ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Monday 25 March 2013

ಆಲೆಮನೆಯ ಕಬ್ಬಿನ ಹಾಲೂ ನೊರೆಬೆಲ್ಲವೂ ಆಹಾ...

ಆಲೆಮನೆಯೆಂಬ ಶಬ್ದ ಕೇಳಿದಾಕ್ಷಣ ಕಬ್ಬಿನ ಹಾಲಿನ ರುಚಿಯನ್ನು, ನೊರೆಬೆಲ್ಲದ ಸವಿಯ ನೆನೆಸಿಕೊಂಡರೆ ನಾಲಿಗೆಯಲ್ಲಿ ನೀರೂರದೆ ಇರಲಾರದು...

                                                      ಚಿತ್ರ ಕೃಪೆ: ಅಂತರ್ಜಾಲ


                                                         ಚಿತ್ರ ಕೃಪೆ: ಅಂತರ್ಜಾಲ

ಕೆಲವು ವರ್ಷಗಳ ಹಿಂದೆ ಕೋಣವನ್ನು ಕಟ್ಟಿ ಆಲೆಕಣೆಯನ್ನು(ಶುಗರ್ ಕೇನ್ ಕ್ರಷರ್) ತಿರುಗಿಸಿ ಕಬ್ಬಿನ ಹಾಲು ತೆಗೆಯುತ್ತಿದ್ದರು, ಆಗ ತಿಂಗಳಾನುಗಟ್ಟಲೆ ಆಲೆಮನೆ ನೆಡೆಯುತ್ತಿತ್ತು.. ಕ್ರಷರ್ ನಿಂದ ಕೋಣಕ್ಕೆ ಕಟ್ಟಿದ ಮರದ ತೊಲೆಯು ಕೋಣ ತಿರುಗಿದಂತೆ ಕಬ್ಬಿನಹಾಲು ಭಾನಿಗೆ ಬಂದು ಬೇಳುತ್ತದೆ, ತಿರುಗುತ್ತಿರುವಾಗ ಅದು ನಮ್ಮ ತಲೆಗೆ ಬಡಿಯದಂತೆ ಬಗ್ಗಿ ಆಲೆ ಕಣೆಯ ಹತ್ತಿರ ಹೋಗಿ ನಾವೇ ಆಯ್ದು ಕೊಂಡ ಕಬ್ಬಿನ ಹಾಲನ್ನು ಪಾತ್ರೆ ಕ್ಯಾನುಗಳಲ್ಲಿ ತುಂಬಿಸಿಕೊಂಡು ಬರುತ್ತಿದ್ದ ಅನುಭವ ಈಗ ಸಿಗಲಾರದು...  ಈಗ ಯಂತ್ರಚಾಲಿತ ಕ್ರಷರ್(ಆಲೆಕಣೆ) ಬಂದಿರುವುದರಿಂದ ಒಂದು ವಾರದಲ್ಲೆ ಆಲೆಮನೆಯ ಮಜ ಮುಗಿದೇ ಹೋಗುತ್ತದೆ. ಬೆಂಗಳೂರಿನಲ್ಲೂ ಕೆನೋಲಾ ಇದೆ ಅಂತೀರಾ.. ಊಹೂಂ ಅದು ಗಂಟಲನ್ನು ತಂಪಾಗಿಸುತ್ತದೆ ನಿಜ, ಆದರೆ ಆಲೆಮನೆಯನ್ನು ಸ್ವತಃ ನೋಡಿ ಆನಂದಿಸಿದಾಗಲೆ ಅದರ ನೆನಪು ಮತ್ತೆ ಮತ್ತೆ ಕಾಡೋದು...


ಕಬ್ಬಿನ ಹಾಲನ್ನು ಕೊಪ್ಪರಿಗೆಯಲ್ಲಿ ಹಾಕಿ ಕುದಿಸಿ, ಹಾಲಿನಲ್ಲಿದ್ದ ಕಬ್ಬಿನ ಸಿಪ್ಪೆಯ ಝಂಡುಗಳು(ತ್ಯಾಜ್ಯವಸ್ತುಗಳು ಅನ್ನಬಹುದು) ಮೇಲೆ ತೇಲಲಾರಂಬಿಸಿದಾಗ ಅದನ್ನು ಎರೆಡು ಜನರು ಸೇರಿ ಬಟ್ಟೆಯಿಂದ ಶೋಧಿಸಿ, ಸರಿಯಾದ ಪಾಕ ಬಂದಾಕ್ಷಣ ಕೊಪ್ಪರಿಗೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿ ಬೆಲ್ಲದ ಸಂಗ್ರಹಕ್ಕೆಂದೆ ಮಣ್ಣಿನೊಳಗೆ ಹುದುಗಿಸಿಟ್ಟ ಡಬ್ಬಕ್ಕೆ ಹಾಕಿದಾಗ ಅದರಲ್ಲಿನ ಮೇಲಿನ ಪದರದಲ್ಲಿ ನೊರೆ ನೊರೆಯಂತ ಬೆಲ್ಲವನ್ನು ಬಾಳೆಯಲ್ಲಿ ಹಾಕಿಕೊಂಡು ಕಬ್ಬಿನ ಅಳ್ಳಟ್ಟೆ(ಕಬ್ಬಿನ ಸಿಪ್ಪೆ)ಯ ತುಂಡು ಮಾಡಿಕೊಂಡು ಬೆಲ್ಲವನ್ನು ಹಾಗೇ ನಾಲಿಗೆಯ ಮೇಲಿಟ್ಟುಕೊಂಡರೆ ಸಾಕು ಅದರ ರುಚಿಯೇ ಬೇರೆ ಆಹಾ ಎನ್ನುವ ಉದ್ಗಾರ ಮನಸಿನೊಳಗೆ ಮೂಡದೆ ಇರಲಾರದು!, ಮತ್ತೆ ಮತ್ತೆ ತಿನ್ನಬೇಕೆನ್ನಿಸುತ್ತಲೇ ಇರುತ್ತದೆ.. ರುಚಿಕರ ಬೆಲ್ಲ ತಯಾರಾಗುತ್ತಿದ್ದಂತೆ ಬಿಸಿ ಬಿಸಿಯಾಗಿ ತಿನ್ನಲು ಸಿಗೋದೆ ಆಲೆಮನೆಯಲ್ಲಿ...




                                                                 ಚಿತ್ರ ಕೃಪೆ: ಅಂತರ್ಜಾಲ


(ಆಲೆಮನೆಯ ಬಗ್ಗೆ ಬರೆಯಬೇಕೆಂದನಿಸಿದ್ದೇ ಆಲೆಮನೆಗಳು ಮುಗಿದಾದ ಮೇಲೆ, ಅದೂ ಅಲ್ಲದೇ ರಾತ್ರಿ ಹೊತ್ತು    ಹೋಗಿದ್ದರಿಂದ ಛಾಯಚಿತ್ರಗಳನ್ನು ತೆಗೆಯಲಾಗಲಿಲ್ಲ ಕ್ಷಮೆ ಇರಲಿ..)     ಬೆಲ್ಲದ ಕೊಪ್ಪರಿಗೆ ಒಲೆಯಿಂದ ಇಳಿಸಿ ಬೆಲ್ಲದ ಮರಿಗೆ ಅಥವಾ ಡಬ್ಬಕ್ಕೆ ಹಾಕಿಯಾದ ಮೇಲೆ ಕೊಪ್ಪರಿಗೆಯನ್ನು ನೀರುಹಾಕಿ ಕತ್ತದ ಸುಗುಡು(ತೆಂಗಿನ ನಾರು) ಹಾಕಿ ತಿಕ್ಕುವವನ ಮುಖದಲ್ಲೊಂದು ಮಂದಹಾಸ ಮೂಡುತ್ತದೆ, ಹೀಗೆ ತೊಳೆದ ನೀರನ್ನು ಕ್ಯಾನುಗಳಲ್ಲಿ ಶೇಖರಿಸಿಡಲಾಗುತ್ತದೆ, ಇದೇ ಕಾಕಂಬಿಯಾಗುತ್ತದೆ.


ಇನ್ನು ಸಾಮಾನ್ಯವಾಗಿ ಶುಂಟಿ, ನಿಂಬೆ ಹಣ್ಣನ್ನು ಸೇರಿಸಿದರೆ ಕಬ್ಬಿನಹಾಲಿಗೆ ಮತ್ತೊಂದು ತರಹದ ರುಚಿ ಬರುತ್ತದೆ, ಅದು ಕೆಲವರಿಗೆ ಇಷ್ಟವಾದರೆ, ಕೆಲವರಿಗೆ ಬರೀ ಕಬ್ಬಿನಹಾಲೇ ರುಚಿಕರ ಅನಿಸುತ್ತದೆ. ಕೆಲವರು ಕಬ್ಬನ್ನು ನೆಡುವುದೇ ಜನರನ್ನು ಕರೆದು ಕಬ್ಬಿನ ಹಾಲನ್ನು ಕೊಟ್ಟು ಖುಷಿ ಪಡಲಿಕ್ಕಾಗಿ.



