ್ತಿದ್ದರೂ ಅಲ್ಲಿ ಆತನಿಗೆ ಮತ್ತೊಂದು ಸಮಸ್ಯೆಯು ತಲೆದೋರಿತ್ತು ಅದೇನೆಂದರೆ ನಾವು ದಟ್ಟ ಅರಣ್ಯದ ನಡುವೆ ಇದ್ದೇವೆ ಆದ್ದರಿಂದ ಇಲ್ಲೆಲ್ಲೂ ನಿಲ್ಲಿಸಲು ಬರುವುದಿಲ್ಲ.. ನಿಲ್ಲಿಸಿದರೆ ಕಳ್ಳರು, ನಕ್ಸಲರು ಇರುವ ಸಾಧ್ಯತೆಯಿದ್ದು ಇನ್ನು ೨ಕಿಲೋ ಮೀಟರ್ ಹೋದರೆ ಕರ್ನಾಟಕದ ಗಡಿ ಮುಗಿಯುತ್ತದೆ ಅಲ್ಲಿರುವ ಚೆಕ್ ಪೋಸ್ಟನ ಹತ್ತಿರ ನಿಲ್ಲಿಸುತ್ತೇನೆ ಎಂದು ಹೇಳಿ ಚೆಕ್ ಪೋಸ್ಟನ ಬಳಿ ಬಸ್ಸನ್ನು ಕೊಂಡೊಯ್ದು ನಿಲ್ಲಿಸಿ ಘಂಟೆ ನಿದ್ರೆ ಮಾಡಿದ ಆತ ಸುರಕ್ಷಿತವಾಗಿ ನಮ್ಮನ್ನು ಕೇರಳ ತಲುಪಿಸಿದ.
ಇಲ್ಲಿ ನಾನು ಟ್ರಾವೆಲ್ ಏಜನ್ಸಿಗಳ ಬಗ್ಗೆ ಬರೆಯಲೇ ಬೇಕು.. ಡ್ರೈವರುಗಳು ಎಷ್ಟೇ ದೀರ್ಘವಾದ ಪ್ರಯಾಣಕ್ಕೆ ಹೋಗಿಬಂದಿದ್ದರೂ ಅವರಿಗೆ ಸ್ವಲ್ಪವೂ ಸುಧಾರಿಸಿಕೊಳ್ಳಲು ಬಿಡದೆ ಮತ್ತೊಂದು ಟ್ರಿಪ್ ಗೆ ಕಳಿಸುತ್ತಾರಂತೆ, ನಮ್ಮ ಮಿನಿ ಬಸ್ಸನ್ನು ಓಡಿಸಲು ಬಂದ ಚಾಲಕನು ಹಿಂದಿನ ದಿನವಷ್ಟೇ ಶಬರಿಮಲೆಯಿಂದ ಬೆಂಗಳೂರಿಗೆ ಬಂದಿದ್ದನಂತೆ.. ತಕ್ಷಣವೇ ನಮ್ಮ ಟ್ರಿಪ್ಗೆ ಕಳಿಸಿದ್ದರು.. ಇವಿಷ್ಟೇ ಅಲ್ಲದೆ ಕುಂಭಕರ್ಣನಂತೆ ನಿದ್ದೆ ಹೊಡೆಯುವ ಕ್ಲೀನರನ್ನು ಸಹ ಕಳಿಸಿದ್ದರು, ಆತನಿಗೆ ಸ್ಪಲ್ಪವಾದರು ಮೆದುಳು ಚುರುಕಾಗಿದ್ದರೆ ಆಗುತಿತ್ತು, ಕಿರಿದಾದ ಜಾಗಗಳಲ್ಲಿ, ಮತ್ತು ಬಸ್ಸನ್ನು ರಿವರ್ಸ್ ತೆಗೆದುಕೊಳ್ಳುವಾಗ ಡ್ರೈವರನಿಗೆ ಮಾರ್ಗದರ್ಶನ ನೀಡಿ ಸಹಾಯ ಮಾಡಬೇಕೆನ್ನುವ ಸಾಮಾನ್ಯ ಜ್ಞಾನವಾದರೂ ಇತ್ತಾ ಅದೂ ಇರಲಿಲ್ಲ, ನಾವು ಅವನಿಗೆ ಬೈಯ್ಯಲು ಆರಂಭಿಸಿದ ನಂತರ ಸ್ವಲ್ಪ ಸುಧಾರಿಸಿದಂತೆ ನಮಗೆ ಅನಿಸಿತು,ಕೇರಳದ ಊರುಗಳ ಹೆಸರು ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಕಷ್ಟಕರವಾದ ವಿಷಯ.. ಉಚ್ಚಾರ ಕಷ್ಟಕರ, ಅದೂ ಅಲ್ಲದೆ ಮ್ಯಾಪಿನಲ್ಲಿ ಇರುವ ಹೆಸರಿಗೂ ಅಲ್ಲಿನ ಊರಿನ ಹೆಸರಿಗೂ ವ್ಯತ್ಯಾಸಗಳಿರುತ್ತವೆ ಅಲಪ್ಪಿ ಅನ್ನಬೇಕೋ ಅಲಪ್ಪುಝಾ ಅನ್ನಬೇಕೋ ಗೊತ್ತಾಗುವುದೇ ಇಲ್ಲ.

