ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, January 29, 2010

ಕೃಷಿಕರ ಸಂಕಷ್ಟಗಳು ಮತ್ತು ಯಾಂತ್ರೀಕೃತ ಕೃಷಿ

Special Note to google reader users: my full blog feeds are not available, sorry for the inconvenience, as i noticed miss use of my blog feeds, please visit my blog to read full article, thank you for ur support.

ಈಗ ನನ್ನ Relationship Status ಬದಲಾಗಿದೆ Half-Shirt(ಅರ್ಧಾಂಗಿ) ಬಂದಿದಾಳೆ, ಅಂದರೆ ನಾನು ವಿವಾಹಿತನಾಗಿದ್ದೀನಿ, ಒಂತರಾ ಹೊಸತನ ಇದೆ.. ಹೊಸ ಬಾಳ ಸಂಗಾತಿ, ಬದುಕು ಸುಂದರವಾಗಿದೆ ಅನಿಸ್ತಾ ಇದೆ, ಅದರ ಜೊತೆಗೆ ಮುಂಚಿನ ಹಾಗೆ ರಾತ್ರಿಯಿಡೀ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳೋಕೆ ಆಗಲ್ಲ!!.

     ಮದ್ವೆ ಆದ್ಮೇಲೆ ಬ್ಲಾಗ್ ನಲ್ಲಿ ಎಲ್ಲಿ ಬರಿತೀಯಾ ಅಂತ ಆತ್ಮೀಯ ಸ್ನೇಹಿತರು ಬಂಧುಗಳು ಸುಮ್ನೆ ತಮಾಷೆಗೆ ಹೇಳ್ತಾ ಇದ್ರು.. ಮದ್ವೆ ಆಯ್ತು ಅಂತ ಬ್ಲಾಗ್ ಬರೆಯೋದನ್ನು ಎಲ್ಲಾದರೂ ನಿಲ್ಲಿಸುವ ಅಂತ ಅಪರಾಧ ಮಾಡೋಕೆ ಸಾಧ್ಯವಾಗುತ್ತಾ ನನ್ನಿಂದ?, ಬ್ಲಾಗ್ ಲೋಕದಲ್ಲಿ ನನಗೆ ಸಿಕ್ಕ ಪ್ರೀತಿ ವರ್ಣನೆಗೆ ನಿಲುಕದ್ದು, ಅನೇಕ ಹೊಸ ಗೆಳೆಯರನ್ನು ಪರಿಚಯಿಸಿಕೊಟ್ಟಿದೆ, ಬ್ಲಾಗ್ ಇದೆ ಅಂತ ಸುಮ್ಮ ಸುಮ್ಮನೆ ಬಾಯಿಗೆ ಬಂದಿದ್ದು ಬರೆದರೆ ಅದಕ್ಕೆ ಬೆಲೆ ಇರೋಲ್ಲ ಅದೂ ಅಲ್ಲದೆ ನನ್ನ ಬ್ಲಾಗ್ ಹೆಸರು ಹಾಗೇ ಸುಮ್ಮನೆ... ಅಂತ, ನಾನು ನನ್ನ ಬ್ಲಾಗ್ ಓದುಗರಿಗೆ ಏನಾದ್ರೂ ಓದೋ ಅಂತದ್ದು ಬರೀಬೇಕು ಅನ್ಸೋ ತನಕ ನಾನು ಬರೆಯೋಕೆ ಹೋಗಲ್ಲ, ಈಗ ಬರೀಬೇಕು ಅನ್ನಿಸಿದ್ದು ನಿಮ್ಮ ಮುಂದೆ...



     ಮಲೆನಾಡಿನ ಅತಿ ಹೆಚ್ಚಿನ ಕೃಷಿಕರಿಗೆ ಅಡಿಕೆ ಬೆಳೆಯೇ ಅವರ ಜೀವನಾಧಾರವಾಗಿದೆ, ಜೀವನಾಡಿಯಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ, ಅಡಿಕೆಯೊಂದಿಗೆ ಅನೇಕ ಉಪ ಬೆಳೆಗಳನ್ನು ಬೆಳೆಯಬಹುದಾಗಿದ್ದು, ಬಾಳೆ( ಬಾಳೇ ಹಣ್ಣು), ಮೆಣಸು, ಕಾಫಿ, ಏಲಕ್ಕಿ, ಕೋಕೋ, ಸಾಮಾನ್ಯವಾಗಿ ಬೆಳೆಯಲಾಗುತ್ತದೆ, ಬಂಗಾರದ ಬೆಲೆ ಬಂತೆಂದು ಬೆಳೆದ ಬೆಳೆ ವೆನಿಲ್ಲಾ ಈಗ ತನ್ನ ಬೆಲೆ ಕಳೆದುಕೊಂಡಿದ್ದಲ್ಲದೆ ರೋಗ ಪೀಡಿತವಾಗಿ ಕ್ಯಾನ್ಸರ್ ನಂತೆ ಎಲ್ಲಾ ಬಳ್ಳಿಗಳಿಗೂ ಹರಡಿ ಸೊರಗಿ ಬಳ್ಳಿಗಳು ಸಾಯುತ್ತಿದೆ, ಹೀಗೆ ಇನ್ನೂ ಅನೇಕ ತರಹದ ಉಪ ಬೆಳೆಗಳನ್ನು ಅಡಿಕೆಯ ಜೊತೆ ಬೆಳೆಯಲಾಗುತ್ತದೆ, ಇವೆಲ್ಲವನ್ನು ಬೆಳೆದೂ ಯಾವುದರಲ್ಲಿಯೂ ನಿರೀಕ್ಷೆಯ ಮಟ್ಟದಲ್ಲಿ ಲಾಭ ಬಾರದಿದ್ದರೂ ಸಹ ಅಡಿಕೆಯಿಂದ ತೃಪ್ತಿದಾಯಕವಲ್ಲದಿದ್ದರೂ ಜೀವನ ಸಾಗಿಸಲು ಸಾಧ್ಯವಾಗುವಷ್ಟರ ಮಟ್ಟಿನ ಲಾಭಾಂಶ ಮಾತ್ರ ದೊರೆತೇ ದೊರೆಯುತ್ತದೆ ಎನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ.

     ಈಗಿನ ಕೃಷಿ ಕುಟುಂಬದ ಬಹುತೇಕ ಯುವ ಜನತೆ ಬೆಂಗಳೂರಿನಂತಹ ದೊಡ್ಡ ಪಟ್ಟಣಗಳಲ್ಲಿ ಉದ್ಯೋಗ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ, ಇವರಲ್ಲಿ ಹೆಚ್ಚಿನವರು ತೋಟಗಳಿಗೆ ಹಣ ವ್ಯಯಿಸುವ ಬದಲಾಗಿ ಅದೇ ಹಣವನ್ನು ಬ್ಯಾಂಕಿನಲ್ಲಿ ಇಟ್ಟರೆ ಬಡ್ಡಿ ಬರುತ್ತದೆ ಎನ್ನುವ ಆಲೋಚನೆ ಮಾಡುವವರೇ ಹೆಚ್ಚಾಗಿದ್ದಾರೆ, ಸಕಾಲಕ್ಕೆ ಸರಿಯಾಗಿ ತೋಟ ಗದ್ದೆಗಳಿಗೆ ಸರಿಯಾದ ಪ್ರಮಾಣದ ಪೋಶಕಾಂಶಗಳು, ಕೊಳೆ ಔಷದಗಳ ಸಿಂಪರಣೆ ಮಾಡಿಸದಿದ್ದಲ್ಲಿ ಬೆಳೆ ಸರಿಯಾಗಿ ಬಾರದೇ ನಷ್ಟವಾಗುವುದು ಖಚಿತ, ಹಣ ತೊಡಗಿಸಿದರೆ ಮಾತ್ರ ಉತ್ತಮ ಬೆಳೆ ತೆಗೆಯಲು ಸಾಧ್ಯ, ಕೃಷಿಯೇ ಜೀವನಾಧಾರವಾಗಿದ್ದವರು ಒಂದು ವರ್ಷದ ಆಧಾಯದಲ್ಲಿ ಸ್ವಲ್ಪ ಮಟ್ಟಿನ ಹಣವನ್ನು ಬ್ಯಾಂಕಿನಲ್ಲಿ ಬಡ್ಡಿಗಾಗಿ ತೊಡಗಿಸಿ ಉಳಿದ ಹಣವನ್ನು ಕೃಷಿಯಲ್ಲಿ ತೊಡಗಿಸುತ್ತಾರೆ, ಹಳ್ಳಿಗಳಲ್ಲಿರುವ ತಂದೆ ತಾಯಿ ಎಷ್ಟೇ ಕಷ್ಟ ಬಂದು ಕೃಷಿ ಮಾಡಲು ಸಾಧ್ಯವಾಗದಿದ್ದರೂ ಮಕ್ಕಳ ಹತ್ತಿರ ಖಂಡಿತ ಸ್ವಾಭಿಮಾನವನ್ನು ಬಿಟ್ಟು ದುಡ್ಡು ಕೇಳಲಾರರು ಎನ್ನುವುದು ನನ್ನ ಅನಿಸಿಕೆ, ರೋಗದ ಭಾದೆ ಇಲ್ಲವಾದರೆ(ಕಡಿಮೆಯಾದರೆ) ನಿರೀಕ್ಷಿತ ಲಾಭಾಂಶ ದೊರೆಯುತ್ತದೆ.



ಜೊತೆಗೆ ಅಡಿಕೆ, ಗದ್ದೆ ಕೃಷಿಯಲ್ಲಿನ ಸಂಕಷ್ಟಗಳಿಗೇನು ಕೊರತೆಯಿಲ್ಲ.

ಮಲೆನಾಡಿನ ಹೆಚ್ಚಿನ ಎಲ್ಲಾ ಭಾಗಗಳಲ್ಲೂ ಈಗ ಅಡಿಕೆ ಸುಗ್ಗಿ ( ಅಡಿಕೆ ಕೊಯ್ಲು) ಮುಕ್ತಾಯವಾಗಿದೆ, ಈ ಬಾರಿ ವರ್ಷದ ಎಲ್ಲಾ ತಿಂಗಳುಗಳಲ್ಲೂ ಮಳೆಯಾಗಿ ರೈತರಿಗೆ ತಲೆ ಬಿಸಿ ತಂದೊಡ್ಡಿತ್ತು, ಭತ್ತ ಹುಲ್ಲು ಮಳೆಯಲ್ಲಿ ನೆನೆದೆ ಭಾರೀ ನಷ್ಟವನ್ನುಂಟು ಮಾಡುತ್ತು, ಈ ಬಾರಿ ಅಡಿಕೆ ಮತ್ತು ಗದ್ದೆ ಕೊಯ್ಲು ಒಂದೇ ಸಮಯದಲ್ಲಿ ಕಟಾವಿಗೆ ಬಂದಿದ್ದರಿಂದ ಅಡಿಕೆ ಬೆಳೆಗಾರರು ವಿಪರೀತ ಸಂಕಷ್ಟಕ್ಕೆ ಒಳಗಾಬೇಕಾಯಿತು, ಕೆಲಸಗಾರರು ತಮ್ಮ ಗದ್ದೆ ಕೊಯ್ಲು ಮಾಡುವುದರಲ್ಲಿ ನಿರತರಾಗಿದ್ದರಿಂದ ಅಡಿಕೆ ಸುಲಿಯಲು ಜನರಿಲ್ಲದೇ ತೊಂದರೆ ಉಂಟಾಗಿತ್ತು, ಪ್ರತಿ ಬಾರಿಗಿಂತ ಈ ಬಾರಿಯ ಸುಗ್ಗಿ ತ್ರಾಸದಾಯಕವಾಗಿತ್ತು. ಮನೆಗೆ ಬಂದು ಅಡಿಕೆ ಸುಲಿಯುವವರು ಇಲ್ಲವಾಗಿದ್ದಾರೆ, ಅತಿ ಹೆಚ್ಚಿನ ಊರುಗಳಲ್ಲಿ ಅಡಿಕೆ ಸುಲಿಯುವವರ ಮನೆಯಂಗಳಕ್ಕೆ ಅಡಿಕೆಯನ್ನು ತೆಗೆದುಕೊಂಡು ಹೋಗಿ ಸುಲಿಸಿಕೊಂಡು ಅವರು ಹೇಳಿದಷ್ಟು ಬೆಲೆಯನ್ನು ತೆತ್ತು ಅಡಿಕೆ ಸುಲಿಸುವ ದುಃಸ್ತಿತಿ ಬಂದು ಒದಗಿದೆ. ಇದಕ್ಕೇನು ಪರಿಹಾರ??!



