ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Thursday, October 17, 2013

ಕಥೆಯೊಳಗಿನ ಕಥೆ

     ಇವತ್ತೇನಾದರೂ ಆಗಲಿ ಕಥೆ ಬರೆಯಲೇ ಬೇಕೆಂಬ  ನಿರ್ಧಾರಕ್ಕೆ ಬಂದವನು ಪೆನ್ನು ಪೇಪರನ್ನು ಕೈಗೆ ತೆಗೆದುಕೊಂಡು ಬರೆಯಬೇಕೆಂದು ಒಂದೆರಡಕ್ಷರ  ಬರೆದಾಗಿದೆ ಅಷ್ಟೆ, ಅದ್ಯಾಕೋ ಅಕ್ಷರಗಳು ಮಬ್ಬು ಮಬ್ಬಾಗಿ ಕಾಣತೊಡಗಿತು,  ಪಕ್ಕದಲ್ಲಿದ್ದ ಅವನ ಕನ್ನಡಕ ಅವನನ್ನು ನೋಡಿ ನಕ್ಕಂತೆ ಭಾಸವಾಯಿತು, ತಥ್ ಇದರ ಎಂದು ಬೈಯಬೇಕೆಂದುಕೊಂಡವನಿಗೆ ತನ್ನ ಎರಡನೇ ಕಣ್ಣಿನ ಜೋಡಿಗಳನ್ನು ಬೈಯ್ಯಲು ಮನಸ್ಸಾಗಲೇ ಇಲ್ಲ... ಕನ್ನಡಕ ಹಾಕಿಕೊಂಡು ನೋಡುತ್ತಾನೆ ಮೊದಲು ಮುದ್ದಾಗಿ ಕಾಣಿಸುತ್ತಿದ್ದ ಅವನ ಬರವಣಿಗೆ ಈಗ ವಕ್ರ ವಕ್ರವಾಗಿದೆ ಅನಿಸಲಿಕ್ಕೆ ಶುರುವಾಗಿದೆ, ಕೈ ನಡುಗುತ್ತಿದೆ, ದೇಹಕ್ಕೆ ವಯಸ್ಸಾಗಿದ್ದರೂ ಮನಸ್ಸು ಇನ್ನೂ ಇಪ್ಪತ್ತರ ಹತ್ತಿರವೇ ಗಿರಕಿ ಹೊಡೆಯುತ್ತಿದೆ.. ಕಥೆ ಬರೆಯಲೋ ಅಥವಾ ಹಳೆಯ ನೆನಪುಗಳನ್ನೆ ಮೆಲಕುಹಾಕುತ್ತಾ  ಬರೆಯಲೋ. ಈ ತರಹದ ದ್ವಂದ್ವ ಇತ್ತೀಚಿಗೆ ಹೆಚ್ಚಾಗಿ ಹೋಗಿದೆ. ಮರೆವು ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಅನುಭವಕ್ಕೆ ಹೆಂಡತಿಯ ಗೊಣಗಾಟದಿಂದಲೇ ತಿಳಿದದ್ದು.. ಆದರೆ ಯೌವನದ ನೆನಪುಗಳು ಹಾಗೇ ಹಚ್ಚ ಹಸಿರಾಗೆ ಇವೆ.. ಅದರಲ್ಲಂತೂ ತಾನು ಪ್ರೀತಿಸಿದವಳ ನೆನಪನ್ನು ಮರೆಯಲು ಸಾಧ್ಯವೇ.. ಆಗಾಗ್ಗೆ ಹೆಂಡತಿಯ ಹೆಸರು ಕರೆಯಲು ಹೋಗಿ ಸುಧಾ ಎಂದು ಜೋರಾಗಿ ಕೂಗಿದಾಗ ಹೆಂಡತಿ ಇದ್ಯಾಕೋ ಅತಿ ಆಯ್ತು ನಿಮ್ದು ಅಂದಾಗಲೇ ಗೊತ್ತಾಗುತ್ತಿದ್ದದ್ದು ತಾನು ಕರೆದದ್ದು ಹೆಂಡತಿಯ ಹೆಸರಲ್ಲವೆಂದು.  

