ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Saturday, December 13, 2025

ಡೆವಿಲ್ ಸಿನೇಮಾ




ದರ್ಶನ್ ಅಭಿನಯದ ಅದ್ಭುತ ಸಿನೇಮಾ ಡೆವಿಲ್… ಮೊದಲನೇ ದಿನ ಮೊದಲನೇ ಶೋ ನೋಡೋದು ಇದ್ಯಲ್ಲ ಆ ಅನುಭವ ಎಲ್ಲರಿಗೂ ಸಿಗೋದಿಲ್ಲ..ವಿ ಐ ಪಿ ಫಾಸ್ ಕೂಡ ಎಲ್ಲರಿಗೂ ಸಿಗೋದಿಲ್ಲ, ಫಾರಿನ್ ಲೊಕೇಶನ್ ಅಲ್ಲಿ ಸಾಂಗ್ ವಾಹ್… ಸಕತ್ತಾಗಿದೆ ಸಿನೇಮಾ.. ನೀನು ಡಿ ಬಾಸ್ ಫ್ಯಾನ್ ಯಾವಾಗಾದೆ ಅಂದ್ರಾ… ಹೇಳ್ತೀನಿ ಕೇಳಿ

ಕಣ್ಣಲ್ಲಿ ನೋಡಿದ್ದೆಲ್ಲ ಸತ್ಯ ಆಗಿರೋದಿಲ್ಲ ಅದನ್ನ ಪ್ರಮಾಣಿಸಿ ನೋಡಬೇಕು ಅಂತಾರಲ್ಲ ಅದು ಸತ್ಯ.. ನಾನಿನ್ನು ಸಿನೇಮಾ ನೋಡಿಲ್ಲ  ನಾನು ಹಾಕಿರೋ ಫೋಟೋ  ಸಿನೇಮಾ ರಿಲೀಸ್ ಆಗೋಕಿಂತ ಮೊದಲೇ ಫೋರಂ ಮಾಲಲ್ಲಿ ಡಿಸೆಂಬರ್ ನಾಲ್ಕರ ಬೆಳ್ಳಂಬೆಳಗ್ಗೆ ತೆಗೆಸಿಕೊಂಡ ಫೋಟೋ.. ಹನ್ನೊಂದನೇ ತಾರೀಕೀಗೆ ಸಿನೇಮಾ ರಿಲೀಸ್ ಆದ ದಿನ ಸ್ಟೇಟಸ್ ಹಾಕೋಕೆ ಬೇಕು ಅಂತ.

ಸಿನೇಮಾ ಸೂಪರ್ ಡೂಪರ್ ಆಗೋ ಚಾನ್ಸ್ ಹೆಚ್ಚಾಗಿದೆ, ಬೇಲ್ ಮೇಲೆ ಇದ್ದಾಗಲು ಸಹ ಫಾರಿನ್ ಲೊಕೇಶನ್ ಹೋಗಿ ಅಲ್ಲಿ ಸಾಂಗ್ ರೆಕಾರ್ಡಿಂಗ್ ಮಾಡಿದ್ದೆ ಕೋರ್ಟಿಗೆ ಕೋಪ ತರಿಸಿದ್ದು ಬೆನ್ನು ನೋವು ಅಂತ ಬೇಲ್ ಕೊಟ್ಟರೆ ಅದನ್ನ ದುರುಪಯೋಗ ಮಾಡ್ಕೊಂಡ ಅಂತ.. ಬೇಲ್ ರದ್ದಾಗೋಕೆ ಮುಖ್ಯ ಕಾರಣವೇ ಅದು. ದರ್ಶನ್ ನಟನೆ ಮುಂಚಿಂದಲು ಚನ್ನಾಗಿದೆ.. ಈ ಬಾರಿ ಜೈಲಲ್ಲಿ ಬೇರೆ ಇರೋದರಿಂದ ಅನುಕಂಪದ ಅಲೆಯೊಂದು ನಿರ್ಮಾಪಕನಿಗೆ ಬಂಪರ್ ಲಾಟರಿ ಹೊಡೆಯಬಹುದು.. 

ಅಂದಹಾಗೆ ಎಷ್ಟು ಜನ ಡೆವಿಲ್ ಸಿನೇಮಾ ನೋಡಿದಿರಿ ಹೇಗಿದೆ ಹೇಳಿ.


Saturday, September 19, 2020

ಪ್ರೀತಿಯಿಲ್ಲದ ಮೇಲೆ

 ಪ್ರೀತಿಯ ಮೊಳಕೆಯೊಡೆದು

ಸಲುಗೆಯ ಸಸಿಯೊಡೆದು

ಹಚ್ಚ ಹಸಿರು ತೆನೆಯೊಡೆದು

ಹೆಮ್ಮರವಾಗಿ ಟಿಸಿಲೊಡೆದು

ಆಕಾಶದೆತ್ತರಕೆ ತಲೆಯೆತ್ತಿ ಹೊರಟಿರಲು

ಬಿಳಲುಗಳು ಭೂಮಿಯತ್ತ ಚಾಚುತಲಿರಲು


ಕೊಡಲಿಯಿಂದ ಭಾಹುಗಳ ಕಡಿದು

ಬೇರುಗಳ ಕಿತ್ತು ಹಾಕಿದವಳು ನೀನು  

ಹಸಿರೇ ಉಸಿರೆಂದವಳು ನೀನು

ನನ್ನುಸಿರು ನೀನೆ ಅಂದವನು ನಾನು

ಭಾನೆಗಳ ಬಣ್ಣದಾಟದಲಿ ಬಡವಾಯ್ತು ಬದುಕು!

ಬೆತ್ತಲಾಗಿದೆ ಭಾವನೆಗಳು

 ನಿನ್ನೆದೆಯ ಕಣಿವೆಯಲಿ

ಸೌಂದರ್ಯದ ಗಣಿಯಲಿ

ಬಿಸಿಯುಸಿರ ಬೆಂಕಿಯಲಿ

ತಾಳತಪ್ಪಿದ ಎದೆ ಬಡಿತದಲಿ

ಹುಡುಕುತಿರುವೆ ಒಲವಿನಾ ಕಿಡಿಯ

ಕೆಂದುಟಿಯ ಜೇನು

ಹೀರುವ ದುಂಬಿ ನಾನು

ಕಣ್ಣ ನೋಟದಲಿ

ಮೈ ಮಾಟದಲಿ

ಹೊಕ್ಕಳ ಆಳದಲಿ

ಬೆತ್ತಲಾಗಿದೆ ಭಾವನೆಗಳು


ನೀ ತೊಟ್ಟ ಸೀರೆಯಲಿ

ಸೊಂಟದ ಡಾಬಿನಲಿ

ಕಣ್ಣಂಚಿನ ಮಿಂಚಿನಲಿ

ಕಾಲ್ಗೆಜ್ಜೆ    ಸದ್ದಿನಲಿ

ಹುಡುಕುತಿರುವೆ ಒಲವ ಕಿಡಿಯ ಮತ್ತೆ 

ಬೆತ್ತಲಾಗಿ ನಿಂತಿವೆ ಭಾವನೆಗಳು ಮತ್ತೆ ಮತ್ತೆ

Friday, June 19, 2020

ಹಳೆಯ ನೆನಪು!