ಕಬ್ಬಿನಹಾಲಿಗೆ ಬಂಗಿಸೊಪ್ಪನ್ನು ಸೇರಿಸಿ ಕುಡಿಯುವವರೂ ಇದ್ದಾರೆ.. ಬಂಗಿಸೊಪ್ಪಿನ ಬಗೆಗೆ ಹೇಳೋದಾದರೆ ಅದೊಂತರಾ ಅತ್ಯಂತ ರುಚಿಕರ ಅನಿಸುವ ತಾಕತ್ತು ಬಂಗಿಸೊಪ್ಪಿಗೆ ಇದೆ, ಬಂಗಿ ಪಾನಕ ತಯಾರಿಕೆಯಲ್ಲಿ ಗೋಡಂಬಿ, ದ್ರಾಕ್ಷಿ, ಗಸಗಸೆ ಮುಂತಾದವುಗಳನ್ನು ಸೇರಿಸಲಾಗುತ್ತದೆ ಇದರ ಜೊತೆ ಸಿಹಿ ಪದಾರ್ಥ ಸೇರಿದರಂತೂ ಮತ್ತು ಬೇಗನೆ ಮತ್ತು ಏರಲಾರಂಬಿಸುತ್ತದೆ.. ಬಂಗಿಸೊಪ್ಪಿನ ಪಾನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಮನುಷ್ಯ ಅತೀ ಪುಕ್ಕಲು ಸ್ವಭಾವದವನಾಗಿಬಿಡುತ್ತಾನೆ, ನಗಲಾರಂಬಿಸಿದರೆ ಬಂಗಿ ಸೊಪ್ಪಿನ ಮತ್ತು ಇಳಿಯುವವರೆಗೂ ನಗುತ್ತಲೇ ಇರುತ್ತಾರೆ..


                                             
 ಚಿತ್ರ ಕೃಪೆ: ಅಂತರ್ಜಾಲ
ಇನ್ನು ಆಲೆಮನೆಯಲ್ಲಿ ಕಬ್ಬಿನಹಾಲು ಬೇಕಾದಷ್ಟು ಕುಡಿಯಬಹುದಾ ಅಥವಾ ಒಂದು ಲೋಟಕ್ಕೆ ಸೀಮಿತವಾ ಅನಿಸುತ್ತಿದೆಯಾದರೆ, ಆಲೆಮನೆಯಲ್ಲಿ ನಿಮಗೆ ತಾಕತ್ತು ಇದ್ದಷ್ಟು ಕುಡಿಯಬಹುದು... ನಾನಂತು ಎಷ್ಟು ಕುಡಿದೆ ಎನ್ನುವ ಲೆಕ್ಕ ಇಡಲೇ ಇಲ್ಲ ಇಲ್ಲಿಯವರೆಗೆ! ಜೊತೆಗೆ ಮಾವಿನ ಮಿಡಿ ಉಪ್ಪಿನಕಾಯಿ, ಮೆಣಸಿನಕಾಯಿ ಬೋಂಡಾ, ಮಸಾಲೆ ಮಂಡಕ್ಕಿ ಎಲ್ಲವೂ ಇರುತ್ತದೆ, ಕಾಲ ಬದಲಾದಂತೆ ಆಲೆಮನೆಗೆ ಕರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಅದಕ್ಕೆ ಕಾರಣ ಇಲ್ಲವೆಂದಲ್ಲ, ಕರೆಯದೇ ಇದ್ದವರು ಗುರುತು ಪರಿಚಯ ಇಲ್ಲದವರು, ಪಟ್ಟಣ ಪ್ರದೇಶದಿಂದ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡುವ ಜನರಿಂದ ಕಬ್ಬು ಬೆಳೆದವರು ಬೇಸರಗೊಂಡಿರುವುದರಿಂದ ಯಾರನ್ನೂ ಕೆರೆಯಬೇಕೆಂದೆ ಅನಿಸುತ್ತಲೇ ಇಲ್ಲವೇನೊ...


ಆಲೆಮನೆಗಳು ಗತಕಾಲದ ವೈಭವಗಳಾಗದೆ ಆಲೆಮನೆಯ ಸವಿ ಎಲ್ಲರೂ ಸದಾ ಸವಿಯುಂತಾಗಬೇಕೆಂಬುದೇ ನನ್ನ ಆಶಯ.

Saturday 29 December 2012

ಹಳೆಯ ವರ್ಷ ಕಳೆಯುತ್ತಿದೆ, ಪ್ರಳಯ ಮುಂದೆ ಹೋಗಿದೆ, ಹೊಸ ವರ್ಷ ಬರುತ್ತಿದೆ

     ನನ್ನದೊಂದು ಬ್ಲಾಗ್ ಇದೆ ಅನ್ನೋದೆ ಮರೆತುಹೋಗುವಷ್ಟು ದಿನಗಳಾಗಿವೆ ಏನೂ ಬರೆಯದೆ.. ಪದೇ ಪದೇ ಅದೇ ರಾಗ ಅದೇ ತಾಳ ಅಂದ್ರಾ? ಹೂಂ ಒಂತರಾ ಹಾಗೇ ಅನ್ನಬಹುದೇನೊ... ಬರಹ ಪ್ಯಾಡಿನಲ್ಲಿ ಗೀಚಲೂ ಮನಸ್ಸಿಲ್ಲದ ಸಿಕ್ಕಾಪಟ್ಟೆ ಸೋಮಾರಿತನ...ವರುಷದ ಅಂತ್ಯಕ್ಕೆ ನಾವು ತಲುಪಿಯಾಗಿದೆ, ಇತ್ತೀಚಿನ ದಿನಗಳಲ್ಲಿ ದಿನಪತ್ರಿಗಳಲ್ಲೆಲ್ಲಾ ಬ್ಲಾಗ್ ಬರಹಗಳು ಮೂಡಿಬರುತ್ತಿವೆ..ಬ್ಲಾಗ್ ಗಳು ಎಂದರೆ ನಾಯಿಕೊಡೆಗಳು ಅನ್ನುವಷ್ಟರ ಮಟ್ಟಿಗೆ ತಾತ್ಸಾರ ಮಾಡುತ್ತಿದ್ದವರು ಬ್ಲಾಗ್ ಬರಹಗಳನ್ನು ಸಹ ಓದಿ(ಓದದೇ ಹೋದರೂ CTRL+C  CTRL+V ಒತ್ತುವಾಗಲಾದರೂ ಮೊದಲನೇ ಹಾಗೂ ಕೊನೆಯ ಸಾಲುಗಳನ್ನು ಓದಿರುತ್ತಾರಲ್ಲ) ಪತ್ರಿಕೆಗಳಲ್ಲಿ ಪ್ರಕಟಣೆ ಮಾಡುತ್ತಿದ್ದಾರಲ್ಲಾ ಅದು ತುಂಭಾ ಖುಷಿ ಕೊಟ್ಟ ಸಂಗತಿ...

ಆದರೆ ಬ್ಲಾಗ್ ಬರಹಗಳನ್ನು ಪ್ರಕಟಿಸಲು ಬ್ಲಾಗ್ ನ ಒಡೆಯರಿಗೆ ತಿಳಿಸಿ ಅವರ ಬರಹಗಳನ್ನ ಪ್ರಕಟಿಸುತ್ತಿದ್ದಾರ ಅಥವಾ ಬ್ಲಾಗ್ ಒಡೆಯರಿಗೆ ತಮ್ಮ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುವ ಬಗ್ಗೆ ಮಾಹಿತಿ ಇರುತ್ತದೆಯಾ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ, ಬ್ಲಾಗ್ ನಲ್ಲಿ ಬರೆಯುವವರಿಗೆ ಏನೂ ಗೊತ್ತಿಲ್ಲ ಸುಮ್ಮನೆ ಕಾಟಾಚಾರಕ್ಕೆ ಬರ್ಕೊತಾರೆ(ಬರೆಯುತ್ತಾರೆ ಅಲ್ಲ ಬರ್ಕೊತಾರೆ) ಅನ್ನುವ ಮನೋಭಾವ ದೂರವಾಗಿದೆ ಅನಿಸುತ್ತೆ... ಬ್ಲಾಗ್ ನಲ್ಲಿ ಬರೆಯುವವರು ಬೇರೆಯವರು ಓದಲಿ ಅಂತಲೇ ಪ್ರಕಟಿಸಿರುತ್ತಾರೆ, ಅನಿಸಿದ್ದೆಲ್ಲವನ್ನೂ ಹಂಚಿಕೊಂಡರೆ ಅದೊಂತರಾ ಆತ್ಮ ತೃಪ್ತಿ.. , ಸಂಪೂರ್ಣ ಹಕ್ಕು ನಮ್ಮದೇ... ಎಡಿಟರ್, ಸಬ್ ಎಡಿಟರ್, ಪ್ರೂಫ್ ರೀಡರ್ರು ಎಲ್ಲರೂ ನಮಗೆ ನಾವೇ( ನನ್ನದು ಫ್ರೂಫ್ ರೀಡಿಂಗ್ ಅಲ್ಲ ಬಿಡಿ, ತಪ್ಪುಗಳನ್ನು ಸರಿ ಮಾಡ್ಕೊಳಕ್ಕೆ ಆಗದಷ್ಟು ನನಗೆ ಗೊತ್ತಾಗದ ಕಣ್ತಪ್ಪುಗಳಿರುತ್ತೆ ನನ್ನ ಬರವಣಿಗೆಯಲ್ಲಿ.. ) ಇವೆಲ್ಲದರ ಮಿತಿ ಇದ್ದರೂ ಸಹ ಇಷ್ಟವಾದವರು ಅನಿಸಿಕೆ ತಿಳಿಸುತ್ತಾರಲ್ಲ ಅದು ಮತ್ತೊಂದು ಮಗದೊಂದು ಲೇಖನಗಳ ಬರೆಯಲು ಪ್ರೇರೇಪಿಸುತ್ತೆ,