ಅನೇಕ ಮಾದರಿಯ ಅಡಿಕೆ ಸುಲಿಯುವ ಯಂತ್ರಗಳು ಮಾರುಕಟ್ಟೆಗೆ ಪ್ರವೇಶ ಮಾಡುತ್ತಿದ್ದು  60% ನಷ್ಟು ಸರಿಯಾಗಿ ಅಡಿಕೆ ಸುಲಿಯುವಲ್ಲಿ ಸಫಲವಾಗಿದೆ, ಅನೇಕ ಮನೆಯಂಗಳವನ್ನು ಅಡಿಕೆ ಸುಲಿಯುವ ಯಂತ್ರಗಳು ಅಲಂಕರಿಸಿದ್ದು ಆಗಿದೆ, ಆದರೆ ಅಡಿಕೆ ಸುಲಿಯುವ ಯಂತ್ರಗಳು ಅಡಿಕೆಯನ್ನು ಒಡೆಯದಂತೆ, ಗಾಯ ಮಾಡದೆ ಸುಲಿಯುವಲ್ಲಿ ವಿಫಲವಾಗಿವೆ, ಜನರು ಸುಲಿಯುವಾಗಲೂ ಸಹ ಅಡಿಕೆಗೆ ಸ್ವಲ್ಪ ಮಟ್ಟಿನ ಗಾಯ ಆಗುತ್ತದೆ ಎನ್ನುವುದನ್ನು ಗಮನಿಸಿದರೆ ಜನರು ಸುಲಿದಾಗ ಆಗುವ ನಷ್ಟ 2% ಇದ್ದರೆ ಮಶೀನ್ ನಲ್ಲಿ ಸುಲಿದಾಗ ಆಗುವ ನಷ್ಟ 5% ನದಾಗಿರುತ್ತದೆ. ಅಡಿಕೆ ಸುಲಿಯುವ ಯಂತ್ರದ ಸುಧಾರಣೆಗೆ ಇರುವ ಬಹುದೊಡ್ಡ ಕೊರತೆಯೆಂದರೆ ವರ್ಷದ ಮೂರು ತಿಂಗಳಲ್ಲಿ ಮಾತ್ರ ಹಸಿ ಅಡಿಕೆ ಸುಲಿಯಲು ಸಿಗುವುದರಿಂದ ಯಂತ್ರದಲ್ಲಿ ಯಾವುದೇ ಸುಧಾರಣೆ ಅಥವಾ ಬದಲಾವಣೆ, ಪರೀಕ್ಷೆ ಮಾಡಲು ಸಾಧ್ಯ, ನಂತರ ಮುಂದಿನ ಅಡಿಕೆ ಬೆಳೆ ಬರುವವರೆಗೆ ಕಾಯುವುದು ಅನಿವಾರ್ಯ. ಅದೂ ಅಲ್ಲದೆ ನಮ್ಮಂತ ಅಡಿಕೆ ಬೆಳೆಗಾರರಿಗೆ ಅಡಿಕೆ ಸುಲಿಯುವ ಯಂತ್ರ ನೋಡುವ ಅಥವಾ ಕೊಳ್ಳುವ ಹಂಬಲ ಹುಟ್ಟುವುದೇ ಸುಗ್ಗಿಯ(ಕೊಯ್ಲಿನ ಸಮಯ)ದಲ್ಲಿ, ನಂತರ ಮತ್ತೆ ಮುಂದಿನ ವರ್ಷಕ್ಕೆ ಈಗಲೇ ಕೊಳ್ಳುವುದೇಕೆ ಎನ್ನುವ ಪ್ರಶ್ನೆಯೊಂದು ತಲೆಯಲ್ಲಿ ಮಿಂಚಿ ಮುಂದೂಡುತ್ತಾ ಹೋಗುತ್ತಿದ್ದೇವೆ, ಯಾರೋ ಹೇಳಿದ ಮಾತುಗಳನ್ನೇ ಸತ್ಯವೆಂದು ನಂಬುವುದು ಮತ್ತೊಂದು ವಿಪರ್ಯಾಸ, ಅದನ್ನು ಮತ್ತೆ ಬಣ್ಣ ಬಣ್ಣದ ಕತೆ ಹಣೆದು ಹೇಳುವುದು ಹಲವರಿಗೆ ಒಲಿದು ಬಂದ ಕಲೆ! ಅಡಿಕೆಯನ್ನು ಹಾಳು ಮಾಡುತ್ತದೆಯಂತೆ, ಕಚ್ಚು ಬೀಳುತ್ತದೆಯಂತೆ, ಮೂಗು ಉಳಿಯುತ್ತದೆಯಂತೆ, ಅಡಿಕೆಯೊಂದಿಗೆ ಸಿಪ್ಪೆ ಬರುತ್ತದ್ದೆ, ಸಿಪ್ಪೆ ಬೇರೆ ಕಡೆ ಬಂದರೂ ಅಡಿಕೆಯೂ ಸಿಪ್ಪೆಯ ಜೊತೆ ಹೋಗುತ್ತದೆ, ನೂರು ಅಡಿಕೆಯ ಜೊತೆ ಒಂದು ಸಿಪ್ಪೆ ಅಥವಾ ಸಿಪ್ಪೆಯ ಜೊತೆ ಒಂದೆರೆಡು ಅಡಿಕೆ ಹೋದರೇನು ಆರಿಸಲು ಸಾಧ್ಯವಿಲ್ಲವಾ?, ಮನುಷ್ಯರು ಸುಲಿಯುವಾಗ ಸ್ಪಲ್ಪ ಗಟ್ಟಿ ಬಂದ ಅಥವಾ ಬಣ್ಣ ಚೂರು ಕೆಂಪಗಾಗಿದ್ದರೂ ಅಡಿಕೆಯನ್ನು ಗೋಟಿಗೆ ಎಸೆಯುವುದು ಮುಂಚಿನಿಂದಲೂ ಬಂದಿದೆ, ಆದರೆ ಯಂತ್ರ ತನ್ನೆಲ್ಲಾ ಶಕ್ತಿಯನ್ನು ಬಳಸಿ ಆದಷ್ಟು ಸಿಪ್ಪೆ ಬೇರ್ಪಡಿಸಲು ಪ್ರಯತ್ನ ನೆಡೆಸುತ್ತದೆ, ಸಾಧ್ಯವಾಗದಿದ್ದಲ್ಲಿ ಅರ್ದ ಸಿಪ್ಪೆಯನ್ನು ಬಿಡಿಸಿ ಹೊರ ಒಗೆಯುತ್ತದೆ ಇಂತಹ ಅಡಿಕೆ ಒಣಗಿಸಿದಾಗ ಬೇಗನೆ ಒಣಗಿ ಸಿಪ್ಪೆ ಬಿಟ್ಟುಕೊಳ್ಳುತ್ತದೆ.



ಅಡಿಕೆ ಅಥವಾ ಇನ್ಯಾವುದೇ ಕೃಷಿಯಲ್ಲಿ ತೊಡಗಿರುವವರು ಯಂತ್ರಗಳ ಮೇಲೆ ಅವಲಂಭಿತವಾಗುವುದು ಅನಿವಾರ್ಯವಾಗುತ್ತಿದೆ, ಒಂದರ್ಥದಲ್ಲಿ ಯಾಂತ್ರೀಕೃತ ಕೃಷಿಯಲ್ಲಿ ಒಲವು ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಸಹ ಎನ್ನಬಹುದಾಗಿದೆ, ಇದಕ್ಕೆ ಪೂರಕವೆಂಬಂತೆ ಅಡಿಕೆಗೆ ಕೊಳೆ ಓಷದಿಯನ್ನು ಸಿಂಪರೆಣೆ ಮಾಡಲು ಹಾಗೂ ಗದ್ದೆಗೆ ಕೀಟನಾಶಕ ಸಿಂಪರೆಣೆ ಬಳಸುವ Power Sprayer,


ಹಾಗೂ ಕಳೆ ಕೊಚ್ಚುವ(Brush Cutter)ಯಂತ್ರ

 ಮತ್ತು ಆಯ್ದ ಇನ್ನೂ ಹಲವು ಯಂತ್ರಗಳಿಗೆ ಕೃಷಿ ಇಲಾಖೆ ರಿಯಾಯಿತಿಯನ್ನು ನೀಡುತ್ತಿದೆ, ಇದರ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ, ಹತ್ತು ಸಾವಿರ ರೂಪಾಯಿ ಸಹಾಯ ಧನವನ್ನು ಕೊಡುತ್ತಿದ್ದರೂ ಸಹ ಇವೆಲ್ಲವೂ ಇವತ್ತಿನ ಕೃಷಿಕರ ಸ್ಥಿತಿಗೆ ಹೋಲಿಸಿ ನೋಡಿದರೆ ಅತೀ ದುಬಾರಿಯಾಗಿಯೇ ಉಳಿಯುತ್ತದೆ... ಉದಾಹರಣೆಗೆ Power Sprayer ನಿಂದ ಅನೇಕ ಕೆಲಸ ಮಾಡಿಕೊಳ್ಳಬಹುದು, ಬರೀ ಔಷದಿ ಸಿಂಪರಣೆಯೊಂದೇ ಅಲ್ಲದೇ ಕಾರ್ ತೊಳೆಯಲು.. ಬೈಕ್ ತೊಳೆಯಲು, ದನದ ಕೊಟ್ಟಿಗೆ ತೊಳೆಯಲು, ಸಿಮೆಂಟ್ ಅಂಗಳವನ್ನು ಸ್ವಚ್ಚಗೊಳಿಸಲು, ಜೊತೆಗೆ ಅಗತ್ಯ ಬಿದ್ದಾಗ ಇದನ್ನು ಪಂಪ್ ಸೆಟ್ ಆಗಿ ಸಹ ಬಳಸಿಕೊಳ್ಳಬಹುದು, ಅಂತೆಯೇ ಕಳೆ ಕೊಚ್ಚುವ ಯಂತ್ರದಲ್ಲಿ, ಭತ್ತದ ಕೊಯ್ಲು, ಕರಡ( ಒಣಗಿದ ಹುಲ್ಲು) ಕಡಿಯಲು, ಲಾನ್ ಕತ್ತರಿಸಲು, ಬೇರೆ ಬೇರೆ ಬ್ಲೇಡ್ ಗಳನ್ನು ಬಳಸಿ ಮರವನ್ನು ಸಹ ಕಡಿಯಲು ಬಳಸಬಹುದಾಗಿದೆ, ಯಂತ್ರದ ಬಳಕೆಯಿಂದ ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಕಳೆ ನಾಶ ಮಾಡಬಹುದು, ತೋಟ, ಮನೆಯ ಹತ್ತಿರ ಪ್ರದೇಶಗಳನ್ನು ಕಳೆ ಮುಕ್ತವಾಗಿಸಬಹುದು.