ಇವತ್ತು ನನ್ನ ದೊಂದು ಬ್ಲಾಗ್ ಇದೆ ಅದರಲ್ಲಿ ಒಂದಕ್ಷರವೂ ಬರೆಯದೇ ಯಾವ ಕಾಲವಾಯಿತು ಏನಾದರೂ ಬರೆಯಲೇ ಬೇಕು ಅಂತ ಮನಸ್ಸು ಬಹಳವಾಗಿ ಕಾಡತೊಡಗಿತು ಮತ್ತೆ!

 ಅಂದಹಾಗೆ ಈಗ ಬ್ಲಾಗ್ ಓದುವವರು ಕಡಿಮೆಯಾಗಿದ್ದಾರ??..  ಬ್ಲಾಗ್ ಇದೆ ಅನ್ನೋದು ನನಗೇ ಮರೆಯುವಷ್ಟು ದಿನ ಆಗೋಯ್ತು.. ಸಲೀಸಾಗಿ ಓದಿಸಿಕೊಂಡು ಹೋಗುವಂತೆ ಬರೆಯುವುದು ನನ್ನಿಂದ ಮತ್ತೆ ಸಾಧ್ಯವಾ?

ಬ್ಲಾಗ್ ಆರಂಭಿಸಿದ ದಿನಗಳ ಹಳೆಯ ನೆನಪಿನ ಸುರುಳಿ ಮತ್ತೆ ಬಿಚ್ಚಿಕೊಳ್ಳುತ್ತಿರುವ ಅನುಭವವಾಗುತ್ತಿದೆ.
ಆಗ ಇದ್ದಿದ್ದು 2g  ಕಾಲ ಜೊತೆಗೆ ನಮ್ಮ ಮನೆಯಲ್ಲಿ ಇದ್ದಿದ್ದು kbps ವೇಗದ ಬಿಎಸ್ಎನ್ಎಲ್ ನ ವಿಲ್ ಫೋನು! ಅದರಲ್ಲಿ ಇಂಟರ್ನೆಟ್ ಕನೆಕ್ಟಾದರೆ ಕಾಲ್ ಮಾಡೋಕೆ ಬರುತ್ತಿರಲಿಲ್ಲ ಜೊತೆಗೆ ಒಳಬರುವ ಕರೆಗಳು ಬರುತ್ತಿರಲಿಲ್ಲ.. ಬಿಎಸ್ಎನ್ಎಲ್ ಇದಕ್ಕಾಗಿ ತರಿಸಿಕೊಂಡ ಫೋನ್ ಹೆಸರು ಹುವಾವೆ!(Huawei)ನಂತರ ಅದನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೂ ಬಳಕೆಯಲ್ಲಿದ್ದದ್ದು ಮಾತ್ರ ಅದೇ!(ಚೈನಾ ಚೈನಾ!)
ಮೊಬೈಲುಗಳಲ್ಲಿ ತಿಂಗಳಿಗೆ ಕೊಡುತ್ತಿದ್ದ ಡಾಟಾ ಬರೋಬ್ಬರಿ ಒಂದು ಅಥವಾ ಎರೆಡು ಗಿಗಾಬೈಟುಗಳು!
ಗೂಗಲ್ ಟಾಕ್ ಆರ್ಕುಟ್ ಅದೆಷ್ಟು ಜನರಿಗೆ ನೆನಪಿದೆಯೋ ಏನೋ.
ಆದರೆ ಇವೆಲ್ಲದರಿಂದ ಸಿಕ್ಕಿದ್ದು ಮಾತ್ರ ಅಪರಿಮಿತವಾದ ಗೆಳೆಯರು ಗೆಳತಿಯರು... 
ಬ್ಲಾಗ್ ಗಳು ಅತೀ ಹೆಚ್ಚೆಚ್ಚು ಹುಟ್ಟಿಕೊಳ್ಳುತ್ತಿದ್ದ ಕಾಲವದು ಹೆಚ್ಚಿನವರ ಬ್ಲಾಗ್ ಗಳಲ್ಲಿ ಅವರದೊಂದು ಬ್ಲಾಗ್ ಗಾಗಿ ಯೇ ಮಾಡಿಕೊಂಡ ಹೆಸರುಗಳಿರುತ್ತಿದ್ದವು..


ಮನಸ್ವಿ ಅನ್ನೋದು ನಾನಿಟ್ಟುಕೊಂಡ ಬ್ಲಾಗ್ ನಾಮಧೇಯ.. ಇವತ್ತಿಗೂ ಅದೇ ಹೆಸರಲ್ಲಿ ಬರೆಯೊದೇ ನನಗೆ ಖುಷಿ ಕೊಡುತ್ತೆ.. 

ಬರೋಬ್ಬರಿ ಹನ್ನೆರೆಡು ವರ್ಷಗಳಾಗಿ ಹೋಯ್ತು ಈ ಬ್ಲಾಗ್ ಆರಂಭಿಸಿ.. ವರ್ಷಕ್ಕೊಮ್ಮೆ ಬ್ಲಾಗಿಗೆ ಅದರ ಅನಿವರ್ಸರಿ ಹುಟ್ಟಿದಬ್ಬ ಯಾವುದನ್ನು ಮಾಡಲೇ ಇಲ್ಲ ಆದರೂ ಒಂದೇ ಒಂದು ದಿನವೂ ನನ್ನ ಮೇಲೆ ಕೋಪಮಾಡಿಕೊಳ್ಳಲಿಲ್ಲ.. ಅದೆಷ್ಟೊ ದಿನಗಳು ವಾರ ತಿಂಗಳು ನನ್ನ ಬ್ಲಾಗಿನ ಕದವನ್ನೇ ತೆರೆಯದಿದ್ದರು ಗೂಗಲ್ ಕೃಪೆಯಿಂದ ಎಲ್ಲವೂ ಹಾಗೆಯೇ  ಯಥಾವತ್ತಾಗಿವೆ. ನಮ್ಮ ಹೆಚ್ಚಿನವರ ಬ್ಲಾಗುಗಳಲ್ಲಿ ಇನ್ನೊಬ್ಬರ ಬ್ಲಾಗಿಗೆ ಹೋಗಲು ಲಿಂಕ್ ಗಳಿದ್ದಾವೆ ಇನ್ನೂ ಸಹ.. ನಮ್ಮ ಬರಹ ಒದಿ ಅಥವಾ ಇಷ್ಟವಾಗದವರು ಮತ್ತೊಬ್ಬರ ಅದ್ಬುತ ಅನ್ನುವಷ್ಟರ ಮಟ್ಟಿಗೆ ಬರೆಯುವವರ ಬ್ಲಾಗಿಗೆ ದಾಟುವ ಹಾದಿಯಿದೆ!

ಈಗ ಬ್ಲಾಗ್ ಗಳಲ್ಲಿ ಬರೆಯೋದಕ್ಕಿಂತ ಸುಲಭವಾಗಿ.. ಫೇಸ್ಬುಕ್ ವಾಟ್ಸಪ್ ಗಳಲ್ಲಿ ಅನ್ನಿಸಿದ್ದೆನ್ನೆಲ್ಲಾ ಹೇಳಿಬಿಡಬಹುದು ಕ್ಷಣಮಾತ್ರದಲ್ಲಿ ಎಲ್ಲರೂ ಓದಿ ನೋಡಿ ಸುಮ್ಮನಿದ್ದುಬಿಡಬಹುದು.. ನೋಡುಗರ ಸಂಖ್ಯೆ ನೂರರ ಗಡಿದಾಟಿದ್ದರು ಒಬ್ಬರಿಬ್ಬರಿಗಾದರು ಅರ್ಥವಾಯಿತೋ ಗೊತ್ತಾಗೋದೇ ಇಲ್ಲ ಲೈಕು ಸಿಂಬಲ್ಲುಗಳಲ್ಲೇ ಮುಗಿದು ಹೋಗುತ್ತೆ!