ಪ್ರವಾಸಕ್ಕೆ ಅತಿ ಮುಖ್ಯವಾದದ್ದು ಆಹಾರ, ಆಹಾರ ಸರಿಯಿದ್ದರೆ ಪ್ರಯಾಣ ಸುಖಕರವಾಗಿರುತ್ತದೆ,ನಿಮಗೆ ಬೆಂಗಳೂರಿನ ರುಚಿ ರುಚಿಯಾದ ಸಸ್ಯಾಹಾರಿ ಹೋಟೆಲ್ ರುಚಿ ನಿಮ್ಮ ನಾಲಿಗೆ ಸವಿದಿದ್ದರೆ.. ಖಂಡಿತ ಕೇರಳದ ಹೋಟೆಲುಗಳ ಸಸ್ಯಾಹಾರಿ ಪದಾರ್ಥಗಳನ್ನು ಇಷ್ಟಪಡಲಾರಿರಿ.ನಾವು ಕೇರಳ ತಲಿಪಿದ ಮೊದಲನೇ ದಿನ ಬೆಳಗ್ಗಿನ ತಿಂಡಿ ತಿನ್ನಲು ಕೊಚ್ಚಿನ್ ನಲ್ಲಿನ ಹೋಟೆಲೊಂದಕ್ಕೆ ಹೋಗಿದ್ದೆವು, ಹೋಟೆಲ್ ಒಳಗೆ ಹೋಗುತ್ತಿದ್ದಂತೆ ನನ್ನ ಗಮನ ಸೆಳೆದದ್ದು ಕೇರಳದ ಜನರ ಉಡುಪು, ಅತೀ ಹೆಚ್ಚಿನ ಕೇರಳದ ಜನರು ಶುಭ್ರವಾದ ಬಿಳಿಯ ಪಂಚೆ ಮತ್ತು ಅಂಗಿಯನ್ನು ಧರಿಸಿ ಓಡಾಡುತ್ತಾರೆ.. ಅದು ಅಲ್ಲಿಯ ಒಂದು ಸಾಮಾನ್ಯ ವಿಷಯ, ಮೊದಲ ಸಲ ಕೇರಳ ನೋಡುತ್ತಿರುವುದರಿಂದ ಇದು ಒಂದು ನೆನಪಿನಲ್ಲಿ ಉಳಿದ ಸಂಗತಿಯಾಗಿದೆ, ನಾವು ಹೋಟೆಲ್ ಮಾಣಿಯನ್ನು(ಸಪ್ಲಯರಿಗೆ ಮಲಯಾಳಂ ನಲ್ಲಿ ಏನು ಹೇಳ್ತಾರೋ ಗೊತ್ತಿಲ್ಲ!) ಕರೆದರೆ ನಮ್ಮ ಹದಿನೈದು ಜನರ ಗುಂಪನ್ನು ನೋಡಿದ ಹೋಟೇಲ್ ಮ್ಯಾನೇಜರೇ ಖುದ್ದು ನಮ್ಮನ್ನು ವಿಚಾರಿಸಿಕೊಳ್ಳಲು ಹಾಜರಾದ.. ನಾವು ಏನೇನು ತಿಂಡಿಯಿದೆ ೧೫ ಜನರಿಗೆ ಎಂದು ಕೇಳಿದಾಗ ಆತ ಅಪ್ಪಮ್ಮ್.. ಇದೆ (ಅಪ್ಪಮ್ ಉಂಡು) ಎಂದು ಮಲಯಾಳಂ ನಲ್ಲಿ ಹೇಳಿದ, ನಮಗೋ ಇದು ಮೊದಲ ಸಾರಿ ಕೇಳುತ್ತಿರುವ ಹೆಸರು ಬೇರೆ, ಅಪ್ಪ ಅಮ್ಮ ಅನ್ನುತ್ತಿದ್ದಾನೋ ತಿಂಡಿಯ ಹೆಸರು ಹೇಳುತ್ತಿದ್ದಾನೊ ಎಂದು ಅರಿವಾಗಲು ಸ್ಪಲ್ಪ ಸಮಯ ತೆಗೆದುಕೊಂಡು