     ಗದ್ದೆ ಕೊಯ್ಲು ಮಾಡಲು ಈಗ ದೊಡ್ಡ ದೊಡ್ಡ ಯಂತ್ರಗಳೇ ಬಾಡಿಗೆ ಆದಾರದಲ್ಲಿ ಸಿಗುತ್ತಿವೆ ಭತ್ತದ ಕೊಯ್ಲು ಮಾಡಿ ಭತ್ತ ಬೇರ್ಪಡಿಸುತ್ತದೆ.. ಇದು ಸಾಂಪ್ರದಾಯಿಕವಾಗಿ ಅಂದರೆ ಆಳುಗಳ ಮೂಲಕ ಗದ್ದೆ ಕೊಯ್ಲು ಮಾಡಿಸಿದಾಗ ಒಂದು ಎಕರೆ ಗದ್ದೆ ಕಟಾವಿಗೆ ಸುಮಾರು ಮೂರರಿಂದ ನಾಲಕ್ಕು ಸಾವಿರ ರೂಪಾಯಿಗಳು ತಗಲುತ್ತದೆ, ಆದರೆ ಯಂತ್ರದ ಮೂಲಕವಾದರೆ ಕೇವಲ ಒಂದು ಸಾವಿರ ರೂಪಾಯಿಗಳು ಅದೂ ಅಲ್ಲದೆ ಭತ್ತ ಬೇರ್ಪಟ್ಟು ಚೀಲದಲ್ಲಿ ಸಂಗ್ರಹವಾಗಿ ದೊರೆಯುತ್ತದೆ.

     ಅಂದಹಾಗೆ ಕೃಷಿಗಾಗಿ ಸಾಲ ಮಾಡಿ ಬೈಕ್ ಕೊಳ್ಳುವ ಅಥವಾ ಅಗತ್ಯಕ್ಕಿಂತ ಹೆಚ್ಚಿಗೆ ಸಾಲ ಮಾಡಿ ಸಂಕಷ್ಟಕ್ಕೆ ಒಳಗಾಗುವ ರೈತ ಕುಟುಂಬಗಳು ಅನೇಕವುಗಳಿವೆ, ಕೃಷಿಗಾಗಿ ಸಾಲ ಮಾಡುತ್ತಿದ್ದರೆ ಕೃಷಿ ಸಾಮಾಗ್ರಿ/ರಸ ಗೊಬ್ಬರ/ ಮುಂತಾದವುಗಳಿಗೆ ತಗಲುವ ಅಂದಾಜು ವೆಚ್ಚವನ್ನು ಲೆಕ್ಕ ಮಾಡಿ ಸಾಲ ಮಾಡುವ ಪರಿಪಾಠ ಬೆಳೆಸಿಕೊಂಡಲ್ಲಿ ರೈತರ ಆತ್ಮ ಹತ್ಯೆ ಪ್ರಕರಣಗಳು ತಾನಾಗಿಯೇ ಕಡಿಮೆಯಾಗುತ್ತದೆ.

© Copyright Protected by www.adibedur.blogspot.com ®All Rights Reserved

Reproduction this blog posts in any manner electronic or otherwise, in whole or in part, is probhited.

Tuesday, December 29, 2009

ಹೊಸ ವರ್ಷದ ಹೊಸ ಸಂಭ್ರಮದಲ್ಲಿ

ಮೂಡುತಿರಲಿ ಆಶಾಕಿರಣ, ಇರುಳ ಹಿಂದೆ ಬೆಳಕಿದೆ.

ಹೂವಿನ ಹಾದಿಯಂತ ಹೊಸ ವರುಷದಲ್ಲಿ ಮೃದುವಾದ ಹೆಜ್ಜೆಯನ್ನಿಡುತ್ತಾ ಸಂಭ್ರಮ ಶುಭಾಶಯಗಳೊಂದಿಗೆ ಹೊಸ ವರುಷವನ್ನು ಸ್ವಾಗತಿಸೋಣ.ಇನ್ನೇನು ನೋಡು ನೋಡುತ್ತಿದ್ದಂತೆ ಹೊಸ ವರ್ಷ ಬಂದೇ ಬಿಡುತ್ತದೆ,ಆದರೆ ಹಿಂದಿನ ವರುಷದ ಗುಂಗಿನಲ್ಲೇ ಇದ್ದ ನಾವು ಹೊಸ ವರ್ಷದ ಮಧುರ ಕ್ಷಣಗಳನ್ನು ಸವಿಯಲು ಸಿದ್ಧರಾಗೋಣ.

     ದಿನಗಳು ಉರುಳುತ್ತಿವೆ, ಹೊಸ ವರುಷ ಬಂದು ಹೋಗುತ್ತಲೇ ಇವೆ, ಆದರೆ ನಾವು ಇಷ್ಟು ವರ್ಷಗಳಲ್ಲಿ ಸಾದಿಸಿದ್ದೇನೆಂದು ಒಂದು ನಿಮಿಷ ಕುಳಿತು ಆಲೋಚಿಸೋಣ, ಏಕೆಂದರೆ ಈಗಿನ ಯುವ ಜನತೆ ಹೊಸ ವರ್ಷದ ಹೆಸರಿನಲ್ಲಿ ವರ್ಷದ ಕೊನೆಯ ದಿನದಂದು ಮೋಜು ಮಸ್ತಿಯಲ್ಲೆ ದಿನ ಕಳೆಯುತ್ತಾರೆ, ಇದು ಎಷ್ಟರ ಮಟ್ಟಿಗೆ ಸರಿ? ಬರೀ ಪಾರ್ಟಿ ಮಾಡುವುದರೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಗಳು ಮುಗಿದು ಹೋಗಬೇಕಾ? ಇಷ್ಟಕ್ಕೆ ಸೀಮಿತವಾಗಬಾರದು ನಮ್ಮ ಯೋಜನೆಗಳು, ಕನಸುಗಳು, ಎಷ್ಟೋ ವ್ಯಕ್ತಿಗಳು ಹಲವು ತರಹದ ಕನಸುಗಳನ್ನು ಕಂಡಿರುತ್ತಾರೆ ಉದಾಹರಣೆಗೆ ಅನೇಕ ವಿಧ್ಯಾರ್ಥಿಗಳು ಚನ್ನಾಗಿ ಓದಿ ಹೆಸರುಗಳಿಸಬೇಕೆಂದಿರುತ್ತಾರೆ, ಇನ್ನು ಓದಿ ಮುಗಿದವರು ಒಳ್ಳೆಯ ಕೆಲಸವನ್ನು ಪಡೆಯಬೇಕೆಂದಿರುತ್ತಾರೆ.

     ಹೊಸ ವರ್ಷ ಬಂತೆಂದು ಖುಷಿ ಪಡುತ್ತಿರುವಾಗ ಕನಸಾಗಿ ಉಳಿದ ಅನೇಕ ಸಂಗತಿಗಳು ನೆನಪಿಗೆ ಬಂದು ನಮ್ಮನ್ನು ಕಾಡುತ್ತವೆ. ಹೊಸ ವರುಷದಲ್ಲಿ ನಿಮ್ಮ ಕನಸುಗಳನ್ನೆಲ್ಲಾ ನನಸಾಗಿಸಿಕೊಳ್ಳಿ, ನಾವು ಹೊಸ ವರುಷವನ್ನು ನಗು ನಗುತ್ತಾ ಸ್ವಾಗತಿಸುವುದರ ಜೊತೆಗೆ ನಮ್ಮ ಕನಸುಗಳನ್ನು ಯೋಜನೆಗಳನ್ನು ಸಾಧಿಸುವತ್ತ ದಾಪುಗಾಲಿಡೋಣ, ನನ್ನ ನೆಚ್ಚಿನ ಕಾದಂಬರಿಕಾರರಾದ ಯಂಡಮೂರಿ ವೀರೇಂದ್ರನಾಥರು ಹೇಳುವಂತೆ ಯಾವುದೇ ಕೆಲಸವನ್ನು ಕಷ್ಟಪಟ್ಟು ಮಾಡದೆ ಇಷ್ಟ ಪಟ್ಟು ಮಾಡಿದರೆ ಮಾತ್ರ ನಾವು ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರಬಹುದು.

ಎಲ್ಲರೂ ನಿಮ್ಮ ಕನಸುಗಳನ್ನು ನನಸಾಗಿಸುವತ್ತ ಯೋಚಿಸಿ.. ನಿಮ್ಮ ಕನಸುಗಳೆಲ್ಲಾ ನನಸಾಗಲಿ ಎನ್ನುವ ಹಾರೈಕೆಯೊಂದಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮುಂಚಿತವಾಗಿ- ಚೈತ್ರಿಕಾ ಆದಿತ್ಯ


ಮನಸ್ವಿಯ ಮಾತು:-
    
     ಪ್ರಿಯ ಬ್ಲಾಗ್ ಓದುಗರೆ, ಬರೀ ಓದುಗರೇ ಅಂದ್ರೆ ಸಾಕಾಗೋದಿಲ್ಲ, ಪ್ರೀತಿಯ ಸ್ನೇಹಿತರೆ/ಸ್ನೇಹಿತೆಯರೇ... ಇದು ನನ್ನ ಅರ್ಧಾಂಗಿಯ ಮೊದಲನೇ ಲೇಖನ ನನ್ನ ಬ್ಲಾಗ್ನಲ್ಲಿ, ಇನ್ನು ಮುಂದೆ ಇದು ನಮ್ಮಿಬ್ಬರ ಬ್ಲಾಗ್ ಆಗಿರುತ್ತೆ, ಈ ಬ್ಲಾಗ್ ನ ಫಾಲೋವರ್ ೨೩ ಜನರಿದ್ದಾರೆ ಅನ್ನೋದು ಮತ್ತೊಂದು ಖುಷಿಯ ವಿಚಾರ, ನಾನು ತುಂಬಾ ದಿನದಿಂದ ಬರಿಬೇಕು ಅಂತ ಇದ್ದೆ ಆದ್ರೆ ಆಗಲೇ ಇಲ್ಲ, ಕಾರಣ ಕೊಡಲಿಕ್ಕೆ ಸುಮಾರು ಇದೆ, ಆದರೆ ಕಾರಣ ಕೊಡೋದಿಲ್ಲ, ಆದಷ್ಟು ಬೇಗ ನಾನು ಲೇಖನ ಬರಿತೀನಿ, ಪ್ರೀತಿ ಸದಾ ಹೀಗೆ ಇರಲಿ, ಮತ್ತೊಮ್ಮೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮುಂಚಿತವಾಗಿ.

Saturday, October 10, 2009

ಡೈರೆಕ್ಟ್ ಟು ಹೋಮ್(DTH) ಸೇವೆ ಬರುವ ಮುನ್ನ ಹಳ್ಳಿಗಳಲ್ಲಿ ಟೀವಿ ವೀಕ್ಷಣೆ ಹೇಗೆ ಸಾಧ್ಯವಿತ್ತು

ಡೈರೆಕ್ಟ್ ಟು ಹೋಮ್




 (ಉಪಗ್ರಹದಿಂದ ನೇರ ಮನೆಗೆ) ಸೇವೆಯನ್ನು ವಿಸ್ತರಿಸಿ ಹೇಳುವುದಾದರೆ ಉಪಗ್ರಹದಿಂದ ನೇರವಾಗಿ ನಿಮ್ಮ ಮನೆಗೆ ಡಿಶ್ ಮತ್ತು ರಿಸೀವರ್ ನ ಮೂಲಕ ನಿಮ್ಮ ಆಯ್ಕೆಯ ಎಲ್ಲಾ ಚಾನಲ್ಲುಗಳನ್ನು! (ಸೇವಾದಾರರು ನೀಡಿದ ಪ್ಯಾಕೇಜ್ ಆಯ್ಕೆ ಮಾಡಿಕೊಂಡು) ದುಡ್ಡು ಕಟ್ಟಿ ನೋಡಬಹುದು, ಡಿಟಿಹೆಚ್ ಬಗ್ಗೆ ಯಾರಿಗೆ ಗೊತ್ತಿಲ್ಲ ಮತ್ತೆ ಯಾಕೆ ಹೇಳ್ತಾ ಇರಬಹುದು ಯೋಚಿಸುತ್ತಿರುವಿರಾ?