     ಅವಳ ಹೆಸರು ಅದೆಷ್ಟು ಹಿತವಾಗಿದೆ ಸುಧಾ...  ಕೂಗೋಕು ಸುಲಭವಾದ ಹೆಸರೇ ಅದು..  ಅವಳ ನೆನಪಿಗಾಗೇ ಅಲ್ವ ಸುಧಾ ವಾರಪತ್ರಿಕೆಯನ್ನ ಪ್ರತಿವಾರ ತಾನೇ ನೆನಪು ಮಾಡಿಕೊಂಡು ಅಂಗಡಿಗೆ ಹೋಗಿ ಒಂದು ಕಿಂಗ್ ಹಾಗೆ ಸುಧಾ ಕೊಡಿ ಅನ್ನೋದು... ಇತ್ತೀಚಿಗೆ ಸುಧಾ ವಾರಪತ್ರಿಕೆ ಮೊದಲಿನಷ್ಟು ದಪ್ಪವಾಗಿಲ್ಲ.. ಈಗ ಬಳಕುವ ಬಳ್ಳಿಯ ಸೊಂಟದ ತರಹ ಚಿಕ್ಕದಾಗುತ್ತಿದೆ.. ಪುಟಗಳೂ ತುಂಬಾ ಸ್ಲಿಮ್ ಆಗಿ ಹೋಗಿದೆ.. ಅಂದಹಾಗೆ ಸುಧಾಳನ್ನು ಮೊದಲ ಬಾರಿ ಕಾಲೇಜಿನ ಕ್ಯಾಂಪಸ್ಸಿನಲ್ಲಿ  ಮೊದಲ ಕಣ್ಣೋಟದಲ್ಲೇ ಕಣ್ಣು ಕಣ್ಣುಗಳು ಒಬ್ಬರೊಬ್ಬರನ್ನು ಮೆಚ್ಚಿಕೊಂಡುಬಿಟ್ಟಿದ್ದವು... ಅವಳ ಉದ್ದದ ಜಡೆ ತನಗೆ ತುಂಬಾ ಇಷ್ಟಾವಾಗಿಬಿಟ್ಟಿತ್ತು.. ಅವಳ ಮುಖದ ಮೇಲೆ ತಿಳಿಯಾದ ಮಂದಹಾಸ ಅಲಂಕರಿಸಿತ್ತು.. ಅವಳ ಮನೆಯಲ್ಲಿ ಅಷ್ಟೆಲ್ಲಾ ಕಷ್ಟಗಳಿವೆ ಅಂತ ಗೊತ್ತಾಗಿದ್ದೆ ಒಂದು ವರ್ಷದ ಬಳಿಕ.. ಒಂದು ದಿನವೂ ತನ್ನ ಮನೆಯ ಕಷ್ಟಗಳನ್ನ ಹೇಳಿಕೊಂಡೇ ಇರಲಿಲ್ಲ.. ಅದ್ಯಾಕೋ ಆವತ್ತು ಅವಳ ಮುಖದಲ್ಲಿ ಆ ಮಂದಹಾಸ ಇರಲೇ ಇಲ್ಲ ಕಣ್ಣುಗಳು ಅತ್ತು ಅತ್ತು ಬತ್ತಿಹೋದಂತಿದ್ದವು. ಏನಾಯ್ತು ಅಂದಾಗಲೇ ಗೊತ್ತಾಗಿದ್ದು ಅವಳ ಮನೆಯಲ್ಲಿನ ಕಿತ್ತು ತಿನ್ನುವ ಬಡತನ, ಕುಡುಕ ತಂದೆಯು ತನ್ನ ತಾಯಿಗೆ ನೀಡುವ  ಹಿಂಸೆಗಳು.. ಅವಳು ಹೇಳಿದ್ದನ್ನು ಈಗ ನೆನಸಿಕೊಂಡರೂ ಹೃದಯ ಹಿಂಡಿದಂತಾಗುತ್ತೆ. 

     ರೀ ದಿನಾ ಇದೇ ಗೋಳಾಗಿ ಹೋಯ್ತು ಬನ್ನಿ ಊಟಕ್ಕೆ ಎಂದಾಗಲೇ ತಾನು ವಾಸ್ತವ ಲೋಕಕ್ಕೆ ಬಂದಿದ್ದು... ಓಹ್ ಎಡಗಾಲು ಮರಗಟ್ಟಿ ಹೋಗಿದೆ ಅಲ್ಲಾಡಿಸದೇ ಒಂದೇ ಸಮನೆ ಯೋಚನೆಯೊಳಗೆ ಮುಳುಗಿಹೋಗಿದ್ದರ ಪ್ರಭಾವ.. ಹೆಂಡತಿಯೊಂದು ಕಡೆ ಬೈಯುತ್ತಿದ್ದಾಳೆ,  ಬಂದೇ ಕಣೇ ಸತ್ತ ಕಾಲು ಹಿಡಕೊಂಡಿದೆ ಅಂದ ಮೇಲೆ ಅವಳು ಶಾಂತವಾಗಿದ್ದು... ಹೆಸರು ಶಾಂತ ಅಂತಲೇ ಆದರೂ ಅಶಾಂತಿಯೇ ಜಾಸ್ತಿ ಅಂತ ಹಲವಾರು ಸಲ ತನಗನ್ನಿಸಿದ್ದು ಸರಿಯೇ...ಹೆಂಡತಿಯ ಹತ್ತಿರ ದಿನಕ್ಕೊಮ್ಮೆ ಕಡಿಮೆ ಅಂದರೂ ಮೂರ್ನಾಲ್ಕು ಸಾರಿಯಾದರೂ ಬೈಸಿಕೊಂಡರೆ ಮಾತ್ರ ತಿಂದದ್ದೆಲ್ಲಾ ಜೀರ್ಣವಾಗೋದು.. ಹೆಂಡತಿ ಬೈಯಲೇ ಇಲ್ಲವೆಂದರೇನೆ ಭಯ ಕಾಡೋಕೆ ಶುರುವಾಗುತ್ತೆ, ಎಲ್ಲೋ ವಿಪರೀತ ಕೋಪಕ್ಕಿಟ್ಟುಕೊಂಡಿದೆಯಾ ಶಾಂತೂ ಏನಾಯ್ತೆ ಅಂತ ಕೇಳಿಯಾದರೂ ಬೈಯಿಸಿಕೊಂಡರೇನೆ ಸಮಾದಾನವಾಗೋದು...