ಏನಾದರು ಆಗಲಿ ನೋಡಿಯೇ ಬಿಡೋಣ ಅಪ್ಪ ಅಮ್ಮನನ್ನ ಅಲ್ಲಲ್ಲ ಅಪ್ಪಮ್ಮನ್ನು ಕೊಡಿ ಎಂದು ನಕ್ಕು ಆರ್ಡರ್ ನೀಡಿಯೇ ಬಿಟ್ಟೆವು.. ಸುಮಾರು ಸಮಯದ ನಂತರ ನೀರು ದೋಸೆಯಂತಾ ಅಪ್ಪಮ್ ನಮ್ಮ ಮುಂದೆ ತಂದಿಟ್ಟರು,ತುಂಬಾ ಹಸಿವಾಗಿದ್ದರಿಂದ ಅದರ ರುಚಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ತಿಂದು ಮುಗಿಸಿದೆವು... ಮುಂದೆ ಹಗಲಿಡೀ ಪ್ರಯಾಣ ಮಾಡಿದೆವು..ಸಂಜೆ ನಾವು ಆಲ್ವಿ ಎನ್ನುವ ಊರನ್ನು ತಲುಪಿದೆವು, ನಮಗೆ ಪರಿಚಯವಿದ್ದ ಒಬ್ಬರ ಮನೆ ಊರಿನಲ್ಲಿತ್ತು ಅವರ ವಿಲ್ಲಾದಲ್ಲಿ(ವಿಲ್ಲಾ ಎಂದರೆ ಮನೆಯೆಂಬ ಅರ್ಥ ಕೊಡುತ್ತದೆ) ಎರಡು ದಿನ ಉಳಿದುಕೊಂಡಿದ್ದೆವು,


ನಾನು ಯಾವಾಗಲು ಸಸ್ಯಾ(ಮಾಂಸ)ಹಾರಿ ಎರಡು ಒಟ್ಟಿಗೆ ಇರುವ ಹೋಟೆಲ್ ಗಳ ಬಗ್ಗೆ ಹೇಳಿಕೊಂಡು ನಗುತ್ತಿದ್ದೆ "ಸಸ್ಯಹಾರಿ ಮತ್ತು ಮಾಂಸಹಾರಿ ಹೋಟೆಲ್ ಗಳಲ್ಲಿ ಎರಡು ಬೇರೆ ಬೇರೆ ಪಾತ್ರೆಗಳಲ್ಲಿ ಬೇಯಿಸುತ್ತಾರೆ ಆದರೆ ಸೌಟು ಮಾತ್ರ ಒಂದೇ" ಎಂದು,ಆದರೆ ನನಗೆ ಗತಿ ಬರುತ್ತದೆಯೆಂದು ಗೊತ್ತಿರಲಿಲ್ಲ... ಕೇರಳದಲ್ಲಿ ನಾನು ನೋಡಿದ ಪ್ರಕಾರವಾಗಿ ಬರೀ ಸಸ್ಯಾಹಾರಿ ಹೋಟೆಲ್ ಸಿಗುವುದು ಅತಿ ವಿರಳ,ಆದರೆ ಒಂದು ಕಡೆ ನಮಗೆ ಶಿವಂ "ವೆಜಿಟೆಬಲ್" ರೆಸ್ಟೋರೆಂಟ್ ಕಾಣಿಸಿತು, ಆಗಲೆ ಊಟವಾಗಿದ್ದರಿಂದ ವೆಜಿಟೆಬಲ್ ರೆಸ್ಟೋರೆಂಟ್ನಲ್ಲಿ ವೆಜಿಟೆಬಲ್ ತಿನ್ನಲಾಗಲೇ ಇಲ್ಲ