     ಹೌದು ನಾನು ಹೇಳಲಿಕ್ಕೆ ಹೊರಟಿರೋದು ಉಪಗ್ರಹದಿಂದ ನೇರ ಮನೆಗೆ ಉಚಿತವಾಗಿ ಲಭ್ಯವಿದ್ದ ಸೇವೆಯ ಬಗ್ಗೆ! ಡಿಟಿಹೆಚ್ ಸೇವೆ ಭಾರತದಲ್ಲಿ ಆರಂಭವಾಗಿ ಅಬ್ಬಬ್ಬಾ ಎಂದರೂ ಎರಡರಿಂದ ಮೂರು ವರ್ಷ ಆಗಿರಬಹುದು,ಆದರೆ ನಮ್ಮ ದೇಶದ ಹಳ್ಳಿಗಳಲ್ಲಿ ಡಿಟಿಹೆಚ್ ಸೇವೆ ಆರಂಭವಾಗುವ ಮೊದಲು ಮತ್ತು ಕೇಬಲ್ ಸೇವೆ ಲಭ್ಯವಾಗದಂತಹ ಪ್ರದೇಶಗಳಲ್ಲಿ ಟಿವಿ ಚಾನಲ್ಲುಗಳನ್ನು ಹೇಗೆ ನೋಡುತ್ತಿದ್ದರು ಎಂದು ನಿಮ್ಮಲ್ಲಿ ಅನೇಕ ಜನರಿಗೆ ಕುತೂಹಲ ಇರಬಹುದು, ಹಳ್ಳಿಗಳಲ್ಲಿ ಅತಿ ಹೆಚ್ಚಿನ ಮನೆಗಳಲ್ಲಿ ಉಪಗ್ರಹದಿಂದ ನೇರ ಮನೆಗೆ ಸಂಪೂರ್ಣ ಉಚಿತ ಸೇವೆ ಬಳಸುತ್ತಾ ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ವರ್ಷಗಳು ಕಳೆದಿವೆ, ಇದನ್ನು ಕೇಳಿ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ನಿಜ. ನನಗೆ ಗೊತ್ತಿರುವ ಪುಟ್ಟ ಮಾಹಿತಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ. ಮೊದಲು ಹಳ್ಳಿಗಳಲ್ಲಿ ಮನೋರಂಜನೆಗಾಗಿ ಟಿವಿ ಮಾಧ್ಯಮದ ವೀಕ್ಷಣೆಗಾಗಿ ಅತಿ ಹೆಚ್ಚು ಖರ್ಚು ಮಾಡಬೇಕಾಗಿದ್ದು ಅನಿವಾರ್ಯವಾಗಿತ್ತು...


     ಹಳ್ಳಿಗಳಲ್ಲಿ ಮೊದಲು ಬಂದಿದ್ದು ದೂರದರ್ಶನ್ ( ಇದು ಡಿಡಿ) ಚಾನಲ್ಲುಗಳು, ಆರು ಅಡಿಯ ಡಿಶ್ ಹಾಗೂ ಎಸ್ ಬ್ಯಾಂಡಿನ  ಎಲ್ ಎನ್ ಬಿ (LNB)  ಮತ್ತು   ಅನಲಾಗ್ ರಿಸೀವರ್ ಮೂಲಕ ಡಿಡಿ ನ್ಯಾಶನಲ್ ಹಾಗೂ ಇನ್ನೊಂದು ಪ್ರಾದೇಶಿಕ ಚಾನಲ್ಲು ಒಟ್ಟು ಎರಡು ಟಿವಿ ಚಾನಲ್ ನೋಡಬಹುದಾದ ಉಚಿತ ಉಪಗ್ರಹ ಸೇವೆ ಲಭ್ಯವಿತ್ತು, ಅದಕ್ಕೆ ತಗಲುತ್ತಿದ್ದ ವೆಚ್ಚ ಸುಮಾರು ಆರರಿಂದ ಎಂಟು ಸಾವಿರ ರೂಪಾಯಿಗಳಿರಬೇಕು ಅಷ್ಟು ಸರಿಯಾಗಿ ನೆನಪಿಗೆ ಬರುತ್ತಿಲ್ಲ, ಅದು ಅಷ್ಟು ಜನಪ್ರಿಯವಾಗಲೂ ಇಲ್ಲ, ನಂತರ ಬಂದಿದ್ದು ಸಿ-ಬ್ಯಾಂಡ್ ಎಲ್ ಎನ್ ಬಿ ಮತ್ತು ಅನಲಾಗ್ ರಿಸೀವರ್, ಇದು ಅನೇಕ ವರ್ಷಗಳವರೆಗೆ ಚಾಲ್ತಿಯಲ್ಲಿ ಇತ್ತು, ಇದರಲ್ಲಿ ಡಿಶ್ ಹನ್ನೆರಡು ಅಡಿ ಅಥವಾ ಎಂಟು ಅಡಿಯದ್ದಾಗಿದ್ದು ಅದನ್ನು ಬೇರೆ ಬೇರೆ ಸ್ಯಾಟಲೈಟ್ ಗಳ ದಿಕ್ಕಿಗೆ ಹೊಂದಿಸಿ ಬೇರೆ ಬೇರೆ ಚಾನಲ್ಲುಗಳ ತರಂಗಾಂತರಗಳನ್ನು ಪಡೆಯಲು ಶಕ್ತವಾಗಿದ್ದವು ಆದರೆ ಈಗಿನ KU-BAND DTH ಸೇವೆ ಪಡೆಯಲು ಕೇವಲ ಎರಡು ಅಡಿಯ ಡಿಶ್ ಇದ್ದರೆ ಸಾಕು, ಆದರೆ ಸಿ ಬ್ಯಾಂಡಿನ ಸಿಗ್ನಲ್ ಪಡೆಯಲು ದೊಡ್ಡದಾದ ಡಿಶ್ ಅವಶ್ಯವಾಗಿ ಬೇಕಾಗಿತ್ತು,

ಅದರಲ್ಲಿ ಮೊದಲು ಬಂದ ಮಾದರಿಯಲ್ಲಿ ಡಿಶ್ ಅನ್ನು ಎಡಕ್ಕೆ ಮತ್ತು ಬಲಕ್ಕೆ ತಿರುಗಿಸಲು ಮತ್ತು ಮೇಲೆ ಕೆಳಗೆ ಅಡ್ಜಸ್ಟ್ ಮಾಡಲು ಬೇರೆ ಬೇರೆ ಎರಡು ಹ್ಯಾಂಡಲ್ ಗಳಿದ್ದವು ಇದು ಸ್ವಲ್ಪ ಕಷ್ಟಕರವಾಗಿತ್ತು,


 ನಂತರದ ದಿನಗಳಲ್ಲಿ ಆ ಮಾದರಿಯಲ್ಲಿ ಸುಧಾರಣೆಯಾಗಿ ಸಿಂಗಲ್ ಪೋಲ್ ಡಿಶ್ ಗಳು ಚಾಲ್ತಿಗೆ ಬಂದವು, ಸಿಂಗಲ್ ಪೋಲ್ ಎಂದರೆ ಡಿಶ್ ನ ಒಂದು ಹ್ಯಾಂಡಲನ್ನು ತಿರುಗಿಸುವ ಮೂಲಕ ಡಿಶ್ ನ ದಿಕ್ಕು ಮತ್ತು ಎತ್ತರವನ್ನು ಹೊಂದಿಸಿ ಬೇರೆ ಬೇರೆ ಉಪಗ್ರಹಗಳಿಂದ ಟೀವಿ ಚಾನಲ್ ಗಳನ್ನು ನೋಡಬಹುದಾಗಿತ್ತು,


