ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, December 31, 2010

ಗುಝಾರಿಶ್(Guzaarish) -ಇದು ಬಿಡುಗಡೆಯ ಬೇಡಿಕೆ, ಒಮ್ಮೆ ಚಿತ್ರ ನೋಡಿ ಎಂಬ ನನ್ನ ಗುಝಾರಿಶ್

ಗುಝಾರಿಶ್, ಸಂಜಯ್ ಲೀಲಾ ಬನ್ಸಾಲಿಯವರ ಮತ್ತೊಂದು ಕಲಾತ್ಮಕ ಚಿತ್ರ, ಗುಝಾರಿಶ್ ಎಂದರೆ ಬೇಡಿಕೆ ಅಥವಾ ಕೋರಿಕೆ ಎನ್ನುವ ಅರ್ಥ ಕೊಡುತ್ತದೆ ಅದು ಹೃತಿಕ್ ರೋಷನ್ ನ ಕಣ್ಣುಗಳಲ್ಲಿಯೇ ವ್ಯಕ್ತಾವಾಗಿ ಹೋಗುತ್ತೆ.

ಇದೊಂದು ಸಂಜಯ್ ಲೀಲಾ ಬನ್ಸಾಲಿಯವರ ದೃಶ್ಯಕಾವ್ಯ ಎಂದರೆ ತಪ್ಪಾಗಲಾರದು, ಇಲ್ಲಿ ಪಾತ್ರದ ಭಾವನೆಗಳಿಗೆ ಹೆಚ್ಚಿನ ಮಹತ್ವವಿದೆ, ಅದ್ಯಾಕೋ ಗೊತ್ತಿಲ್ಲ ಇಂದ್ರಜಾಲ ಅಥವಾ ಮ್ಯಾಜಿಕ್ ಶೋ ಗಳು ನನಗೆ ತುಂಬಾ ಇಷ್ಟವಾಗಿಬಿಡುತ್ತದೆ, ಕಣ್ಣು ಇಷ್ಟೆಲ್ಲಾ ಮೋಸ ಹೋಗುತ್ತಲ್ಲಾ ಅಂತಲೂ ಇರಬಹುದೇನೋ? ಅದೇನೋ ಒಂತರಾ ಖುಷಿ.

ಕಥಾನಾಯಕ ಈಥನ್ ಮಾಸ್ಕರೇನಸ್ (ಹೃತಿಕ್ ರೋಷನ್), ಒಂದು ಕಾಲದಲ್ಲಿ ಅದ್ಬುತ ಇಂದ್ರಜಾಲಿಗನಾಗಿ ಹೆಸರುಗಳಿಸುತ್ತಾನೆ, ಅದನ್ನು ಸಹಿಸದ ಆತನ ಗೆಳೆಯೆನೊಬ್ಬ ಈಥನ್ ನ ಅತಿ ಜನಪ್ರಿಯ ಕಾಂಡಲ್ ಲೈಟ್ ಟ್ರಿಕ್ ನಲ್ಲಿ ಗಾಳಿಯಲ್ಲಿ ತೇಲುತ್ತಿರುವಾಗ ಕ್ರೇನ್ ನ ತಂತಿಯನ್ನು ಕತ್ತರಿಸುವಂತೆ ಮಾಡಿ ಈಥನ್ ನ ಬೆನ್ನು ಮೂಳೆಗೆ ಪೆಟ್ಟು ಬಿದ್ದು ಪ್ಯಾರಲೈಸ್(ಪಾರ್ಶ್ವವಾಯು) ಆಗುವಂತಹ ಕ್ರೂರ ಕೃತ್ಯವನ್ನೆಸಗುತ್ತಾನೆ.ಈಥನ್ ಬೀಳುವ ದೃಶ್ಯ ಕಣ್ಣು ಮಂಜಾಗಿಸುತ್ತದೆ, ಕುತ್ತಿಗೆಯ ಮೇಲ್ಬಾಗ ಮಾತ್ರವೇ ಸ್ಪರ್ಶ ಜ್ಞಾನ ಮತ್ತು ಚಲಿಸಲು ಸಾಧ್ಯವಾಗುತ್ತದೆ, ಹೃತಿಕ್ ನ ಆಕರ್ಷಕ ಬಿಳಿ ಕಣ್ಣು ದೃಶ್ಯಕ್ಕೆ ಇನ್ನೊಂದಿಷ್ಟು ಭಾವನೆಗಳನ್ನು ತುಂಬಿದೆ ಅನ್ನಿಸುತ್ತೆ ಇಡೀ ಚಿತ್ರದ ಛಾಯಾಗ್ರಹಣ ಅದ್ಬುತ.

     ಬದುಕಿ ತೋರಿಸಬೇಕೆಂಬ ಛಲದಿಂದ ಹನ್ನೆರೆಡು ವರ್ಷಗಳನ್ನು ಕಳೆಯುವ ಈಥನ್ ಗೆ ನರ್ಸ್ ಆಗಿ ತೆರೆಯ ಮೇಲೆ ಆವರಿಸಿಕೊಳ್ಳುವುದು ಸೋಫಿಯಾ ಎನ್ನುವ ಚಲುವೆ, ಬರೀ ಚಲುವೆಯಲ್ಲ ಹಿಂದಿಚಿತ್ರರಂಗದ ಮೇರುತಾರೆ ಬಚ್ಚನ್ ಕುಟುಂಬದ ಸೊಸೆ ಐಶ್ ಬೇಬಿ, ಐಶ್ವರ್ಯ ರೈ, ನರ್ಸಗಳೆಲ್ಲಾ ಇಷ್ಟು ಸುಂದರವಾಗಿದ್ದರೆ ಅವರನ್ನು ಸಿಸ್ಟರ್ ಅಂತ ಕರೆಯೋದು ತುಂಬಾ ಕಷ್ಟಾವಾಗಿಬಿಡುತ್ತಿತ್ತೇನೋ ಅನ್ನುವಷ್ಟು ಸುಂದರವಾಗಿ ಕಾಣಿಸುತ್ತಾಳೆ. ಚಿತ್ರದ ಒಂದು ದೃಶ್ಯದಲ್ಲಿ ಹೃತಿಕ್ ಸಹ ಹೇಳುತ್ತಾನೆ ನಾನು ಈಕೆಯನ್ನು ಸಿಸ್ಟರ್ ಎಂದು ಕರೆಯಲು ಸಾದ್ಯವಾಗದಷ್ಟು ಅಂದಗಾತಿ ಎಂದು!.



     ಹಾಸಿಗೆ ಹಿಡಿದ ಹನ್ನೆರೆಡು ವರ್ಷಗಳಲ್ಲಿ ಈಥನ್ ರೇಡಿಯೋ ಜಾಕಿಯಾಗಿ "ರೇಡಿಯೋ ಜಿಂದಗಿ" ಎನ್ನುವ ಕಾರ್ಯಕ್ರಮದ ಮೂಲಕ ಲಕ್ಷಾಂತರ ಕೇಳುಗರ ಬದುಕಿನ ಆಶಾಕಿರಣವಾಗಿ ಬದುಕುವ ನಾಯಕನಿಗೆ ಬದುಕಿದ್ದು ಸಾಕು ಎನಿಸಲು ಆರಂಭವಾಗಿಬಿಡುತ್ತದೆ, ತನ್ನ ಅಸಹಾಯಕತೆಯನ್ನು ಸೋಫಿಯಾಳೊಂದಿಕೆ ತೋಡಿಕೊಳ್ಳುತ್ತಾನೆ, ಸಿಟ್ಟುಬಂದಾಗ ತನ್ನಿಂದ ಸಿಟ್ಟನ್ನು ವ್ಯಕ್ತಪಡಿಸಲು ಅಸಾಧ್ಯವೆನಿಸುತ್ತದೆ, ಮೂಗಿನ ಮೇಲೆ ಕುಳಿತ ನೊಣವನ್ನು ಸಹ ಬೆರೆಸುವುದು ಸಾಧ್ಯವಾಗದೇ ಹೋದಾಗ ಕಣ್ಣುಗಳಲ್ಲಿ ನೋವು ಮುಖದಲ್ಲಿ ನಗು ಬರುವ ದೃಶ್ಯ ಅದ್ಬುತವಾಗಿ ಮೂಡಿಬಂದಿದೆ. ದೋ ಎಂದು ಸುರಿಯುವ ಮಳೆ ಆರಂಭವಾದಾಗ ಮಾಳಿಗೆ( ಸೂರು)ಯಿಂದ ತೊಟ್ಟಿಕ್ಕುವ ಮಳೆ ಹನಿ ಈಥನ್ ನ ಮುಖದ ಮೇಲೆ ಬೀಳಲಾರಂಬಿಸುತ್ತದೆ ಮೊದಲ ನಾಲ್ಕು ಹನಿಗಳು ಆತನಿಗೆ ಖುಷಿ ನೀಡುತ್ತದೆ, ನನ್ನೊಂದಿಗೆ ಯುದ್ದಕ್ಕೆ ಬರುತ್ತೀಯಾ ಬಾ ಎಂದು ಹೇಳುತ್ತಾನೆ ಆ ನಂತರ ಅದು ಕಿರಿಕಿರಿ ನೀಡಲು ಆರಂಭವಾಗುತ್ತದೆ, ರಾತ್ರಿ ಸಮಯವಾದ್ದರಿಂದ ಸೂಫಿಯಾ ತನ್ನ ಮನೆಗೆ ತೆರಳಿರುತ್ತಾಳೆ, ಯಾರೂ ಸಹಾಯಕ್ಕೆ ಬರದೇ ಬೆಳಗ್ಗೆ ಸೋಫಿಯಾ ಬರುವ ತನಕವೂ ಅದೇ ಕಿರಿಕಿರಿ ಅನುಭವಿಸುವ ದೃಶ್ಯಗಳು ಮನ ಕಲಕುವಂತಿದೆ, ಹದಿನಾಲ್ಕು ವರ್ಷಗಳ ಕಾಲ ಯಾವುದೇ ಬೇಸರವಿಲ್ಲದೆ ತನ್ನ ಸೇವೆಮಾಡಿದ ಚಲುವೆಗೆ ಹೂಗುಚ್ಚದ ಗಡಿಗೆಯ(Flower Pot)ನ್ನು ಗೋಡೆಗೆ ಎಸೆಯುವಂತೆ ಹೇಳುತ್ತಾನೆ, ತನಗೆ ಸಿಟ್ಟನ್ನು ವ್ಯಕ್ತ ಪಡಿಸೋಕು ಆಗದ ಪರಿಸ್ಥಿತಿ ಎಂದು ನೋವನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ.

     ರೇಡಿಯೋ ಪ್ರೊಡ್ಯೂಸರ್ ಎಂದು ಸುಳ್ಳು ಹೇಳಿ ಮ್ಯಾಜಿಕ್ ಕಲಿಯಲು ಬಂದ ಓಮರ್ ಸಿದ್ದಗಿ(ಆದಿತ್ಯ ರಾಯ್ ಕಪೂರ್) ಸಿಕ್ಕಿ ಬೀಳುತ್ತಾನೆ, ತಾನು ಚಿಕ್ಕಂದಿನಲ್ಲಿ ನಿಮ್ಮಿಂದ ಪಡೆದ ಆಟೋಗ್ರಾಫ್ ಇಟ್ಟುಕೊಂಡಿದ್ದೇನೆ, ಮೆಜಿಷಿಯನ್ ಆಗೋದು ತನ್ನ ಮಹದಾಸೆ ಎಂದಾಗ, ನಾಯಕ ತಾನು ಕಲಿತ ಇಂದ್ರಜಾಲ(ಮ್ಯಾಜಿಕ್) ತನ್ನೊಂದಿಗೆ ಮಣ್ಣಾಗಬಾರದೆನ್ನುವ ಉದ್ದೇಶದಿಂದ ತನಗೆ ಈ ಪರಿಸ್ಥಿತಿಗೆ ತಂದ ಗೆಳೆಯನ ಮಗನೆಂದು ಗೊತ್ತಿದ್ದೂ ಸಂಪೂರ್ಣವಾದ ವಿದ್ಯೆ ಧಾರೆ ಎರೆಯುತ್ತಾನೆ.