     ಈ ಬಾರಿ ಮನೆಯಿಂದ ಹೊರಗೆ ಹೋಗಲಾಗದೇ ಇರುವಷ್ಟು ಜಿಟಿ ಜಿಟಿ ಮಳೆ ದೋ ಗುಡುವ ಮಳೆಯ ಆರ್ಭಟಗಳು ಇರಲೇ ಇಲ್ಲ, ಇಪ್ಪತ್ನಾಲಕ್ಕು ಘಂಟೆಗಳು ಕಿಟಿ ಕಿಟಿ ಮಳೆ ಹೊಯ್ದು ಕಾಡುತ್ತಿದ್ದ ವರುಣ ಈ ಭಾರಿ ಬರೀ ಕೆಲವು ಘಂಟೆಗಳ ಮಳೆ ಬರಿಸಲಷ್ಟೇ ಶಕ್ತನಾಗಿದ್ದಾನೆ, ಇದೆಲ್ಲಾ ಪ್ರಳಯದ ಮುನ್ಸೂಚನೆಯಾ ಅನಿಸಿತ್ತು?? ಟೀವಿಯಲ್ಲಿ ಪ್ರಳಯದ ಡೇಟ್ ಯಾವುದು ಅಂತ ಎಲ್ಲಾ ಟೀವಿ ಚಾನಲ್ ಗಳ ಆಸ್ಥಾನ( ಟೀವಿ ಚಾನಲ್ ನವರಿಗೊಬ್ಬೊಬ್ಬ ಖಾಯಂ ಜೋತಿಷಿಗಳಿದ್ದಾರೆ) ಜೋತಿಷಿಗಳು ಪ್ರಳಯದ ಎಕ್ಸ್ಯಾಕ್ಟ್ ಡೇಟ್! ಪ್ರಿಡಿಕ್ಟ್ ಮಾಡಿಯಾಗಿತ್ತು, ವರುಷದ ಅಂತ್ಯವಾಗುತ್ತಿದೆ ಆದರೆ ಪ್ರಳಯವಾಗಿ ಮಾನವ ಕುಲದ ಅಂತ್ಯ ಆಗಲೇ ಇಲ್ಲ, ಆಗಿದ್ದರೆ ಪ್ರಳಯದ ಬಗೆಗೆ ಬರೆಯಲು ಅದನ್ನು ಓದಲು ಯಾರೂ ಇರುತ್ತಲೇ ಇರಲಿಲ್ಲ.


ಹೊಸ ವರ್ಷಕ್ಕೆ ಇನ್ನು ಎರಡೇ ದಿನಗಳು ಬಾಕಿ ಉಳಿದಿದೆ, ಮುಂಚಿತವಾಗಿ ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

Saturday 10 March 2012

ಅನಿಸಿದ್ದು, ತೋಚಿದ್ದು ಗೀಚಿದ್ದು ಹಾಗೇ ಸುಮ್ಮನೆ.....

ನಾನು ಬ್ಲಾಗ್ ನಲ್ಲಿ ಬರೆಯೋದನ್ನು ಬಿಟ್ಟು ಬಿಟ್ಟೆನಾ, ಮರೆತು ಹೋಗಿದೆಯಾ.. ಬರೆಯಬೇಕು, ಬರವಣಿಗೆ ಪುನಃ ಆರಂಭವಾಗಬೇಕು, ಅದೇ ಲಯ ಇದೆಯಾ, ಅಥವಾ ಅಕ್ಷರ, ಪ್ರಾಸಗಳು, ಪದ ಪುಂಜಗಳು ಹೊಳೆಯದೇ ತಡವರಿಸುತ್ತದೆಯಾ ಮನಸ್ಸು, ಹೀಗೆಲ್ಲಾ ಪ್ರಶ್ನೆಗಳು ನನ್ನ ಕಾಡ ತೊಡಗಿತು...ಚಿತ್ರಕ್ಕ ಹೇಳಿದಂತೆ ಬರವಣಿಗೆಯ ಇಳಿಕೆಯ ಕಾಲವಾ ಎಂದು ಯೋಚಿಸಿದರೆ ನಾನು ಬರವಣಿಗೆಯ ಉತ್ತುಂಗಕ್ಕೆ ಏರಲೇ ಇಲ್ಲ, ಟೈಮ್ಲೀ ಅಪ್ಡೇಟುಗಳು ಅಂತ ಆಗಲಿ, ವಾರಕ್ಕೊಂದು ಲೇಖನ ಅಂತಲೋ, ಈ ತಿಂಗಳು ಬರೆಯಲೇ ಬೇಕು ಅಂತಲೋ ಒಂದು ಕಟ್ಟುನಿಟ್ಟಾದ ಅಲಿಖಿತ ಶರತ್ತನ್ನು ಸಹ ವಿಧಿಸಿಕೊಂಡವನಲ್ಲ, ಅದು ನನ್ನಿಂದ ಸಾಧ್ಯವಿಲ್ಲವೆಂದು ನನಗೇ ಗೊತ್ತು.

     ಮುಂಚೆಯಾದರೆ ಸ್ನೇಹಿತರು ಬ್ಲಾಗಲ್ಲಿ ಏನಾದರೂ ಬರೆದಿದ್ದೀಯ ಕೇಳುತ್ತಿದ್ದರು, ಈಗ ಅವರೆಲ್ಲರಿಗೂ ಮನದಟ್ಟಾಗಿ ಹೋಗಿದೆ, ಇವನು ಹೇಳಿದ ತಕ್ಷಣ ಬರೆಯುವವನಲ್ಲ ಎಂದು. ನನ್ನ ಬ್ಲಾಗ್ ಇದೇ ಅನ್ನೋದೆ ಮರೆತು ಹೋಗುವಷ್ಟು ದಿನಗಳಾಗಿ ಹೋಗಿದೆ, ಬ್ಲಾಗ್ ಖಾಲಿ ಬಿಟ್ಟು... ಅದೇ ಹಳತಾದ ಪೋಸ್ಟನ್ನೇ ನೋಡಿ ನೋಡಿ ಅನೇಕರಿಗೆ ಬೇಸರ ಬಂದಿರಬಹುದು, ಇದೊಂದು ಅಪ್ಡೇಟಾಗದ ಬ್ಲಾಗ್ ಇರಬೇಕು ಎಂದು ಅನ್ನಿಸಿರಲು ಸಾಕು,

     ಏನಾದರೂ ಬರೆಯೋಕು ಸಹ ಮೂಡ್ ಅನ್ನೋದು ಬೇಕು.. ಮೂಡ್ ಇಲ್ಲದೇ ಯಾವ ಕೆಲಸ ಮಾಡಿದರೂ ಅದು ತೃಪ್ತಿದಾಯಕವಾಗಲು ಸಾಧ್ಯವೇ ಇಲ್ಲ, ನನಗೇ ಅನ್ನಿಸಬೇಕು ಬರೆಯಬೇಕು ಎಂದು ಅಲ್ಲಿಯ ತನಕ ಒತ್ತಾಯಕ್ಕೋ ಬರೆಯಬೇಕಲ್ಲಾ ಎಂದು ಬರೆದ ಬರವಣಿಗೆಯಲ್ಲಿ ಸತ್ವದ ಕೊರತೆ ಇದ್ದೇ ಇರುತ್ತದೆ,...