 ಇದರಲ್ಲಿ ಲಭ್ಯವಾಗುತ್ತಿದ್ದುದು ಬರೀ ದೇಶೀಯ ಚಾನಲ್ಲುಗಳಲ್ಲದೆ ಅಂತರರಾಷ್ಟ್ರೀಯ ಚಾನಲ್ಲುಗಳು ಲಭ್ಯವಾಗುತ್ತಿತ್ತು, ನೂರಕ್ಕೂ ಹೆಚ್ಚು ದೇಶೀಯ ವಿದೇಶೀಯ ಚಾನಲ್ಲುಗಳು ಉಚಿತವಾಗಿ ಲಭ್ಯವಾಗುತ್ತಿದ್ದವು ಮೊದಲು ಸ್ಟಾರ್ ನವರ ಎಲ್ಲಾ ಚಾನಲ್ಲುಗಳು, ಜೀ ಟೀವಿಯವರ ಅನೇಕ ಚಾನಲ್ಲುಗಳು ಉಚಿತವಾಗಿ ಲಭ್ಯವಾಗುತಿತ್ತು.ಇದೆಲ್ಲವೂ ಅನಲಾಗ್ ತಂತ್ರಜ್ಞಾನದಲ್ಲಿ ಲಭ್ಯವಾಗುತಿತ್ತು. ಅನಲಾಗ್ ತಂತ್ರಜ್ಞಾನದಲ್ಲಿ ಇದ್ದ ಒಂದು ಕೊರತೆಯೆಂದರೆ ಉಪಗ್ರಹದ ಒಂದು ಟ್ರಾನ್ಸ್ಪಾಂಡರಿನಲ್ಲಿ ಒಂದೇ ಚಾನಲ್ಲು ಪ್ರಸಾರವಾಗುತ್ತಿತ್ತು...ಭಾರತದ ಉಪಗ್ರಹದಲ್ಲಿ ಹೆಚ್ಚೆಂದರೆ ೧೨ ಟ್ರಾನ್ಸ್ಪಾಂಡರ್ ಇರುತ್ತಿದ್ದುದರಿಂದ ಕೇವಲ ಹತ್ತು, ಹನ್ನೆರಡು ಚಾನಲ್ ಪ್ರಸಾರ ಸಾಧ್ಯವಾಗುತಿತ್ತು, ಚಾನೆಲ್ಲಿನ ಒಡೆಯರು ತಮ್ಮ ಒಂದೊಂದು ಚಾನಲ್ಲನ್ನು ಪ್ರಸಾರ ಮಾಡಲು ಒಂದು ಟ್ರ್ಯಾನ್ಸ್ಪಾಂಡರನ್ನು ಬಾಡಿಗೆಗೆ ಪಡೆಯುವುದು ಅನಿವಾರ್ಯವಾಗಿತ್ತು.. ಅದಕ್ಕೆ ಅನೇಕ ಚಾನಲ್ ಮಾಲಿಕರುಗಳು ವಿದೇಶಿ ಉಪಗ್ರಹದ ಮೂಲಕ ಚಾನಲ್ಲುಗಳನ್ನು ಪ್ರಸಾರಮಾಡುತ್ತಿದ್ದರು.. ಹೊಸದೊಂದು ಉಪಗ್ರಹ ಉಡಾವಣೆಯಾದ ತಕ್ಷಣ ಅದರಲ್ಲಿ ಬಾಡಿಗೆ ಕಡಿಮೆಯಿದ್ದರೆ ತಮ್ಮ ಚಾನಲ್ ಹೊಸ ಉಪಗ್ರಹಕ್ಕೆ ಬದಲಾಯಿಸುವುದು ಸಾಮಾನ್ಯವಾಗಿತ್ತು... ನನ್ನ ಅನಿಸಿಕೆಯ ಪ್ರಕಾರ ಕೆಲವು ಚಾನಲ್ಲಿನ ಮಾಲಿಕರುಗಳು ಮೊದಲು ಬಾಡಿಗೆ ಕಟ್ಟುತ್ತಿದ್ದ ಉಪಗ್ರಹದವರಲ್ಲಿ ಒಂದು ತಿಂಗಳ ಬಾಡಿಗೆ ಕಟ್ಟದೇ ಬಾಕಿ ಉಳಿಸಿಕೊಂಡು ಮತ್ತೊಂದು ಉಪಗ್ರಹಕ್ಕೆ ಹಾರುತ್ತಿದ್ದರೋ ಏನೋ?... ಟೆಲಿ ಕಮ್ಯುನಿಕೇಶನ್ ನ ಒಳಗಿನ ವಿಚಾರಗಳನ್ನು ಕಲ್ಪಿಸಿಕೊಂಡು ಏನೇನೋ ಬರೆದರೆ ತಪ್ಪಾದೀತು.. ಇರಲಿ ನಮಗೇಕೆ!!
ಅನಲಾಗ್ ರಿಸೀವರಿನಲ್ಲಿ ರೇಡಿಯೋದಲ್ಲಿರುವ ಟ್ಯೂನರಿನಂತೆ ವೀಡಿಯೋ ಮತ್ತು ಆಡಿಯೋ ಟ್ಯೂನಿಂಗ್ ಸ್ಕ್ರೋಲಿಂಗ್ ನಾಬ್ ಇರುತ್ತದೆ ಅದನ್ನು ತಿರುಗಿಸುತ್ತಾ ಹೋದರೆ ಚಾನಲ್ ಟ್ಯೂನ್ ಆಗುತಿತ್ತು.. ಪ್ರತಿ ಚಾನೆಲ್ಲಿಗೂ ವೀಡಿಯೋ ಮತ್ತು ಆಡಿಯೋ ನಾಬ್ ತಿರುಗಿಸ ಬೇಕಾಗಿತ್ತು, ಏಕೆಂದರೆ ದೄಶ್ಯ ಮತ್ತು ದ್ವನಿ ಬೇರೆ ಬೇರೆ ತರಂಗಾಂತರಗಳಲ್ಲಿ ಪ್ರಸಾರವಾಗುತ್ತಿತ್ತು, ಇದರಲ್ಲಿನ ತೊಂದರೆಯೆಂದರೆ ಪದೇ ಪದೇ ಟ್ಯೂನ್ ಮಾಡುವುದರಿಂದ ನಾಬ್ ಸಡಿಲಗೊಂಡು ಟೀವಿಯಲ್ಲಿ ಚುಕ್ಕೆಗಳು ಮತ್ತು ದ್ವನಿ ಸರಿಯಾಗಿ ಕೇಳದೇ ಕರ್ಕಶವಾಗಿ ಕೇಳತೊಡಗುತ್ತದೆ ಮತ್ತು ಇದಕ್ಕೆ ರಿಮೋಟ್ ಸಹ ಇರದೇ ಇದ್ದದ್ದು ಅತಿ ದೊಡ್ಡ ತೊಂದರೆಯಾಗಿತ್ತು, ನಂತರದ ದಿನಗಳಲ್ಲಿ ಅನಲಾಗ್ ರಿಸೀವರಿನ ಯುಗಕ್ಕೆ ಮುಕ್ತಾಯ ಹಾಡಲು ಅವತರಿಸಿದ್ದು ಡಿಜಿಟಲ್ ರಿಸೀವರ್, ಇದರಲ್ಲಿ ಉತ್ಕೃಷ್ಟ ಗುಣಮಟ್ಟದ ವೀಡಿಯೋ ಮತ್ತು ಆಡಿಯೋ ಸೇವೆ ಪಡೆಯಲು ಸಾದ್ಯವಾಯಿತು, ಇದರಲ್ಲಿ ಅತ್ಯುತ್ತಮ ವೀಡಿಯೋ ಆಡಿಯೋ ಸ್ಪಷ್ಟತೆ ಮೊದಲನೆಯದಾದರೆ.. ಉಪಗ್ರಹದ ಒಂದು ಟ್ರಾನ್ಸ್ಪಾಂಡರಿನಲ್ಲಿ ಒಂದಕ್ಕಿಂತ ಹೆಚ್ಚು ಚಾನಲ್ಲುಗಳನ್ನು ಒಂದೇ ತರಂಗಾಂತರದಲ್ಲಿ ಪ್ರಸಾರ ಮಾಡಲು ಶಕ್ತವಾಗಿದ್ದವು.. ಸ್ಯಾಟಲೈಟ್ ಚಾನಲ್ಲಿನ ಒಡೆಯರಿಗೆ ಇದೊಂದು ವರಧಾನವಾಯಿತು.. ಮೊದಲಾದರೆ ಪ್ರತಿ ಚಾನಲ್ಲಿಗೆ ಒಂದೊಂದು ಟ್ರಾನ್ಸ್ಪಾಂಡರಿಗೆ ಉಪಗ್ರಹ ಬಾಡಿಗೆ ಕಟ್ಟಬೇಕಾಗಿತ್ತು.. ಅದೇ ಈಗ ಒಂದು ಟ್ರಾನ್ಸ್ಪಾಂಡರಿಗೆ ಬಾಡಿಗೆ ಕಟ್ಟಿದರೆ ತಮ್ಮೆಲ್ಲಾ ಚಾನಲ್ಲುಗಳನ್ನು ಒಟ್ಟಿಗೆ ಒಂದೇ ಟ್ರಾನ್ಸ್ಪಾಂಡರಿನ ಮೂಲಕ ಪ್ರಸಾರ ಮಾಡಬಹುದು... ಡಿಜಿಟಲ್ ರಿಸೀವರ್ ಗೆ ಡಿಶ್ ಮತ್ತು ಎಲ್ ಎನ್ ಬಿ ಮುಂಚಿನದೆ ಆಗಿದ್ದು ಕೇವಲ ಅನಲಾಗ್ ರಿಸೀವರ್ ಬದಲು ಡಿಜಿಟಲ್ ರಿಸೀವರ್ ಬದಲಾಗಿ ಸ್ಥಾನ ಅಲಂಕರಿಸಿದ್ದು ವಿಶೇಷ.


ಡಿಜಿಟಲ್ ರಿಸೀವರ್ ನಲ್ಲಿ ಚಾನಲ್ ವೀಕ್ಷಿಸಲು ಚಾನೆಲ್ಲಿನ ತರಂಗಾಂತರ(ಫ್ರೀಕ್ವೆನ್ಸಿ) ಮತ್ತು ಸಿಂಬಲ್ ರೇಟ್ ಒಮ್ಮೆ ಫೀಡ್ ಮಾಡಿದರಾಯಿತು. ಪ್ರತಿಯೊಂದು ಗ್ರೂಪ್ ನ ಚಾನೆಲ್ ಗೆ ಬೇರೆ ಬೇರೆ ಫ್ರೀಕ್ವೆನ್ಸಿ ಮತ್ತು ಸಿಂಬಲ್ ರೇಟ್ ಇರುತ್ತದೆ ಅದು ಅಂತರ್ಜಾಲದಲ್ಲಿ ಸಿಗುತ್ತದೆ ಅಥವಾ ಸೆಟಲೈಟ್ ಎಂಡ್ ಕೇಬಲ್ ಟೀವಿಯಂತಹ ಅನೇಕ ಮ್ಯಾಗಜೀನ್ ಗಳಲ್ಲಿ ಅವುಗಳ ಪಟ್ಟಿಯೇ ದೊರೆಯುತ್ತದೆ, ಡಿಜಿಟಲ್ ರಿಸೀವರಿನ ಬಗ್ಗೆ ಹೆಚ್ಚು ಹೇಳಲು ಹೋದರೆ ಸುಮ್ಮನೆ ಬೋರ್ ಹೊಡೆಸಿದಂತಾಗುತ್ತದೆ,ಉಚಿತವಾಗಿ ದೊರೆಯುವ ಚಾನಲ್ಲುಗಳನ್ನು ಫ್ರೀ ಟು ಏರ್ ಚಾನೆಲ್ ಮತ್ತು ದುಡ್ಡು ಕಟ್ಟಿದರೆ ಮಾತ್ರ ನೋಡಬಹುದಾದ ಚಾನಲ್ಲುಗಳನ್ನು ಸ್ಕ್ರ್ಯಾಂಬಲ್ಡ್ ಚಾನೆಲ್ ಅಥವಾ ಪೇ ಚಾನೆಲ್ ಎಂದು ಕರೆಯುತ್ತಾರೆ. ಡಿಟಿಹೆಚ್ ಭಾರತದಲ್ಲಿ ಕಣ್ತೆರೆಯುವ ಮುನ್ನ ದುಡ್ಡು ಕಟ್ಟಿ ನೋಡುವ, (ಸ್ಕ್ರಾಂಬಲ್ಡ್ ) ಪೇ ಚಾನಲ್ ಗಳನ್ನು ಒಬ್ಬ ಗ್ರಾಹಕ ಸ್ವಂತವಾಗಿ ಪಡೆಯುವುದು ಅಸಾಧ್ಯದ ಮಾತಾಗಿತ್ತು, ಪೇ ಚಾನಲ್ ಗಳು ಕೇಬಲ್ ಸೇವೆ ಒದಗಿಸುವವರಿಗೆ ಮಾತ್ರ ಲಭ್ಯವಿತ್ತು ಅದರಲ್ಲಿಯೂ ಕನಿಷ್ಟ ೫೦೦ ಜನ ಗ್ರಾಹಕರನ್ನು ಹೊಂದಿರಬೇಕೆಂಬ ಶರತ್ತು ಅನ್ವಯವಾಗುತಿತ್ತು, ಏಕೆಂದರೆ ಇಂದು ಡಿ.ಟಿ.ಹೆಚ್ ಸೇವೆ ಉಪಯೋಗಿಸುತ್ತಿರುವ ಮನೆಗಳಲ್ಲಿ ಟೀವಿಯ ಜೊತೆ ಬಂದು ಕುಳಿತಿರುವ ಪುಟ್ಟ ಬಾಕ್ಸ್ ಗೆ ಸೆಟ್ ಟಾಪ್ ಬಾಕ್ಸ್ ಎಂದು ಕರೆಯಲಾಗುತ್ತಿದೆ ಅದು ಡಿಜಿಟಿಲ್ ರಿಸೀವರಿಗೆ ದೊರೆತಿರುವ ಮತ್ತೊಂದು ಹೆಸರಾಗಿದೆ.