ಇನ್ನು ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್ಗಳಲ್ಲಿ, ಸಸ್ಯಾಹಾರಿ ಪದಾರ್ಥಗಳಂತೂ ಅತ್ಯಂತ ದರಿದ್ರವಾಗಿರುತ್ತವೆ(ನಾನು ಸೊಪ್ಪು ತಿನ್ನುವ ಜಾತಿಗೆ ಸೇರಿದ್ದರಿಂದ ಮಾಂಸಹಾರ ಹೇಗಿರುತ್ತದೆಯೋ ಗೊತ್ತಿಲ್ಲ, ಸೊಪ್ಪು ತಿನ್ನುವ ಜಾತಿ ಎಂದು ಏಕೆ ಹೇಳಿದೆನೆಂದರೆ ಸಸ್ಯಾಹಾರಿಗಳನ್ನು ಚುಡಾಯಿಸುವುದು ಹೀಗೆಯೇ ಅಲ್ವಾ! ) ರೈಸ್ ಭಾತ್ ಮಾಡಿರುತ್ತಾರೆ,ಅದು ಹೇಗಿರುತ್ತದೆಯೆಂದರೆ ರೊಟ್ಟಿಯ ಜೊತೆ ಕೊಡುತ್ತಾರಲ್ಲ ಸಾಗು.., ನೆನ್ನೆ ಉಳಿದ ಅದನ್ನು ಅನ್ನಕ್ಕೆ ಕಲಸಿ ತಂದಿಟ್ಟಂತೆ ಇರುತ್ತದೆ. ಒಂದು ದಿನ ಮಧ್ಯಾಹ್ನ ನಾವು ಬರಿ ಬ್ರೆಡ್ ಮತ್ತು ಜಾಮ್ ತಿಂದು ಹೊಟ್ಟೆ ತುಂಬಿಸಿಕೊಂಡೆವು, ಬ್ರೆಡ್ ಜಾಮ್ ಇಷ್ಟೆಲ್ಲಾ ರುಚಿ ರುಚಿಯಾಗಿರುತ್ತ ಅನಿಸಿದ್ದಂತು ನಿಜ,ಇನ್ನು ಹೋಟೆಲುಗಳಲ್ಲಿ ಇಡ್ಲಿ ವಡೆ ಹೇಳಿದರೆ ಮೂರು ಇಡ್ಲಿ ಮತ್ತು ಒಂದು ವಡೆ ತಂದುಕೊಡುತ್ತಾರೆ,(ಕರ್ನಾಟಕದಲ್ಲಾದರೆ ಎರಡೇ ಇಡ್ಲಿ ಕೊಡ್ತಾರೆ ಅಲ್ವಾ) ದೋಸೆಯ ಜೊತೆಗೂ ಒಂದು ಉದ್ದಿನ ವಡೆ ಕೊಡೋದು ನಮಗೆ ವಿಶೇಷ ಅನಿಸಿತು,ತಿಂಡಿಯಲ್ಲಿ ಇಡ್ಲಿ ಮತ್ತು ದೋಸೆ ರುಚಿ ಪರವಾಗಿಲ್ಲ ಎನ್ನುವಂತಿದ್ದರೂ ಬೇರೆಲ್ಲಾ ಪಧಾರ್ಥಗಳ ರುಚಿ ಮಾತ್ರ ದೇವರಿಗೇ ಪ್ರೀತಿ, ಅಂದಹಾಗೆ ದೇವರಿಗೆ ನಾಲಿಗೆ ರುಚಿ ಇಲ್ಲವೆ, ಹೆಚ್ಚಿನವರು ರುಚಿಯಿಲ್ಲ, ಉಪ್ಪಿಲ್ಲ ಖಾರವಿಲ್ಲ ಎಂದಾದರೆ ದೇವರಿಗೇ ಪ್ರೀತಿ ಅಂತ ಯಾಕೆ ಹೇಳ್ತಾರೋ ಏನೋ.. ಇದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ!