     ಕಾನೂನಿನ ಸಲಹೆಗಾರ್ತಿಯಾಗಿ, ಮನೆಯ ಒಬ್ಬ ಸದಸ್ಯೆಯಂತೆ ಇರುವ ದೇವಯಾನಿ(ಶೆಹೆನಾಝ್)ಯ ಮೂಲಕ ಇಚ್ಛಾಮರಣಕ್ಕೆ ಕೋರ್ಟಗೆ ಅರ್ಜಿ ಹಾಕಿ ವಾದಿಸಿವುಂತೆ ಕೇಳಿಕೊಳ್ಳುತ್ತಾನೆ, ಅದಕ್ಕೆ ಒಪ್ಪದೆ ನಿನಗೆ ಸಾಯುವಂತಹದ್ದೇನಾಗಿದೆ ಎಂದಾಗ ಬದುಕಿದ್ದು ಏನು ಮಾಡಲು ಸಾಧ್ಯ, ನಿನ್ನ ಸಂಬಳ ನಿನ್ನ ಕೈ ಸೇರುತ್ತೆ ವಾದ ಮಾಡು ನೀನು ನನ್ನ ಲಾಯರ್ ಮಾತ್ರ ಎಂದು ಸಿಡುಕುವ ನಾಯಕನಿಂದ ಸಿಟ್ಟೆದ್ದು ದೇವಯಾನಿ ಇನ್ನೇನಾದರೂ ಬೇಕಾ ಎಂದಾಗ ಆತ ಹೇಳುವ ಮಾತು ತನಗೆ ಸುಂದರವಾದ ಹೆಣ್ಣು ಬೇಕು ಎನ್ನುವ ಮಾತುಗಳು ಆತನ ಅಸಾಹಾಯಕತೆಯ ಬಗ್ಗೆ ಸೂಚ್ಯವಾಗಿ ಹೇಳಿಕೊಳ್ಳುವ ಅದ್ಬುತ ವಾಕ್ಚಾತುರ್ಯದ ಸೀನುಗಳು,

     ಓಮರ್ ಹಾಸಿಗೆ ಸರಿಮಾಡಲೆಂದು ಈಥನ್ ನನ್ನು ಎತ್ತಿ ಕೂರಿಸಿ ಗೊತ್ತಾಗದೆ ಕೈ ಬಿಟ್ಟಾಗ ನೆಲಕ್ಕೆ ಬಿದ್ದಾಗ ಆತನನ್ನು ಎತ್ತಲಾಗದೆ ಸೋಫಿಯಾಳನ್ನು ಕೂಗಿ ಕರೆದಾಗ ಓಡಿ ಬಂದು ಎತ್ತಿ ಮಲಗಿಸುತ್ತಾಳೆ, ಆಗ ನಾಯಕ ಅವಳಿಗೆ ಹೇಳುತ್ತಾನೆ ಎಂತಾ ದುರಂತವಾಗಿ ಹೋಯಿತು, ಎಷ್ಟೇ ಪ್ರಯತ್ನ ಪಟ್ಟರೂ ನಿನ್ನ ಕಾಲುಗಳು ಕಾಣಲೇ ಇಲ್ಲ ಎಂದು, ಐಶ್ ಬೇಬಿ ಚಿತ್ರದುದ್ದಕ್ಕೂ ಉದ್ದ ಗೌನ್ ತೊಟ್ಟೇ ಓಡಾಡುತಾಳೆ, ನೀನು ಮಿನಿ ಸ್ಕರ್ಟ್ ಹಾಕಿಕೊಂಡು ಓಡಾಡಿದಾಗ ನಿನ್ನ ಸುಂದರ ಕಾಲುಗಳನ್ನು ನಾನು ನೋಡಿದಂದು ನಾನು ಮತ್ತೆ ನೆಡೆಯಲಾರಂಭಿಸಿಬಿಡುತ್ತೇನೆ ಎಂದು ಹಾಸ್ಯದ ಚಟಾಕಿ ಹಾರಿಸುವ, ತುಸು ಹೆಚ್ಚೆನಿಸುವ ಇಂಗ್ಲೀಷ್ ಭಾಷೆ ಬಳಸಲಾಗಿದೆ ಎಂದುಕೊಳ್ಳುವಾಗಲೇ ಹೃತಿಕ್ ಮಾತಿನ ಶೈಲಿ ಇಷ್ಟಾಗಿಬಿಡುತ್ತೆ!

     ಮುಂದೆ ಈಥನ್ ನ ಡಾಕ್ಟರ್ ನಾಯಕ್(ಸುಹೇಲ್ ಸೇಟ್)ಗೆ ದೇವಯಾನಿ ಈಥನ್ ಇಚ್ಛಾಮರಣದ ಇಂಗಿತ ವ್ಯಕ್ತ ಪಡಿಸಿದ್ದಾನೆಂದು ಹೇಳುತ್ತಾಳೆ, ನಂತರ ಡಾಕ್ಟರ್ ಕೂಡಾ ಮನ ಪರಿವರ್ತನೆಗೆ ಪ್ರಯತ್ನಿಸಿದಾಗ ಈಥನ್ ಕೇಳುವ ಪ್ರಶ್ನೆಗಳಿಗೆಲ್ಲಾ ಡಾಕ್ಟರ್ ಇಲ್ಲಾ ಎನ್ನುವ ಉತ್ತರವನ್ನಷ್ಟೇ ನೀಡಬೇಕಾಗುತ್ತದೆ.

ದೇವಯಾನಿಗೆ ಈಥನ್ ನೋವಿನ ಅರಿವಾಗಿ ಯುಥನೇಶಿಯಾ( ಇಚ್ಛಾ ಮರಣ)ದ ಅರ್ಜಿಯನ್ನು ಕೋರ್ಟ್ ನಲ್ಲಿ ಹಾಕುತ್ತಾಳೆ,ರೇಡಿಯೋ ಮೂಲಕ ನಿನ್ನೆಲ್ಲಾ ಕೇಳುಗರ ಒಗ್ಗಟ್ಟು ಸಂಪಾದಿಸುವ ಮೂಲಕ ನಿನ್ನ ಕೋರಿಕೆಯನ್ನು ಜಡ್ಜ್ ನಿರಾಕರಿಸಲಾಗದಷ್ಟು ಮಾಡು ಎಂದು ಸಲಹೆ ನೀಡುತ್ತಾಳೆ, ಪ್ರೊಜೆಕ್ಟ್ ಇಥನೇಶಿಯಾ(ಯುಥನೇಶಿಯಾ) ಕಾರ್ಯಕ್ರಮದಲ್ಲಿ ಮಾತಾಡುವ ದೃಶ್ಯಗಳನ್ನು ನೋಡಿದರೇ ಚೆನ್ನ. ವಾದ ಆರಂಭವಾದಾಗ ಪ್ರತಿವಾದಿ ಲಾಯರ್ ವಿರೋಧ ವ್ಯಕ್ತಪಡಿಸುವ ದೃಶ್ಯಗಳು, ಜಡ್ಜ್ ಈಥನ್ ನ ಮನೆಗೇ ಬಂದು ವಾದ ವಿವಾದಗಳನ್ನು ಆಲಿಸುವ, ನೀವೇನು ಹೇಳಲು ಇಚ್ಚಿಸುತ್ತೀರಿ ಎಂದು ನಾಯಕನನ್ನು ಕೇಳಿದಾಗ ನಾನೊಂದು ಮ್ಯಾಜಿಕ್ ತೋರಿಸುತ್ತೇನೆ ಯುವರ್ ಆನರ್ ಎಂದು, ಪೆಟ್ಟಿಗೆಯೊಳಕ್ಕೆ ಅರವತ್ತು ಸೆಕೆಂಡು ಇರುವಂತೆ ಪ್ರತಿವಾದಿ ಲಾಯರ್ ಗೆ ಹೇಳಿದಾಗ ಅದರೊಳಗಿದ್ದ ಲಾಯರ್ ಅಲ್ಲಿರಲಾರದೆ ಪೆಟ್ಟಿಗೆಯೊಳಗಿಂದಲೇ ಬಾಗಿಲು ಬಡಿಯುವ, ನಂತರ ಇಂತ ಕಿರುದಾದ ಪೆಟ್ಟಿಗೆಯಲ್ಲಿ ಉಸಿರುಗಟ್ಟುತ್ತೆ, ಅಲುಗಾಡಲೂ ಸಾಧ್ಯವಿಲ್ಲ ಎಂದಾಗ ನೀವು ನನ್ನ ಜೀವನದ ಅರವತ್ತು ಸೆಕೆಂಡ್ ಗಳನ್ನು ಕೆಳೆಯಲು ಸಾಧ್ಯವಿಲ್ಲ ಎಂದಾಯಿತು, ಇದೇ ನನ್ನ ಪರಿಸ್ಥಿತಿ ಎಂದು ಹೇಳುವ ಸೀನುಗಳು ಇಷ್ಟವಾಗುತ್ತೆ.

ಮುಂದೆ ಏನಾಯಿತು? ಜಡ್ಜ್ ನಾಯಕನ ಪರವಾಗಿ ತೀರ್ಪು ಕೊಡುತ್ತಾರಾ? ಸೋಫಿಯಾ ಗಂಡನಿಂದ ಡೈವೋರ್ಸ್ ಪಡೆಯುತ್ತಾಳ! ಸೋಫಿಯಾಳ ಗಂಡನ ಬಗೆಗಿನ ನಾನು ಹೇಳಲೇ ಇಲ್ಲ ಬೇಕಂತಲೇ!,ನಾಯಕ ನಾಯಕಿಯ ಮಧ್ಯೆ ಅದೊಂತರಾ ಸರಿ ಬರೋಲ್ಲ ;) ಎಷ್ಟೇ ಕಥೆ ಹೇಳಿದರೂ ಕೆಲವೊಂದು ವಿಚಾರಗಳು ಬಿಟ್ಟು ಹೋಗಿರುತ್ತದೆ, ಪೂರ್ತಿ ಕಥೆಯನ್ನು ನಾನೇ ಹೇಳಿದರೆ ಚಿತ್ರ ಇಷ್ಟೇನಾ ಅನ್ನಿಸಿಬಿಡಬಹುದು. ಇಲ್ಲಿ ಬರೆದದ್ದೆಲ್ಲಾ ಸಂಕಲನಕಾರ ನೋಡಿದರೆ ಬೈಯ್ಯುವ ಸಾಧ್ಯತೆ ಇಲ್ಲದಿಲ್ಲ, ನನಗೆ ನೆನಪಾದಂತೆಲ್ಲಾ ಬರೆದಿದ್ದೇನೆ, ಒಂದು ಆರ್ಡರ್ ಅಂತ ಇರುತ್ತಲ್ಲಾ ಅದು ಇಲ್ಲಿ ಮಿಸ್ಸಾಗಿ ಹೋಗಿದೆ!