  ಯಾವುದೇ ಒಂದು ಚಾನಲ್ ಬೇರೆ ಉಪಗ್ರಹದಿಂದ ಪ್ರಸಾರ ಆರಂಭಿಸಿದಾಗ ಹೊಸ ತರಂಗಾಂತರ(ಫ್ರೀಕ್ವೆನ್ಸಿ)ಯಲ್ಲಿ ಟೀವಿ ಚಾನಲ್ ಗಳು ಲಭ್ಯವಾಗುತ್ತವೆ, ಅವುಗಳು ಕೇಬಲ್ ಟೀವಿ ಉದ್ಯಮಕ್ಕೆ ಸಂಬಂದಪಟ್ಟ ಅನೇಕ ಮ್ಯಾಗ್ ಜೀನ್ ಗಳಲ್ಲಿ ಎಲ್ಲಾ ಉಪಗ್ರಹದ ಡೌನ್ ಲೋಡ್ ಪ್ರೀಕ್ವೆನ್ಸಿ ಮತ್ತು ಸಿಂಬಲ್ ರೇಟ್ ಸಿಗುತ್ತವೆ, ಬೇರೆ ಬೇರೆ ಉಪಗ್ರಹಗಳನ್ನು ಹುಡುಕಿ ಚಾನಲ್ ನೋಡುವ ಹವ್ಯಾಸ ಉಳ್ಳವರು ತಮ್ಮನ್ನು ಸ್ಯಾಟ್ ಟ್ರ್ಯಾಕರ್ ಎಂದು ಕರೆದುಕೊಳ್ಳುತ್ತಾರೆ, ಉದಾಹರಣೆಗೆ ಎಲ್ಲಾ ಉಪಗ್ರಹಗಳಿಂದ ಎಲ್ಲಾ ಕಡೆ ಚಾನಲ್ಲುಗಳು ಸಿಗುವುದಿಲ್ಲ, ಅವುಗಳ ಪ್ರಸಾರ ಯಾವ ಯಾವ ಖಂಡಗಳಲ್ಲಿ ಲಭ್ಯವಾಗುತ್ತವೆ ಎನ್ನುವುದನ್ನು ಫೂಟ್ ಪ್ರಿಂಟ್ ಎಂದು ಕರೆಯಲಾಗುತ್ತದೆ, ಇನ್ನು ಪ್ರಸಾರ ಯಾವ ತರಹದ್ದು ಎನ್ನುವುದರ ಮೂಲಕ ಅವುಗಳು ಎಲ್ಲೆಲ್ಲಿ ಲಭ್ಯವಾಗುತ್ತವೆ ಎಂದು ತಿಳಿದುಕೊಳ್ಳಬಹುದು, ವೈಡ್ ಬೀಮ್ ನಲ್ಲಿ ಚಾನಲ್ಲ್ ಪ್ರಸಾರವಾಗುತ್ತಿದ್ದರೆ ಹಲವು ದೇಶಗಳಿಗೆ ಖಂಡಗಳಿಗೆ ಆ ಚಾನಲ್ ಲಭ್ಯವಾಗುತ್ತವೆ, ಇನ್ನು ಝೋನ್ ಬೀಮ್ ಅಥವಾ ಏಶಿಯಾ ಬೀಮ್ ಹೀಗೆ ಎಲ್ಲೆಲ್ಲಿಗೆ ತಮ್ಮ ಚಾನಲ್ಲುಗಳು ಲಭ್ಯವಾಗುತ್ತವೆ ಎನ್ನುವುದನ್ನು ಫೂಟ್ ಪ್ರಿಂಟ್ ಮ್ಯಾಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ.


     ಆದರೆ ಡಿಟಿಹೆಚ್ ಸೇವೆ ಸಂಪೂರ್ಣವಾಗಿ ಗ್ರಾಹಕನ ಇಚ್ಚೆಗೆ ತಕ್ಕಂತೆ ಸೇವೆ ಪಡೆಯಲು ಸಾದ್ಯವಾಗಿಲ್ಲ, ಸದ್ಯಕ್ಕೆ ಲಭ್ಯವಿರುವಂತ ಬೇರೆ ಬೇರೆ ಡಿಟಿಹೆಚ್ ಸೇವೆ ಒದಗಿಸುತ್ತಿರುವವರು ಪ್ರೀಪೇಯ್ಡ್ ಮೊಬೈಲ್ ಸೇವೆಯಂತೆಯೇ ಡಿ.ಟಿ ಹೆಚ್ ಸೆಟ್ ಟಾಪ್ ಬಾಕ್ಸ್ ನ ಜೊತೆಗೊಂದು ಸ್ಮಾರ್ಟ್ ಕಾರ್ಡ್ ಅನ್ನು ಒದಗಿಸುತ್ತಾರೆ ಅದು ಪ್ರೀಪೇಯ್ಡ್ ಸಿಮ್ ಕಾರ್ಡನಂತೆ ದುಡ್ದಿದ್ದರೆ ಮಾತ್ರ ಚಾನಲ್ ಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ, ಇದರಲ್ಲಿ ಬೇಸರದ ವಿಚಾರವೆಂದರೆ ಪ್ರತಿ ಸೇವಾದಾತರು ಬೇರ‍ೆ ಬೇರೆ ಸ್ಕ್ರ್ಯಾಂಬ್ಲಿಂಗ್ ಟೆಕ್ನಾಲಜಿ ( ಪೇ ಚಾನಲ್ ಎನ್ ಕೋಡಿಂಗ್) ಬಳಸುತ್ತಿರುವುದರಿಂದ ಒಮ್ಮೆ ಒಂದು ಡಿ.ಟಿ ಹೆಚ್ ಸೇವೆ ಪಡೆದ ಮೇಲೆ ಮತ್ತೊಂದು ಡಿಟಿಹೆಚ್ ಸೇವೆ ಪಡೆಯಲು ಅಸಾದ್ಯ, ಬೇಕೇ ಬೇಕೆಂದರೆ ಹೊಸದಾಗಿ ಸೆಟ್ ಟಾಪ್ ಬಾಕ್ಸ್ ಮತ್ತು ಡಿಶ್ ಅನ್ನು ಹೊಸದಾಗಿ ಖರೀದಿ ಮಾಡಬೇಕಾಗುತ್ತದೆ, ಇನ್ನು ಅಂಗಡಿಯಾತ ತುಂಬಾ ಪರಿಚಯದವನಿದ್ದರೆ ೫೦೦ರೂಪಾಯಿ ಕಡಿಮೆ ಮಾಡಿ ಹೊಸ ಡಿಶ್ ಇಟ್ಟು ಕೊಂಡು ಬರೀ ರಿಸೀವರ್ ಒಂದನ್ನು ಕೊಡಬಹುದು, ಆದರೂ ದುಭಾರಿ ಎನಿಸದೇ ಇರಲಾರದು, ಉದಾಹರಣೆಗೆ ಒಂದು ಕಂಪೆನಿಯ ಡಿವಿಡಿ, ಅಥವಾ ಸೀಡಿ ಪ್ಲೇ ಮಾಡಲು ಅದೇ ಕಂಪನಿಯ ಪ್ಲೇಯರ್ ಅಥವಾ ಒಂದು ಕಂಪೆನಿಯ ಸಿಮ್ ಕಾರ್ಡ್ ನ ಸೇವೆ ಪಡೆಯಲು ಅದೇ ಕಂಪನಿಯ ಮೊಬೈಲ್ ಫೋನ್ ಬಳಸುವುದು ಅನಿವಾರ್ಯವಾಗಿದ್ದರೆ? (ರಿಲಾಯನ್ಸ್ ಮತ್ತು ಟಾಟಾ ಇಂಡಿಕಾಮ್ ಸಿ.ಡಿ ಎಮ್.ಎ ಸೇವೆ ಇದೇ ತರಹದ್ದಾಗಿತ್ತು ಈಗ ಅವೆರೆಡೂ ಕಂಪೆನಿಗಳು ಜಿ.ಎಸ್ ಎಮ್ ಸೇವೆ ಓದಗಿಸುತ್ತಿವೆ) ಸೀಡಿ ಕಂಪೆನಿಗಳು ಮತ್ತು ಮೊಬೈಲ್ ಸೇವೆ ಒದಗಿಸುತ್ತಿರುವ ಕಂಪೆನಿಗಳು ಖಂಡಿತಾ ಉದ್ದಾರವಾಗುತ್ತಿರಲಿಲ್ಲವೇನೋ! ಆದರೆ ಡಿ.ಟಿ ಹೆಚ್ ಕಂಪೆನಿಗಳು ಡಿಶ್ ಮತ್ತು ಸೆಟ್ ಟಾಪ್ ಭಾಕ್ಸನ್ನು ಗ್ರಾಹಕನಿಗೆ ಬಾಡಿಗೆ ಆಧಾರದ ಮೇಲೆ ಒದಗಿಸುತ್ತಿವೆ ಜಾಹೀರಾತಿನಲ್ಲಿ ಮಾತ್ರ ಸೆಟ್ ಟಾಪ್ ಬಾಕ್ಸ್ ಮತ್ತು ಡಿಶ್ ಉಚಿತ ಎಂದು ಬರೆದಿರುತ್ತದೆ ಅದರ ಜೊತೆಗೆ * ಚಿಹ್ನೆ ಇದ್ದು ಶರತ್ತುಗಳು ಅನ್ವಯಿಸುತ್ತವೆ ಎಂದು ಬರೆದಿರುತ್ತಾರೆ!, ಸೆಟ್ ಟಾಪ್ ಭಾಕ್ಸ್ ಮೇಲೆ ಸಂಪೂರ್ಣವಾದ ಹಕ್ಕು ಡಿ.ಟಿ ಹೆಚ್ ಸೇವಾದಾರರದ್ದೆ ಆಗಿರುತ್ತದೆ.ಪೇ ಚಾನಲ್ ಗಳನ್ನು ನಿರ್ದಿಷ್ಟವಾದ ಸ್ಕ್ಯಾಂಬ್ಲಿಗ್ ಟೆಕ್ನಾಲಜಿಯಲ್ಲಿ ಮಾತ್ರ ಸೇವೆ ಓದಗಿಸುವಂತೆ ಮತ್ತು ಗ್ರಾಹಕನಿಗೆ ತನಗಿಷ್ಟವಾದ ಕಂಪೆನಿಯ ಸೇವೆ ಪಡೆಯಲು ಬರಿ ಸ್ಮಾರ್ಟ್ ಕಾರ್ಡನ್ನು ಮಾತ್ರ ಪಡೆದು ಕೊಂಡು(ಮೊಬೈಲ್ ಸಿಮ್ ಖರೀದಿಸಿದಂತೆ) ಸೇವೆ ಪಡೆದುಕೊಳ್ಳುವಂತೆ ಮಾಡಲು ಟ್ರಾಯ್ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲವೇ ಎನ್ನುವುದು ಆಶ್ಚರ್ಯಕರ ವಿಚಾರ. ಬೇಕಾದರೆ ಸೆಟ್ ಟಾಪ್ ಭಾಕ್ಸ್ ಗೆ ಇನ್ನು ಸ್ವಲ್ಪ ಹೆಚ್ಚಿನ ಹಣ ಪಡೆಯಲಿ, ಆದರೆ ಯಾವ ಶರತ್ತನ್ನು ವಿಧಿಸುವಂತಿಲ್ಲ ಹಾಗು ಯಾವ ಸೇವೆಯನ್ನು ಪಡೆದುಕೊಳ್ಳುವ ಹಕ್ಕು ಸಂಪೂರ್ಣ ಹಕ್ಕು ಗ್ರಾಹಕನದ್ದಾಗಿರುತ್ತದೆ ಎಂದು ಬರೆದುಕೊಡಲಿ, ಎಲ್ಲಾ ಕಂಪೆನಿಯವರ ಸ್ಮಾರ್ಟ್ ಕಾರ್ಡ್ ಗಳು ಒಂದೇ ಗ್ಲೋಬಲ್ ಸ್ಟ್ಯಾಂಡರ್ಡ್ ಗೆ ತರಬೇಕು ಇಲ್ಲವಾದಲ್ಲಿ ಸೇವೆ ಚನ್ನಾಗಿಲ್ಲದಿದ್ದರೂ ಅದನ್ನೆ ನೋಡುತ್ತಾ ಕೂರುವುದು ಅನಿವಾರ್ಯವಾಗುತ್ತದೆ.ಅಥವಾ ಇನ್ಯಾವುದೇ ಅತಿ ಕಡಿಮೆ ದರದಲ್ಲಿ ಅತ್ಯಂತ ಒಳ್ಳೆಯ ಪ್ಯಾಕೇಜ್ ಬೇರೆಯ ಕಂಪನಿಯವರು ನೀಡಿದರೆ ಅದರ ಪ್ರಯೋಜನ ಪಡೆಯಲು ಮತ್ತೆ ಹೊಸದಾಗಿ ರಿಸೀವರ್ ಎಲ್ಲವನ್ನು ಖರೀದಿಸುವುದು ದುಬಾರಿಯಾಗುತ್ತದೆ.