ಮೊದಲು ನಾವು ನೋಡಿದ್ದು ಕಾಲಾಡಿಯಲ್ಲಿ ಇರುವ ಶಂಕರಾಚಾರ್ಯರ ಜನ್ಮ ಸ್ಥಳದಲ್ಲಿರುವ ದೇವಸ್ಥಾನ.. ಅಲ್ಲಿ ನಮಗೆ ಕನ್ನಡದಲ್ಲೇ ಮಾತನಾಡಲು ಬರುತ್ತಿದ್ದ ಅರ್ಚಕರು ದೇವಸ್ಥಾನದ ಬಗ್ಗೆ ತಿಳಿಸಿದರು, ನಾನು ಮೇಲೆ ತಿಳಿಸಿದಂತೆ ಹೊಟ್ಟೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಪ್ರವಾಸದ ಸವಿಯನ್ನು ಸವಿಯಲು ಆರಂಬಿಸಿದ್ದು ನಾವು ಮುನಾರ್ ಪರ್ವತ ಶ್ರೇಣಿಗಳತ್ತ ತಲುಪಿದಾಗ.. ಎಲ್ಲಿ ನೋಡಿದರೂ ಕಣ್ಮನ ಸೆಳೆಯುವ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು, ಮಂಜು ಮುಸುಕಿದ ಪರ್ವತ ಶೇಣಿ,
ಎರವಿಕುಲಮ್ ನ್ಯಾಷನಲ್ ಪಾರ್ಕ್ ಎತ್ತರ ಪ್ರದೇಶ ತಲುಪಿದ ನಂತರ ಕಾಣುವ ಸುಂದರ ದೃಶ್ಯ

ಅತ್ಯಂತ ಎತ್ತರದ ಪ್ರದೇಶದಲ್ಲಿ ಮುನಾರ್(ಮನ್ನಾರ್, ಮುನ್ನಾರ್ ಹಿಲ್ಸ್) ಬೆಲ್ ಮೋಂಟ್ ಎನ್ನುವ ಲಾಡ್ಜಿನಲ್ಲಿ ನಾವು ಉಳಿದುಕೊಳ್ಳುವ ವ್ಯವಸ್ಥೆಯಾಗಿತ್ತು.ಹೊಟೆಲಿನಲ್ಲಿ ನಮ್ಮ ಸಾಮಾನು ಸರಂಜಾಮುಗಳನ್ನು ಇಳಿಸಿ ಸನ್ ಸೆಟ್ ನೋಡಲು ಹೊರೆಟೆವು, ಅಲ್ಲಿಂದ ಸ್ವಲ್ಪ ದೂರ ವಾಹನದಲ್ಲಿ ಹೋದರೆ ಅಲ್ಲೊಂದು ಸೇತುವೆ ಸಿಗುತ್ತದೆ, ಅಲ್ಲಿ ಕಾರು ಜೀಪಿನಂತ ವಾಹನ ಮಾತ್ರಾ ದಾಟುವಷ್ಟು ಕಿರಿದಾಗಿದ್ದು ನಮ್ಮ ಬಸ್ಸನ್ನು ಅಲ್ಲಿಯೇ ನಿಲ್ಲಿಸಿ ಒಂದರ್ದ ಕಿಲೋಮೀಟರ್ ಪರ್ವತ ಚಾರಣ ಮಾಡಿದರೆ ಸಿಗುವುದೇ ಸನ್ ಸೆಟ್ ಪಾಯಿಂಟ್, ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಸಂಪೂರ್ಣ ಸೂರ್ಯಾಸ್ಥಮಾನವನ್ನು ನೋಡಲು ಸಿಗುವ ಸ್ಥಳ.. ಹಾಗು ಇದು ಅಲ್ಲಿನ ಒಂದು ವಿಚಿತ್ರಗಳಲ್ಲಿ ಇದೂ ಕೂಡಾ ಸೇರುತ್ತದೆ, ನಾವು ಅಲ್ಲಿ ಹೋಗಿ ನೋಡಿದ ಮೇಲೆ ಅತ್ಯಂತ ಬೇಸರಗೊಂಡ ಸ್ಥಳ ಅದಾಗಿತ್ತು ಕಾರಣ.. ಸಂಪೂರ್ಣವಾದ ಸುಂದರವಾದ ಸೂರ್ಯಾಸ್ತಮಾನ ದೃಶ್ಯ ನೋಡಲು ಸಿಗುವುದಿಲ್ಲ, ಕೆಲವೇ ಸೆಕೆಂಡುಗಳಲ್ಲಿ ಸೂರ್ಯ ಹಟಾತ್ತನೆ ಮುಳುಗಿಹೋಗುತ್ತಾನೆ,ಆದರೂ ಚಾರಣ ಮಾಡಿದ ಸಂತೋಷ ಹಾಗು ಪ್ರಕೃತಿ ಸೌಂದರ್ಯ ಖುಷಿ ಕೊಡುತ್ತದೆ,
ಮುನಾರ್ ಟೀ ಎಸ್ಟೇಟ್