ನಾವು ಸುಮಾರಷ್ಟು ವಿಷಯಗಳಿಗೆ ಪ್ರತಿಕ್ರಿಯಿಸೋ ಗೋಜಿಗೆ ಹೋಗೋದಿಲ್ಲ..ನಾವ್ಯಾಕೆ ಹೀಗೆ?
ಪ್ರತಿಕ್ರಿಯೆ ನೀಡಲು ಸಮಯವಿಲ್ಲವಾ? 
ಅನಿಸಿದ್ದಷ್ಟು  ಹಂಚಿಕೊಳ್ಳ ಬೇಕೆನಿಸಿತು.. 

ನಿಮ್ಮ ಅನಿಸಿಕೆಗಳ ಬರುವಿಕೆಯ ನಿರೀಕ್ಷೆಯಲ್ಲಿ... ಕಾಯ್ತಾ
ಇದೀನಿ!

Saturday, July 6, 2019

ಇರೋದು ಒಂದೇ ಪುಟ್ಟ ಜೀವನ

ಹೃದಯದಲಿ ಕೆಟ್ಟ ರಕ್ತದ ಕವಾಟವಿದೆ

ಮೆದುಳಿನಲಿ ಕೆಟ್ಟ ಯೋಚನೆಯ ಹುರಿದುಂಬಿಸುವ        ರಾಸಾಯನಿಕವಿದೆ
 
ಆದರೂ ಇವೆಲ್ಲದರ ನಡುವೆ ಒಂದೊಳ್ಳೆ ಮನಸಿದೆ

ಎದೆ ಬಡಿತಕ್ಕೆ ಕಿವಿಗೊಟ್ಟು ಆಲಿಸು ನಿನಗಾಗಿಯೇ ಬಡಿದುಕೊಳ್ಳುತಿದೆ ಬಿಡುವಿಲ್ಲದೇ......

ನಂಬಿಕೆಯೆಂಬುದರ ಮೇಲೆ ಬದುಕ ಬಂಡಿಯಿದೆ

ಬದುಕಿ ಬಿಡುವ ಬಾ ಇರುವುದೊಂದೇ ಪುಟ್ಟ ಜೀವನ

Wednesday, December 19, 2018

ಬಸ್ಸಿನ ಪ್ರಯಾಣ! ಹಿಂದಿನ ಸೀಟಿನವನ ಫೋನ್ ಮಾತು. ಕನ್ವರ್ ಲಾಲ್ ನ ನೆನಪು!!!

     ಶಿವಮೊಗ್ಗದಲ್ಲಿ ಒಂದು ಮದುವೆಯಿತ್ತು ಹೊರಟಿದ್ದೆ.. ಐದು ನಿಮಿಷಕ್ಕೊಂದು ಬಸ್ಸಿರೊದಕ್ಕೆ ಬಸ್ಸಿನ ಪ್ರಯಾಣನೇ ಸುಖ ಅನ್ನಿಸಿ ಬಸ್ಸು ಹತ್ತಿದೆ.. ಬಸ್ಸು ನಿಧಾನಕ್ಕೆ ಹೊರಟಿತ್ತು.. ಡ್ರೈವರ್ ಇನ್ನೆರೆಡು ಜನ ಬಂದರೆ ಬರಲಿ ಅಂತ ಆಮೆ ವೇಗದಲ್ಲಿ ಹೊರಟಿದ್ದ!.. ಬಸ್ಸು ಹಾಗೆ ಮುಂದೆ ಸಾಗುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಯಾರಿಗೋ ಫೋನ್ ಮಾಡಿ ಮಾತಾಡಲು ಶುರು ಮಾಡಿದ್ದ.. ಆತನದು ಅಚ್ಚ ಕನ್ನಡ ವ್ಯಾಕರಣ ಶುದ್ಧವಾದ ಮಾತದು.. ನನ್ನ ಗಮನವನ್ನು ಕಿಟಿಕೆಯಾಚೆಗಿನ ಪ್ರಕೃತಿ ಗದ್ದೆಯ ಕಡೆ ಹರಿಸಿದೆ.. ಆದರೆ ಕಿವಿ  ಹಿಂದೆ ಕುಳಿತವನ ಮಾತನ್ನು ಆಲಿಸುತ್ತಲ್ಲೇ ಇತ್ತು.. ಕೆಳಲ್ಲ ಜೋರು ಮಾತಾಡಕ್ಕಾ ಅಂತ ದೊಡ್ಡ ದನಿಯಲ್ಲಿ ಮಾತಿಗಿಳಿದಿದ್ದ.. ನಿಮಿಷಕ್ಕೊಮ್ಮೆ ಅಕ್ಕಾ ಅಕ್ಕಾ ಎನ್ನುತ್ತಿದ್ದ.. ಭಗವಂತನಿಗೆ ಕರುಣೆ ಇಲ್ಲಕ್ಕ.. ಅವಳು ಒಳ್ಳೆಯವಳಲ್ಲಕ್ಕಾ ಅಂದ.. ನನಗೆ ಪೋನಿನಾಚೆಗಿನ ವ್ಯಕ್ತಿಯ ಪ್ರತಿಕ್ರಿಯೆ ಏನಿರಬಹುದು ಎನ್ನುವ ಕುತೂಹಲ ಶುರುವಿಟ್ಟುಕೊಂಡಿತ್ತು.. ಧ್ವನಿ ಹೇಗಿರಬಹುದು ಇಂಪಾಗಿದೆಯಾ. ಘಟವಾಣಿ ದ್ವನಿಯಾ?

 ಅವಳು ಹೇಗಿರಬಹುದು ಅವಳ ಧ್ವನಿ ಹೇಗಿರಬಹುದು ಅನ್ನಿಸಿದ್ದು ಸುಳ್ಳಲ್ಲ! ಆತ ತನ್ನೆಲ್ಲಾ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದ.. ಎಷ್ಟು ದೊಡ್ಡ ಧ್ವನಿಯಲ್ಲಿ ಮಾತಾಡುತ್ತಿದ್ದ ಎಂದರೆ ಒಂದೇ ಒಂದು ಪದ ಮಿಸ್ಸಾಗೋ ಚಾನ್ಸ್ ಇರಲಿಲ್ಲ.. ಅಕ್ಕ ಅವಳು ನಿಂಗೂ ಭಾವಂಗೂ  ಬೇಜಾರು ಮಾಡಿ ಬಿಟ್ಟಲಕ್ಕ ಭಾವನ ಮನಸ್ಸು ಮಗುವಿನ ಮನಸ್ಸಿನ ತರ.. ಬೇಸರ ಮಾಡ್ಕೊಂಡ್ರೆನಕ್ಕಾ ಎನ್ನುತ್ತಿದ್ದ.. ಇದೊಂಥರಾ ಒನ್ ವೇ ಆಗಿದ್ದಕ್ಕೆ ಅಕ್ಕಯ್ಯನ ಮಾತನ್ನು ನಾನೇ ಕಲ್ಪಿಸಿಕೊಳ್ಳಬೇಕಿತ್ತು ಅವಳು ತಮ್ಮನನ್ನು ಸಮಾಧಾನ ಮಾಡುವ ಹರಸಾಹಸದಲ್ಲಿದ್ದಿರಬಹುದು ಅನ್ನಿಸಿತು.. ಬೇರೆಯವರ ವಿಚಾರ ನಮಗೇಕೆ ಅಂತ ಮೊಬೈಲ್ ನಲ್ಲಿ ಬೆರೆಳಾಡಿಸತೊಡಗಿದೆ.. ಅಷ್ಟರಲ್ಲಿ ಅಕ್ಕಾ ಅಂಬರೀಶ್ ನೋಡಕ್ಕಾ ಎಷ್ಟು ಜನ ಸಂಪಾದನೆ ಮಾಡಿದ್ದ ಆತರ ಜನ ಸಂಪಾದಿಸಬೇಕಕ್ಕ ಅಂದ..