     ಕರಿ ಬಾಳೆಹಣ್ಣೆಂದರೆ ತುಂಬಾ ಇಷ್ಟ ಅಂತ ಎರಡು ಬಾಳೆ ಹಣ್ಣು ತಿಂದದ್ದು ಒಮ್ಮೆಲೆ ದೇಹದಲ್ಲಿ ಸಕ್ಕರೆ ಜಾಸ್ತಿ ಆಗಿರೋದು ಖಚಿತವಾಗಿ ಹೋಯ್ತು.. ಮಾತ್ರೆ ತಗೋಳೋಣ ಅಂದರೆ ಹೆಸರು ನೆನಪಾಗುತ್ತಿಲ್ಲ, ಹೆಂಡತಿಯ ಹತ್ತಿರ ಕೇಳಿದರೆ ಬೈಗುಳ ಗ್ಯಾರಂಟಿ.. ಅದೇನೋ ಜಿ ಇಂದ ಆರಂಭವಾಗುತ್ತಲ್ಲಾ ಎಂದು ಯೋಚಿಸ ತೊಡಗಿದ.. ಅದೇ ಉದ್ದ ಮಾತ್ರೆ ಏನದೂ.. ಹಾಂ ಫೋರ್ಟ್.. ನೆನಪಾಯ್ತು ಗ್ಲೂಕೋರೆಡ್ ಫೋರ್ಟ್..  ಡಯಾಬಿಟೀಸ್ ಬಂದಾಗಲಿಂದಲೂ ಅದೇ ಮಾತ್ರೆ ಆದರೂ ಹೆಸರೇ ಮರೆತು ಹೋಯ್ತಲ್ಲಾ ಅಂತ ಪರಿತಪಿಸಿದ.


     ಮೇಜಿನ ಮೇಲಿದ್ದ ಬಿಳಿ  ಹಾಳೆ ಪೆನ್ನು ಪೇಪರ್ ಹಾಗೇ ಅನಾಥವಾಗಿ ಮೇಜಿನ ಮೇಲೆ ಬಿದ್ದುಕೊಂಡಿದೆ...  ಗೀಚಿದ್ದು ಬರೀ ಎರಡು ಮೂರು ಸಾಲು ಅಷ್ಟೆ.. ಅದೂ ಸಹ ಮತ್ತೊಮ್ಮೆ ಓದಿದಾಗ ಇನ್ನೂ ಚನ್ನಾಗಿ ಬರೆಯಬಹುದಿತ್ತು ಆರಂಭವೇ ಸರಿಯಿಲ್ಲವಲ್ಲ ಅನ್ನಿಸತೊಡಗಿ  ಆ ಪೇಪರ್ ಕೂಡ ಮೇಜಿನ ಪಕ್ಕದ ಮೂಲೆಯಲ್ಲಿದ್ದ ಕಸದ ಬುಟ್ಟಿಯಲ್ಲಿ ಸುರಳಿ ಸುತ್ತಿದ ಉಂಡೆಯಾಗಿ ಬಿದ್ದುಕೊಂಡಿತು... ಇವತ್ತೇನಾದರಾಗಲಿ ಬರೆದು ಮುಗಿಸಲೇಬೇಕೆಂದು ಪೆನ್ನು ಪೇಪರನ್ನು ತೆಗೆದುಕೊಂಡ.. ಮತ್ತೆ ಯೋಚನೆಗಳ ಸರಮಾಲೆ ಆತನನ್ನು ಸುತ್ತಿಕೊಳ್ಳತೊಡಗಿತು.

ಅವಳು ಎದುರಿಗೆ ಸಿಕ್ಕಾಗ ತನ್ನ ಮೇಲೆ ಅವಳಿಗೆ ಅದೇ ಪ್ರೀತಿ ವಾತ್ಸಲ್ಯ ಗೌರವಗಳು ಹಾಗೇ ಇದೆ, ತನಗೂ ಅಷ್ಟೆ ಅವಳನ್ನು ಮರೆಯಲಾಗುತ್ತಿಲ್ಲ, ನಾವಿಬ್ಬರೂ ಜೊತೆಗಾರರಾಗಲು ಯಾಕೆ ಸಾಧ್ಯವಾಗಲೇ ಇಲ್ಲ? ಪ್ರಶ್ನೆಗಳ ಸುರುಳಿ ಸುರುಳಿಗಳೇ ಕಣ್ಮುಂದೆ ಹಾದು ಹೋದವು ಇವೆಲ್ಲದಕ್ಕೂ ಉತ್ತರಗಳಿಲ್ಲದ ಪ್ರಶ್ನೆಗಳು ಕಥೆಗಾರನ ಮನಸಿನಾಳದಲ್ಲಿ ಬತ್ತದೇ ಹಾಗೇ ಉಳಿದು ಹೋಗಿದೆ. ಮನಸ್ಸು ತಿಳಿಯಾಗುವವರೆಗೂ ಕಿಟಕಿಯಾಚೆ ನೋಡುತ್ತಾ ನಿಲ್ಲುವ ಮನಸ್ಸಾಗಿ ನೀಲಿ ಆಗಸದೆಡೆಗೆ ನೋಡತೊಡಗಿದ. ಮಿಂಚೊಂದು ಮಿಂಚಿ ಮಾಯವಾಯಿತು..