     ಡಿಟಿಹೆಚ್ ಸೇವಾದಾರರು ಗ್ರಾಹಕರಿಂದ ಭಾರಿ ಪ್ರಮಾಣದ ಹಣವನ್ನು ದೋಚುತ್ತಿದ್ದಾರೆ, ತಿಂಗಳಿಗೆ ಕನಿಷ್ಟವೆಂದರೂ ೧೦೦ ರಿಂದ ೩೦೦ ರೂಪಾಯಿಯ ತನಕ ಗ್ರಾಹಕ ಖರ್ಚು ಮಾಡಲೇ ಬೇಕಾಗಿದೆ, ಜೊತೆಗೆ ತೆರಿಗೆ ೧೨.೫ ಕಟ್ಟುವುದು ಅನಿವಾರ್ಯವಾಗಿದೆ.ಇದು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೊರೆಯಾಗಿದೆ, ನೋಡಿದ್ದಕ್ಕಷ್ಟೆ ದುಡ್ಡು ಕಟ್ಟುವ(Pay per view) ಸೇವೆ ಆರಂಭವಾಗಬೇಕು ಅಥವಾ ಪ್ಯಾಕೇಜ್ ಬದಲು ಬೇಕಾದ ಚಾನಲ್ಲುಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇನ್ನೂ ಲಭ್ಯವಾಗಿಲ್ಲ, ಉದಾಹರಣೆಗೆ ಯಾವುದೋ ಒಂದು ಚಾನೆಲ್ ಬೇಕಾದಲ್ಲಿ ಆ ಚಾನೆಲ್ ಒಂದನ್ನು ನೋಡಲು ಇಡೀ ಪ್ಯಾಕೇಜ್ ಗೆ ಹಣ ವ್ಯಯಿಸಬೇಕು ಇಡೀ ಪ್ಯಾಕೇಜ್ ನಲ್ಲಿ ಉಳಿದ ಚಾನಲ್ ಗಳನ್ನು ನೀವು ನೋಡುವ ಆಸಕ್ತಿಯಿಲ್ಲದಿದ್ದರೂ ದುಡ್ಡು ಕಟ್ಟಲೇ ಬೇಕು, ಕೆಲವು ಒಂದೇ ಚಾನಲ್ ಆಯ್ಕೆ ಲಭ್ಯವಿದೆ ಆದರೆ ಕನಿಷ್ಟವೆಂದರೂ ೨೫ ರಿಂದ ೩೦ರೂಪಾಯಿ ಒಂದು ತಿಂಗಳಿಗೆ ವ್ಯಯಿಸಬೇಕು, ಇದು ದುಬಾರಿ ಲೆಕ್ಕಾಚಾರವೇ ಆಯಿತು, ಇನ್ನು ಕೆಲವು ಪ್ಯಾಕೇಜ್ ಆಯ್ಕೆ ಮಾಡಿಕೊಂಡರೆ ಅದನ್ನು ಮತ್ತೆ ಅಷ್ಟು ಸುಲಭದಲ್ಲಿ ನಿಶ್ಕ್ರೀಯ ಗೊಳಿಸಲು ಸಾಧ್ಯವಿಲ್ಲ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾದಾಗ ಮಾತ್ರ ಆ ಪ್ಯಾಕೇಜ್ ಕೊನೆಗೊಳ್ಳುತಿತ್ತು.. ಸನ್ ಡೈರೆಕ್ಟ್ ನಲ್ಲಿ ಈಗ ಸ್ವಲ್ಪ ಬದಲಾವಣೆಯಾಗಿವೆ, ಒಂದು ತಿಂಗಳಿಗೆ ಚಂದಾದಾರರಾಗುತ್ತೀರೋ ಅಥವಾ ಯಾವಾಗಲೂ ಚಂದಾ ಹಣ ಕಟ್ಟುತ್ತಲೇ ಇರುತ್ತೀರೋ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಲಾಗಿದೆ! ಒಮ್ಮೆ ನೀವು ನಿಮ್ಮ ಚಂದಾ ಹಣ ಕಟ್ಟುವುದು ಒಂದು ದಿನ ತಡವಾದರೂ ಮುಂದಿನ ೨೪ ಘಂಟೆಗಳ ವರೆಗೆ ನಿಮಗೆ ಯಾವುದೇ ಚಾನಲ್ ಲಭ್ಯವಾಗುವುದಿಲ್ಲ.. ಉಚಿತವಾಗಿ ಪ್ರಸಾರವಾಗುತ್ತಿರುವ ಡಿಡಿ ಡೈರೆಕ್ಟ್ ಪ್ಲಸ್ ನ ಚಾನಲ್ಲುಗಳನ್ನು ಸಹ ಬ್ಲಾಕ್ ಮಾಡುತ್ತಾರೆ, ಇವಕ್ಕೆಲ್ಲ ಕಡಿವಾಣ ಹಾಕಲು ಸೂಕ್ತ ಕ್ರಮ ಟ್ರಾಯ್ ಕೈಗೊಳ್ಳಬೇಕಿದೆ.

     ಇನ್ನು ನಾನು ಅತಿ ಆಸಕ್ತಿಯಿಂದ ಕಾಯುತ್ತಿರುವುದು ಡಿಟಿ ಹೆಚ್ ನ ಮೂಲಕ ಬ್ರಾಡ್ ಬ್ಯಾಂಡ್ ಸೇವೆಗೆ, ನನ್ನಂತೆ ಬಿಎಸ್ ಎನ್ಎಲ್ ನ ಕೇಬಲ್ ಸೇವೆಯಿಂದ ಬ್ರಾಡ್ ಬ್ಯಾಂಡ್ ಸೇವೆ ಪಡೆಯುವ ಹಕ್ಕಿನಿಂದ ವಂಚಿತರಾದ ಮತ್ತು ವೈರ್ ಲೆಸ್ ಲ್ಯಾಂಡ್ ಲೈನ್ ನ ಮೂಲಕ ಫಾಸ್ಟ್ ಇಂಟರ್ನೆಟ್ ಎನ್ನುವ ಹೆಸರಿನ ಅನಿಯಮಿತ ಅತಿ ನಿಧಾನಗತಿಯ ಡಯಲ್ ಅಪ್ ಸೇವೆಯಿಂದ ಬೇಸತ್ತಿರುವ ಗ್ರಾಹಕರಿಗೆ ಬ್ರಾಡ್ ಬ್ಯಾಂಡ್ ಅನುಭವ ಸಿಗಲಿ ಎನ್ನುವ ಆಶಯ. ( ಇದ್ದಿದ್ದರಲ್ಲಿ ಫೊನ್ ಬಿಲ್ ಜೊತೆ ೨೫೦ರುಪಾಯಿ ಮಾಸಿಕ ಬಾಡಿಗೆ ಮಾತ್ರ ಹೆಚ್ಚುವರಿಯಾಗಿ ಕಟ್ಟಬೇಕು) Anyways Thanks to BSNL WLL fast internet serviece! ಕೊನೆಯ ಮಾತು ಡೈರೆಕ್ಟ್ ಟು ಹೋಮ್ ಸರ್ವೀಸ್ ನಲ್ಲಿ ಕೈಗೆಟಕುವ ಬೆಲೆಗೆ ಇಂಟರ್ನೆಟ್ ಸೇವೆ ಬಂದರೆ ಮಾತ್ರ ಚಂದಾದಾರರಾಗಿ, ಲೆಕ್ಕಾಚಾರ ಇರಬೇಕಲ್ವಾ ಎಲ್ಲದಕ್ಕೂ.ನಾನು ಬರೆದದ್ದರಲ್ಲಿ ಸಾಕಷ್ಟು ಮಾಹಿತಿ ದೊರೆತಿರಬಹುದು ಎಂದುಕೊಳ್ಳುತ್ತೇನೆ.

Monday, October 5, 2009

ಬ್ಲಾಗೋತ್ತಮ/ಉತ್ತಮ ಬ್ಲಾಗರ್ ಪ್ರಶಸ್ತಿಗೆ ಅರ್ಜಿ ಆಹ್ವಾನ

ಇತ್ತೀಚಿಗೆ ಅನೇಕ ಬ್ಲಾಗಿಗರು ಬರೆಯುವುದನ್ನು ಕಡಿಮೆ ಮಾಡುತ್ತಿದ್ದಾರೆ ಅಂತವರಿಗಾಗಿ ಉತ್ತಮ ಬ್ಲಾಗಿಗ/ ಬ್ಲಾಗ್ ಓಡತಿ ಎನ್ನುವ ಪ್ರಶಸ್ತಿಯನ್ನು ಆನ್ ಲೈನ್ ಲಾಟರಿ ಮೂಲಕ ಆರಿಸಬೇಕೆಂದಿದ್ದೇನೆ( ಆನ್ ಲೈನ್ ಲಾಟರಿಗೆ ರಾಜ್ಯ ಸರ್ಕಾರ ನಿಷೇದ ಹೇರಿದೆ)

ಮೂರಂಕಿ ಲಾಟರಿಯಲ್ಲಿ ಆರಿಸೋಣ ಬಿಡಿ!

ಪ್ರಶಸ್ತಿ ಅಂದ ಮೇಲೆ ಶರತ್ತು ಹಾಗು ಅರ್ಹತೆಗಳು ಸಾಮಾನ್ಯ ಅಲ್ಲವೆ

ಬ್ಲಾಗೋತ್ತಮ ಅಥವಾ ಉತ್ತಮ ಬ್ಲಾಗರ್ ಪ್ರಶಸ್ತಿ ಪಡೆಯಲು ಈ ಕೆಳಗಿನ ಅರ್ಹತೆ ಮತ್ತು ಶರತ್ತುಗಳು ಅನ್ವಯಿಸುತ್ತದೆ

1) ಬ್ಲಾಗ್ ಆರಂಭಿಸಿ ೮ ತಿಂಗಳು ೨೫ ದಿನಗಳು ಮೀರಿರಬಾರದು (ಪ್ರಸವ ವೇದನೆಯ ಕಾಲ ಶುಭ ಕಾಲವೆಂದು ಪರಿಗಣಿಸಲಾಗಿದೆ)

2) ಬ್ಲಾಗರ್ ವಯಸ್ಸು ಯುವಕನಾಗಿದ್ದರೆ 35 ಮೀರಿರಬಾರದು, ಮಹಿಳೆಯಾದರೆ 42 ಮೀರಿರಬಾರದು

3) ತಿಂಗಳಿಗೆ ವಾರಕ್ಕೊಂದರಂತೆ 4 ಅಥವಾ 5 ಲೇಖನಗಳು ಮೀರಿರಬಾರದು (ಅತಿ ಹೆಚ್ಚಿನ ಪೋಸ್ಟ್ ಮಾಡಿದ್ದರೆ ಅವರು ಉತ್ತಮ ಬ್ಲಾಗರ್ ಪ್ರಶಸ್ತಿಗೆ ಅನರ್ಹರು! ಏಕೆಂದರೆ ಹಿಂದಿನ ಲೇಖನಗಳನ್ನು ಓದಲು ಬಿಡದೆ ಹೊಸ ಹೊಸ ಲೇಖನ ಬರೆದರೆ ಯಾವುದನ್ನು ಓದೋದು ಎನ್ನುವ ದ್ವಂದ್ವಕ್ಕೆ ಓದುಗರು ಬೀಳುತ್ತಾರೆ)

4) ಪ್ರತಿ ಲೇಖನಕ್ಕೆ ಕಡ್ಡಾಯವಾಗಿ ಒಂದಾದರು ಕಮೆಂಟ್ ಬಂದಿರಬೇಕು, ಒಬ್ಬರೇ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ಲೇಖನಕ್ಕೆ ಕಮೆಂಟಿರಬಾರದು.
5) ನಿಮ್ಮ ಬ್ಲಾಗ್ ನಲ್ಲಿ ಬೇರೆಯವರ ನಿಮಗಿಷ್ಟವಾದ ಒಂದು ಬ್ಲಾಗ್ ನ ಲಿಂಕ್ ಆದರೂ ಕೊಟ್ಟಿರಬೇಕು (ಇಲ್ಲವಾದಲ್ಲಿ ಓದುಗರನ್ನು ಕಟ್ಟಿ ಹಾಕಿದ ಅಥವಾ ಇನ್ನೊಂದು ಉತ್ತಮ ಬ್ಲಾಗ್ ಗೆ ದಾರಿ ಮಾಡಿಕೊಡಲಿಲ್ಲ ಎನ್ನುವುದನ್ನು ಪರಿಗಣಿಸಿ ಅನರ್ಹರು ಎಂದು ತೀರ್ಮಾನಿಸಲಾಗುತ್ತದೆ.