ಅಂಬರೀಶ್ ಬಗ್ಗೆ ಆತ ಹೇಳಿದ್ದು ಅಕ್ಷರಶಃ ಸತ್ಯ ಅನ್ನಿಸಿತು.. ಅದೆಷ್ಟು ಜನ ಸಾಗರ ಮೌನವಾಗಿ ಕಂಬನಿ ಮಿಡಿದಿತ್ತು.. ಬೆಂಗಳೂರಿನಿಂದ ಪಾರ್ಥಿವ ಶರೀರದ ದರ್ಶನಕ್ಕೆ ಪಟ್ಟು ಬಿಡದೆ ಮಂಡ್ಯಕ್ಕೆ ತರಿಸಿದ ಜನ ಒಂದೇ ಒಂದು ಕಡೆಯೂ ಗೌಜು ಗದ್ದಲವಿಲ್ಲದೆ ಬಂದು ಹೋಗುತ್ತಿದ್ದರು. ರಾಜಕುಮಾರ್ ಮತ್ತು ವಿಷ್ಣು ತೀರಿಕೊಂಡಾಗ ನೆಡೆದ ಗಲಾಟೆಗಳು ಗೌಜು ಗದ್ದಲ ಎಲ್ಲೂ ಇರಲಿಲ್ಲ.. ಅಂಬರೀಶ್ ಯಾವನೋ ಅವನು ಗಲಾಟೆ ಮಾಡೋನು ಅಂದು ಬಿಟ್ರೆ ಅನ್ನೋ ತರ ಶಾಕಲ್ಲಿ ಇತ್ತು ಜನತೆ.. ಮಂಡ್ಯದ ಪ್ರತಿ ಮನೆಯ ದೇವರ ಕೋಣೆಯಲ್ಲಿ ಅಂಬರೀಶ್ ಫೋಟೋ ಇದೆಯಂತೆ. ಅಂಬರೀಶ್ ಅವರ ವಿಶಿಷ್ಟ ಮ್ಯಾನರಿಸಮ್ ಡೈಲಾಗ್ ಡೆಲಿವರಿ.. ಕನ್ವರ್ ಲಾಲಾ ನ " ಕುತ್ತೆ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ" ಅನ್ನೋ ವರೆಗಿನ  ಡೈಲಾಗ್.. ಅಂಬಿಕಾ ಜೊತೆಗಿನ ಛಳಿ ಛಳಿ ತಾಳೇನು ಈ ಛಳಿಯಾ ಹಾಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿನಗಳು ಹೀಗೆ ಮನಸ್ಸು ಅಂಬಿ  ಇಲ್ಲ ಅನ್ನೋ ಸತ್ಯಕ್ಕೆ ಒಗ್ಗಿಕೊಳ್ಳಲು ಕಷ್ಟ ಪಡುತ್ತಲಿತ್ತು. ಮನಸ್ಸಿನ ತುಂಬಾ ಕನ್ವರ್ ಲಾಲ್ ತುಂಬಿಹೋಗಿದ್ದ.

ಇಷ್ಟಾದರೂ ಆನ್ ಲಿಮಿಟೆಡ್ ಕಾಲ್ ಮಹಿಮೆ ಆತ ಮಾತು ಮುಂದುವರೆಸಿದ್ದ.. ಅಕ್ಕಾ ನಿನ್ನ ಮಗ ನನ್ನ ಮಗ ಇದ್ದಂಗೆ ಚಾನಾಗಿ ನೋಡ್ಕೋಬೇಕಕ್ಕ ಅಂದ.. ದೇವರು ಇದ್ರೆ ಮನೆ ಕಟ್ಟಿ ಊಟ ಹಾಕ್ತಿನಕ್ಕ.. ಮಂಜಣ್ಣ ನ ಹಾಗೆ ಮನೆ ಕಟ್ಟಿ ಅವನ ತರ ಜನಾನ ದೂರ ಮಾಡ್ಕೊಳಲ್ಲ ಎಲ್ಲರೂ ಜೊತೆಗಿರಬೇಕಕ್ಕ ಅಲ್ವೇನಕ್ಕ ಅನ್ನುತ್ತಿತ್ತು.. ಮಂಜಣ್ಣ ಯಾರು ಗೊತ್ತಿಲ್ಲ.. ಆ ಅಕ್ಕ ಅವನ ಸ್ವಂತ ಅಕ್ಕನೋ ಜೊತೆಗೆ ಆಡಿ ಬೆಳೆದವಳಾ.. ಅಥವಾ ಪಕ್ಕದ ಮನೆಯವಳಾ.. ನಾನು ಬಸ್ಸು ಇಳಿಯುವ  ಜಾಗ ಬಂದಿತ್ತು.. ಇಳಿಯುವಾಗ  ಹಿಂದೆ ತಿರುಗಿ ಅವನ ಮುಖ ನೋಡಿ ಬಿಡಲ ಅನ್ನೋ ಕುತೂಹಲ ಕಾಡತೊಡಗಿತ್ತು.. ಆದರೆ ಅವನ ದ್ವನಿಯೊಂದೇ ನೆನಪಿನಲ್ಲಿರಲಿ ಎಂದು ಅವನನ್ನು ನೋಡದೆ ಕೆಳಗಿಳಿದುಬಿಟ್ಟೆ...

ಆತ ಹೇಗಿರಬಹುದು.. ಅವಳ ದ್ವನಿ ಹೇಗಿರಬಹುದು.. ಅವಳ ಮಗ ಹೇಗಿರಬಹುದು.. ನಿಮ್ಮ ಕಲ್ಪನೆಗೆ ಬಿಟ್ಟಿದ್ದು.

Saturday, November 24, 2018

ಸುಪ್ರೀಂ ಪವರ್ರು ಸಲಿಂಗಕಾಮ #meetoo

ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ಗೌರವ ಇದೆ ಹಾಗಂತ ಮಾಡಿದ ಅನ್ಯಾಯಗಳನ್ನು ಮರೆಯೋದು ಹೇಗೆ? ಕಾವೇರಿ ವಿಚಾರದಲ್ಲಿ ನೀರಿಲ್ಲದ್ದು ಕಣ್ಣಿಗೆ ಕಾಣಿಸಿದರೂ ತಮಿಳುನಾಡಿಗೆ  ಇಂತಿಷ್ಟು ಕ್ಯೂಸೆಕ್ಸ್ ನೀರು ಬಿಡಲು ಸೂಚಿಸೋದು.