ಮುನಾರಿನಲ್ಲೆ ಒಂದು ಪ್ರವಾಸೋದ್ಯಮ ಇಲಾಖೆಯು ಇದ್ದು ಅಲ್ಲಿ ಪ್ಲವರ್ ಗಾರ್ಡನ್ ಮತ್ತು ಚಿಕ್ಕದೊಂದು ಬೋಟಿಂಗ್ ವ್ಯವಸ್ಥೆಯೂ ಇದೆ, ಆದರೆ ಪ್ಲವರ್ ಗಾರ್ಡನ್ ನಲ್ಲೇನು ವಿಶೇಷ ಹೂಗಿಡಗಳು ಇರಲಿಲ್ಲ, ಕೆಲವು ಹೂ ಗಿಡಗಳನ್ನು ಹೊಂದಿರುವ ಸಾಮಾನ್ಯ ಹೂವಿನ ಗಾರ್ಡನ್ ಎಂದು ಹೇಳಬಹುದು,ಬೋಟಿಂಗ್ ಕೂಡಾ ಸಾಧಾರಣವೆನ್ನಬಹುದು ಒಂದರ್ಧ ಗಂಟೆ ಸುತ್ತಿಸುತ್ತಾರೆ ನಿಧಾನವಾಗಿ, ಮುನಾರಿನಲ್ಲಿ ಮೈ ಕೊರೆಯುವ, ಉಸಿರಾಡಿದರೆ ಆವಿ ಬರುವಷ್ಟು, ಕೈ ಕಾಲುಗಳು ಮರಗಟ್ಟಿ ಥರಗುಟ್ಟುವಂತಾ ಚಳಿಯಿತ್ತು, ನಲ್ಲಿ ತಿರುಗಿಸಿದರೆ ಪ್ರಿಜ್ ನಲ್ಲಿನ ನೀರು ಕೊಳಾಯಿಯ ಮೂಲಕ ಹರಿದುಬಂದಷ್ಟು ತಣ್ಣಗಿರುತ್ತದೆ, ಇದನ್ನು ಹಲ್ಲು ಕಡಿಯುವಷ್ಟು ಚಳಿ ಎಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ ಅದನ್ನೇ ಸ್ವಲ್ಫ ಬೇರೆ ತರಹ ವರ್ಣಿಸುವುದಾದರೆ.. ಯಾರಾದರೂ ತಮ್ಮ ಹಲ್ಲು ಸೆಟ್ಟನ್ನು ತೆಗೆದು ನೀರಿನಲ್ಲಿ ಮುಳುಗಿಸಿದರೆ ಅದೂ ಕೂಡಾ ಕಟ ಕಟ ಹಲ್ಲು ಕಡಿದುಕೊಳ್ಳುತ್ತಿತ್ತೇನೋ. ಅಷ್ಟು ಚಳಿಯಿದೆ ಮುನ್ನಾರಿನಲ್ಲಿ.

ಅತರಿಮಪಲ್ಲಿಯಲ್ಲಿ ವಝಾಚಲ್ ಎನ್ನುವ ಜಲಪಾತ ಮನಮೋಹಕವಾಗಿದ್ದು ನೋಡಲು ಖುಷಿಕೊಡುತ್ತದೆ,



ಕೇರಳದಲ್ಲಿ ಇನ್ನೂ ಅನೇಕ ಪುಟ್ಟ ಪುಟ್ಟ ಗುಡ್ಡಗಾಡಿನಿಂದ ನೀರು ಹರಿಯುವುದು ನೋಡಲು ಸಿಗುತ್ತವೆ ಆದರೆ ಅವೆಲ್ಲವನ್ನು ಜಲಪಾತಗಳು ಎಂದು ಪ್ರೊಜೆಕ್ಟ್ ಮಾಡುವುದರಲ್ಲಿ ಪ್ರವಾಸೋದ್ಯಮ ಇಲಾಖೆ ತನ್ನ ಚಾಣಾಕ್ಯತೆಯನ್ನು ತೋರಿವೆ ಇದಕ್ಕಾಗಿ ಅಲ್ಲಿನ ಪ್ರವಾಸೋದ್ಯಮ ಇಲಾಖೆಯನ್ನು ಮೆಚ್ಚಲೇ ಬೇಕು, ಏನೂ ಇಲ್ಲದ ಸುಮ್ಮನೆ ಹರಿಯುವ ಜಲಪಾತವಿದ್ದರೂ ಅದನ್ನೇ ಪ್ರವಾಸಿ ತಾಣ ಮಾಡುವ ಅದಕ್ಕೆ ಬಾರೀ ಪ್ರಚಾರ ಕೊಡುವ ಕಲೆ ಕೇರಳಿಗರಿಂದ ನಮ್ಮ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕಲಿಯಬೇಕಾಗಿದೆ, ನಮ್ಮ ಕರ್ನಾಟಕದಲ್ಲಿ ಇರುವಷ್ಟು ಜಲಪಾತಗಳು ಬೇರೆಲ್ಲೂ ಇರಲಿಕ್ಕಿಲ್ಲ, ಉಂಚಳ್ಳಿಯಂತ ಸುಂದರ ಜಲಪಾತ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಲೋ ಅಥವಾ ಸ್ಥಳೀಯರ ವಿರೋಧದಿಂದಲೋ ಸೊರಗುತ್ತಿರುವುದು ವಿಪರ್ಯಾಸವೇ ಸರಿ. ಇನ್ನು ಅದೆಷ್ಟು ಪ್ರವಾಸಿ ತಾಣಗಳಿವೆಯೋ ಏನೋ.