ಕೆಲವು ಚಿತ್ರಗಳನ್ನು ನೋಡಿದಾಗ ಚಿತ್ರ ಎಷ್ಟು ಚನ್ನಾಗಿದೆ ಅನ್ನಿಸಿಬಿಡುತ್ತೆ, ಆದರೆ ಮನೋರಂಜನೆಗಾಗಿ ಥಿಯೇಟರಿಗೆ ಬರುವ ಪ್ರೆಕ್ಷಕನಿಗೆ ಅದೇ ನೋವು ಕಣ್ಣಿರು ಕರುಳಿನ ಕಥೆಗಳೆಲ್ಲಾ ದಿನನಿತ್ಯ ನೋಡಿ ಇಷ್ಟಾ ಅಗೋದೆ ಕಷ್ಟ, ಇಂತಹುದೇ ಕಾರಣಕ್ಕೆ ಸಿನಿಮಾ ಗೆದ್ದಿದ್ದೆ ಸೋತಿದೆ ಎಂದು ಪಟ್ಟಿಮಾಡೋದು ಅಸಾಧ್ಯದ ಕೆಲಸವೇ ಸರಿ.ಸಂಜಯ್ ಲೀಲಾ ಬನ್ಸಾಲಿ ಚಿತ್ರ ಅಂತಲೇ ಚಿತ್ರ ನೋಡೋಕೆ ಹೋದವರಿಗೆ ಚಿತ್ರ ಅದ್ಬುತವಾಗಿದೆ ಅನ್ನಿಸದೇ ಇರಲಾರದು. ಹಾಡುಗಳು ಕೇಳಲು ನೋಡಲು ಚನ್ನಾಗಿದೆ.
ನೋಡಿ ಅನಿಸಿಕೆ ಹೇಳ್ತೀರಾ ಅಲ್ವಾ?.

ಇನ್ನೇನು ಕೆಲವೇ ಘಂಟೆಗಳಲ್ಲಿ ಹೊಸ ವರ್ಷ ಆರಂಭವಾಗಿಬಿಡುತ್ತೆ.. ಹೊಸ ವರುಷ ಹೊಸ ಹರುಷ ತರಲಿ ಎಂದು ಹಾರೈಸುತ್ತೇನೆ,ಹೊಸ ವರುಷದ ಹಾರ್ದಿಕ ಶುಭಾಶಯಗಳು.

Tuesday, October 12, 2010

ನಂಬರ್ ಪೋರ್ಟೆಬಿಲಿಟಿ (ಸೇವೆ ಬದಲಾಯಿಸಿದರೂ ಮೊಬೈಲ್ ನಂಬರ್ ಬದಲಾಗೋಲ್ಲ)

ಜಂಗಮವಾಣಿ ಅಥವಾ ಸಂಚಾರಿ ದೂರವಾಣಿ ಅರ್ತಾಥ್ ಮೊಬೈಲ್ ಇಟ್ಟುಕೊಳ್ಳದವರು ಅತಿ ವಿರಳ, ಹೆಚ್ಚಿನ ಜನರ ಜೇಬಿನಲ್ಲಿ ಬೆಚ್ಚಗೆ ಕುಳಿತಿರುವ, ಸೊಂಟದ ಪಟ್ಟಿಯಲ್ಲಿ ಅಡಗಿರುವ, ಮಹಿಳಾಮಣಿಗಳ ತರಾವರಿ ಕೈ ಚೀಲಗಳಲ್ಲಿ, ಕತ್ತಿನಲ್ಲಿ ಕತ್ತಿನಹಾರವಾಗಿ, ಕೋಮಲ ಕೈಗಳ ನಡುವೆ ಹುದುಗಿರುವ ಈ ಪುಟಾಣಿ ಯಂತ್ರದಲ್ಲಿ ಏನಿದೆ ಏನಿಲ್ಲ, ಎಲ್ಲವೂ ಇದೆ, ಕಾಸಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಜಂಗಮವಾಣಿ ಇಲ್ಲದೇ ಜೀವನ ಸಾಗೋದೆ ಇಲ್ಲ.. ಮೊಬೈಲ್ ಇಲ್ಲದ ದಿನ ಅದೇನೋ ಕಳೆದುಕೊಂಡ ಅನುಭವ.


ಮೊಬೈಲ್ ಬಳಕೆದಾರರು ಆಸೆ ಕಣ್ಗಳಿಂದ ಕಾಯುತ್ತಿರುವುದು ನಂಬರ್ ಪೋರ್ಟೆಬಿಲಿಟಿ ಸೇವೆಗೋಸ್ಕರ,ಏನಿದು ನಂಬರ್ ಪೋರ್ಟೆಬಿಲಿಟಿ? ಈಗಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೇ ಮತ್ತೊಂದು ಕಂಪನಿಯ ಸೇವೆ ಪಡೆಯಬಹುದಾದ ಸೇವೆಯ ಹೆಸರು ಮೊಬೈಲ್ ನಂಬರ್ ಪೋರ್ಟೆಬಿಲಿಟಿ. ಈ ಸೇವೆಯೊಂದು ಚಾಲನೆಗೆ ಈ ತನಕ ಬಾರದೇ ಇದ್ದದ್ದು ಮೊಬೈಲ್ ಬಳಕೆದಾರರ ಪಾಲಿಗೆ ಬಿಸಿ ತುಪ್ಪವಾಗಿತ್ತು, ಈಗ ಬಳಸುತ್ತಿರುವ ಮೊಬೈಲ್ ಕಂಪನಿಯ ಸೇವೆಗಿಂತ ಉತ್ತಮ ಸೇವೆ ಇದ್ದರೂ ಸಹ ನಂಬರ್ ಬದಾಲಾಗುತ್ತದೆ ಎನ್ನುವ ಕಾರಣ ಮತ್ತೊಂದು ಕಂಪನಿಯ ಉತ್ತಮ ಸೇವೆ ಪಡೆಯಲು ಸಧ್ಯವಾಗುತ್ತಿರಲಿಲ್ಲ, ನಂಬರ್ ಪೋರ್ಟೆಬಿಲಿಟಿ ಎಂದರೆ ಸೇವಾಧಾತ ಬದಲಾದರೂ ಮೊಬೈಲ್ ನಂಬರು ಬದಾಲಗುವುದಿಲ್ಲ, ನಮ್ಮ ದೇಶದಲ್ಲಿ ಅಕ್ಟೋಬರ್ ೩೧ರ ನಂತರ ನಂಬರ್ ಪೋರ್ಟೆಬಿಲಿಟಿ ಅನುಷ್ಟಾನಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿದೆ, ಅದೇನಾದರು ನಿಜವಾದರೆ ನೀವು ಯಾವ ಕಂಪನಿಯ ಸೇವೆಯನ್ನು ಬೇಕಾದರೂ ಪಡೆದುಕೊಳ್ಳಬಹುದು ನಂಬರ್ ಬದಲಾಗುವುದಿಲ್ಲ. ಸೇವೆಯ ಬದಲಾವಣೆಯ ಗರಿಷ್ಟ ಶುಲ್ಕ ೧೯ ರೂಪಾಯಿ ಮೀರುವಂತಿಲ್ಲ. ಕಾದು ನೋಡಬೇಕಾಗಿದೆ



ಮೊಬೈಲ್ ಇದ್ದ ಮೇಲೆ ಮೊಬೈಲ್ ಹೊಟ್ಟೆಗೆ ಹಾಕಲೇ ಬೇಕಲ್ವಾ.. ದುಡ್ಡಿಲ್ಲದೆ ಹೋದರೆ ಮೊಬೈಲ್ ಇದ್ದೂ ಇಲ್ಲದಂತೆಯೇ ಸರಿ, ನಮಗೆ ಬೇಕಾದ ಸಂದರ್ಭಗಳಲ್ಲಿ ಕೈ ಕೊಡೋದೆ ಇದರ ಜಾಯಮಾನ, ಒಮ್ಮೊಮ್ಮೆ ಉಪಕಾರಕ್ಕಿಂತ ಉಪದ್ರ ಕೊಡೋಕೆ ಇದೆಯೇನೋ ಅನ್ನಿಸದೇ ಇರದು. ನೂರಕ್ಕೆ ತೊಂಬತ್ತು ಜನರಿಗೆ ಮೊಬೈಲ್ ಸೇವೆಯಿಂದ ಕಿರಿಕಿರಿ ಇದ್ದೆ ಇರುತ್ತೆ, ಗ್ರಾಹಕ ಸೇವಾಕೇಂದ್ರಕ್ಕೆ ವಾರಕ್ಕೆ ಒಮ್ಮೆಯಾದರೂ ದೂರು ನೀಡದೇ ಹೋದರೆ ಮೊಬೈಲ್ ಬಳಸಲು ಅಸಾದ್ಯ ಎನ್ನುವ ಪರಿಸ್ಥಿತಿಯಲ್ಲಿ ಮೊಬೈಲ್ ಕಂಪನಿಗಳ ಗ್ರಾಹಕ ಸೇವಾಕೇಂದ್ರಕ್ಕೆ ಮಾಡುವ ಕರೆಯಲ್ಲಿ ಸ್ವಯಂ ಚಾಲಿತ ದ್ವನಿ ಕೇಳಲು ಯಾವುದೇ ಶುಲ್ಕವಿಲ್ಲ, ಗ್ರಾಹಕ ಸೇವಾ ಕೇಂದ್ರದ ಪ್ರತಿನಿದಿಯೊಂದಿಗೆ ಮಾತನಾಡಲು ಶುಲ್ಕ ತೆರಬೇಕಾಗಿದೆ. ಕಳಪೆ ಸೇವೆಯ ಜೊತೆ ಮಾಹಿತಿ ಕೇಳೋಣವೆಂದರೆ ಅದಕ್ಕೂ ಶುಲ್ಕ ತೆತ್ತು, ಲೈನ್ ನಲ್ಲೇ ಇರಿ ಎಂದು ಎಂಟು ಹತ್ತು ನಿಮಿಷ ಕಾಯಿಸಿ ಸರಿಯಾದ ಮಾಹಿತಿ ಸಿಗದೇ ಹೋದರೆ ಏನು ಮಾಡೋದು?, ಇನ್ನು ಕೆಲವು ದಿಗ್ಗಜ ಮೊಬೈಲ್ ಕಂಪನಿಗಳು ಎಲ್ಲವೂ ತಮ್ಮ ಮುಷ್ಟಿಯಲ್ಲೇ ಇದೆ ಎಂದು ತಮಗೆ ಬೇಕಾದಂತೆ ಆಡುತ್ತಿವೆ, ದುಡ್ಡು ಕಡಿತವಾದ ಅಥವಾ ಇನ್ಯಾವುದೇ ದುಡ್ಡು ಕಳೆದುಕೊಂಡ ಮೂರು ದಿನದ ನಂತರ ದೂರು ನೀಡಿದರೆ ನಮ್ಮಲ್ಲಿ ಮೂರು ದಿನದ ಹಿಂದಿನ ಮಾಹಿತಿ ಲಭ್ಯವಿಲ್ಲ ಎನ್ನುವ ಉತ್ತರ ದೊರೆಯುತ್ತದೆ, ಜೊತೆಗೆ ದುಡ್ಡು ಕಳೆದುಕೊಂಡ ತಕ್ಷಣವೇ ಕರೆ ಮಾಡಿದಲ್ಲಿ ನಮ್ಮಲ್ಲಿ ಮಾಹಿತಿ ಇನ್ನೂ ಅಪ್ಡೇಟ್ ಆಗಿಲ್ಲ ೨೪ ಗಂಟೆಗಳ ನಂತರ ಸಂಪರ್ಕಿಸಿ ಎನ್ನುವ ಉತ್ತರ ಸಿಗೋದು ಗ್ಯಾರಂಟಿ.