ಸಲಿಂಗ ಕಾಮ ಅಪರಾಧ ಅಲ್ಲ ಅನ್ನೋದು ಸಹ ಚರ್ಚೆಗೆ ಗ್ರಾಸವಾಗೋ ವಿಚಾರ ಆದರೆ ನಮ್ಮ ದೇಶ ಇನ್ನು ಸುಸಂಸ್ಕೃತ ಆಚಾರ ವಿಚಾರ ಹೊಂದಿರುವ ದೇಶ.. ನಾಲ್ಕು ಗೋಡೆಗಳ ನಡುವೆ ನಡೆಯೊದನ್ನ ಸಾರ್ವಜನಿಕವಾಗಿ ಮಾತಾಡಲು ಇನ್ನು ಮುಜುಗರ ಪಡುತ್ತಾರೆ.. ದೇಶದ ಶೇಕಡಾ 60 ಕ್ಕಿಂತ ಹೆಚ್ಚಿನ ಜನ ಸ್ನಾನ ಮಾಡುವಾಗ    ಸಹ ಅಂಡರ್ವೇರ್ ಧರಿಸಿ ಸ್ನಾನ ಮಾಡುತ್ತಾರಂತೆ!

     ಸಲಿಂಗ ಕಾಮ ಅನ್ನೋದು ಸಮಾನತೆ ತರುವುದರ ಜೊತೆ ಅಸ್ವಾಭಾವಿಕ ಮಾನವನ ವಿಕೃತ ಮನಸ್ಥಿತಿಯ ಸೂಚಕ... ಒಬ್ಬ ಗಂಡಸಿಗೆ ಒಂದು ಹೆಣ್ಣಿನ ಮೇಲೆ ಪ್ರೇಮ ಪ್ರೀತಿ ಕಾಮ ಭಾವನೆ ಮೂಡುವುದು ಸ್ವಾಭಾವಿಕ ಪ್ರಾಕೃತಿಕ ಸಹಜ ಪ್ರಕ್ರಿಯೆ.. ಹಾಗೆಯೇ ಹೆಣ್ಣಿಗೂ ಸಹ ಕಟ್ಟುಮಸ್ತಾದ ಗಂಡಿನ ಮೇಲೆ ಭಾವನೆಗಳ ಹೊಯ್ದಾಟವೂ ಸಹ.. ಅದೇ ತರಹ, ಹಾಗಂತ ಆಕೆ ತನ್ನಲ್ಲಿನ ಭಾವನೆಗಳ ಮೇಲೆ ಇರೋ ಹಿಡಿತ ಗಂಡಸಿಗೆ ಇರೋದು ಕಷ್ಟಕರ..ಹಾಗಂತ ಗಂಡಸರು ಮಾತ್ರ ಕಚ್ಛೆ ಹರುಕರು ಅಂತಲ್ಲ.. ಈಗಿನ ಮಾಡರ್ನ್ ಹುಡುಗಿಯರು ತಾವು ಯಾವುದರಲ್ಲೂ ಕಡಿಮೆಯಿಲ್ಲ ಎಂದು ಗಂಡಸರಿಗೆ ಸವಾಲು ಹಾಕುವ ಕಾಂಡಮ್ ಪ್ಯಾಕೇಟುಗಳನ್ನು ಜೊತೆಗೆ ಇರಲಿ ತಕ್ಷಣಕ್ಕೆ ಸಿಗದೆ ಹೋದರೆ ಅಂತ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಳ್ಳುವ ಕಾಲವು ಬಂದಿದೆ.ಗಂಡು ಗಂಡಿನ ಜೊತೆ,  ಹೆಣ್ಣು ಹೆಣ್ಣಿನ ಜೊತೆ ಕಾಮಕ್ರಿಯೆಯಲ್ಲಿ ತೊಡಗುವುದು ಮಾನವರಲ್ಲಿ ಮಾತ್ರ ಮತ್ಯಾವ ಪ್ರಾಣಿಗಳಲ್ಲೂ ಇಲ್ಲ.. ಅದೇ ರೀತಿ  ಹೆಣ್ಣು ಹೆಣ್ಣಿನ ಕಾಮದಿಂದ ಮಕ್ಕಳನ್ನು ಪಡೆಯೋದು ಅಸಾಧ್ಯ!

ಸುಪ್ರೀಂ ಪವರ್ ಇದೇ ಅಂತ ಏನೇನೋ ತೀರ್ಪು ಕೊಡೋದು ಎಷ್ಟು ಸಮಂಜಸ... ಅನೈತಿಕ ಸಂಬಂಧ ಅಪರಾಧವಲ್ಲ ಅಂದರೆ ಮೊದಲು ಮನಸ್ಸಿನ ಒಳಗೆ ಹುಟ್ಟೋ ಗೊಂದಲ ಅರೇ ಹೀಗೂ ಸಾಧ್ಯನಾ ಅಂತ
ಅರೆ ಯಾರದೋ ಹೆಂಡತಿ ಜೊತೆಗೆ ಸಂಬಂಧ ಇಟ್ಟುಕೊಂಡರು ತಪ್ಪು ಅಲ್ಲವಾ.
       ಮದುವೆಯಾಗಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದವರಲ್ಲೂ ಒಂದು ಕ್ಷಣಕ್ಕೆ  ಮನಸ್ಸಿನ ಒಂದು ಮೂಲೆಯಲ್ಲಿ ವ್ಯಭಿಚಾರ ಅಪರಾಧ ಅಲ್ಲವಾ ಎನ್ನುವ ಪ್ರಶ್ನೆ ಹಾದುಹೋದರೆ??

ಈಗಿನ ಚಲನಚಿತ್ರಗಳಲ್ಲೂ ಸಹ  ಸೆಕ್ಸ್ ದೃಶ್ಯಗಳು ಸಾಮಾನ್ಯವಾಗಿ ಹೋಗಿದೆ.. ಅದರಲ್ಲೂ ಸಹ ಲಿವಿಂಗ್ ಟುಗೆದರ್.. ಮದುವೆಯಾಚೆಗಿನ ಕಾಮ ಸಂಬಂಧಗಳನ್ನೇ ತೋರಿಸೋದು ಹೆಚ್ಚು.. ಹದಿ ಹರೆಯದವರಲ್ಲಿ ಅದೇ ಭಾವನೆಗಳು ಹುಟ್ಟಬಹುದಲ್ಲವಾ???

ದೊಡ್ಡ ಗೌಡರ ಮನೆಯ ಕೆಂಪಿ.. ಸುಬ್ಬಾಹೆಗ್ಡೆರ ಮನೆ ಭಾಗಿ.. ಸಣ್ಣಭಟ್ಟರ ಮನೆ ಸುಬ್ಬಿ ತೋಟದ ಮನೆಗೆ ಹೋಗೋದು  ಗುಟ್ಟಾಗಿ ಉಳಿದಿರಲೇ ಇಲ್ಲ.. ಆಗ ಅದು ಈಗಿನ ಒಪ್ಪಿಗೆ ಕಾನೂನು ಏನು ಮಾಡಿದ್ದಾರೋ ಅದೇ ತರಹ ಒಪ್ಪಿತ ಸಂಬಂಧವಾಗಿದ್ದಿರಬಹುದು.. ಆಗ #meetoo ಇರಲಿಲ್ಲ ಈಗಿನ ಹಾಗೆ ಮೀಟಿಸಿಕೊಂಡು ಹತ್ತಾರು ವರ್ಷ ಕಳೆದ ಮೇಲೆ ಆತ ನನ್ನೊಂದಿಗೆ ಅದು ಮಾಡಿದ್ದ ಇದು ಮಾಡಿದ್ದ ಅನ್ನೋದಿಕ್ಕೆ!