Monday, August 26, 2013

ನೀರ ಕೊರತೆ, ನೀರ ವರತೆ

     ನೀರಿಗೆ ಜೀವಜಲ ಎನ್ನುವ ಹೆಸರೂ ಇದೆ, ಆದರೆ ಅಮೃತವೂ ಅತಿಯಾದರೆ ವಿಷವಾಗುತ್ತದೆ ಎನ್ನುವ ಮಾತು ಸತ್ಯ.. , ಅಡಿಕೆಗೆ ಕೊಳೆರೋಗ ಬಂದಿದೆ ಜಿಟಿಜಿಟಿ ತಿಂಗಳಾನುಗಟ್ಟಲೆ ಹೊಯ್ದ ಜಡಿಮಳೆ ರೈತರಿಗೆ ಅಪಾರ ಬೆಳೆ ಹಾನಿ ಮಾಡಿವೆ, ಅಡಿಕೆ ಬೆಲೆ ಗಗನಕ್ಕೇರಿದ್ದರೂ ಅದರಿಂದ ಬೆಳೆಗಾರರಿಗೆ ಯಾವುದೇ ಲಾಭಾಂಶ ದೊರೆಯುತ್ತಿಲ್ಲ... ಈ ಸಾರಿಯ ಮಳೆಗಾಲವನ್ನು ನೋಡಿದರೆ ಮೊದಲು ಮಳೆಯಿಲ್ಲದೆ ಅನಾವೃಷ್ಟಿ ಅನಿಸಿದ್ದೂ ಅತಿವೃಷ್ಟಿಯಾಗಿ ಮಾಡಿದ ಹಾನಿ ಅಶ್ಟಿಷ್ಟಲ್ಲ... ಅಂದಹಾಗೆ ಬೆಂಗಳೂರಿನಲ್ಲಿರುವ  ಬಹುತೇಕ ಜನರಿಗೆ  ನೀರು ಅಮೂಲ್ಯ ಅಂತ ಅನಿಸಿಕೊಂಡಿದ್ದು ಬಹುಶಃ ದುಡ್ಡುಕೊಟ್ಟು ಟ್ಯಾಂಕರಿನಲ್ಲಿ ತರಿಸಿಕೊಳ್ಳಬೇಕಾದವರಿಗೆ ಖಂಡಿತ ಅನಿಸಿರುತ್ತೆ.. ನೀರು ವ್ಯರ್ಥವಾಗುತ್ತಿದ್ದರೆ ನೋಡಿ ಅಯ್ಯೋ ಅನ್ನಿಸಿರಲಿಕ್ಕೂ ಸಾಕು, ಮೊನ್ನೆಯೊಂದು ದಿನಪತ್ರಿಕೆಯ ಜಾಹೀರಾತು ನೋಡಿದೆ  ಅದರಲ್ಲಿ ನೀರಿನ ಪೈಪಿನಿಂದ ಕಾರು ತೊಳೆಯುತ್ತಿರುವ ಚಿತ್ರ ಅದರ ಕೆಳಗೆ ನೀವು ಹೀಗೆ ಕಾರು ತೊಳೆದರೆ ಹನ್ನೆರೆಡು ಜನರಿಗೆ ನೀರಿಲ್ಲದಂತೆ ಮಾಡುತ್ತಿದ್ದೀರಿ ಎಂದರ್ಥ ಎಂದು.. ನಮ್ಮೂರು ಸಾಗರದ ನಗರವೂ ನೀರಿಲ್ಲದೆ ಟ್ಯಾಂಕರ್ ನೀರಿಗಾಗಿ ಪರಿತಪಿಸಿತು. ಈಗ ಮಳೆಗಾಲ ಮುಗಿದರೆ ಸಾಕು ಅನ್ನಿಸುತ್ತಿದೆ. ಮಳೆಯಾಗಲಿ ಎಂದು ಹರಕೆ ಹೊತ್ತವರೆಲ್ಲಾ ಮತ್ತೆ ಮಳೆ ನಿಲ್ಲಲಿ ಎಂದು ಹರಕೆ ಮಾಡಿಕೊಳ್ಳಬೇಕು ಆ ಪರಿಸ್ಥಿತಿ ಬಂದೊದಗಿದೆ.