ಟ್ರಾಯ್(ಟೆಲಿಕಾಂ ಅಥಾರಿಟಿ ಆಫ್ ಇಂಡಿಯಾ) ಹಿಡಿತದಲ್ಲಿದ್ದ ಮೊಬೈಲ್ ಕಂಪನಿಗಳ ಮೂಗುದಾರವನ್ನು ಸ್ವಲ್ಪ ಸಡಿಲಿಸಿಕೊಂಡಿವೆ, ಮೂಗುದಾರವನ್ನು ಎಳೆಯುವ ಕೆಲಸವನ್ನು ಟ್ರಾಯ್ ಮಾಡಬೇಕಾಗಿದೆ.

Monday, July 19, 2010

ಏನಿದು ಎಡೆ ಶೃಂಗಾರ?

     ನಾನು ಬ್ಲಾಗ್ ಮನೆಯ ಬಾಗಿಲು ತೆರೆಯದೇ ಅನೇಕ ತಿಂಗಳುಗಳೇ ಕಳೆದು ಹೋಗಿವೆ, ಮನೆಯ/ಮನದ ಅಂಗಳದೊಳಗೆ ಧೂಳು ಕಾಲಿಗೆ ಮೆತ್ತಿಕೊಂಡ ಅನುಭವ, ಸುತ್ತಲೂ ಜೇಡ ಬಲೆ ಹೆಣೆದ ಹಾಗೆ ಭ್ರಮೆಯೋ ವಾಸ್ತವವೋ ಗೊತ್ತಾಗುತ್ತಿಲ್ಲ!, ಈಗ ನಾನು ಮನೆ/ಮನದಂಗಳವನ್ನು ಚೊಕ್ಕವಾಗಿಸಿ, ದೂಳು ಜೇಡರ ಬಲೆಯನ್ನು ತೊಲಗಿಸಿ, ಹೊಸ ಹುಮ್ಮಸ್ಸಿನಿಂದ ನನ್ನ ಬ್ಲಾಗ್ ಮನೆಯ ಅಂಗಳಕ್ಕೆ ನಿಮ್ಮನ್ನು ಆಮಂತ್ರಿಸುತ್ತಿದ್ದೇನೆ, ಎಡೆ ಶೃಂಗಾರ ಎನ್ನುವುದರ ಬಗ್ಗೆ ಬರೆದಿದ್ದೇನೆ ಇಷ್ಟವಾಗಬಹುದು ಅನಿಸುತ್ತಿದೆ, ಓದಿ ನೋಡಿ

     ಎಡೆ ಶೃಂಗಾರ ಎನ್ನುವ ಪದ ಹಳ್ಳಿಗಳಲ್ಲಿ ಬಳಕೆಯಲ್ಲಿರುವುದು ಅದೂ ಅಲ್ಲದೆ ವಿಶೇಷವಾಗಿ ಕಾರ್ಯದ ಮನೆಯಲ್ಲಿ ಹೆಚ್ಚಿಗೆ ಬಳಕೆಯಲ್ಲಿರುವುದು ಅತ್ಯಂತ ಸಂತೋಷ ಕೊಡುವ ವಿಚಾರವಾಗಿದೆ. ಎಡೆ ಎಂದರೆ ಬಾಳೆ ಎನ್ನುವ ಅರ್ಥಕೊಡುತ್ತದೆ, ಶೃಂಗಾರ ಎಂದರೆ ಸಿಂಗರಿಸುವುದು, ಬಾಳೆ ಎಲೆಯನ್ನು ಸಿಹಿ ತಿನಿಸು ಹಾಗೂ ಪದಾರ್ಥಗಳಿಂದ ಶೃಂಗರಿಸುವುದನ್ನೇ ಎಡೆ ಶೃಂಗಾರ ಎನ್ನಬಹುದಾ? ,ಊಹೂಂ ಇಷ್ಟೇ ಹೇಳಿದರೆ ಇದೇನಿದು ಇಷ್ಟೇನಾ ಇದರಲ್ಲೇನು ವಿಶೇಷ ಅನ್ನಿಸಿಬಿಡುತ್ತದೆ, ಬಾಳೆ ಎಲೆಯಲ್ಲಿ ಉಪ್ಪು, ಉಪ್ಪಿನಕಾಯಿ ಹೀಗೆ ಒಂದೊಂದು ಪದಾರ್ಥಕ್ಕೂ ಒಂದೊಂದು ಜಾಗ ಮೀಸಲಾಗಿದೆ, (ಪದಾರ್ಥ ಎಂದರೆ ಅರ್ಥವಾಗದವರಿಗೆ ಅದೇ ಸೈಡ್ಸ್ ಕಣ್ರಿ ;)) ಅದು ಅಲ್ಲಲ್ಲಿ ಇದ್ದರೆ ಮಾತ್ರ ಎಡೆ ಶೃಂಗಾರ ಪೂರ್ಣಗೊಳ್ಳುತ್ತದೆ, ನೀವು ಬಾಳೆ ಎಲೆಯ ಮುಂದೆ ಕುಳಿತರೆ(ನಿಮ್ಮ ಮುಂದೆ ಬಾಳೆ ಎಲೆ ಇರುತ್ತದೆ!) ಬಾಳೆ ಎಲೆಯ ಮೇಲ್ತುದಿಯ ಎಡಭಾಗದಲ್ಲಿ ಮೊದಲು ಉಪ್ಪು, ಅದರ ಪಕ್ಕದಲ್ಲಿ ಉಪ್ಪಿನಕಾಯಿ, ಕೋಸಂಬರಿ, ಸಾಸಿವೆ(ಹಶಿ), ಪಲ್ಯ ಹೀಗೆ ಅಲಂಕಾರ ಮಾಡಲಾಗುತ್ತದೆ. ಚಿತ್ರಾನ್ನ ಬಾಳೆ ಎಲೆಯ ಕೆಳಗೆ ಎಡಭಾಗದಲ್ಲೇ ಹಾಕಬೇಕು ಅದರ ಮೇಲೆ ಇರುವ ಸ್ವಲ್ಪ ಖಾಲಿ ಜಾಗ ಕೇಸರಿ, ಜಿಲೀಬಿ ಮುಂತಾದ ಯಾವುದೇ ಸಿಹಿ ಪದಾರ್ಥ ಮಾಡಿದರೂ ಇದೇ ಜಾಗ ಖಾಯಂ, ಹಪ್ಪಳವನ್ನು ಚಿತ್ರಾನ್ನದ ಮೇಲೆ ಹಾಕುವುದು ವಾಡಿಕೆ, ಇನ್ನು ಪಾಯಸವನ್ನು ಮಾಡಿದ್ದರೆ ಅದಕ್ಕೆ ಈ ಜಾಗದಲ್ಲಿ ಸ್ಥಾನವಿಲ್ಲ, ಅದಕ್ಕೆ ಬಾಳೆ ಎಲೆಯ ಕೆಳ ಬಲಭಾಗದಲ್ಲಿ ತನ್ನ ಸ್ಥಾನವನ್ನು ಪಡೆದಿದೆ ಅದರ ಮೇಲ್ಭಾಗದಲ್ಲಿ ಪಂಚಕಜ್ಜಾಯ ತನ್ನ ಸ್ಥಾನವನ್ನು ಅಲಂಕರಿಸಿದೆ.


                                            (ಹೆಚ್ಚಿಗೆ ಚಿತ್ರಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ)

ನನಗೆ ಎಡೆ ಶೃಂಗಾರದ ಬಗ್ಗೆ ಬರೆಯುವ ವಿಚಾರ ಏಕೆ ಬಂತೆಂದರೆ ಸ್ವಲ್ಪ ದಿನದ ಹಿಂದೆ ಒಂದು ಕಾರ್ಯದ ಮನೆಗೆ ಹೋಗಿದ್ದೆ ಅಲ್ಲಿ ಎಡೆ ಶೃಂಗಾರ ಹಾಗು ಅಡಿಗೆ ಬಡಿಸಿದ ವಿಧಾನ ನೋಡಿ ಊಟ ಮುಗಿಸಿ ಎದ್ದರೆ ಸಾಕಪ್ಪಾ ಎನ್ನುವಷ್ಟರ ಮಟ್ಟಿಗೆ ಬೇಸರ ತರಿಸಿತು, ಬಡಿಸುವವರಿಗೆ ಎಲ್ಲೆಲ್ಲಿ ಯಾವ ಪದಾರ್ಥ ಹಾಕಬೇಕೆಂದು ಗೊತ್ತಿರಲಿಲ್ಲ, ಬರೀ ಅಷ್ಟೇ ಆಗಿದ್ದರೆ ಏನು ಆಗುತ್ತಿರಲ್ಲವೇನೋ.. ತಿನ್ನಲು ಸಮಯವೆಷ್ಟು ಕೊಡಬೇಕೆಂಬ ಅರಿವೆಯೇ ಇರದೇ ಒಂದಾದ ನಂತರ ಒಂದು ಪದಾರ್ಥ ತಂದು ಸುರಿಯುವುದನ್ನೇ ಬಡಿಸುವುದು ಎಂದುಕೊಂಡಿದ್ದರೇನೋ!, ಕಾರ್ಯದ ಮನೆಗಳಲ್ಲಿ ಅಡಿಗೆ ಮನೆ ಮೇಲ್ವಿಚಾರಣೆ ಮಾಡಲು ಮನೆಯ ಒಡೆಯನ ಹತ್ತಿರದ ಸಂಬಂದಿಕರಿಗೆ ವಹಿಸುವ ಪರಿಪಾಠ ಅನೇಕ ಕಡೆಗಳಲ್ಲಿದೆ, ಆ ಮೇಲ್ವಿಚಾರಣೆಗೆ ನೇಮಕವಾದ ವ್ಯಕ್ತಿಗೆ ಅನೇಕ ಜವಾಬ್ದಾರಿಗಳಿರುತ್ತವೆ, ಅನ್ನ ಎಷ್ಟು ಜನರಿಗೆ ತಯಾರಿಸಿದ್ದಾರೆ, ಎಷ್ಟು ಜನ ಬರುವ ನಿರೀಕ್ಷೆಯಿದೆ, ಏನೇನು ಅಡಿಗೆ ಭಟ್ಟರ ಬೇಡಿಕೆಗಳಿವೆಯೋ ಅವನ್ನೆಲ್ಲ(ಅಡಿಗೆ ಭಟ್ಟರು ಕೇಳಿದ್ದಕ್ಕಿಂತ ಸ್ವಲ್ಪ ಕಡಿಮೆ) ತಂದು ಕೊಡುವುದರಿಂದ ಹಿಡಿದು ಊಟ ಆರಂಭವಾದಗ ಯಾವ ಪದಾರ್ಥದ ನಂತರ ಏನು ಏನು ಬಡಿಸಲು ತೆಗೆದುಕೊಂಡು ಹೋಗಬೇಕೆಂದು ಹೇಳಬೇಕಾಗುತ್ತದೆ, ಅಂದರೆ ನಮ್ಮ ಮಲೆನಾಡಿನ ಹವ್ಯಕರ ಮನೆಗಳಲ್ಲಿ ಮೊದಲಿಗೆ ಅನ್ನ, ಸಾರು, ನಂತರ ಮತ್ತೆ ಅನ್ನ ಹುಳಿ (ಸಾಂಬಾರ) ಯನ್ನು ಬಡಿಸಿದ ನಂತರ ಹಪ್ಪಳ, ಸಂಡಿಗೆ, ಚಕ್ಕುಲಿ ಹೀಗೆ ಯಾವುದನ್ನು ಮಾಡಿರುತ್ತಾರೆ ಅದು ಬರಬೇಕು, ನಂತರ ಸಿಹಿ ತಿನಿಸುಗಳನ್ನು ಬಡಿಸುತ್ತಾರೆ, ಸಾಂಬಾರು(ಹುಳಿ) ಮುಗಿದು ಸಾಸಿವೆ ಬಂದ ಮೇಲೆ ಹಪ್ಪಳ ತಂದು ಹಾಕಿದರೆ ಅದು ಅಸಂಬದ್ಧವೆನಿಸುತ್ತದೆ, ಬಾಳೆಯಲ್ಲಿನ ಪದಾರ್ಥಗಳು ಖಾಲಿ ಆಗುತ್ತಾ ಬಂತೋ ಅಥವಾ ಇನ್ನೂ ಊಟ ಮಾಡುತ್ತಾ ಇದ್ದಾರೋ ನೋಡಿಕೊಂಡು ಬಡಿಸಬೇಕಾಗುತ್ತದೆ, ಅಂದರೆ ಸಾರು ಬಡಿಸಿದ ತಕ್ಷಣ, ಅದನ್ನು ತಿನ್ನಲೂ ಸಮಯ ಕೊಡದೆ ಮತ್ತೆ ಅನ್ನ ಸಾಂಬಾರು(ಹುಳಿ) ತಂದು ಸುರಿದರೆ ಊಟಕ್ಕೆ ಕುಳಿತವರ ಪಾಡೇನು?.