ಗಂಟಲಾಳದಲ್ಲಿ  ಹೇಳೋದಕ್ಕೆ ಇನ್ನೂ ಸಾಕಷ್ಟಿದೆ.. ಈಗ ಸಾದ್ಯಕ್ಕಿಷ್ಟು ಸಾಕು.. ಮುಂದುವರೆಯುತ್ತದೆ*
(2022ರ ಓಳಗೆ)☺️

Saturday, June 30, 2018

ಅಧರ ಸದರ

ಅವಳ ನೆನಪು
ಮತ್ತೆ ಮತ್ತೆ ಕಾಡುತಿದೆ

ಆ ಮೊದಲ ನೋಟ
ನೆನಪುಗಳ ಓಟ

ಕಿರುನಗೆಯ ಆಟ
ಪ್ರೀತಿಯ ಪಾಠ

ಸೀರೆಯ ಸೆರಗಿನ ಹಾರಾಟ
ಮನಸಿನೊಳಗಿನ ವರಾತ

ಕದ್ದು ಬಿಟ್ಟೆ ನೀ ಹೃದಯದ ಕವಾಟ
        ಕಟ್ಟು ಕಲ್ಪನೆಯ ಕಪಾಟ

ಮಳೆಯಬ್ಬರಕ್ಕೆ ನಲುಗುತ್ತಿದೆ ಅಧರ
ಬೆಚ್ಚಗಿಡುವೆ ಸ್ವಲ್ಪ ಕೊಟ್ಟರೆ ಸದರ

ಬೆತ್ತಲಾಗಿ ನಿಂತಿದೆ ಭಾವನೆಗಳು
ಮುಚ್ಚಿಟ್ಟಿರುವ ಕಾಮನೆಗಳು ಬಯಲಾಗಿದೆ

ಕಾರ್ಮೊಡ ಕವಿಯುವ ಮುನ್ನ ಸೆರಗಂಚಿನಲ್ಲಿ ಗಾಳಿ ಬೀಸಿಬಿಡು

ಬಿತ್ತಿಬಿಡುವೆ ಪ್ರೀತಿಯ ಬೀಜ!

ಹೊತ್ತಿ ಉರಿಯಲಿ
ಕಾಳ್ಗಿಚ್ಚು ಹೊಟ್ಟೆಯೊಳಗೆ!

Monday, October 30, 2017

ಮನಸಿನ ಪುಟಗಳ ಮೇಲಿನ ಸಾಲುಗಳು!

ಮನಸಿನ ಪುಟಗಳ ಮೇಲಿನ ಸಾಲುಗಳು ಮಳೆಯಬ್ಬರಕ್ಕೆ
ಕಲಕಿ ಹೋಗಿದೆ,

ಮಳೆ ನಿಲ್ಲುವವರೆಗೆ ಕಾಯಲೇ ಬೇಕಿದೆ, ಮಳೆಯ೦ಗಳದೊಳಗೆ ನೀ ಬಿಟ್ಟು ಹೋದ ಹೆಜ್ಜೆಗುರುತುಗಳ ಹಾಗೇ ನೋಡುತ್ತ ನಿ೦ತಿರುವೆ. ದೂರದಲ್ಲೆಲ್ಲಾದರೂ ನಿನ್ನ ಗೆಜ್ಜೆ ಸದ್ದು ಮಳೆಯಬ್ಬರದ ಮಧ್ಯ ಕೇಳ ಬಹುದೇನೋ ಎ೦ದು,

ನೀ ನೀಡಿದ ಬಿಸಿಯುಸಿರ ಮುತ್ತಿನ ಹಸಿಹಸಿ ನೆನಪೊ೦ದು ಕಾಡುತಿ್ತದೆ,
  ನಿನ್ನೆದೆಯಾಳದೊಳಗೆ  ಬೆಚ್ಚಗೆ ಹುದುಗುವಾಸೆ ಹೆಚ್ಚಾಗುತ್ತಿರಲು

ಖಾಲಿ ಕಾಪಿ ಕಪ್ಪೊಳಗಿನ ಉಳಿದ ಹೆಪ್ಪುಗಟ್ಟುತಿರುವ ಹನಿಯೊ೦ದು ನಗುತ್ತಾ ಹೇಳಿತು ನಿನ್ನ ಮನಸಿನ ಪುಸ್ತಕವೇ ಕದಡಿ ಕೆಸರು ತು೦ಬಿದೆ ಎ೦ದು.

Friday, January 8, 2016

ಭಟ್ಟರ ಪತ್ರಿಕೆ ವಿಶ್ವ ವಾಣಿ ಬರ್ತಿದೆ ದಾರಿ ಬಿಡಿ!


ಹೊಸ ವರ್ಷದ ಹಾರ್ದಿಕ ಶುಭಾಶಯಗಳು...ಯುಗಾದಿಗೆ ನಮಗೆ ಹೊಸವರುಷ ಅಂತೀರಾ?   ನನ್ನ ಸ್ನೇಹಿತೆಯೊಬ್ಬಳು ಹೊಸ ವರ್ಷಕ್ಕೆ ಫೇಸ್ ಬುಕ್ ನಲ್ಲಿ ಹಾಕಿದ್ದೇನಪ್ಪಾ ಅಂದ್ರೆ ವರ್ಷವಿಡೀ ಕ್ಯಾಲೆಂಡರನ್ನೆ ನೋಡಿ ಇವತ್ತಿಂತಾ ದಿನ ಅಂತ ತಿಳ್ಕೊಳೋ ನೀವು ಹೊಸವರ್ಷ ಬಂದಾಗ ಮಾತ್ರ ಯಾಕೆ ಹೀಗೆ ಅಂತ ಅವಳ ಪ್ರಶ್ನೆ, ಹೊಸವರ್ಷ ಆಚರಿಸಿ ಆತ್ಮೀಯರಿಗೆ ಶುಭ ಹಾರೈಸಿ, ಯುಗಾದಿ ಹಬ್ಬವನ್ನು ಇನ್ನೂ ಹೆಚ್ಚಿನ ಸಂತಸದಿಂದ ಆಚರಿಸಿ ಅಂತ ಬರೆದಿದ್ದಳು.. ನನಗೂ ಅವಳು ಹೇಳಿದ್ದು ಸರಿ ಅನಿಸಿದ್ದು ನಿಜ.