     ನೀರು ಇಲ್ಲದೆ ಹೋದರೆ ಜೀವಿಗಳು ಬದುಕೋದು ಅಸಾಧ್ಯ, ಬರೀ ನೀರೊಂದೇ ಎಲ್ಲೆಡೆ  ತುಂಬಿಹೋದರೂ ಬದುಕು ಕಷ್ಟವಾಗಿ ಬಿಡುತ್ತದೆ.. ಅಂದಹಾಗೆ ಹೇಳೋಕೆ ಮರೆತಿದ್ದೆ... ಹೂಂ ಕೇಳೋದು ಇದೆ ಅನ್ನಿ.. ನೀವು ದಿನಕ್ಕೆಷ್ಟು ಲೀಟರ್ ನೀರು ಕುಡಿಯುತ್ತೀರಿ? ಉತ್ತರ ಒಬ್ಬಬ್ಬರದ್ದು ಒಂದೊಂದು ಲೀಟರ್ ಒಬ್ಬರು ದಿನಕ್ಕೆ ಕನಿಷ್ಟ ನಾಲ್ಕರಿಂದ ಐದು ಲೀಟರ್ ವರೆಗೂ ಕುಡಿಯುತ್ತೇವೆ ಅನ್ನುವ ಉತ್ತರ ನಿರೀಕ್ಷಿಸಬಹುದಲ್ಲಾ? ನಾನು ಇದುವರೆಗೂ ದಿನಕ್ಕೆಷ್ಟು ನೀರು ಕುಡಿದೆ ಎನ್ನುವ ಲೆಕ್ಕವನ್ನೇ ಇಟ್ಟಿಲ್ಲ, ಲೀಟರ್ ಗಟ್ಟಲೆ ನೀರು ನೆನಪು ಮಾಡಿಕೊಂಡು ಕುಡಿದವನೂ ಅಲ್ಲ... ಬಾಯರಿಕೆಯಾದರೆ ದೇಹಕ್ಕೆ ನೀರು ಬೇಕೆಂದಾಗಲಲ್ಲ ಅದು ಮೆದುಳಿಗೆ ನೀರು ನೀರು ಎನ್ನುವ ಸೂಚನೆ ರಕ್ತದಲ್ಲಿರುವ ಜೀವಕಣಗಳು ಸೂಚನೆ ನೀಡುತ್ತದೆ. ನೀರು ಇಂತಿಷ್ಟೇ ಕುಡಿ ಎಂದು ನಮ್ಮ ದೇಹದ ಮೇಲೆ ನಾವೇ ಅತ್ಯಾಚಾರ ಮಾಡಿಕೊಳ್ಳೋದು ಯಾಕೆ!

     ನೀರಿನ ಬಗ್ಗೆ ಎಷ್ಟು ಹೇಳಿದರೂ ಹೇಳುವುದು ಇನ್ನಷ್ಟಿರುತ್ತದೆ.. ನೀರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯತ್ಯಾಸವಾಗುತ್ತಾ ಹೋಗುತ್ತದೆ, ವಿಚಿತ್ರವಾದರೂ ಸತ್ಯ ನಿಮ್ಮ ಮನೆಯ ಭಾವಿಗೂ ಪಕ್ಕದ ಮನೆ ಭಾವಿಗೂ ನೀರಿನ ಅಂತರ್ಜಲದ ಮೂಲದಲ್ಲಿ ವ್ಯತ್ಯಾಸವಾದರೆ ಅದರ ಗುಣವೂ ವ್ಯತ್ಯಸವಾಗಿಬಿಡುತ್ತದೆಯಲ್ಲಾ.. ಏನು ವಿಸ್ಮಯ ಅಲ್ಲವಾ... ನೀರು ಬದಲಾವಣೆಯಾದ ತಕ್ಷಣವೇ ದೇಹ ಅದನ್ನು ಗುರುತಿಸಿ ಹೋರಾಟಕ್ಕೆ ಇಳಿದೇ ಬಿಡುತ್ತಲ್ಲ ಅದೇ ತಂಡಿ ಶೀತ, ಇನ್ನೂ ಒಂಚೂರು ನೀರಿಗೆ ಶಕ್ತಿ ಹೆಚ್ಚಿದ್ದರೆ ಗಂಟಲಿನಲ್ಲಿ ಅಲರ್ಚಿ ನೋವು ಬಂದೇ ಬಿಡುತ್ತೆ.. ಓಹ್ ನೀರು ಬದಲಾಗಿದ್ದಕ್ಕೆ ಇಷ್ಟೆಲ್ಲಾ ಅಂತ ಗೊಣಗಿಕೊಳ್ಳುತ್ತೇವೆ.. ಮಿನರಲ್ ವಾಟರ್ ಕುಡಿಯಬೇಕಿತ್ತು ಎಂದುಕೊಳ್ಳುತ್ತೇವೆ.. ಅದೂ ಬೇರೆಯ ನೀರಲ್ಲವಾ...  ನಿಜವಾಗಲೂ ಶುದ್ದೀಕರಣವಾಗಿದೆಯಾ, ಖನಿಜಾಂಶ ಇದೆಯಾ ನೋಡೋದೆ ಇಲ್ಲ.. ಮಿನರಲ್ ವಾಟರ್ ಹೆಸರಿನಲ್ಲಿ ನೇರವಾಗಿ ನಲ್ಲಿ ನೀರನ್ನು ತುಂಬಿ ಮಾರುವ ದಂದೆಯೂ ಎಗ್ಗಿಲ್ಲದೆ ನೆಡೆಯುತ್ತಲೇ ಇದೆ... ನೀರೊಂದೆ ನೋಡಿ ಅದಕ್ಕೆ ಬಣ್ಣ ವಾಸನೆಯಿಲ್ಲ... ಜೀವಾಮೃತವೇ ಸರಿ..