     ಇನ್ನು ಊಟ ಮಾಡುವಾಗ ಅನ್ನವನ್ನು ಎರೆಡು ಪಾಲುಗಳಾಗಿ ಮಾಡಿಕೊಂಡು ಬಲಭಾಗದ ಅನ್ನಕ್ಕೆ ಪದಾರ್ಥಗಳನ್ನು ಹಾಕಿಸಿಕೊಂಡು ಊಟ ಮಾಡುವ ಅಭ್ಯಾಸವೇ ಹವ್ಯಕರಲ್ಲಿ ಒಂದು ವಿಶೇಷವೇ ಸರಿ, ಒಂದು ಮದುವೆ ಮನೆಯಲ್ಲಿ ಬಡಿಸುವವರೊಬ್ಬರು ನಾನು ಪಾಲು ಮಾಡಿದ ಅನ್ನದ ಎಡಗಡೆಯ ಪಾಲಿಗೆ ಸಾಂಬಾರು ಸುರಿದಿದ್ದ, ನಾನು ಅವನನ್ನು ನೋಡಿ ನಕ್ಕಿದ್ದೆ, ಅವನಿಗೇನು ಅರ್ಥವಾಗಲಿಲ್ಲವೇನೋ! ನಾವು ಯಾವಾಗಲೂ ಬಲಗಡೆಯ ಅನ್ನದ ಪಾಲಿಗೆ ಪದಾರ್ಥಗಳನ್ನು ಹಾಕಿಸಿಕೊಂಡು ಊಟಮಾಡುತ್ತೇವೆ. ಕಾರಣ ಬಲಭಾಗದಲ್ಲಿರುವುದನ್ನು ಬಾಯಿಗೆ ಹಾಕಿಕೊಳ್ಳುವುದು ಬಲಗೈಗೆ ಸುಲಭ ಎನ್ನುವ ಕಾರಣವಾಗಿರಬಹುದು. ಹೀಗೆ ಹೇಳುತ್ತಾ ಹೋದರೆ ದೊಡ್ಡ ಪುರಾಣವಾದೀತು.



ಹೇಳುವುದು ತುಂಬಾ ಉಳಿದು ಹೋ.........ಗಿದೆ, ಬರೆದಿದ್ದು ಅತಿಯಾಗಿ ಹೋಯಿತಾ ಏನೂ... ತಿಳಿಯದಾಗಿದೆ, ನಿಮ್ಮ ಮನದ ದನಿಯು ಕೇಳದಾಗಿದೆ ನಿಮಗನ್ನಿಸಿದ್ದು  ಬರೆಯಬಾರದೇ? ತಿಳಿಸುತ್ತೀರಿ ಅಲ್ವಾ.. ಕಾಯುತ್ತಿದ್ದೇನೆ ನಿಮ್ಮ ಅನಿಸಿಕೆಗಾಗಿ.



ಕೊನೆಯ ಮಾತು: ಊಟದ ಸವಿಯನ್ನು ತಿಳಿಯಲು ಮಲೆನಾಡಿನ ಹಳ್ಳಿಗಳಿಗೆ ಬನ್ನಿ, ಪ್ರಕೃತಿಯ ಸೊಬಗನ್ನು ಕಣ್ದುಂಬಿಕೊಳ್ಳಿ, ಜೊತೆಗೆ ಅನೇಕ ಪ್ರವಾಸಿ ತಾಣಗಳನ್ನೂ ಸಹ ನೋಡಬಹುದಾಗಿದೆ. ಇದು ಕರ್ನಾಟಕ ಪ್ರವಾಸೋದ್ಯಮದ ಪರವಾಗಿ ನಿಮಗೆ ಕರೆಯೋಲೆ. ನಮ್ಮ ಪ್ರವಾಸೋದ್ಯಮ ಇಲಾಖೆ ಸರಿಯಾಗಿ ಕೆಲಸಮಾಡುತ್ತಿಲ್ಲ, ಪ್ರಚಾರ ಮಾಡುತ್ತಿಲ್ಲ ಎನ್ನುವ ದೂರುಗಳಿವೆ ಅದನ್ನು ಸುಳ್ಳಾಗಿಸೋಣ.

Monday, April 19, 2010

ಐಪಿಎಲ್ ಟ್ವೆಂಟಿ 20 ಆಟದ ಗುಣಮಟ್ಟದಲ್ಲಿ ಕುಸಿತವಾಗುತ್ತಿದೆಯೇ?

ಐಪಿಎಲ್ ಟ್ವೆಂಟಿ 20 ಚುಟುಕು ಕ್ರಿಕೆಟ್ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆಯಾ? ಹೀಗೊಂದು ಪ್ರಶ್ನೆ ಕಾಡುತ್ತಿದೆ, ಈ ವರ್ಷದ ಟ್ವೆಂಟಿ 20 ಕ್ರಿಕೆಟ್ ಸೀಸನ್ ನಲ್ಲಿ ಗಮನ ಸೆಳೆದಿದ್ದು ಕ್ಯಾಚುಗಳು, ಅತಿ ಕಷ್ಟಕರವಾದ ಹಿಡಿಯಲು ಅಸಾಧ್ಯವೆನಿಸುವಂತ ಕ್ಯಾಚುಗಳನ್ನು ಅತಿ ಸುಲಭವೇನೋ ಎಂಬಂತೆ ಚಂಡನ್ನು ಹಿಡಿದು ಸಂಭ್ರಮಿಸುವುದು ನೋಡಿದಾಗ ಅತ್ಯಂತ ಖುಷಿಯನ್ನು ನೀಡುತ್ತದೆ, ಆದರೆ ಈ ಬಾರಿಯ ಕಳಪೆ ಕ್ಷೇತ್ರ ರಕ್ಷಣೆ ಹಾಗೂ ಅತಿ ಸುಲಭದ ಕ್ಯಾಚುಗಳನ್ನು ಬಿಟ್ಟಿದ್ದು ಐಪಿಎಲ್ ನ ಗುಣಮಟ್ಟದಲ್ಲಿ ಕುಸಿತ ಕಂಡಿದೆಯೇನೋ ಎಂದು ಯೋಚಿಸುವಂತಾಗಿದೆ,




 ಅದರಲ್ಲಿಯೂ ಕ್ಯಾಚುಗಳನ್ನು ಬಿಟ್ಟವರು ಹೆಚ್ಚಿನವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ ಅನುಭವವಿರುವ ದಿಗ್ಗಜ ಆಟಗಾರರೆ ಆಗಿದ್ದು ಕಳಪೆ ಪ್ರದರ್ಶನ ನೀಡುತ್ತಿರುವುದು ಆತಂಕದ ವಿಚಾರ.

 ಒಂದು ಪಂದ್ಯದಲ್ಲಿ ಒಂದು ಅತ್ಯುತ್ತಮ ಕ್ಯಾಚಿನ ಜೊತೆ ಕಡಿಮೆಯೆಂದರೂ ಎರಡು ಕ್ಯಾಚನ್ನು ಬಿಡುವುದು ಸಮಾನ್ಯವಗಿದೆ, ಹಿಂದಿನಿಂದಲೂ ಕಾಮೆಂಟೇಟರುಗಳು ಚಂಡು ಆಗಸದೆತ್ತರಕ್ಕೆ ಚಿಮ್ಮಿ ಅದನ್ನು ಹಿಡಿಯಲು ಒಬ್ಬ ಆಟಗಾರ ಬಂದರೆ ಬ್ಯಾಟ್ಸ್ ಮನ್ ಔಟ್ ಎನ್ನುವ ವರದಿಬಿತ್ತರಿಸುವುದು ಅವರುಗಳಿಗೆ ಅಬ್ಯಾಸವಾಗಿತ್ತು, ಈಗ ಹಾಗೆ ಮಾಡಿದರೆ ಮತ್ತೆ ಔಟ್ ಆಗಿಲ್ಲ ಕ್ಯಾಚ್ ಬಿಟ್ಟಿದ್ದಾರೆ ಎಂದು ಹೇಳಬೇಕಾದ ಪರಿಸ್ಥಿತಿ ಬಂದೊದಗಿದೆ, ಇದರ ಜೊತೆಯಲ್ಲೇ ಬೌಲರ್ ಗಳು ಈ ಕ್ಯಾಚನ್ನಾದರೂ ಹಿಡಿಯಲಿ ಎಂದು ಕಾಯುವ ಪರಿಸ್ಥಿತಿ ಬಂದೊದಗಿದೆ, ಈಗಾಗಲೇ ಕೈಚೆಲ್ಲಿದ ಕ್ಯಾಚುಗಳ ಸಂಖ್ಯೆ ಬೆರಳೆಣಿಕೆ ಸಿಗದು, ಅದು ಎರಡಂಕಿ ದಾಟಿಹೋಗಿದೆ,

ಇದಕ್ಕೆಲ್ಲಾ ಕಾರಣಗಳು ಹೆಚ್ಚು ಹೆಚ್ಚು ಪಂದ್ಯಗಳನ್ನು ಆಯೋಜಿಸುವುದರಿಂದ ಆಟಗಾರರಿಗೆ ವಿಶ್ರಾಂತಿ ದೊರಕುತ್ತಿಲ್ಲ ಹಾಗೂ ಅನೇಕ ಗಾಯಾಳುಗಳನ್ನು ಹುಟ್ಟು ಹಾಕಿದ ಕೀರ್ತಿಯೂ ಸಹ ಐಪಿಎಲ್ ಗೆ ಸೇರುತ್ತದೆ. ಹಣದ ಹೊಳೆಯೇ ಐಪಿಎಲ್ ಗೆ ಹರಿದು ಬರುತ್ತಿರುವುದರಿಂದ ಹೆಚ್ಚು ಹೆಚ್ಚು ಪಂದ್ಯಾವಳಿಗಳನ್ನು ಆಯೋಜಿಸುವತ್ತ ಗಮನಕೊಡಲಾಗುತ್ತಿದೆಯೆ ಹೊರತು ಆಟಗಾರರ ಬಗ್ಗೆ ಅವರ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸದೇ ಇರುವುದು ದುರಂತವೇ ಸರಿ.