ಇನ್ನು ನಾವು ನೋಡಿದ ಸ್ಥಳಗಳು ಮುನಾರಿನ ಎಕೋ ಪಾಯಿಂಟ್, ಹಾಗೂ ಸ್ಫೀಡ್ ಬೋಟಿಂಗ್, ಹೈಡಲ್ ಟೂರಿಸಂ ಎನ್ನುವ ಹೆಸರಿನದೊಂದು ಪ್ರವಾಸಿ ತಾಣವಿದ್ದು ಇಲ್ಲಿ ಪೆಡಲ್ ಬೋಟಿಂಗ್ ಮಾಡಬಹುದಾಗಿದೆ, ಇವೆಲ್ಲಕ್ಕಿಂತಲೂ ಕುಮಾರಕುಮ್ ಹೌಸ್ ಬೋಟ್ ನಲ್ಲಿ ಮಾಡಿದ ೫ಗಂಟೆಗಳ ಪ್ರಯಾಣ ನೆನಪಿನ ಪುಟಗಳಲ್ಲಿ ಸದಾ ಉಳಿಯುತ್ತದೆ, ಅದೊಂದು ತೇಲುವ ಮನೆ,



ಅಲ್ಲಿ ಎಲ್ಲವೂ ಇದೆ, ಡೈನಿಂಗ್ ಹಾಲ್ ಇದೆ, ಬೆಡ್ ರೂಂ ಇದೆ, ಅಡುಗೆ ಮನೆಯಿದೆ, ಬಾತ್ ರೂಂ ಇದೆ, ಇನ್ನೇನು ಬೇಕು ಅಲ್ವಾ.. ಬೋಟ್ ಸಾಗುತ್ತಾ ಇರುವಂತೆಯೇ ಅಲ್ಲಿನ ಅಡುಗೆ ಮನೆಯಲ್ಲಿ ನಮಗೆಲ್ಲರಿಗೂ ಅಡಿಗೆ ತಯಾರುಮಾಡಿ ತಂದು ಇಡುತ್ತಾರೆ, ನಾವು ಬಡಿಸಿಕೊಂಡು ತಿನ್ನಬೇಕು, ಆದರೆ ಬೋಟ್ ಹೌಸಿನಲ್ಲಿ ಕಳೆದ ೫ಘಂಟೆಗಳಿಗೆ ನಮಗೆ ತಗುಲಿದ್ದು ಬರೋಬ್ಬರಿ ಇಪ್ಪತ್ತೊಂದು ಸಾವಿರ ರೂಪಾಯಿಗಳು.. ಏಜೆಂಟರುಗಳ ಮೂಲಕ ಬೋಟನ್ನು ಕಾಯ್ದಿರಿಸಿದ್ದರಿಂದ ನಮಗೆ ಒಂದೈದು ಸಾವಿರ ಹೆಚ್ಚು ವೆಚ್ಚ ತಗುಲಿದೆಯೆನಿಸುತ್ತದೆ, ಖರ್ಚು ವೆಚ್ಚಗಳನ್ನು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳದೆ ಪ್ರವಾಸದ ಆನಂದ ಸವಿಯುವುದಾದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ... ಬೋಟ್ ಹೌಸಿನಲ್ಲಿ ಒಂದು ರಾತ್ರಿ ಕಳೆಯಲು ದುಪ್ಪಟ್ಟು ಖರ್ಚು ಬರುತ್ತದೆ, ನಲವತ್ತು ಸಾವಿರ ರುಪಾಯಿಗಳಾಗುತ್ತದೆಯಂತೆ ಒಂದು ದಿನ ಉಳಿಯುವುದಾದರೆ. ಹೌಸ್ ಬೋಟ್ ಗಳ ನಿರ್ಮಾಣ ಮಾಡುವಾಗ ಹೊರಮೈಗೆ ಬೆತ್ತದ ನೈಗೆಯನ್ನು