     ಹಾಗೇ ಸುಮ್ಮನೆ ಅಂತ ನನ್ನ ಬ್ಲಾಗ್ ಆಗಿರೋದರಿಂದ ಹಾಗೇ ಸುಮ್ಮನೆ ಅನ್ನಿಸಿದ್ದೆಲ್ಲವನ್ನೂ ಹಾಗೇ ಬರೆದುಬಿಡಬೇಕು ಅಂತ ಕುರ್ಚಿಗೆ ಒರಗಿಕೊಂಡು ಬೆರಳುಗಳಿಗೆ ಕೆಲಸ ಕೊಡಲು ಆರಂಬಿಸಿದ್ದೇನೆ

     ಅಂತರ್ಜಾಲ ವ್ಯವಸ್ಥೆಯಿಂದ ಎಲ್ಲವೂ ಕುಳಿತಲ್ಲಿಯೇ ಮಾಡಬಹುದು... ಆದರೆ ಕೆಲವು ಸಾರಿ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅದರಲ್ಲಿಯೂ ಸಹ ಅನೇಕ ಕುಂದು ಕೊರತೆಗಳಿವೆ ಅನಿಸಿದ್ದಕ್ಕೂ ಸಕಾರಣವಿದೆ, ಫೋನ್ ಬಿಲ್ಲುಗಳನ್ನು ಮನೆಯಲ್ಲಿ ಕುಳಿತೇ ಕಟ್ಟಿಬಿಡಬಹುದು, ಅದ್ಬುತ! ಕುಳಿತಲ್ಲಿಯೇ ಕಷ್ಟಪಡದೇ ಎಲ್ಲಾ ಕೆಲಸ ಮಾಡಿಬಿಡಬಹುದು ಎಂದು ನಾನು ಹಲವು ಬಾರಿ ನೆಟ್ ಬ್ಯಾಂಕಿಂಗ್ ಮುಖಾಂತರ ಕಟ್ಟಿದ್ದೆ. ಮುಂದಿನ ಬಿಲ್ಲಿನಲ್ಲಿ ಶೇಕಡಾ ೧ರಷ್ಟು ರಿಯಾಯಿತಿ ಬೇರೆ, ಯಾರಿಗುಂಟು ಯಾರಿಗಿಲ್ಲ ಎಂದು ಖುಷಿ ಪಟ್ಟಿದ್ದಿದೆ, ಸರಿಯಾಗಿದ್ದರೆ ಎಲ್ಲಾ ಸೌಲಭ್ಯ ಬಳಸಿಕೊಳ್ಳಬಹುದು.. ಆದರೆ ಕಟ್ಟಿದ ಬಿಲ್ಲು ಸಹ ಕಟ್ಟಿಲ್ಲವೆಂದು ಮುಂದಿನ ಬಿಲ್ಲಿನಲ್ಲಿ ಬಂದಾಗ ಅದನ್ನು ಸರಿ ಮಾಡಿಸಲು ಮತ್ತೆ ಅಲೆಯಬೇಕಲ್ಲಾ ಅದಕ್ಕಿಂತ ಕ್ಯೂನಲ್ಲಿ ನಿಂತು ಬಿಲ್ಲು ಕಟ್ಟಿ ಅಧಿಕೃತ ರಶೀದಿ ಪಡೆಯುವುದೇ ಪರಮ ಸುಖ ಅನ್ನಿಸಿಬಿಡುತ್ತೆ.

     ತಂತ್ರಜ್ಞಾನ ಎಷ್ಟೇ ಮೈಲುಗಲ್ಲುಗಳನ್ನು ದಾಟಿ ಬೆಳೆದರೂ ಜನರ ಯೋಚನಾ ಲಹರಿಯೇನು ಬದಲಾವಣೆಯಾಗಿಲ್ಲ ಅನಿಸಿಬಿಟ್ಟಿದೆ, ಉದಾಹರಣೆಗೆ ಯಾರನ್ನಾದರೂ ಮೊಬೈಲ್ ನಲ್ಲಿ ಎಸ್ ಎಂ ಎಸ್ ಮಾಡಿ ಯಾವುದಾದರೂ ಮದುವೆ ಅಥವಾ ಇನ್ಯಾವುದೋ ಶುಭ ಸಮಾರಂಭಕ್ಕೆ ಬನ್ನಿ ಎಂದು ಕಳುಹಿಸಿ ನೋಡಿ, ನೂರಕ್ಕೆ ತೊಂಬತ್ತು ಜನ ಬರುವುದಿಲ್ಲ.. ಉಚಿತ ಮೆಸೇಜ್ ಇದೆ ಎಂದು ಕಳುಹಿಸಿದ್ದಾರೆ ಎಂದು ಯೋಚಿಸುವವರೇ ಹೆಚ್ಚು, ಇನ್ನು ಇಮೇಲ್(ಮಿಂಚಂಚೆ) ನಲ್ಲಿ ಮಂಗಳ ಪತ್ರಿಕೆಯ ಸ್ಕ್ಯಾನ್ ಪ್ರತಿಯೊಂದಿಗೆ ಶುಭ ಕಾರ್ಯಕ್ಕೆ ಆಮಂತ್ರಣ ಕಳುಹಿಸಿದರೆ, ಏನು ಯೋಚನೆ ಮಾಡಬಹುದು?.. ಅದು ಸ್ಪ್ಯಾಮ್ ಲೆಖ್ಖಕ್ಕೆ ಬರುತ್ತದೆಯಂತೆ! ಎಲ್ಲರಿಗೂ ಕಳುಹಿಸಿದ್ದಾರೆ ಇದೊಂದು ಕರೆಯವಾ? ಇಡೀ ಲೀಸ್ಟಿಗೆ ಕಳುಹಿಸಿದ್ದಾರೆ ಉಹೂಂ ಇದಕ್ಕೆ ಬೆಲೆಯಿಲ್ಲವಂತೆ? ಒಬ್ಬರಿಗೆ ಕಳುಹಿಸಿದ್ದು ಮತ್ತೊಬ್ಬರಿಗೆ ಹೋಗಿದೆ ಎಂದು ಗೊತ್ತಾಗಬಾರದಂತೆ! ಅದಕ್ಕೆ To CC BCC ಅಂತಿರೋದು ಅಂತಾರೇನೋ.. ಲೀಸ್ಟ್ ತಯಾರಿಸುವುದು ನನ್ನಂತವನಿಗೆ ಕಷ್ಟದ ಕೆಲಸವೇ ಹೌದು, ಏಕೆಂದರೆ ಸೋಶಿಯಲ್ ನೆಟ್ ವರ್ಕಗಳಿಗೆ ಬೇರೆಯ ಮಿಂಚಂಚೆ ಮಾಡಿಕೊಂಡ ನನಗೆ ಅಲ್ಲಿಂದ ನನ್ನ ಸ್ವಂತ ಮಿಂಚಂಚೆ ವಿಳಾಸಕ್ಕೆ ಒಬ್ಬೊಬ್ಬರ ಮಿಂಚಂಚೆ ವಿಳಾಸ ಹುಡುಕಿ ಅವನ್ನೆಲ್ಲಾ ಒಂದುಕಡೆ ಬರೆದಿಟ್ಟುಕೊಂಡು ಮತ್ಯಾರದ್ದಾದರೂ ಬಿಟ್ಟುಹೋಗಿದೆಯಾ ನೋಡಿಕೊಳ್ಳಬೇಕು, ಅದೂ ಅಲ್ಲದೆ ಇಂಟರ್ನೆಟ್ ಸಹ ಆಮೆ ವೇಗದ್ದೇ ಆಗಿರೋದ್ರಿಂದ ಈ ಮೇಲು ಹೋಯ್ತೋ ಇಲ್ಲವೋ ಅಂತ ನೋಡಿಕೊಳ್ಳಬೇಕು, ಲೀಸ್ಟಿಗೆ ಕಳುಹಿಸಿದ್ದಾಯ್ತಲ್ಲಾ ಅಂತ ಸುಮ್ಮನಿರಲು ಸಾಧ್ಯವಾ ಅದೂ ಇಲ್ಲ, ಮಿಂಚಂಚೆ ಕಿಂಚಿತ್ ಬೆರಳ್ತಪ್ಪಿನಿಂದ ಮುದ್ರಿತವಾಗಿದ್ದರೆ ಸೀದಾ ವಾಪಸ್ಸು ಬಂದು ಬಿದ್ದಿರುತ್ತದೆ ಡೆಲಿವರಿ ಪೇಲ್ಡ್ ಅಂತ ಅದು ಯಾವ ವಿಳಾಸ ನೋಡಿಕೊಳ್ಳಬೇಕು, ಒಬ್ಬೊಬ್ಬರಿಗೆ ಬೇರೆ ಬೇರೆಯಾಗಿ ಮಿಂಚಂಚೆ ಮಾಡುತ್ತಾ ಕುಳಿತಿದ್ದರೆ ಮುದುವೆ ಮಂಟಪಕ್ಕೆ ಹೋಗುವ ತನಕವೂ ಕಂಪ್ಯೂಟರಿನ ಮುಂದೆ ಕುಳಿತು ಬಿಡಬೇಕಿತ್ತೇನೋ.... ಮದುವೆಯಂತ ಕಾರ್ಯಕ್ರಮಗಳಲ್ಲಿ ಅತಿ ಮುಖ್ಯವಾದವರನ್ನೇ ಕರೆಯಲು ಮರೆತುಹೋಗುವಂತಹದ್ದೂ ಸಹ ಇಲ್ಲೆವೆಂದಿಲ್ಲ. ಇನ್ನು ಕೆಲವು ಕಡೆ ಫೋನ್ ನಲ್ಲಿ ಕರೆದರೂ ಬಾರದವರಿದ್ದಾರೆ, ಫೋನಲ್ಲಿ ಕರದಿದ್ದಾರೆ, ನಮಗೇನು ಬೆಲೆಯೇ ಇಲ್ಲವಾ , ಫೋನ್ ನಲ್ಲಿ ಕರೆಯೋದೊಂದು ಅಕ್ಷಮ್ಯ ಅಪರಾಧ, ಮನೆಗೇ ಬಂದು ಕರೆಯಬೇಕಾಗಿತ್ತು ಎನ್ನುವುದು ಅವರ ಆಕ್ಷೇಪಣೆ.