Friday, February 26, 2010

ಹೋಳಿ ಬಂತು ಹೋಳಿ

    ಭಾರತವು ಹಬ್ಬಗಳ ತವರೂರಾಗಿದೆ, ಪ್ರತಿ ವರ್ಷವೂ ಆಚರಿಸುವ ದೀಪಾವಳಿ, ಗಣೇಶ ಚತುರ್ಥಿಯಂತಹ ಭಕ್ತಿ ಹಬ್ಬದ ಜೊತೆಗೆ ಈ ಬಣ್ಣದ ಹಬ್ಬವಾದ ಹೋಳಿ ಹಬ್ಬವೂ ಒಂದು, ಇದು ಜನರಿಗೆ ಮನರಂಜನೆಯನ್ನೂ, ಪುನರುತ್ಸಾಹವನ್ನೂ ತುಂಬುವಲ್ಲಿ ಯಶಸ್ವಿಯಾಗಿದೆ.


ಹೋಳಿ ಬಂತೆಂದರೆ ಅದೇನೋ ಸಂಭ್ರಮ, ಸ್ನೇಹಿತರು, ಬಂಧು ವರ್ಗದವರೊಂದಿಗೆ ಸೇರಿಕೊಂಡು ಸಂತಸದಿಂದ ಕುಣಿದು ಒಬ್ಬರಿಂದೊಬ್ಬರಿಗೆ ಬಣ್ಣ ಹಚ್ಚಿಕೊಳ್ಳುವುದರ ಮೂಲಕ ಖುಷಿಯನ್ನು ಹಂಚಿಕೊಳ್ಳುವ ಹೋಳಿ ಯಾರಿಗೆ ತಾನೇ ಇಷ್ಟವಿಲ್ಲ? ಈ ರೀತಿಯ ವರ್ಣಮಯವಾದ ಹೋಳಿ ಹಬ್ಬಕ್ಕೆ ಪುರಾಣ ಕಥೆಯಿದೆ.

ಶಿವನ ಮೊದಲ ಪತ್ನಿಯಾದ ದಾಕ್ಷಾಯಿಣಿಯ ಸಾವಿನ ನಂತರ ಶಿವ ಸುದೀರ್ಘವಾದ ತಪಸ್ಸಿಗೆ ಕುಳಿತುಕೊಂಡಾಗ ಇತ್ತ ದಾಕ್ಷಾಯಿಣಿಯು ಪಾರ್ವತಿಯಾಗಿ ಹುಟ್ಟಿ ಶಿವನನ್ನು ವರಿಸಬೇಕೆಂದು ಆಶಿಸುತ್ತಾಳೆ, ಆದರೆ ಶಿವನಿಗೆ ಇದರ ಪರಿವೆಯೇ ಇರುವುದಿಲ್ಲ, ಆಗ ದೇವತೆಗಳು ಶಿವನ ತಪೋಭಂಗ ಮಾಡಬೇಕೆಂದು ಮನ್ಮಥನಿಗೆ ಹೇಳಿದಾಗ ಮನ್ಮಥನು ಮೋಹಕ ನೃತ್ಯ ಮಾಡಿ ಹೂ ಬಾಣವನ್ನು ಶಿವನ ಮೇಲೆ ಪ್ರಯೋಗಿಸಿದಾಗ ಶಿವನು ಕೋಪೋದ್ರಿಕ್ತನಾಗಿ ಮನ್ಮಥನನ್ನು ತನ್ನ ಮೂರನೆ ಕಣ್ಣನ್ನು ತೆರೆದು ಸುಟ್ಟು ಬಿಡುತ್ತಾನೆ. ನಂತರ ರತಿಯು ಶಿವನ ಬಳಿ "ತನ್ನ ಗಂಡನನ್ನು ಬದುಕಿಸು" ಎಂದು ಬೇಡಿಕೊಂಡಾಗ ಶಿವನು ಹೇಳುತ್ತಾನೆ " ನಿನಗೆ ನಿನ್ನ ಗಂಡನು ವರ್ಷದ ಒಂದು ದಿನ ನಿನಗೆ ಶರೀರವಾಗಿ ಸಿಗುತ್ತಾನೆ ಎಂದು ವರವನ್ನು ಕೊಡುತ್ತಾನೆ, ಆ ದಿನವನ್ನೆ ಹೋಳಿ ಹಬ್ಬದ ದಿನವಾಗಿ ಆಚರಿಸಲಾಗುತ್ತಿದೆ, ಹೋಳಿ ಹಬ್ಬದ ಹಿಂದಿನ ದಿನ ರಾತ್ರಿ ಕಾಮನ ಪ್ರತಿಕೃತಿಯನ್ನು ಮಾಡಿ ತಾವು ಮಾಡಿದ ತಪ್ಪೆಲ್ಲವೂ ಅದರ ಜೊತೆಯಲ್ಲಿ ಸುಟ್ಟು ಬೂದಿಯಾಗಲೆಂದು ದಹನ ಮಾಡುತ್ತಾರೆ.

ಹಳ್ಳಿಗಳಿಗಿಂತಲೂ ನಗರ ಪ್ರದೇಶಗಳಲ್ಲಿ ಹೋಳಿಯ ಆರ್ಭಟ ಹೆಚ್ಚುತ್ತಿದೆ, ಎಲ್ಲರೂ ಸೇರಿ ಖುಷಿಯಿಂದ ಬಣ್ಣ ಎರಚಿಕೊಳ್ಳುವ ಹಬ್ಬಕ್ಕೆ ಜಾತಕ ಪಕ್ಷಿಯಂತೆ ಕಾಯುವವರೂ ಇದ್ದಾರೆಂದರೆ ಆಶ್ಚರ್ಯವೇನಿಲ್ಲ.

ಹೋಳಿ ಬಂತೆಂದರೆ ಖುಷಿಯ ಜೊತೆಗೆ ಸ್ವಲ್ಪ ಬೇಸರ ತರಿಸುವ ಸಂಗತಿಗಳನ್ನು ಇಲ್ಲಿ ಬರೆಯದೇ ಇರಲು ಸಾಧ್ಯವಿಲ್ಲ ಗಲ್ಲಿ ಗಲ್ಲಿ, ಪ್ರತಿ ಕೇರಿಯವರು ಬೇರೆ ಬೇರೆ ಕಾಮನ ಪ್ರತಿಕೃತಿಯನ್ನು ಇಟ್ಟುಕೊಂಡು ವಾಹನ ಸವಾರರನ್ನು ಅಡ್ಡ ಗಟ್ಟಿ ಹಣ ಕೀಳುವ ದೃಶ್ಯ ಚಿಕ್ಕ ಪಟ್ಟಣ/ನಗರ ಗಳಲ್ಲಿ ನೋಡಲು ಸಿಗುತ್ತದೆ. ಕೆಲವು ಕಿಡಿಗೇಡಿಗಳು ಮಾಡುವ ಇಂತಹವುದರಿಂದ ಹೋಳಿಯ ಬಗ್ಗೆ ಕೆಲವರಿಗೆ ಬೇಸರವನ್ನು ತಂದಿದೆ.

ಹಿಂದಿನ ಕಾಲದಲ್ಲಾದರೆ ಮನೆಯಲ್ಲಿಯೇ ಬಣ್ಣಗಳನ್ನು ನೈಸರ್ಗಿಕವಾಗಿ ತಯಾರಿಸುತ್ತಿದ್ದರು, ಇದರಿಂದ ತ್ವಚೆಗೆ ಹಾನಿಯಾಗುತ್ತಿರಲಿಲ್ಲ, ಆದರೆ ಕಾಲ ಬದಲಾದಂತೆ ಬ್ರೋಮೈಡ್ ಮುಂತಾದ ರಾಸಾಯನಿಕಗಳಿಂದ ಬಣ್ಣ ತಯಾರಿಸುತ್ತಿರುವುದರಿಂದ ಅಲರ್ಜಿ, ಕಣ್ಣು ಶ್ವಾಸಕೋಶ ಮುಂತಾದವುಗಳಿಗೆ ಹಾನಿಯಾಗುತ್ತದೆ.ಆದ್ದರಿಂದ ಬಣ್ಣಗಳ ಹಬ್ಬ ಆಚರಿಸುವವರು ನಮ್ಮ ತ್ವಚೆಗೆ ಹಾನಿಯಾಗದಂತಹ ನೈಸರ್ಗಿಕ ಬಣ್ಣಗಳನ್ನೇ ಬಳಸಿ ಸುರಕ್ಷಿತ ಹಾಗೂ ಮೋಜಿನ ಹೋಳಿ ಆಚರಿಸಿ.

ನಿಮಗೆಲ್ಲರಿಗೂ ಹೋಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಮುಂಚಿತವಾಗಿ - ಚೈತ್ರಿಕಾ ಆದಿತ್ಯ

Posted by: Chaitrika Aditya

Friday, January 29, 2010

ಕೃಷಿಕರ ಸಂಕಷ್ಟಗಳು ಮತ್ತು ಯಾಂತ್ರೀಕೃತ ಕೃಷಿ

Special Note to google reader users: my full blog feeds are not available, sorry for the inconvenience, as i noticed miss use of my blog feeds, please visit my blog to read full article, thank you for ur support.

ಈಗ ನನ್ನ Relationship Status ಬದಲಾಗಿದೆ Half-Shirt(ಅರ್ಧಾಂಗಿ) ಬಂದಿದಾಳೆ, ಅಂದರೆ ನಾನು ವಿವಾಹಿತನಾಗಿದ್ದೀನಿ, ಒಂತರಾ ಹೊಸತನ ಇದೆ.. ಹೊಸ ಬಾಳ ಸಂಗಾತಿ, ಬದುಕು ಸುಂದರವಾಗಿದೆ ಅನಿಸ್ತಾ ಇದೆ, ಅದರ ಜೊತೆಗೆ ಮುಂಚಿನ ಹಾಗೆ ರಾತ್ರಿಯಿಡೀ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳೋಕೆ ಆಗಲ್ಲ!!.

     ಮದ್ವೆ ಆದ್ಮೇಲೆ ಬ್ಲಾಗ್ ನಲ್ಲಿ ಎಲ್ಲಿ ಬರಿತೀಯಾ ಅಂತ ಆತ್ಮೀಯ ಸ್ನೇಹಿತರು ಬಂಧುಗಳು ಸುಮ್ನೆ ತಮಾಷೆಗೆ ಹೇಳ್ತಾ ಇದ್ರು.. ಮದ್ವೆ ಆಯ್ತು ಅಂತ ಬ್ಲಾಗ್ ಬರೆಯೋದನ್ನು ಎಲ್ಲಾದರೂ ನಿಲ್ಲಿಸುವ ಅಂತ ಅಪರಾಧ ಮಾಡೋಕೆ ಸಾಧ್ಯವಾಗುತ್ತಾ ನನ್ನಿಂದ?, ಬ್ಲಾಗ್ ಲೋಕದಲ್ಲಿ ನನಗೆ ಸಿಕ್ಕ ಪ್ರೀತಿ ವರ್ಣನೆಗೆ ನಿಲುಕದ್ದು, ಅನೇಕ ಹೊಸ ಗೆಳೆಯರನ್ನು ಪರಿಚಯಿಸಿಕೊಟ್ಟಿದೆ, ಬ್ಲಾಗ್ ಇದೆ ಅಂತ ಸುಮ್ಮ ಸುಮ್ಮನೆ ಬಾಯಿಗೆ ಬಂದಿದ್ದು ಬರೆದರೆ ಅದಕ್ಕೆ ಬೆಲೆ ಇರೋಲ್ಲ ಅದೂ ಅಲ್ಲದೆ ನನ್ನ ಬ್ಲಾಗ್ ಹೆಸರು ಹಾಗೇ ಸುಮ್ಮನೆ... ಅಂತ, ನಾನು ನನ್ನ ಬ್ಲಾಗ್ ಓದುಗರಿಗೆ ಏನಾದ್ರೂ ಓದೋ ಅಂತದ್ದು ಬರೀಬೇಕು ಅನ್ಸೋ ತನಕ ನಾನು ಬರೆಯೋಕೆ ಹೋಗಲ್ಲ, ಈಗ ಬರೀಬೇಕು ಅನ್ನಿಸಿದ್ದು ನಿಮ್ಮ ಮುಂದೆ...