    ಒಂದು ಕಾಲವಿತ್ತು ಆಗಿನ್ನೂ ಬ್ಲಾಗುಗಳು ಹುಟ್ಟಿಕೊಂಡಿದ್ದವು ಆವಾಗ ಪತ್ರಕರ್ತ ಮಿತ್ರರು ಅಥವಾ ಪ್ರಿಂಟ್ ಮೀಡಿಯಾದ ಗೆಳೆಯರ ಮನಸ್ಸಿನಲ್ಲಿದ್ದಿದ್ದು ಈ ಬ್ಲಾಗುಗಳು ಅಂದರೆ ನಾಯಿಕೊಡೆಗಳಿದ್ದಂತೆ, ಮನಸ್ಸಿಗೆ ಬಂದಿದ್ದು ಬರ್ಕೊತಾರೆ, ಇವರನ್ನು ಯಾರು ಕೇಳ್ತಾರೆ ಅನ್ನೋ ಅಂತ ಮನೋಭಾವ ಇದ್ದಿದ್ದು ಅಕ್ಷರಹ ಸತ್ಯ. ಈಗ ಪರಿಸ್ಥಿತಿ ಹಾಗಿಲ್ಲ ಬ್ಲಾಗುಗಳ ಬಗ್ಗೆ  ಆ ಬ್ಲಾಗಿನೊಳಗಿನ ಅಂತರಂಗದಲ್ಲಿರುವ  ವಿಚಾರದಾರೆಗಳ ಬಗೆಗೆ ಪತ್ರಿಕೆಗಳಲ್ಲಿ ಮುಕ್ತ ಕಂಠದಿಂದ ಶ್ಲಾಘಿಸಿ ತಮ್ಮ ಪತ್ರಿಕಗಳಲ್ಲಿ ಪ್ರಕಟಿಸುತ್ತಿರುವುದು ನಿಮಗೆ ಗೊತ್ತಿರುವ ಸಂಗತಿ. ಬ್ಲಾಗರ್ ಗಳು ತಮಗೆ ಬ್ಲಾಗ್ ನಾಮದೇಯವನ್ನು ಇಟ್ಟುಕೊಳ್ಳೋದು ಒಂದು ತರಹ ಟ್ರೆಂಡ್ ಆಗಿತ್ತು ಅವಾಗ. ಅದೇ ನಾಮದೇಯ ಇವತ್ತಿಗೂ ಹಾಗೆ ಇದೆ.ಅದೇ ಹೆಸರಿನಿಂದಾಗಿ ಅನೇಕ ಬ್ಲಾಗರ್ ಗಳು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ

     ದಿನ ಪತ್ರಿಕೆಗಳ ಸಂಖ್ಯೆ ಹೆಚ್ಚಾಗುತ್ತಾ ಇದೆ. ಓದುಗರು ಸಹ  ತಮಗೆ ಬೇಕಾಗಿದ್ದನ್ನು ಆರಿಸಿಕೊಳ್ಳುವಷ್ಟು ಪತ್ರಿಕೆಗಳು ಬಂದಿರುವುದು ಸಂತಸದಾಯಕ. ನಮ್ಮ ಹೃದಯಕ್ಕೆ ಹತ್ತಿರವಾಗೋ ಕಾಲಂ ಗಳು, ಸಂಪಾದಕೀಯ, ಅಕ್ಷರ ವಿನ್ಯಾಸ, ಪುಟ ಸಂಖ್ಯೆ, ಸಪ್ಲಿಮೆಂಟ್ ಗಳು ಎಲ್ಲವೂ ಒಂದು ಪತ್ರಿಕೆಯನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ,
ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೆ ವಿಶ್ವೇಶ್ವರ ಭಟ್ಟರ ವಿಶ್ವ ವಾಣಿ ಇದೇ ಜನವರಿ ಹದಿನೈದನೆ ತಾರೀಖು ಜನರನ್ನು ತಲುಪುತ್ತಿದೆ.

     ಭಟ್ಟರ ಪರ್ತಿಕೆ ಅಂದ ಮೇಲೆ ಅದರಲ್ಲಿ ಸಾಗರದ ನೀರ ಪ್ರೀತಿಯ ರಾಧಾಕೃಷ್ಣ ಭಡ್ತಿಯ ನೀರಿನ ಬಗೆಗಿನ ಕಾಳಜಿ, ಅಂತರ್ಜಲ ಕಡಿಮೆಯಾಗುತ್ತಿರುವ ಬಗೆಗಿನ ಭೀತಿ, ನೀರ್ಮಾಹಿತಿ ಅಂದರೂ ತಪ್ಪಾಗಲಾರದು ಅದು ಇರಲೇ ಬೇಕು, ನೀರಿಗೂ ಭಡ್ತಿಯವರಿಗೂ ಅದೇನೋ ಅವಿನಾಭಾವ ಸಂಭಂದವಿದೆಯೋನೋ ಅಂದರು ಅತಿಶಯೋಕ್ತಿಯಾಗಲಾರದು, ಹನಿ ಹನಿ ನೀರ ಮೇಲೆ ಅದೇನೋ ಒಂತರಾ ಅಧಮ್ಯ ಪ್ರೀತಿ ಇರೋದು ಅವರ ಪ್ರತಿ ಅಕ್ಷರಗಳಲ್ಲಿ ವ್ಯಕ್ತವಾಗುತ್ತದೆ, ಭಡ್ತಿಯವರನ್ನು ನೋಡಿ ಅನೇಕ ವರ್ಷಗಳೇ ಕಳೆದು ಹೋದವೇನೋ.. ಸಾಗರದಲ್ಲಿ ಅವರಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ನೋಡಿ ಮಾತಾಡಿದ್ದಷ್ಟೆ, ಅವರಿಗೆ ನಾನು ಮಹಾಬಲೇಶ್ವರ ಭಟ್ಟರ ಮೊಮ್ಮಗ ಅನ್ನೋದಷ್ಟೆ ನೆನಪಿರಬಹುದು, ಸಾಗರಕ್ಕೆ ಬಂದಾಗಿ ಬೇಟಿ ಮಾಡೋ ಆಸೆಯಂತು ಇದೆ ಮತ್ತೆ ವಿಶ್ವವಾಣಿಯಲ್ಲಿ ನೀರಿನ ಸೆಲೆ ಮತ್ತೆ ಸಿಗಲಿದೆ ಅನ್ನೋ ಖುಷಿ ಇದೆ, 

ಇನ್ನು ಜಗತ್ತನ್ನ ಬೆತ್ತೆಲೆಯಾಗಿ ತೋರಿಸೋ ಸಿಂಹನ ಅಂಕಣ ಇದ್ದೇ ಇರುತ್ತೆ, ಜಗತ್ತಿನ ಆಗುಹೋಗುಗಳ ಬಗೆಗಿನ ಮಾಹಿತಿಯನ್ನು ಜನರ ಮನಸ್ಸಿನಾಳಕ್ಕೆ ಇಳಿಸುವಲ್ಲಿ ಸಿಂಹ ಯಶಸ್ವಿಯಾಗಿದ್ದಾರೆ. ಬೆತ್ತಲೆ ಜಗತ್ತು ಅನ್ನೋ ಅಂಕಣ ಜನರಿಂದ ಅಪಾರ ಪ್ರೀತಿಗಳಿಸಿ ಪುಸ್ತಕರೂಪದಲ್ಲಿ ಹೊರಬಂದಿರುವುದು ಇತಿಹಾಸ. ಇನ್ನೂ ಹೆಚ್ಚಿಗೆ ಸಿಂಹದ ಬಗ್ಗೆ ಹೇಳುವ ಪ್ರತಾಪವನ್ನು ಮಾಡಲಾರೆ. ಪತ್ರಿಕಾ ರಂಗದಲ್ಲಿ ಹಾಗೂ ವಿಶ್ವ ವಾಣಿ ಪತ್ರಿಕೆ ಯ  ಎಲ್ಲರ ಪರಿಚಯವೂ ನನಗಿಲ್ಲದೆ ಇರೋದು ನನ್ನ ಬರವಣಿಗಿಗೆ ಚಿಕ್ಕದೊಂದು ಚೌಕಟ್ಟು ಹಾಕುತ್ತಿರುವುದು ಸತ್ಯ