ಬಳಸುತ್ತಾರೆ ಇದರಿಂದ ಬೋಟ್ ಸುಂದರವಾಗಿ ಕಾಣಿಸುತ್ತದೆ ಒಳಗೆಲ್ಲ ಹೆಚ್ಚಿಗೆ ಮರಮುಟ್ಟುಗಳನ್ನು ಹೆಚ್ಚಾಗಿ ಬಳಸುತ್ತಾರೆ, ಬೋಟನ್ನು ಶುದ್ಧವಾಗಿಟ್ಟಿರುತ್ತಾರೆ, ನಾವು ಪ್ರಯಾಣಿಸಿದ್ದ ಬೋಟನ್ನು ತಯಾರಿಸಲು ಅವರಿಗೆ ತಗುಲಿದ್ದ ಖರ್ಚು ಇಪ್ಪತ್ತೈದು ಲಕ್ಷ ರೂಪಾಯಿಗಳಂತೆ. ಕುಮಾರಕುಂ ಎನ್ನುವಲ್ಲಿ ೨೦ ಬೋಟುಗಳಿವೆಯಂತೆ, ಅದೇ ಅಲಪ್ಪಿಯಲ್ಲಿ ೯೦೦ ಇಂತವೇ ಬೋಟುಗಳಿವೆಯಂತೆ.ಕೊನೆಯ ದಿವಸ ಅಂದರೆ ೩೧ನೇ ತಾರೀಖು ನಾವು ಅಲಪ್ಪಿಯ ಬೀಚ್ ನೋಡಿಕೊಂಡು ನಮ್ಮ ಕರ್ನಾಟಕದ ಕಡೆ ಪ್ರಯಾಣ ಬೆಳೆಸಿದೆವು, ನಮ್ಮ ಬಸ್ಸಿನಲ್ಲಿಯೇ ಹನ್ನೆರೆಡು ಘಂಟೆಗೆ ಕೇಕ್ ಕತ್ತರಿಸಿ ತಿಂದು ಹೊಸವರ್ಷವನ್ನು ಬರಮಾಡಿಕೊಂಡೆವು.. ಅಂದಹಾಗೆ ಹೇಳೋಕೆ ಮರೆತುಹೋಗಿತ್ತು, ನೀವು ಕೇರಳ ಪ್ರವಾಸಕ್ಕೆ ಹೋಗುವುದಾದರೆ ಅದೂ ನೀವು ಸಸ್ಯಾಹಾರಿಗಳಾಗಿದ್ದರೆ ನಮ್ಮಂತೆಯೇ ಪೌಂಡ್ ಗಟ್ಟಲೆ ಬ್ರೆಡ್, ಮತ್ತು ಒಂದೆರೆಡು ಜಾಮ್ ಬಾಟಲಿ(ಪ್ರವಾಸಕ್ಕೆ ಹೋದ ಜನರ ತಿನ್ನುವ ಅಗತ್ಯತೆಗನುಸಾರವಾಗಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನೋ ತರ) ತೆಗೆದುಕೊಂಡುಹೋಗುವುದು ಉತ್ತಮ :-)

ಕೊನೆಯ ಮಾತು: ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ರವರ ಈ ಲೇಖನ ಓದಿ, ಜೊತೆಗೆ ನಾನು ಬರೆದ ವಡೆ ಮತ್ತು ಮಸಾಲೆ
ದೋಸೆಯ ಕಮೆಂಟ್ ಕಥೆ ಓದಿ! ಪ್ರಕಾಶ್ ರವರು ಇದನ್ನು ನಿಮ್ಮ ಬ್ಲಾಗಿನಲ್ಲೇ ಬರೆಯಬಹುದಿತ್ತು ಎಂದಿದ್ದರು ಆದ್ದರಿಂದ ಕೊಂಡಿಯನ್ನು ಲಿಂಕಿಸಿದ್ದೇನೆ .