     ಮಲೆನಾಡಿನ ಅತಿ ಹೆಚ್ಚಿನ ಕೃಷಿಕರಿಗೆ ಅಡಿಕೆ ಬೆಳೆಯೇ ಅವರ ಜೀವನಾಧಾರವಾಗಿದೆ, ಜೀವನಾಡಿಯಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ, ಅಡಿಕೆಯೊಂದಿಗೆ ಅನೇಕ ಉಪ ಬೆಳೆಗಳನ್ನು ಬೆಳೆಯಬಹುದಾಗಿದ್ದು, ಬಾಳೆ( ಬಾಳೇ ಹಣ್ಣು), ಮೆಣಸು, ಕಾಫಿ, ಏಲಕ್ಕಿ, ಕೋಕೋ, ಸಾಮಾನ್ಯವಾಗಿ ಬೆಳೆಯಲಾಗುತ್ತದೆ, ಬಂಗಾರದ ಬೆಲೆ ಬಂತೆಂದು ಬೆಳೆದ ಬೆಳೆ ವೆನಿಲ್ಲಾ ಈಗ ತನ್ನ ಬೆಲೆ ಕಳೆದುಕೊಂಡಿದ್ದಲ್ಲದೆ ರೋಗ ಪೀಡಿತವಾಗಿ ಕ್ಯಾನ್ಸರ್ ನಂತೆ ಎಲ್ಲಾ ಬಳ್ಳಿಗಳಿಗೂ ಹರಡಿ ಸೊರಗಿ ಬಳ್ಳಿಗಳು ಸಾಯುತ್ತಿದೆ, ಹೀಗೆ ಇನ್ನೂ ಅನೇಕ ತರಹದ ಉಪ ಬೆಳೆಗಳನ್ನು ಅಡಿಕೆಯ ಜೊತೆ ಬೆಳೆಯಲಾಗುತ್ತದೆ, ಇವೆಲ್ಲವನ್ನು ಬೆಳೆದೂ ಯಾವುದರಲ್ಲಿಯೂ ನಿರೀಕ್ಷೆಯ ಮಟ್ಟದಲ್ಲಿ ಲಾಭ ಬಾರದಿದ್ದರೂ ಸಹ ಅಡಿಕೆಯಿಂದ ತೃಪ್ತಿದಾಯಕವಲ್ಲದಿದ್ದರೂ ಜೀವನ ಸಾಗಿಸಲು ಸಾಧ್ಯವಾಗುವಷ್ಟರ ಮಟ್ಟಿನ ಲಾಭಾಂಶ ಮಾತ್ರ ದೊರೆತೇ ದೊರೆಯುತ್ತದೆ ಎನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ.

     ಈಗಿನ ಕೃಷಿ ಕುಟುಂಬದ ಬಹುತೇಕ ಯುವ ಜನತೆ ಬೆಂಗಳೂರಿನಂತಹ ದೊಡ್ಡ ಪಟ್ಟಣಗಳಲ್ಲಿ ಉದ್ಯೋಗ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ, ಇವರಲ್ಲಿ ಹೆಚ್ಚಿನವರು ತೋಟಗಳಿಗೆ ಹಣ ವ್ಯಯಿಸುವ ಬದಲಾಗಿ ಅದೇ ಹಣವನ್ನು ಬ್ಯಾಂಕಿನಲ್ಲಿ ಇಟ್ಟರೆ ಬಡ್ಡಿ ಬರುತ್ತದೆ ಎನ್ನುವ ಆಲೋಚನೆ ಮಾಡುವವರೇ ಹೆಚ್ಚಾಗಿದ್ದಾರೆ, ಸಕಾಲಕ್ಕೆ ಸರಿಯಾಗಿ ತೋಟ ಗದ್ದೆಗಳಿಗೆ ಸರಿಯಾದ ಪ್ರಮಾಣದ ಪೋಶಕಾಂಶಗಳು, ಕೊಳೆ ಔಷದಗಳ ಸಿಂಪರಣೆ ಮಾಡಿಸದಿದ್ದಲ್ಲಿ ಬೆಳೆ ಸರಿಯಾಗಿ ಬಾರದೇ ನಷ್ಟವಾಗುವುದು ಖಚಿತ, ಹಣ ತೊಡಗಿಸಿದರೆ ಮಾತ್ರ ಉತ್ತಮ ಬೆಳೆ ತೆಗೆಯಲು ಸಾಧ್ಯ, ಕೃಷಿಯೇ ಜೀವನಾಧಾರವಾಗಿದ್ದವರು ಒಂದು ವರ್ಷದ ಆಧಾಯದಲ್ಲಿ ಸ್ವಲ್ಪ ಮಟ್ಟಿನ ಹಣವನ್ನು ಬ್ಯಾಂಕಿನಲ್ಲಿ ಬಡ್ಡಿಗಾಗಿ ತೊಡಗಿಸಿ ಉಳಿದ ಹಣವನ್ನು ಕೃಷಿಯಲ್ಲಿ ತೊಡಗಿಸುತ್ತಾರೆ, ಹಳ್ಳಿಗಳಲ್ಲಿರುವ ತಂದೆ ತಾಯಿ ಎಷ್ಟೇ ಕಷ್ಟ ಬಂದು ಕೃಷಿ ಮಾಡಲು ಸಾಧ್ಯವಾಗದಿದ್ದರೂ ಮಕ್ಕಳ ಹತ್ತಿರ ಖಂಡಿತ ಸ್ವಾಭಿಮಾನವನ್ನು ಬಿಟ್ಟು ದುಡ್ಡು ಕೇಳಲಾರರು ಎನ್ನುವುದು ನನ್ನ ಅನಿಸಿಕೆ, ರೋಗದ ಭಾದೆ ಇಲ್ಲವಾದರೆ(ಕಡಿಮೆಯಾದರೆ) ನಿರೀಕ್ಷಿತ ಲಾಭಾಂಶ ದೊರೆಯುತ್ತದೆ.



ಜೊತೆಗೆ ಅಡಿಕೆ, ಗದ್ದೆ ಕೃಷಿಯಲ್ಲಿನ ಸಂಕಷ್ಟಗಳಿಗೇನು ಕೊರತೆಯಿಲ್ಲ.

ಮಲೆನಾಡಿನ ಹೆಚ್ಚಿನ ಎಲ್ಲಾ ಭಾಗಗಳಲ್ಲೂ ಈಗ ಅಡಿಕೆ ಸುಗ್ಗಿ ( ಅಡಿಕೆ ಕೊಯ್ಲು) ಮುಕ್ತಾಯವಾಗಿದೆ, ಈ ಬಾರಿ ವರ್ಷದ ಎಲ್ಲಾ ತಿಂಗಳುಗಳಲ್ಲೂ ಮಳೆಯಾಗಿ ರೈತರಿಗೆ ತಲೆ ಬಿಸಿ ತಂದೊಡ್ಡಿತ್ತು, ಭತ್ತ ಹುಲ್ಲು ಮಳೆಯಲ್ಲಿ ನೆನೆದೆ ಭಾರೀ ನಷ್ಟವನ್ನುಂಟು ಮಾಡುತ್ತು, ಈ ಬಾರಿ ಅಡಿಕೆ ಮತ್ತು ಗದ್ದೆ ಕೊಯ್ಲು ಒಂದೇ ಸಮಯದಲ್ಲಿ ಕಟಾವಿಗೆ ಬಂದಿದ್ದರಿಂದ ಅಡಿಕೆ ಬೆಳೆಗಾರರು ವಿಪರೀತ ಸಂಕಷ್ಟಕ್ಕೆ ಒಳಗಾಬೇಕಾಯಿತು, ಕೆಲಸಗಾರರು ತಮ್ಮ ಗದ್ದೆ ಕೊಯ್ಲು ಮಾಡುವುದರಲ್ಲಿ ನಿರತರಾಗಿದ್ದರಿಂದ ಅಡಿಕೆ ಸುಲಿಯಲು ಜನರಿಲ್ಲದೇ ತೊಂದರೆ ಉಂಟಾಗಿತ್ತು, ಪ್ರತಿ ಬಾರಿಗಿಂತ ಈ ಬಾರಿಯ ಸುಗ್ಗಿ ತ್ರಾಸದಾಯಕವಾಗಿತ್ತು. ಮನೆಗೆ ಬಂದು ಅಡಿಕೆ ಸುಲಿಯುವವರು ಇಲ್ಲವಾಗಿದ್ದಾರೆ, ಅತಿ ಹೆಚ್ಚಿನ ಊರುಗಳಲ್ಲಿ ಅಡಿಕೆ ಸುಲಿಯುವವರ ಮನೆಯಂಗಳಕ್ಕೆ ಅಡಿಕೆಯನ್ನು ತೆಗೆದುಕೊಂಡು ಹೋಗಿ ಸುಲಿಸಿಕೊಂಡು ಅವರು ಹೇಳಿದಷ್ಟು ಬೆಲೆಯನ್ನು ತೆತ್ತು ಅಡಿಕೆ ಸುಲಿಸುವ ದುಃಸ್ತಿತಿ ಬಂದು ಒದಗಿದೆ. ಇದಕ್ಕೇನು ಪರಿಹಾರ??!