6) ನಿಮ್ಮ ಬ್ಲಾಗ್ ನ ಫಾಲೋವರ್ ಗಳ ಸಂಖ್ಯೆ ೧೨ ದಾಟಿರಬಾರದು (ನೀವು ನನ್ನ ಬ್ಲಾಗ್ ನ್ನು ಫಾಲೋ ಮಾಡುವ ಮೂಲಕ ನನಗೆ ಪ್ರಶಸ್ತಿ ಸಿಗದಂತೆ ಮಾಡಬಹುದು!)

7) ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ ಲೇಖನಗಳು ಬೇರೆ ಯಾವುದೇ ಪತ್ರಿಕೆಗಳಲ್ಲಿ ಈ ಮೊದಲು ಪ್ರಕಟವಾಗಿರಬಾರದು

8) ಅರ್ಜಿ ಸಲ್ಲಿಸುವವರು ನಿಮ್ಮ ಅರ್ಜಿಯ ಜೊತೆ ಉತ್ತಮ ಬ್ಲಾಗರ್ ಎನಿಸಿಕೊಳ್ಳಲು ಬೇಕಾದ ಕನಿಷ್ಟ 5 ಅರ್ಹತೆಯ ಪಟ್ಟಿ ಸೇರಿಸಿ ಅರ್ಜಿ ಸಲ್ಲಿಸಬಹುದು.



ಏನು ಪ್ರಶಸ್ತಿ ಬೇಕೆಂದು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು!

ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಬಾಕಿ ಇವೆ.

Thursday, July 9, 2009

ಅಪರೂಪದ ಕೆಲವು ಆಣಿಮುತ್ತುಗಳು!!

ಕೆಲವು ಆಣಿಮುತ್ತುಗಳು ಹೀಗಿವೆ
ನಾನು: ಏ ಸುರೇಶಾ... ಸತೀಶ ಎಲ್ಲಿಗೆ ಕೆಲ್ಸಕ್ಕೆ ಹೋಗ್ತಾ ಇದಾನೆ?
ಸುರೇಸ: ಸತೀಸ ಮುಚ್ಚೇಂದ್ರ ರಾಯ್ರ ಮನೆಗೆ ಕೆಲಸಕ್ಕೆ ಹೋಗ್ತಾ ಐದಾನೆ.
( ಸುರೇಶ ಅನ್ನೋದನ್ನು ಸುರೇಸ ಮತ್ತು ಸತೀಶ ಎನ್ನುವುದನ್ನು ಸತೀಸ ಅಂದದ್ದರಲ್ಲಿ ಏನೂ ವಿಚಿತ್ರವಿಲ್ಲ.. ಅದು ಕೆಲವರಿಗೆ ಶ ಉಚ್ಚಾರ ಕಷ್ಟವಾದಾಗ "ಸ" ಕಾರ ಬರುತ್ತದೆ.. ಇಲ್ಲಿ ನಾನು ಅದನ್ನು ಹೇಳುತ್ತಿಲ್ಲ.. ಮುಚ್ಚೇಂದ್ರ ಎನ್ನುವ ಹೆಸರಿನ ಬಗ್ಗೆ ಹೇಳುತ್ತಿದ್ದೇನೆ.... ಮೃತ್ಯುಂಜಯ ಎನ್ನುವ ಹೆಸರನ್ನು ಕರೆಯಲು ಬಾರದೇ ಇದ್ದವರು ನಾಮಕರಣ ಮಾಡಿದ ಹೊಸಾ ಹೆಸರು ಮುಚ್ಚೇಂದ್ರ!)
ಅಂತಹದೇ ಮತ್ತೊಂದು ಹೆಸರು ಯೇದಾವತಿ =ವೇದಾವತಿ
ನಮ್ಮ ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ಬರುತ್ತಿದ್ದ ಗೋಪಾಲ ತಾನು ಕಾಯಂ ಕೆಲಸ ಮಾಡುವ ಮನೆಯ ಯಜಮಾನರನ್ನು ಭೂಚು ಹೆಗ್ಡೇರು ಎಂದು ಕರೆಯುತ್ತಾನೆ,
ಆದದ್ದು ಹೀಗೆ, ನಾಗಭೂಷಣ ಎನ್ನುವವರಿಗೆ ಮನೆಯಲ್ಲಿ ಪ್ರೀತಿಯಿಂದ ಕರೆದ ಹೆಸರು ಭೂಚು, ಅದೀಗ ಭೂಚು ಹೆಗಡೆಯಾಗಿದೆ.
ನಮ್ಮ ಮನೆಗೆ ಬರುವ ಒಬ್ಬ ಶೇರೇಗಾರ ಹೇಳಿದ ಮಾತು... ಭಟ್ರೇ ಸ್ಟಾರ್ ಮೇಲೆ ಸ್ಟಾರ್ ಮಾಡಿದ್ರೆ ಸಾಕಿತ್ರಿ.. ಅಷ್ಟೂ ಕಿತ್ತಾಹ್ಕ್ಯಾರೆ( ಕಿತ್ತು ಹಾಕಿದ್ದಾರೆ)
(ನಮ್ಮೂರಿನ ರಸ್ತೆಯನ್ನು ಎರಡು ವರ್ಷಗಳ ಕಾಲ ರಿಪೇರಿ ಮಾಡುತ್ತಿದ್ದಾಗ ಟಾರ್ ರೋಡಿನ ಮೇಲೆ ಮತ್ತೆ ಟಾರ್ ಹಾಕಿದ್ದರೆ ಸಾಕಾಗಿತ್ತು ಎಂದು ಹೇಳಿದ್ದು ನೆನೆಸಿಕೊಂಡು ನಗುತ್ತಿರುತ್ತೇನೆ.. ಅವನು ಟಾರ್ ಎಂದು ಹೇಳಲು ಸ್ಟಾರ್ ಎನ್ನುತ್ತಾನೆ.)
ಅವನದೇ ಮತ್ತೊಂದು ನುಡಿಮುತ್ತಿದೆ, ಅದು ಅವನೊಬ್ಬನ ಬಾಯಲ್ಲಿ ಮಾತ್ರ ಕೇಳಲು ಸಾಧ್ಯ.. ಒಂದು ದಿನ ಬಂದವನು ನಮ್ಮನೆ ಮಿಸ್ ಸರಿ ಇಲ್ಲ, ಮಿಸ್ ಎಲ್ಲಿ ರಿಪೇರಿ ಮಾಡಿಸಲಿ ಎಂದು ವಿಚಾರಿಸಿದ, ನಾವೆಲ್ಲ ತಲೆ ಕೆರೆದುಕೊಂಡು ಮಿಸ್ ಎಂದರೇನು ಎಂದು ವಿಚಾರಿಸಿದಾಗ ಅವನು ಹೇಳಿದ್ದು ಅದೇ ಅರ್ಯದು!(ಅರೆಯುವುದು).. ಮಿಸ್ ಮಾಡದು ಮಿಸ್ಸು ಅಂದ... ಸುಮಾರು ಹೊತ್ತಾದ ಮೇಲೆ ಗೊತ್ತಾಗಿದ್ದು ಅವನು ಹೇಳುತ್ತಿರುವುದು ಮಿಕ್ಸರ್ ಬಗ್ಗೆ ಎಂದು.
ಕಳೆದ ಒಂದು ವರ್ಷದ ಹಿಂದೆ ನಮ್ಮ ಊರಿನಲ್ಲೇ ಒಂದು ದೇವರ ಕಾರ್ಯ ಒಬ್ಬರ ಮನೆಯಲ್ಲಿತ್ತು.. ಊರಿನವರೇ ಹೋಗಿ ಊಟಕ್ಕೆ ಬಡಿಸುವುದು ವಾಡಿಕೆ.. ನಾನು ಹೋಗಿದ್ದೆ ಎಲ್ಲಾ ಸೇರಿ ಬಾಳೆ ಎಲೆ ಹಾಕಿಯಾಗಿತ್ತು.. ಉಪ್ಪು ಹಾಕಲು ಉಪ್ಪಿನ ಪಾತ್ರೆಯನ್ನು ಕೈಗೆ ತೆಗೆದುಕೊಂಡೆ, ಅಷ್ಟರಲ್ಲಿ ಮನೆಯ ಯಜಮಾನರು ಉಪ್ಪಿನ ಪಾತ್ರೆಯನ್ನು ನೋಡಿ ಹೇಳಿದ್ದು ಅಪೀ.. ಅದಲ್ದ ಸಾಲ್ಟ್ ಉಪ್ಪಿದ್ದು ಅದನ್ನ ಹಾಕಲಕ್ಕು ತಡಿ" ಎಂದರು!, ನನಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ ಆಮೇಲೆ ಸಾಲ್ಟ್ ಉಪ್ಪು ತಗ ಎಂದು ಅವರು ತಂದು ಕೊಟ್ಟಾಗ ಎಲ್ಲಾ ಅರ್ಥವಾಯಿತು.. ಮುಂಚೆ ನನ್ನ ಕೈಯಲ್ಲಿದ್ದದ್ದು ಹರಳುಪ್ಪಿನ ಪಾತ್ರೆ ಅವರು ತಂದು ಕೊಟ್ಟಿದ್ದು ರಿಪೈನ್ಡ್ ಟೇಬಲ್ ಸಾಲ್ಟ್! ಅದಕ್ಕೆ ಅವರು ಹೇಳಿದ್ದು ಸಾಲ್ಟ್ ಉಪ್ಪು.
ಇದರಂತೆಯೇ ಡೋರ್ ಬಾಗಿಲು ಹಾಕು, ಸ್ಟ್ರೀಟ್ ಲೈಟ್ ದೀಪ ಹಾಕಿದ್ದ ನೋಡು, ಹುಡುಕುತ್ತಾ ಹೋದರೆ ಅದೆಷ್ಟಿದೆಯೋ ಇದೇ ತರಹದ್ದು.

Friday, May 22, 2009

ಛಾಯಾಚಿತ್ರಗಳಿರುವ ಒಂದು ಬ್ಲಾಗ್ ಪರಿಚಯ

ಛಾಯಚಿತ್ರಗಳನ್ನು ನೋಡುವ ಆಸಕ್ತಿಯಿರುವವರಿಗೆ ಒಂದು ಬ್ಲಾಗ್ ಪರಿಚಯ..ನಾಗರಾಜ್ ಫೋಟೋ ಗ್ಯಾಲರಿ ಯನ್ನು ನೋಡಿ, ಇಲ್ಲಿ ನೀವು ಸಂಪೂರ್ಣವಾದ ಪ್ರಾಕೃತಿಕ ಛಾಯಚಿತ್ರಗಳು, ಪ್ರಾಣಿ, ಪಕ್ಷಿಗಳ ಫೋಟೋಗಳು ನೋಡಬಹುದು.. ಚನ್ನಾಗಿದೆ ಎನಿಸಿದರೆ ಅಲ್ಲಿಯೇ ಕಮೆಂಟಲು ಮರೆಯಬೇಡಿ.

ಕೊನೆಯಮಾತು:

ಬ್ಲಾಗ್ ವಿಳಾಸ ನೀಡಿದ್ದು ಅನುಕೂಲವಾಯಿತು ಎಂದೆನಿಸಿದವರು ಇಲ್ಲಿ ಕಮೆಂಟಬಹುದು...