    ನೀರಿನ ಬಗೆಗೆ ಹೇಳೋಕೆ ಸಾಕಷ್ಟು ಇದೆ ಹೇಳಿದಷ್ಟೂ ಹೇಳುತ್ತಲೆ ಹೋಗಬಹುದು... ಮನಸ್ಸಿನ ತುಂಬಾ ಪ್ರಶ್ನೆಗಳ ಸಾಲು ಸಾಲು ಉದ್ಬವವಾಗುತ್ತಿದೆ, ನೀರಿನದೇ  ನಿಮ್ಮ ಅನಿಸಿಕೆಗಳಲ್ಲಿ ನೀರಿನ ಬಗ್ಗೆ ತಿಳಿಸುತ್ತೀರಲ್ವಾ...

Monday, March 25, 2013

ಆಲೆಮನೆಯ ಕಬ್ಬಿನ ಹಾಲೂ ನೊರೆಬೆಲ್ಲವೂ ಆಹಾ...

ಆಲೆಮನೆಯೆಂಬ ಶಬ್ದ ಕೇಳಿದಾಕ್ಷಣ ಕಬ್ಬಿನ ಹಾಲಿನ ರುಚಿಯನ್ನು, ನೊರೆಬೆಲ್ಲದ ಸವಿಯ ನೆನೆಸಿಕೊಂಡರೆ ನಾಲಿಗೆಯಲ್ಲಿ ನೀರೂರದೆ ಇರಲಾರದು...

                                                      ಚಿತ್ರ ಕೃಪೆ: ಅಂತರ್ಜಾಲ


                                                         ಚಿತ್ರ ಕೃಪೆ: ಅಂತರ್ಜಾಲ

ಕೆಲವು ವರ್ಷಗಳ ಹಿಂದೆ ಕೋಣವನ್ನು ಕಟ್ಟಿ ಆಲೆಕಣೆಯನ್ನು(ಶುಗರ್ ಕೇನ್ ಕ್ರಷರ್) ತಿರುಗಿಸಿ ಕಬ್ಬಿನ ಹಾಲು ತೆಗೆಯುತ್ತಿದ್ದರು, ಆಗ ತಿಂಗಳಾನುಗಟ್ಟಲೆ ಆಲೆಮನೆ ನೆಡೆಯುತ್ತಿತ್ತು.. ಕ್ರಷರ್ ನಿಂದ ಕೋಣಕ್ಕೆ ಕಟ್ಟಿದ ಮರದ ತೊಲೆಯು ಕೋಣ ತಿರುಗಿದಂತೆ ಕಬ್ಬಿನಹಾಲು ಭಾನಿಗೆ ಬಂದು ಬೇಳುತ್ತದೆ, ತಿರುಗುತ್ತಿರುವಾಗ ಅದು ನಮ್ಮ ತಲೆಗೆ ಬಡಿಯದಂತೆ ಬಗ್ಗಿ ಆಲೆ ಕಣೆಯ ಹತ್ತಿರ ಹೋಗಿ ನಾವೇ ಆಯ್ದು ಕೊಂಡ ಕಬ್ಬಿನ ಹಾಲನ್ನು ಪಾತ್ರೆ ಕ್ಯಾನುಗಳಲ್ಲಿ ತುಂಬಿಸಿಕೊಂಡು ಬರುತ್ತಿದ್ದ ಅನುಭವ ಈಗ ಸಿಗಲಾರದು...  ಈಗ ಯಂತ್ರಚಾಲಿತ ಕ್ರಷರ್(ಆಲೆಕಣೆ) ಬಂದಿರುವುದರಿಂದ ಒಂದು ವಾರದಲ್ಲೆ ಆಲೆಮನೆಯ ಮಜ ಮುಗಿದೇ ಹೋಗುತ್ತದೆ. ಬೆಂಗಳೂರಿನಲ್ಲೂ ಕೆನೋಲಾ ಇದೆ ಅಂತೀರಾ.. ಊಹೂಂ ಅದು ಗಂಟಲನ್ನು ತಂಪಾಗಿಸುತ್ತದೆ ನಿಜ, ಆದರೆ ಆಲೆಮನೆಯನ್ನು ಸ್ವತಃ ನೋಡಿ ಆನಂದಿಸಿದಾಗಲೆ ಅದರ ನೆನಪು ಮತ್ತೆ ಮತ್ತೆ ಕಾಡೋದು...