ಅನೇಕ ಮಾದರಿಯ ಅಡಿಕೆ ಸುಲಿಯುವ ಯಂತ್ರಗಳು ಮಾರುಕಟ್ಟೆಗೆ ಪ್ರವೇಶ ಮಾಡುತ್ತಿದ್ದು  60% ನಷ್ಟು ಸರಿಯಾಗಿ ಅಡಿಕೆ ಸುಲಿಯುವಲ್ಲಿ ಸಫಲವಾಗಿದೆ, ಅನೇಕ ಮನೆಯಂಗಳವನ್ನು ಅಡಿಕೆ ಸುಲಿಯುವ ಯಂತ್ರಗಳು ಅಲಂಕರಿಸಿದ್ದು ಆಗಿದೆ, ಆದರೆ ಅಡಿಕೆ ಸುಲಿಯುವ ಯಂತ್ರಗಳು ಅಡಿಕೆಯನ್ನು ಒಡೆಯದಂತೆ, ಗಾಯ ಮಾಡದೆ ಸುಲಿಯುವಲ್ಲಿ ವಿಫಲವಾಗಿವೆ, ಜನರು ಸುಲಿಯುವಾಗಲೂ ಸಹ ಅಡಿಕೆಗೆ ಸ್ವಲ್ಪ ಮಟ್ಟಿನ ಗಾಯ ಆಗುತ್ತದೆ ಎನ್ನುವುದನ್ನು ಗಮನಿಸಿದರೆ ಜನರು ಸುಲಿದಾಗ ಆಗುವ ನಷ್ಟ 2% ಇದ್ದರೆ ಮಶೀನ್ ನಲ್ಲಿ ಸುಲಿದಾಗ ಆಗುವ ನಷ್ಟ 5% ನದಾಗಿರುತ್ತದೆ. ಅಡಿಕೆ ಸುಲಿಯುವ ಯಂತ್ರದ ಸುಧಾರಣೆಗೆ ಇರುವ ಬಹುದೊಡ್ಡ ಕೊರತೆಯೆಂದರೆ ವರ್ಷದ ಮೂರು ತಿಂಗಳಲ್ಲಿ ಮಾತ್ರ ಹಸಿ ಅಡಿಕೆ ಸುಲಿಯಲು ಸಿಗುವುದರಿಂದ ಯಂತ್ರದಲ್ಲಿ ಯಾವುದೇ ಸುಧಾರಣೆ ಅಥವಾ ಬದಲಾವಣೆ, ಪರೀಕ್ಷೆ ಮಾಡಲು ಸಾಧ್ಯ, ನಂತರ ಮುಂದಿನ ಅಡಿಕೆ ಬೆಳೆ ಬರುವವರೆಗೆ ಕಾಯುವುದು ಅನಿವಾರ್ಯ. ಅದೂ ಅಲ್ಲದೆ ನಮ್ಮಂತ ಅಡಿಕೆ ಬೆಳೆಗಾರರಿಗೆ ಅಡಿಕೆ ಸುಲಿಯುವ ಯಂತ್ರ ನೋಡುವ ಅಥವಾ ಕೊಳ್ಳುವ ಹಂಬಲ ಹುಟ್ಟುವುದೇ ಸುಗ್ಗಿಯ(ಕೊಯ್ಲಿನ ಸಮಯ)ದಲ್ಲಿ, ನಂತರ ಮತ್ತೆ ಮುಂದಿನ ವರ್ಷಕ್ಕೆ ಈಗಲೇ ಕೊಳ್ಳುವುದೇಕೆ ಎನ್ನುವ ಪ್ರಶ್ನೆಯೊಂದು ತಲೆಯಲ್ಲಿ ಮಿಂಚಿ ಮುಂದೂಡುತ್ತಾ ಹೋಗುತ್ತಿದ್ದೇವೆ, ಯಾರೋ ಹೇಳಿದ ಮಾತುಗಳನ್ನೇ ಸತ್ಯವೆಂದು ನಂಬುವುದು ಮತ್ತೊಂದು ವಿಪರ್ಯಾಸ, ಅದನ್ನು ಮತ್ತೆ ಬಣ್ಣ ಬಣ್ಣದ ಕತೆ ಹಣೆದು ಹೇಳುವುದು ಹಲವರಿಗೆ ಒಲಿದು ಬಂದ ಕಲೆ! ಅಡಿಕೆಯನ್ನು ಹಾಳು ಮಾಡುತ್ತದೆಯಂತೆ, ಕಚ್ಚು ಬೀಳುತ್ತದೆಯಂತೆ, ಮೂಗು ಉಳಿಯುತ್ತದೆಯಂತೆ, ಅಡಿಕೆಯೊಂದಿಗೆ ಸಿಪ್ಪೆ ಬರುತ್ತದ್ದೆ, ಸಿಪ್ಪೆ ಬೇರೆ ಕಡೆ ಬಂದರೂ ಅಡಿಕೆಯೂ ಸಿಪ್ಪೆಯ ಜೊತೆ ಹೋಗುತ್ತದೆ, ನೂರು ಅಡಿಕೆಯ ಜೊತೆ ಒಂದು ಸಿಪ್ಪೆ ಅಥವಾ ಸಿಪ್ಪೆಯ ಜೊತೆ ಒಂದೆರೆಡು ಅಡಿಕೆ ಹೋದರೇನು ಆರಿಸಲು ಸಾಧ್ಯವಿಲ್ಲವಾ?, ಮನುಷ್ಯರು ಸುಲಿಯುವಾಗ ಸ್ಪಲ್ಪ ಗಟ್ಟಿ ಬಂದ ಅಥವಾ ಬಣ್ಣ ಚೂರು ಕೆಂಪಗಾಗಿದ್ದರೂ ಅಡಿಕೆಯನ್ನು ಗೋಟಿಗೆ ಎಸೆಯುವುದು ಮುಂಚಿನಿಂದಲೂ ಬಂದಿದೆ, ಆದರೆ ಯಂತ್ರ ತನ್ನೆಲ್ಲಾ ಶಕ್ತಿಯನ್ನು ಬಳಸಿ ಆದಷ್ಟು ಸಿಪ್ಪೆ ಬೇರ್ಪಡಿಸಲು ಪ್ರಯತ್ನ ನೆಡೆಸುತ್ತದೆ, ಸಾಧ್ಯವಾಗದಿದ್ದಲ್ಲಿ ಅರ್ದ ಸಿಪ್ಪೆಯನ್ನು ಬಿಡಿಸಿ ಹೊರ ಒಗೆಯುತ್ತದೆ ಇಂತಹ ಅಡಿಕೆ ಒಣಗಿಸಿದಾಗ ಬೇಗನೆ ಒಣಗಿ ಸಿಪ್ಪೆ ಬಿಟ್ಟುಕೊಳ್ಳುತ್ತದೆ.



ಅಡಿಕೆ ಅಥವಾ ಇನ್ಯಾವುದೇ ಕೃಷಿಯಲ್ಲಿ ತೊಡಗಿರುವವರು ಯಂತ್ರಗಳ ಮೇಲೆ ಅವಲಂಭಿತವಾಗುವುದು ಅನಿವಾರ್ಯವಾಗುತ್ತಿದೆ, ಒಂದರ್ಥದಲ್ಲಿ ಯಾಂತ್ರೀಕೃತ ಕೃಷಿಯಲ್ಲಿ ಒಲವು ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಸಹ ಎನ್ನಬಹುದಾಗಿದೆ, ಇದಕ್ಕೆ ಪೂರಕವೆಂಬಂತೆ ಅಡಿಕೆಗೆ ಕೊಳೆ ಓಷದಿಯನ್ನು ಸಿಂಪರೆಣೆ ಮಾಡಲು ಹಾಗೂ ಗದ್ದೆಗೆ ಕೀಟನಾಶಕ ಸಿಂಪರೆಣೆ ಬಳಸುವ Power Sprayer,


ಹಾಗೂ ಕಳೆ ಕೊಚ್ಚುವ(Brush Cutter)ಯಂತ್ರ

 ಮತ್ತು ಆಯ್ದ ಇನ್ನೂ ಹಲವು ಯಂತ್ರಗಳಿಗೆ ಕೃಷಿ ಇಲಾಖೆ ರಿಯಾಯಿತಿಯನ್ನು ನೀಡುತ್ತಿದೆ, ಇದರ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ, ಹತ್ತು ಸಾವಿರ ರೂಪಾಯಿ ಸಹಾಯ ಧನವನ್ನು ಕೊಡುತ್ತಿದ್ದರೂ ಸಹ ಇವೆಲ್ಲವೂ ಇವತ್ತಿನ ಕೃಷಿಕರ ಸ್ಥಿತಿಗೆ ಹೋಲಿಸಿ ನೋಡಿದರೆ ಅತೀ ದುಬಾರಿಯಾಗಿಯೇ ಉಳಿಯುತ್ತದೆ... ಉದಾಹರಣೆಗೆ Power Sprayer ನಿಂದ ಅನೇಕ ಕೆಲಸ ಮಾಡಿಕೊಳ್ಳಬಹುದು, ಬರೀ ಔಷದಿ ಸಿಂಪರಣೆಯೊಂದೇ ಅಲ್ಲದೇ ಕಾರ್ ತೊಳೆಯಲು.. ಬೈಕ್ ತೊಳೆಯಲು, ದನದ ಕೊಟ್ಟಿಗೆ ತೊಳೆಯಲು, ಸಿಮೆಂಟ್ ಅಂಗಳವನ್ನು ಸ್ವಚ್ಚಗೊಳಿಸಲು, ಜೊತೆಗೆ ಅಗತ್ಯ ಬಿದ್ದಾಗ ಇದನ್ನು ಪಂಪ್ ಸೆಟ್ ಆಗಿ ಸಹ ಬಳಸಿಕೊಳ್ಳಬಹುದು, ಅಂತೆಯೇ ಕಳೆ ಕೊಚ್ಚುವ ಯಂತ್ರದಲ್ಲಿ, ಭತ್ತದ ಕೊಯ್ಲು, ಕರಡ( ಒಣಗಿದ ಹುಲ್ಲು) ಕಡಿಯಲು, ಲಾನ್ ಕತ್ತರಿಸಲು, ಬೇರೆ ಬೇರೆ ಬ್ಲೇಡ್ ಗಳನ್ನು ಬಳಸಿ ಮರವನ್ನು ಸಹ ಕಡಿಯಲು ಬಳಸಬಹುದಾಗಿದೆ, ಯಂತ್ರದ ಬಳಕೆಯಿಂದ ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಕಳೆ ನಾಶ ಮಾಡಬಹುದು, ತೋಟ, ಮನೆಯ ಹತ್ತಿರ ಪ್ರದೇಶಗಳನ್ನು ಕಳೆ ಮುಕ್ತವಾಗಿಸಬಹುದು.

     ಗದ್ದೆ ಕೊಯ್ಲು ಮಾಡಲು ಈಗ ದೊಡ್ಡ ದೊಡ್ಡ ಯಂತ್ರಗಳೇ ಬಾಡಿಗೆ ಆದಾರದಲ್ಲಿ ಸಿಗುತ್ತಿವೆ ಭತ್ತದ ಕೊಯ್ಲು ಮಾಡಿ ಭತ್ತ ಬೇರ್ಪಡಿಸುತ್ತದೆ.. ಇದು ಸಾಂಪ್ರದಾಯಿಕವಾಗಿ ಅಂದರೆ ಆಳುಗಳ ಮೂಲಕ ಗದ್ದೆ ಕೊಯ್ಲು ಮಾಡಿಸಿದಾಗ ಒಂದು ಎಕರೆ ಗದ್ದೆ ಕಟಾವಿಗೆ ಸುಮಾರು ಮೂರರಿಂದ ನಾಲಕ್ಕು ಸಾವಿರ ರೂಪಾಯಿಗಳು ತಗಲುತ್ತದೆ, ಆದರೆ ಯಂತ್ರದ ಮೂಲಕವಾದರೆ ಕೇವಲ ಒಂದು ಸಾವಿರ ರೂಪಾಯಿಗಳು ಅದೂ ಅಲ್ಲದೆ ಭತ್ತ ಬೇರ್ಪಟ್ಟು ಚೀಲದಲ್ಲಿ ಸಂಗ್ರಹವಾಗಿ ದೊರೆಯುತ್ತದೆ.

     ಅಂದಹಾಗೆ ಕೃಷಿಗಾಗಿ ಸಾಲ ಮಾಡಿ ಬೈಕ್ ಕೊಳ್ಳುವ ಅಥವಾ ಅಗತ್ಯಕ್ಕಿಂತ ಹೆಚ್ಚಿಗೆ ಸಾಲ ಮಾಡಿ ಸಂಕಷ್ಟಕ್ಕೆ ಒಳಗಾಗುವ ರೈತ ಕುಟುಂಬಗಳು ಅನೇಕವುಗಳಿವೆ, ಕೃಷಿಗಾಗಿ ಸಾಲ ಮಾಡುತ್ತಿದ್ದರೆ ಕೃಷಿ ಸಾಮಾಗ್ರಿ/ರಸ ಗೊಬ್ಬರ/ ಮುಂತಾದವುಗಳಿಗೆ ತಗಲುವ ಅಂದಾಜು ವೆಚ್ಚವನ್ನು ಲೆಕ್ಕ ಮಾಡಿ ಸಾಲ ಮಾಡುವ ಪರಿಪಾಠ ಬೆಳೆಸಿಕೊಂಡಲ್ಲಿ ರೈತರ ಆತ್ಮ ಹತ್ಯೆ ಪ್ರಕರಣಗಳು ತಾನಾಗಿಯೇ ಕಡಿಮೆಯಾಗುತ್ತದೆ.

© Copyright Protected by www.adibedur.blogspot.com ®All Rights Reserved

Reproduction this blog posts in any manner electronic or otherwise, in whole or in part, is probhited.