     ಸೌಲಭ್ಯಗಳಿರುವುದೇ ಬಳಸಿಕೊಳ್ಳುವುದಕ್ಕಾಗಿ, ಈಮೇಲ್ ಚಾಟ್ ಗಳು ಇನ್ನೂ ಹರಟೆಗಷ್ಟೇ ಸೀಮಿತವಾಗಿರುವುದೇ ವಿಪರ್ಯಾಸ, ಶುಭ ಕಾರ್ಯಗಳ ಮಂಗಳ ಪತ್ರ(ಇನ್ವಿಟೇಶನ್) ಲಗತ್ತಿಸಿ ಕಳುಹಿಸಿದರೇ ಅದೂ ಸಹ ನೇರವಾಗಿ ಕರೆಯೋಲೆ ಕೊಟ್ಟಂತೆ ಅಲ್ಲವಾ? ಮೊಬೈಲ್ ಮೆಸೇಜಿಗೂ ಸಹ ಕಾಲ್ ನಷ್ಟೇ ಮಹತ್ವವಿಲ್ಲವಾ? ಮೆಸೇಜು ಸಹ ಅದೇ ವ್ಯಕ್ತಿಯ ಮೊಬೈಲಿನಿಂದ ಬಂದಿದ್ದು ಅಂದ ಮೇಲೆ ಅದು ಸಹ ಅದಿಕೃತವೇ ಅಲ್ಲವೇ? ಪ್ರತಿಯೊಬ್ಬರನ್ನೂ ಮನೆಗೇ ಹೋಗಿ ಕರೆದಾಗಲೂ ಅವರಿಲ್ಲವೆಂದು ಮತ್ತೆ ಮತ್ತೆ ಮೂರ್ನಾಲ್ಕು ಭಾರಿ ಕರೆಯುವುದು ಸಾಧ್ಯವಾ? ಮನೆಗೆ ಪತ್ರಿಕೆ ಕೊಟ್ಟಿದ್ದಾರೆ ತಾನು ಬರುವ ತನಕ ಕಾಯಬೇಕಿತ್ತು ಅನ್ನುವುದು ಎಷ್ಟು ಸರಿ.ಎಲ್ಲವೂ ಕಲ್ಪಿಸಿಕೊಂಡೂ ಬರೆದದ್ದಲ್ಲ, ಅನುಭವಕ್ಕೆ ಬಂದವುಗಳೇ ಆಗಿವೆ. ಆಗಿದ್ದೆಲ್ಲವೂ ಒಳ್ಳೆಯದಕ್ಕೆ ಎಂದು ಸುಮ್ಮನಾಗೋದೆ ಒಳ್ಳೇದೇನೋ ಅನಿಸಿಬಿಡುತ್ತೆ.

ಹಾಂ ನಾಳೆ ಅಂದರೆ ಮಾರ್ಚ 11ಕ್ಕೆ ನನ್ನ ಮಗಳು "ನಿಧಿ"ಯನ್ನು ಮೊದಲಬಾರಿಗೆ ಮನೆಗೆ ಕರೆದುಕೊಂಡು ಬರುತ್ತಿದ್ದೇನೆ ಅವಳ ಅಜ್ಜನ ಮನೆಯಿಂದ, ನಿಮ್ಮೆಲ್ಲರ ಹಾರೈಕೆ ಬೇಕು ಅವಳ ಮೇಲೆ, ಮಕ್ಕಳಂದ ತಕ್ಷಣ ಎಷ್ಟು ಖುಷಿ ಇರುತ್ತೆ... ಈಗಂತೂ ಚಂದ ಚಂದದ ಬಟ್ಟೆಗಳನ್ನು ತೊಡಿಸಿ ಸಂತೋಷ ಪಡಬಹುದು... ಸಮಯ ಹೋದದ್ದೆ ಗೊತ್ತಾಗೋದಿಲ್ಲ... ಮಕ್ಕಳ ಜೊತೆಯಲ್ಲಿ ನಾವು ಸಹ ಚಿಕ್ಕವರಾಗಬಹುದೇನೋ.. ಸಿರಸಿಯಲ್ಲಿ ಜಾತ್ರೆ ಆರಂಭವಾಗಿದೆ, ಮಗಳಿಗೆ ಆಟಿಕೆ ತರುವ ನೆಪದಲ್ಲಿ ಸುತ್ತಿ ಬರಬಹುದೇನೋ ಅನ್ನಿಸುತ್ತಿದೆ, ಅಂತೆಯೇ ಅಂಗಡಿಗಳಲ್ಲಿರುವ ಕಾರು ಬೈಕು ಇಮಾನ, ಹೂಂ ವಿಮಾನ ಅಲ್ಲ ಇಮಾನನೇ ಅದು, ಎಲ್ಲವನ್ನೂ ತರಬೇಕು.... ಬನ್ನಿ ಸಿರಸಿ ಜಾತ್ರೆ ಒಂದು ಸುತ್ತು ಸುತ್ತಾಡಿ ಬರೋಣ ಏನಂತೀರಾ........

Thursday 29 September 2011

ಮೌನ ಮಾತಾಡಿದಾಗ

ಮಾತೊಂದೆ ಎಲ್ಲವೂ ಅಲ್ಲ

ಮೌನವೇ ಎಲ್ಲ ಅಂದವರೇ ಮೌನವಾಗೊಲ್ಲ

ಮಾತು ಸಾಕಾದಾಗ ಮೌನ ಹಿತ

ಮೌನ ಹೆಚ್ಚಾಗಿ ಕೊರೆದಾಗ ಮಾತೇ ಸುಖ


ಭಾವನೆಗಳ ವ್ಯಕ್ತ ಪಡಿಸುವ ಪರಿ ನೀ ತಿಳಿ

ಮೌನದಲಿ ಅವ್ಯಕ್ತವಾದ ಭಾವನೆಯು ಕಣ್ಣಲ್ಲಿ ವ್ಯಕ್ತವಾಗಲಿ

ಮಾತಾಡಿ ಕೊಲ್ಲಬೇಡ, ಮೌನವಾಗಿ ಕೊರಗಬೇಡ



ಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ

ಮಾತೇ ಎಲ್ಲವು ಅಲ್ಲ, ನೀ ಅತಿ ಮೌನಿಯಾಗಬೇಡ

ಮಾತು ಮೌನದ ನಡುವೆ ಅಂತರ ನಿರಂತರ

ಮೌನ ನೀ ಮಾತಾಡು, ಮಾತೇ ಮಾತು ನೀ ಮೌನಿಯಾಗು.

Tuesday 5 July 2011

ಚಿತ್ರರಂಗದ ಬಗ್ಗೆ ಒಂದಿಷ್ಟು ತಿಳಿದಷ್ಟು ಮತ್ತು ಅಮೃತ ಘಳಿಗೆ ಚಲನ ಚಿತ್ರದಲ್ಲಿ ಬಾಲನಟನಾಗಿ ನನ್ನ ಅಭಿನಯ!