ಕಬ್ಬಿನ ಹಾಲನ್ನು ಕೊಪ್ಪರಿಗೆಯಲ್ಲಿ ಹಾಕಿ ಕುದಿಸಿ, ಹಾಲಿನಲ್ಲಿದ್ದ ಕಬ್ಬಿನ ಸಿಪ್ಪೆಯ ಝಂಡುಗಳು(ತ್ಯಾಜ್ಯವಸ್ತುಗಳು ಅನ್ನಬಹುದು) ಮೇಲೆ ತೇಲಲಾರಂಬಿಸಿದಾಗ ಅದನ್ನು ಎರೆಡು ಜನರು ಸೇರಿ ಬಟ್ಟೆಯಿಂದ ಶೋಧಿಸಿ, ಸರಿಯಾದ ಪಾಕ ಬಂದಾಕ್ಷಣ ಕೊಪ್ಪರಿಗೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿ ಬೆಲ್ಲದ ಸಂಗ್ರಹಕ್ಕೆಂದೆ ಮಣ್ಣಿನೊಳಗೆ ಹುದುಗಿಸಿಟ್ಟ ಡಬ್ಬಕ್ಕೆ ಹಾಕಿದಾಗ ಅದರಲ್ಲಿನ ಮೇಲಿನ ಪದರದಲ್ಲಿ ನೊರೆ ನೊರೆಯಂತ ಬೆಲ್ಲವನ್ನು ಬಾಳೆಯಲ್ಲಿ ಹಾಕಿಕೊಂಡು ಕಬ್ಬಿನ ಅಳ್ಳಟ್ಟೆ(ಕಬ್ಬಿನ ಸಿಪ್ಪೆ)ಯ ತುಂಡು ಮಾಡಿಕೊಂಡು ಬೆಲ್ಲವನ್ನು ಹಾಗೇ ನಾಲಿಗೆಯ ಮೇಲಿಟ್ಟುಕೊಂಡರೆ ಸಾಕು ಅದರ ರುಚಿಯೇ ಬೇರೆ ಆಹಾ ಎನ್ನುವ ಉದ್ಗಾರ ಮನಸಿನೊಳಗೆ ಮೂಡದೆ ಇರಲಾರದು!, ಮತ್ತೆ ಮತ್ತೆ ತಿನ್ನಬೇಕೆನ್ನಿಸುತ್ತಲೇ ಇರುತ್ತದೆ.. ರುಚಿಕರ ಬೆಲ್ಲ ತಯಾರಾಗುತ್ತಿದ್ದಂತೆ ಬಿಸಿ ಬಿಸಿಯಾಗಿ ತಿನ್ನಲು ಸಿಗೋದೆ ಆಲೆಮನೆಯಲ್ಲಿ...




                                                                 ಚಿತ್ರ ಕೃಪೆ: ಅಂತರ್ಜಾಲ


(ಆಲೆಮನೆಯ ಬಗ್ಗೆ ಬರೆಯಬೇಕೆಂದನಿಸಿದ್ದೇ ಆಲೆಮನೆಗಳು ಮುಗಿದಾದ ಮೇಲೆ, ಅದೂ ಅಲ್ಲದೇ ರಾತ್ರಿ ಹೊತ್ತು    ಹೋಗಿದ್ದರಿಂದ ಛಾಯಚಿತ್ರಗಳನ್ನು ತೆಗೆಯಲಾಗಲಿಲ್ಲ ಕ್ಷಮೆ ಇರಲಿ..)     ಬೆಲ್ಲದ ಕೊಪ್ಪರಿಗೆ ಒಲೆಯಿಂದ ಇಳಿಸಿ ಬೆಲ್ಲದ ಮರಿಗೆ ಅಥವಾ ಡಬ್ಬಕ್ಕೆ ಹಾಕಿಯಾದ ಮೇಲೆ ಕೊಪ್ಪರಿಗೆಯನ್ನು ನೀರುಹಾಕಿ ಕತ್ತದ ಸುಗುಡು(ತೆಂಗಿನ ನಾರು) ಹಾಕಿ ತಿಕ್ಕುವವನ ಮುಖದಲ್ಲೊಂದು ಮಂದಹಾಸ ಮೂಡುತ್ತದೆ, ಹೀಗೆ ತೊಳೆದ ನೀರನ್ನು ಕ್ಯಾನುಗಳಲ್ಲಿ ಶೇಖರಿಸಿಡಲಾಗುತ್ತದೆ, ಇದೇ ಕಾಕಂಬಿಯಾಗುತ್ತದೆ.