     ನನ್ನೊಳಗಿನ ಬರಹಗಾರ ಅನಾಮತ್ತಾಗಿ ತಲೆಗೆ ಕೈ ಕೊಟ್ಟು ಕುಂಭಕರ್ಣನಂತೆ ದೀರ್ಘ ನಿದ್ರೆಗೆ ಜಾರಿದ್ದನೇನೋ ಎನ್ನುವ ಅನುಭವ,ಅಲ್ಲಾಡಿಸಿದರೂ ಏಳಲು ಒಪ್ಪದ ಜಾಯಮಾನದ ಆತ ನಿನ್ನೆ ಇಂದ ಒಂದೇ ಸಮನೆ ಸುರಿಯುತ್ತಿರುವ ಮಲೆನಾಡಿನ ಜಡಿ ಮಳೆಯ ದೊಡ್ಡ ದೊಡ್ಡ ಹನಿ ಮೈಗೆ ಸಿಡಿದಿರಬೇಕು.. ತಟಪಟ ಸದ್ದು ಕಿವಿಗೆ ಬಿದ್ದಿರಬೇಕು, ಮೈ ಕೈ ಮುರಿಯುತ್ತಾ ಎದ್ದು ಕುಳಿತಂತೆ ಅನ್ನಿಸುತ್ತಿದೆ, ಪೀಠಿಕೆ ಅತಿಯಾಗುತ್ತಿದೆ ಅನ್ನಿಸುವ ಮೊದಲು ಲೇಖನ ಆರಂಭಿಸಿ ಬಿಡುತ್ತೇನೆ




     ಚಿತ್ರ ಜಗತ್ತು ಅನ್ನೋದು ಚಿತ್ರ, ವಿಚಿತ್ರ, ಅದ್ಬುತ, ವಿಸ್ಮಯ, ರೋಮಾಂಚನ, ನೋವು, ನಲಿವು, ದುಃಖ, ಕಷ್ಟ, ಸುಖ, ಹೆಸರು, ಕೀರ್ತಿ, ಹಣ, ಯಶಸ್ಸು, ಎಲ್ಲವನ್ನೂ ಒಟ್ಟೋಟ್ಟಿಗೆ ನೀಡಬಲ್ಲದು, ಆದರೂ ಚಿತ್ರ ಜಗತ್ತಿನ ಆಳ ಅಷ್ಟು ಸುಲಭವಾಗಿ ಅರಿವಾಗೋದಿಲ್ಲ, ಆದರೂ ಗೊತ್ತಿರುವಷ್ಟು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ.

     ನಾನು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಅಮೃತ ಘಳಿಗೆ ಚಲನಚಿತ್ರದಲ್ಲಿ ಶ್ರೀಧರ ನ ಮಗನಾಗಿ ಅಭಿನಯಿಸಿದ್ದೇನೆ, ನಮ್ಮ ಊರಿನ ರಾಮಯ್ಯನವರ ಹಳೆಯ ಕಾಲದ ಮನೆಯಲ್ಲಿ ಶ್ರೀಧರ ನ ಮನೆಯ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು... ನಾನು ಅಭಿನಯಿಸಿದ ದೃಶ್ಯ - ಮೂರುಗಾಲಿಯ ಚಿಕ್ಕ ಗಾಡಿಯನ್ನು ದೂಡಿಕೊಂಡು ಹೋಗುವ ಪುಟ್ಟ ಮಗುವಿನ ಪಾತ್ರ! ನನಗಾಗ ಎರಡು ವರ್ಷ ವಾಗಿತ್ತು! ಇನ್ನೊಂದು ಚಾನ್ಸ್ ಕೊಡಿ ಅಂತ ಕೇಳೋಕು ಗೊತ್ತಾಗಲೇ ಇಲ್ಲ! ಪಾಪ ಅಂದ್ರಾ? ಹೂಂ ನಾನು ಪಾಪುನೇ ಆಗಿದ್ದೆ! ಅಂದಹಾಗೆ ಆ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಅಲೋಕ ಎಂದಾಗಿತ್ತು, ಇಂದಿಗೂ ಸಹ ನಮಗೆ ಆಪ್ತರಾದ ಕುಂಟಗೋಡಿನ ಗಣಪತಿಯವರು ನನ್ನನ್ನು ಕಂಡಾಗೆಲ್ಲಾ ಅಲೋಕ್ ಎಂದೇ ಕರೆಯುತ್ತಾರೆ, ಅನೇಕರು ಗೊತ್ತಿಲ್ಲದೇ ಹೋದವರು ಅಲೋಕ್ ಅಲ್ಲ ಆದಿತ್ಯ ಅಂದರೂ ಸಹ "ಗೊತಿದಾ ಅವ ನಮ್ಮ್ ಅಲೋಕ್" ಎಂದೇ ಹೇಳುತ್ತಾರೆ, ಮೊನ್ನೆ ಹೀಗೆ ಆಯಿತು, ನನ್ನ ಹೆಂಡತಿ ಸೋದರ ಮಾವನ ಮನೆಗೆ ಹೋಗಿದ್ದಳು ಅಲ್ಲಿಗೆ ಗಣಪತಣ್ಣ ಬಂದಿದ್ದರಂತೆ ಅಲ್ಲಿ ಓಹ್ ಅಲೋಕ ನ ಹೆಂಡ್ತಿ ಅಲ್ದಾ ಕೇಳಿದರಂತೆ! ಅಲ್ಲಿದ್ದವರಿಗೆಲ್ಲಾ ಏನು ಅರ್ಥವಾಗದೆ ಕಕ್ಕಾಬಿಕ್ಕಿಯಾಗಿ ನೋಡಿದರಂತೆ, ನನ್ನ ಹೆಂಡತಿಗೆ ಮುಂಚೆಯೇ ನಾನು ತಿಳಿಸಿದ್ದರಿಂದ ಅವಳು ಎಲ್ಲರಿಗೂ ಅಮೃತಗಳಿಗೆ ಸುದ್ದಿ, ಅಲೋಕ ಅಂತಲೇ ಕರೆಯೋದು ಗಣಪತಣ್ಣ ಅಂತ ವಿವರಿಸಿದ ಮೇಲೆ ಎಲ್ಲರಿಗೂ ಅರ್ಥವಾಗಿಯಿತಂತೆ.

     ಚಿತ್ರರಂಗ ಹೀಗಿದೆ ಅಂತ ಹೇಳೋದು ಕಷ್ಟ, ಅಲ್ಲಿ ಎಲ್ಲರೂ ಒಂದಾಗಿ ದುಡಿದರೆ ಮಾತ್ರ ಗೆಲುವು, ಅಲ್ಲಿ ಹೀರೋ, ಹೀರೋಯಿನ್ ಗೆ ಆಕ್ಟಿಂಗ್ ಒಂದು ಬಂದರೆ ಆಗೋದಿಲ್ಲ, ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ, ಲೈಟ್ ಬಾಯ್ ನಿಂದ ಹಿಡಿದು ಎಲ್ಲರೂ ಎಲ್ಲರೂ ನುರಿತ ಕೆಲಸಗಾರರಾಗಿರಬೇಕು, ಯಾರೇ ಒಬ್ಬರು ಶ್ರದ್ದೆಯಿಂದ ಕೆಲಸ ಮಾಡದೇ ಹೋದರೆ ಚಿತ್ರದಲ್ಲಿ ಎಡವಟ್ಟಾಗೋದು ಗ್ಯಾರಂಟಿ. ಉದಾಹರಣೆಗೆ, ಹೀರೋ ಮತ್ತು ಹೀರೋಯಿನ್ ಹೊಟೆಲ್ ನಲ್ಲಿ ಕುಳಿತು ಶರಬತ್ತು, ಅದೇ ಜೂಸ್ ಹೀರುತ್ತಾ ಮಾತನಾಡುವ ದೃಶ್ಯ,ದೃಶ್ಯ ಒಂದೇ ಟೇಕ್ ನಲ್ಲಿ ಸಾಧ್ಯವಿಲ್ಲವಾದರೆ ಪ್ರತಿಯೊಂದನ್ನು ಬರೆದುಕೊಳ್ಳಬೇಕಾಗುತ್ತದೆ, ಟೇಬಲ್ ಮೇಲೆ ಏನೇನು ಇತ್ತು, ನಾಯಕಿ ಹೀರುತ್ತಿದ್ದ ಜ್ಯೂಸ್ ನ ಬಣ್ಣ ಯಾವುದು, ಎಷ್ಟು ಇತ್ತು, ಸ್ಟ್ರಾ ಬಣ್ಣ ಯಾವುದು, ಅವಳು ದರಿಸಿದ್ದ ಬಟ್ಟೆಯ ಬಣ್ಣ ಯಾವುದು ಎಲ್ಲವನ್ನು ಯಥಾವತ್ ಬರೆದಿಟ್ಟುಕೊಳ್ಳಬೇಕು, ಇಲ್ಲವಾದರೆ ಅರ್ಧ ಚಿತ್ರೀಕರಣವಾಗಿ ಮತ್ತೊಂದು ದಿನ ಮುಂದಿನ ಭಾಗ ಚಿತ್ರೀಕರಣ ಮಾಡುವಾಗ ಆರೇಂಜ್ ಜ್ಯೂಸ್ ನ ಬದಲಾಗಿ ಮರೆತು ಕೋಕ್ ಬಾಟಲಿಯನ್ನು ಇಟ್ಟರೆ, ಮೊದಲು ಆರೇಂಜ್ ಜ್ಯೂಸ್ ಕುಡಿಯುತ್ತಿದ್ದ ನಟಿ, ಹೀರೋ ಮಾತನಾಡಿ ಮುಗಿಸಿ ಮತ್ತೆ ಮಾತಾಡುವಾಗ ಆಕೆಯ ಕೈನಲ್ಲಿ ಕೋಕ್ ಬಾಟಲಿ ಬಂದಿರುತ್ತದೆ!



     ಅನೇಕ ಚಿತ್ರಗಳು ಪೋಷಕ ನಟರ, ಹಾಸ್ಯ ನಟರ ಕೊರತೆಯಿಂದ ಚಿತ್ರ ಯಶಸ್ವಿಯಾಗೋದಿಲ್ಲ, ಚಿತ್ರ ಚನ್ನಾಗಿಲ್ಲ ಎಂದು ಮೊದಲ ಶೋ ನೋಡಿ ಹೊರಬಂದವರು ಹೇಳಿದರೆ ಮುಗಿಯಿತು, ಚಿತ್ರ ಮಕಾಡೆ ಮಲಗುತ್ತೆ ಅನ್ನೋದು ಮತ್ತೆ ಹೇಳಬೇಕಾಗಿಲ್ಲ, ಪತ್ರಿಕೆಗಳಲ್ಲಿ ಬರುವ ಚಿತ್ರ ವಿಮರ್ಶೆಗಳಲ್ಲಿ ಚಿತ್ರ ವಿಮರ್ಶಕ ತನ್ನ ಮೂಗಿನ ನೇರಕ್ಕೆ ಚಿತ್ರದಲ್ಲಿ ಹುರುಳಿಲ್ಲ, ನಾಯಕ ನಟನಿಗೆ ತಲೆಯಲ್ಲಿ ಹುಲುಸಾಗಿ ಕೂದಲೊಂದು ಬೆಳೆದಿದೆ, ಚಿತ್ರ ತರಬೇತಿಯ ಜೊತೆ ಕಟಿಂಗ್ ಶಾಫಿಗೂ ಹೋಗಿಬರಬೇಕು, ದುಡ್ಡು ಕೊಟ್ಟು ನೋಡುವ ಚಿತ್ರವಲ್ಲ ಎಂದು ಬರೆದರೆ ಹೇಗಾಗಬೇಡ, ಅತಿ ಹೆಚ್ಚಿನ ಜನರು ಚಿತ್ರ ವಿಮರ್ಶೆಗಳನ್ನು ಓದುತ್ತಾರೆ ಮತ್ತು ನಂಬುವವರೇ ಹೆಚ್ಚು. ಇನ್ನು ಗಾಂಧೀನಗರ ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗ, ಅಲ್ಲಿಯೇ ಗಾಸಿಪ್ಪುಗಳು ಹುಟ್ಟೋದು, ಗಾಂಧೀನಗರ ಏನು ಮಾತಾಡಿಕೊಳ್ಳುತ್ತೆ ಎನ್ನೋದು ಮುಖ್ಯವಾಗಿ ಬಿಡುತ್ತದೆ.



ಇನ್ನು ಸ್ಟಾರ್ ನಂ ೧ ಪಟ್ಟ ನಾಯಕ ನಾಯಕಿಯರಿಗೆ ಸದಾ ಇರುತ್ತೆ ಅಂತ ಹೇಳೋಕ್ಕೆ ಆಗೋದಿಲ್ಲ, ಅನೇಕ ಕಾರಣಗಳಿಂದ, ಉದಾಹರಣೆಗೆ ಹೊಸ ಮುಖ, ಹೊಸ ಪ್ರತಿಭೆ, ಹೆಚ್ಚು ಜನಪ್ರಿಯತೆ ಪಡೆದರೆ ಸ್ಟಾರ್ ಪಟ್ಟ ಅವರದ್ದಾಗುತ್ತೆ, ಇನ್ನು ನಟಿಯರು ಸ್ವಲ್ಪ ಡುಮ್ಮಿಯರಾದರೂ, ಫಿಟ್ ನೆಸ್ ಕೊರತೆಯಿದ್ದರೆ ನಂ ೧ ಪಟ್ಟ ಕೈಬಿಟ್ಟು ಹೋದಂತೆ. ಬ್ಯೂಟಿ ವಿದ್ ಬ್ರೈನ್ ಅಂತಾರಲ್ಲ ಅದು ಇರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನಾಯಕ/ನಾಯಕಿಗೆ ಅಭಿನಯ ಚಾತುರ್ಯತೆ ಇರಬೇಕಾಗುತ್ತದೆ!

     ಹಿಂದಿನ ಕಾಲದಲ್ಲಿ ಡಬಲ್ ರೋಲ್ಗಳನ್ನು ಚಿತ್ರೀಕರಣ ಮಾಡುವುದು ಸುಲಭವಾಗಿರಲಿಲ್ಲ, ಡಬಲ್ ರೋಲ್ ಚಿತ್ರೀಕರಣ ಛಾಯಾಗ್ರಾಹಕನಿಗೊಂದು ಸವಾಲೇ ಆಗಿತ್ತು, ಒಂದು ದ್ವಿಪಾತ್ರದ ಚಿತ್ರೀಕರಣ ಮಾಡಬೇಕಿದ್ದಲ್ಲಿ ಕ್ಯಾಮರಾ ಲೆನ್ಸ್ ನ ಒಂದು ಭಾಗವನ್ನು ಎಕ್ಸ್ಪೋಸ್ ಆಗದಂತೆ ಮುಚ್ಚಿ ಚಿತ್ರೀಕರಿಸಬೇಕಿತ್ತು, ನಂತರ ಚಿತ್ರೀಕರಣವಾದ ಸೈಡನ್ನು ಮುಚ್ಚಿಕೊಂಡು ರಿವೈಂಡ್ ಮಾಡಿ ಮತ್ತೊಂದು ಪಾತ್ರದ ಚಿತ್ರೀಕರಣ ಮಾಡುತ್ತಿದ್ದರು, ಅದಕ್ಕೆ ಹಳೆಯ ಚಿತ್ರಿಗಳನ್ನು ನೋಡಿ ದ್ವಿಪಾತ್ರಭಿನಯದಲ್ಲಿ ಆ ಇಬ್ಬರು ಏಕವ್ಯಕ್ತಿಗಳ ನಡುವೆ ಗೆರೆಯೊಂದು ಮೂಡಿರುತಿತ್ತು! ಎರಡೂ ಪಾತ್ರಗಳನ್ನು ಒಟ್ಟೊಟ್ಟಿಗೆ ತೋರಿಸುತ್ತಿರಲಿಲ್ಲ, , ಅವರಿಬ್ಬರು ಅಣ್ಣ ತಮ್ಮಂದಿರೆಂದು ಗೊತ್ತಾಗಿ ಅಪ್ಪಿಕೊಳ್ಳುವ ದೃಶ್ಯವಿದ್ದಾಗ ಏನು ಮಾಡುವುದು? ಒಬ್ಬರನ್ನೊಬ್ಬರು ತಬ್ಬಿಕೊಂದು ಅಳುವಾಗ ಹೀರೊನನ್ನೆ ಹೋಲುವ ಮತ್ತೊಬ್ಬ ವ್ಯಕ್ತಿಯ ಬೆನ್ನು ತೋರಿಸುತ್ತಿದ್ದರು.ಹಿಂದೆ ಈಗಿರುವಂತೆ ಮಿಕ್ಸಿಂಗ್ ತಂತ್ರಜ್ಞಾನಗಳು ಬಂದಿರಲಿಲ್ಲ,ಈಗಿನ ಗ್ರಾಫಿಕ್ಸ್ ಅನಿಮೇಷನ್ ಯುಗದಲ್ಲಿ ಏನು ಬೇಕಾದರು ಸುಲಭವಾಗಿ ಮಾಡಬಹುದು.ಇಬ್ಬರಲ್ಲ ಎಷ್ಟು ದ್ವಿಪಾತ್ರ, ತ್ರಿಪಾತ್ರಗಳನ್ನಾದರು ನೈಜ ಅನ್ನಿಸುವಷ್ಟರ ಮಟ್ಟಿಗೆ ಒಟ್ಟೊಟ್ಟಿಗೆ ತೆರೆಯ ಮೇಲೆ ಮೂಡಿಸಬಹುದು.



ಹಳೆಯ ಚಲನಚಿತ್ರಗಳ ಹಾಡುಗಳು ಸುಮಧುರವಾಗಿರುತ್ತಿದ್ದವು, ಹಾಡಿಗೊಂದು ಸಾಹಿತ್ಯವಿರುತ್ತಿತ್ತು, ಅರ್ಥವಿರುತ್ತಿತ್ತು, ಕ್ಯಾಬರೇ ಹಾಡುಗಳು ಸಹ ಮಧುರವಾಗಿರುತ್ತಿದ್ದವು, ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು..., ನಂತಹ ಹಾಡುಗಳು ಹಿತವಾಗಿದ್ದವು,..