ಇನ್ನು ಸಾಮಾನ್ಯವಾಗಿ ಶುಂಟಿ, ನಿಂಬೆ ಹಣ್ಣನ್ನು ಸೇರಿಸಿದರೆ ಕಬ್ಬಿನಹಾಲಿಗೆ ಮತ್ತೊಂದು ತರಹದ ರುಚಿ ಬರುತ್ತದೆ, ಅದು ಕೆಲವರಿಗೆ ಇಷ್ಟವಾದರೆ, ಕೆಲವರಿಗೆ ಬರೀ ಕಬ್ಬಿನಹಾಲೇ ರುಚಿಕರ ಅನಿಸುತ್ತದೆ. ಕೆಲವರು ಕಬ್ಬನ್ನು ನೆಡುವುದೇ ಜನರನ್ನು ಕರೆದು ಕಬ್ಬಿನ ಹಾಲನ್ನು ಕೊಟ್ಟು ಖುಷಿ ಪಡಲಿಕ್ಕಾಗಿ.



ಕಬ್ಬಿನಹಾಲಿಗೆ ಬಂಗಿಸೊಪ್ಪನ್ನು ಸೇರಿಸಿ ಕುಡಿಯುವವರೂ ಇದ್ದಾರೆ.. ಬಂಗಿಸೊಪ್ಪಿನ ಬಗೆಗೆ ಹೇಳೋದಾದರೆ ಅದೊಂತರಾ ಅತ್ಯಂತ ರುಚಿಕರ ಅನಿಸುವ ತಾಕತ್ತು ಬಂಗಿಸೊಪ್ಪಿಗೆ ಇದೆ, ಬಂಗಿ ಪಾನಕ ತಯಾರಿಕೆಯಲ್ಲಿ ಗೋಡಂಬಿ, ದ್ರಾಕ್ಷಿ, ಗಸಗಸೆ ಮುಂತಾದವುಗಳನ್ನು ಸೇರಿಸಲಾಗುತ್ತದೆ ಇದರ ಜೊತೆ ಸಿಹಿ ಪದಾರ್ಥ ಸೇರಿದರಂತೂ ಮತ್ತು ಬೇಗನೆ ಮತ್ತು ಏರಲಾರಂಬಿಸುತ್ತದೆ.. ಬಂಗಿಸೊಪ್ಪಿನ ಪಾನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಮನುಷ್ಯ ಅತೀ ಪುಕ್ಕಲು ಸ್ವಭಾವದವನಾಗಿಬಿಡುತ್ತಾನೆ, ನಗಲಾರಂಬಿಸಿದರೆ ಬಂಗಿ ಸೊಪ್ಪಿನ ಮತ್ತು ಇಳಿಯುವವರೆಗೂ ನಗುತ್ತಲೇ ಇರುತ್ತಾರೆ..


                                             
 ಚಿತ್ರ ಕೃಪೆ: ಅಂತರ್ಜಾಲ
ಇನ್ನು ಆಲೆಮನೆಯಲ್ಲಿ ಕಬ್ಬಿನಹಾಲು ಬೇಕಾದಷ್ಟು ಕುಡಿಯಬಹುದಾ ಅಥವಾ ಒಂದು ಲೋಟಕ್ಕೆ ಸೀಮಿತವಾ ಅನಿಸುತ್ತಿದೆಯಾದರೆ, ಆಲೆಮನೆಯಲ್ಲಿ ನಿಮಗೆ ತಾಕತ್ತು ಇದ್ದಷ್ಟು ಕುಡಿಯಬಹುದು... ನಾನಂತು ಎಷ್ಟು ಕುಡಿದೆ ಎನ್ನುವ ಲೆಕ್ಕ ಇಡಲೇ ಇಲ್ಲ ಇಲ್ಲಿಯವರೆಗೆ! ಜೊತೆಗೆ ಮಾವಿನ ಮಿಡಿ ಉಪ್ಪಿನಕಾಯಿ, ಮೆಣಸಿನಕಾಯಿ ಬೋಂಡಾ, ಮಸಾಲೆ ಮಂಡಕ್ಕಿ ಎಲ್ಲವೂ ಇರುತ್ತದೆ, ಕಾಲ ಬದಲಾದಂತೆ ಆಲೆಮನೆಗೆ ಕರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಅದಕ್ಕೆ ಕಾರಣ ಇಲ್ಲವೆಂದಲ್ಲ, ಕರೆಯದೇ ಇದ್ದವರು ಗುರುತು ಪರಿಚಯ ಇಲ್ಲದವರು, ಪಟ್ಟಣ ಪ್ರದೇಶದಿಂದ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡುವ ಜನರಿಂದ ಕಬ್ಬು ಬೆಳೆದವರು ಬೇಸರಗೊಂಡಿರುವುದರಿಂದ ಯಾರನ್ನೂ ಕೆರೆಯಬೇಕೆಂದೆ ಅನಿಸುತ್ತಲೇ ಇಲ್ಲವೇನೊ...


ಆಲೆಮನೆಗಳು ಗತಕಾಲದ ವೈಭವಗಳಾಗದೆ ಆಲೆಮನೆಯ ಸವಿ ಎಲ್ಲರೂ ಸದಾ ಸವಿಯುಂತಾಗಬೇಕೆಂಬುದೇ ನನ್ನ ಆಶಯ.