     ಈಗಿನ ಕಾಲದ ಹಾಡುಗಳು ಕೆಲವು ಅರ್ಥವಾಗುವುದಿರಲಿ, ಯಾವ ಭಾಷೆಯಲ್ಲಿ ಹಾಡುತ್ತಿದ್ದಾರೆ ಎಂದು ತಿಳಿಯಲು ಎರಡು ನಿಮಿಷಗಳು ಬೇಕು. ಇನ್ನು ಕ್ಯಾಬರೇ ನರ್ತಕಿಯರೇ ಬೇರೆ ಇರುತ್ತಿದ್ದರು, ಈಗಿನಂತೆ ಹಿರೋಯಿನ್ ಗಳೇ ತಾವೆ ಐಟಂ ಸಾಂಗ್ ಗೆ ಕುಣಿಯಲು ತಯಾರಿರುತ್ತಿರಲಿಲ್ಲ, ಈಗ ಊರಿಗೊಬ್ಬಳೆ ಪದ್ಮಾವತಿ ಮುಂತಾದ ಹಾಡಿಗೆ ಹಿರೋಯಿನ್ ಗಳೆ ಕುಣಿಯಲು ಸಿದ್ದರಾಗಿದ್ದಾರೆ. ಹಳೆಯ ಹಾಡುಗಳನ್ನು ನೆನೆಸಿಕೊಳ್ಳುತ್ತಿರುವುದರ ನಡುವೆ ಇಲ್ಲಿ ನನಗೆ ತಕ್ಷಣಕ್ಕೆ ನೆನಪಿಗೆ ಬಂದಿದ್ದು ಮೈಸೂರು ಆನಂದ್ ರವರ ದಶಕಗಳ ಹಿಂದಿನ ಹಳೆಯ ಕಾಲದ ಹಾಡುಗಳು ಹೇಗಿದ್ದವು ಈಗ ಹೇಗಿದೆ ಎನ್ನುವುದರ ಏಕಪಾತ್ರಾಭಿನಯ, ಆಗಿನ ಕಾಲದಲ್ಲಿ ಕ್ಯಾಮರಾಗಳು ಈಗಿನಂತೆ ಇರಲಿಲ್ಲವಂತೆ ನಿರ್ದೇಶಕರು ಹೇಳುತ್ತಿದ್ದರಂತೆ ನೋಡಮ್ಮ ಒಂದೇ ಕ್ಯಾಮರ ಇರೋದು ಅದರ ಎದುರು ನೀನು ಕಾಲುಗಳನ್ನು ಕುಣಿಸುತ್ತಾ(ಮೈ ಕುಲಕಿಸಬೇಕು ಎಂದು ಮತ್ತೆ ಆಕೆಗೆ ಹೇಳಬೇಕಾಗಿರಲಿಲ್ಲವೇನೋ!) ಬಲಗಡೆಯಿಂದ ಎಡಕ್ಕೆ ಹಾಗು ಬಲಕ್ಕೆ ಸ್ವಲ್ಪ ನೆಡೆದು ಮತ್ತೆ ಎಡಕ್ಕೆ ಬರಬೇಕು ಎಂದು! ಅಂತೆಯೆ ರಜಕುಮಾರ್ ಗೆ ಬೇಡರ ಕಣ್ಣಪ್ಪ ದ ಹಾಡಿನ ಚಿತ್ರೀಕರಣದಲ್ಲಿ ಹೇಳಿದ್ದರಂತೆ ಕ್ಯಾಮರ ನಿಮ್ಮ ಎದುರು ಮಾತ್ರವಿರುತ್ತದೆ ಬರಿ ಕೈ ಮೇಲೆ ಕೆಳಗೆ ಮಾಡುತ್ತಾ ಹಾಡಿದರೆ ಸಾಕು ಎಂದು! ಆಗ ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿದೇವ ಹಾಡುತ್ತ ಬಲಗೈ ಮೇಲೆ ಕೆಳಗೆ ಆಡಿಸಿದ್ದು ಸಹ ಅದ್ಬುತವಾಗಿ ಮೂಡಿಬಂದಿತ್ತು ಅಣ್ಣಾರವರ ಅಭಿನಯ. ಇನ್ನು ಈಗಿನವರು ಜನಸಾಮಾನ್ಯರ ಹೆಸರಿನ ಮೇಲೆ ಆಹ ಅವನ ಕಣ್ಣು ನನ್ನ ಮೇಲೆ, ಅಂತ ಹಾಡಿಬಿಡುತ್ತಾರಂತೆ, ಇದನ್ನು ನಾನು ಹೇಳುವುದಕ್ಕಿಂತ ಎಲ್ಲಾದರೂ ಟಿವಿಯಲ್ಲಿ ಮೈಸೂರು ಆನಂದ್ ಅವರ ಕಾರ್ಯಕ್ರಮ ಪ್ರಸಾರವಾದಗ ನಾನು ಬರೆದದ್ದನ್ನು ನೆನಸಿಕೊಳ್ಳಿ.

     ಇನ್ನು ಚಿತ್ರೀಕರಣಕ್ಕೆ ಅತೀ ಹೆಚ್ಚಿನ ದುಡ್ಡು ಸುರಿಯುವವರ ಸಾಲಿನಲ್ಲಿ ಬರುವ ಮೊದಲ ಹೆಸರು ರವಿಚಂದ್ರನ್. ಪ್ರೇಮಲೋಕದಂತ ಅದ್ಬುತ ಚಿತ್ರವನ್ನು ಬೆಳ್ಳಿ ತೆರೆಯ ಮೇಲೆ ಮೂಡಿಸಿದಾತ, . ಕಾರು ಸುಡುವ ದೃಶ್ಯವಿದ್ದರೆ ಹೊಸ ಕಾರನ್ನು ಕೊಂಡು ತಂದು ಸುಟ್ಟರೂ ಅದೇನು ವಿಶೇಷವಲ್ಲ! ಅದೇ ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ಪೆಷಾಲಿಟಿ, ಹಾಳು ಮಾಡುವುದಕ್ಕಂತಲೆ ಕೋಟಿ ಕೋಟಿ ಸುರಿಯಲು ಹಿಂಜರಿಯದ ಜಾಯಮಾನ ರವಿಚಂದ್ರನ್ ನದು. ಹೊಸ ಹೊಸ ಹೀರೋಯಿನ್ ಗಳನ್ನು ಅಮದು ಮಾಡಿಕೊಂಡು ಜೊತೆ ಮರಸುತ್ತುವ ದೃಶ್ಯಗಳಲ್ಲಿ ಅಭಿನಯಿಸುವ ರಸಿಕ,ರವಿಚಂದ್ರನ್ ಅಪ್ಪ ನಿರ್ದೇಶಕ ಎನ್ ವೀರಾಸ್ವಾಮಿ ಇದ್ದಿದ್ದರೆ ಎಷ್ಟು ಬಾರಿ ಹೃದಯಾಘಾತವಾಗುತ್ತಿತ್ತೋ ಏನೋ ಮಗ ಮಾಡುವ ಖರ್ಚು ವೆಚ್ಚಗಳನ್ನು ನೋಡಿ! ಆದರೂ ಏನೇ ಪ್ರಯೋಗಗಳಿರಲಿ ಏನಿದ್ದರೂ ಕನ್ನಡಕ್ಕೆ ಮಾತ್ರ ಸೀಮಿತ ಎನ್ನುವುದು ರವಿಚಂದ್ರನ್ ನೋಡಿ ಅನೇಕರು ಕಲಿಯಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ.

ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲದ ವಿಚಾರಗಳು ಇನ್ನೂ ಅನೇಕವಿದೆ, ಗೊತ್ತಿಲ್ಲದ ವಿಚಾರಗಳನ್ನು ಕಲ್ಪಿಸಿಕೊಂಡು ಬರೆಯುವುದು ಸರಿಯಲ್ಲ, ಸೆಟ್ ಗಳ ಬಗ್ಗೆ ಫಿಲಂ ಸಿಟಿಗಳ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ಎಷ್ಟೋ ಪುಟಗಳು ತುಂಬಿಹೋಗುತ್ತವೆಯೋ.. ಇಷ್ಟವಾಗಿದೆ ಬರವಣಿಗೆ ಅಂದು ಕೊಳ್ಳುತ್ತೇನೆ.


ಅಂದಹಾಗೆ, ಕೊನೆಯ ಮಾತು ನಿಮ್ಮ ಅನಿಸಿಕೆ ತಿಳಿಸಿ ಲೇಖನ ಹೇಗಿದೆ ಎಂದು.