ಚಿರುವಿನ ಬಗ್ಗೆ ಬರೆಯೋಕೆ ಹೋದರೂ ಸಾಕಷ್ಟಿದೆ, ಚಿರಂಜೀವಿ ಭಟ್ಟ ಪೇಸ್ಬುಕ್ಕಿನ ಅಪ್ಡೇಟ್ ಗಳನ್ನೆ ಒಂದು ಪುಸ್ತಕ ರೂಪದಲ್ಲಿ ತರಬಹುದು ಅಷ್ಟು ಬರೀತಾನೆ, ಹೊಸ ಪ್ರಯೋಗಗಳನ್ನ ಸದಾ ಮಾಡ್ತಾ ಇರೋದು ಅವನ ಜಾಯಮಾನ, ಸಂಗೀತ, ಡಿಬೇಟು ಕೇಳ್ಬೇಡಿ ಯಾವ್ದು ಅಂತ, ನ್ಯೂಸ್ ರೀಡಿಂಗ್ ಹೇಗಿರುತ್ತೆ ಅದನ್ನೂ ಸಹ ಪ್ರಯತ್ನಿಸೋ ಹಂಬಲ, ಸ್ಕ್ರೀನ್ ಸ್ಕ್ರೋಲಿಂಗು ಕಾಲಲ್ಲಿದ್ದು ಮರಾಯ ಎಂಗೆ ಕಷ್ಟ್ ಆಗೋತು ಅಂದಿದ್ದು ಇನ್ನೂ ನೆನಪಿದೆ. ವಿಚಾರದಾರೆಗಳು ಅವನದು ವಿಶಿಷ್ಟವಾಗಿದೆ, ಹೌದಲ್ವಾ ಇದು ಹಿಂಗಾ ಅನ್ನುವಂತೆ ಮನ ಮುಟ್ಟುವಂತೆ ಬರೀತಾನೆ. ಈ ರೀತಿಯಲ್ಲೂ ನೋಡಬಹುದಲ್ವಾ ಅನ್ನಿಸಿಬಿಡುವಂತೆ ಮಾಡಿಬಿಡ್ತಾನೆ. ಗೆಳೆಯ ಇದೇ ರೀತಿಯ ಹೊಸ ಹೊಸ ಪ್ರಯೋಗ ಮಾಡುತ್ತಲೇ ಇರು.

ಇನ್ನು ವಿಶ್ವ ವಾಣಿ ಅಂದರೆ ವಿಶ್ವೇಶ್ವರ ಭಟ್ಟರ ಬಗ್ಗೆ ಬರೆಯದೇ ಹೋದರೆ ಲೇಖನ ಅಪೂರ್ಣವಾಗಿಬಿಡುತ್ತದೆ, ಜೊತೆಗೆ ಅವರನ್ನು ಬೇಟಿಯಾದ ಕ್ಷಣದ ಹಚ್ಚ ಹಸಿರಾಗಿ ಮನಸಿನೊಳಗೆ ನಿಂತಿದೆ, ಕರ್ಕಿಕೊಪ್ಪದ ಪ್ರಸನ್ನ ನ ನಮ್ಮನೆಗೆ ಬಾ ಎಂದಿದ್ದ, ನಾನು ಅವನ ಜೊತೆ ಅವನ ಮನೆಗೆ ಹೊರಟೆ, ಮಧ್ಯ ವಿಶ್ವೇಶ್ವರ ಭಟ್ಟರ ಬೇಟಿ ಮಾಡಿಕೊಂಡು ಹೋಗೋಣ ಎಂದು ಹೇಳಿದ, ಪ್ರಸನ್ನ ಸಿಕ್ಕಾಪಟ್ಟೆ ನೆಡಸ್ತಾನೆ ಅಂತ ಗೆಳೆಯ ಹೇಳಿದ್ದು ನೆನಪಿಗೆ ಬಂತು, ನೆಡ್ಕಂಡು ಹೋಪನ ಅಲ್ದ ಅನ್ನುವ ನುಡಿಮುತ್ತು ಅವನ ಬಾಯಿಂದ ಬಂದಾಗಿತ್ತು. ಒಂದೆರೆಡು ಕಿಲೋ ಮೀಟರ್ಗಿಂತ ಕಡಿಮೆಯಿಲ್ಲದಂತೆ ನೆಡೆದುಕೊಂಡು ಹೋಗಿ ಮಧ್ಯ ಒಂದು ಪ್ಲೇಟ್ ಮಸಾಲ ಪೂರಿ ತಿಂದು ಕನ್ನಡ ಪ್ರಭ ಆಪೀಸಿನತ್ತ ಮತ್ತೆ ನೆಡೆಯಲಾರಂಬಿಸಿದೆವು.. ಟೈಮ್ಸ್ ಆಫ್ ಇಂಡಿಯಾದ ಎರಡನೇ ಮಹಡಿಯಲ್ಲಿ ಕನ್ನಡ ಪ್ರಭ ಪತ್ರಿಕೆಯ ಒಳಕ್ಕೆ ಪ್ರವೇಶಿಸಿದೆವು, ಒಳಗೆ ಸಾಫ್ಟ್ ವೇರ್ ಕಂಪನಿಗಳಲ್ಲಿರುವಂತೆ ಕ್ಯಾಬಿನ್ನುಗಳು ಎಲ್ಲರೂ ತಮ್ಮ ತಮ್ಮ ಕಾಲಂ ಗಳನ್ನ ಕುಟ್ಟೋದರಲ್ಲಿ ಮಗ್ನರಾಗಿದ್ದರು, ನಂಗೊಂದು ಅನುಮಾನ ಏನಪ್ಪಾ ಅಂದ್ರೆ ಈಗಿನ ಪತ್ರಿಕೆಗಳಲ್ಲಿ ಫ್ರೂಫ್ ರೀಡಿಂಗ್ ಮಾಡ್ತಾರ ಅಥವಾ ನೇರವಾಗಿ ಅವರವರ ಕಾಲಂ ಗಳು ಪ್ರಿಂಟಿಗೆ ಸಿದ್ದವಾಗಿ ಕೂತು ಬಿಡುತ್ತವಾ??

ವಿಶ್ವೇಶ್ವರ ಭಟ್ಟರ ಕ್ಯಾಬಿನ್ನಿನ ಪಕ್ಕಕ್ಕೆ ದೊಡ್ಡದೊಂದು ಸೋಫಾ ದ ಮೇಲೆ ನಾನು ಪ್ರಸನ್ನ ಕುಳಿತುಕೊಂಡೆವು ಅಟೆಂಡರ್ ಒಬ್ಬರು ಏನಾಗಬೇಕಿತ್ತು ಅಂತ ವಿಚಾರಿಸಿದಾಗ ಭಟ್ಟರ ಬೇಟಿಯಾಗಬೇಕು ಎಂದು ಹೇಳಿದೆವು, ಒಂದೈದು ನಿಮಿಷ  ಹೇಳ್ತೀನಿ ಎಂದರು. ಒಂದೆರೆಡು  ನಿಮಿಷಗಳಲ್ಲಿ ಭಟ್ಟರು ಒಳಗೆ ಬರುವಂತೆ ತಿಳಿಸಿದರು. ಸಂಪಾದಕರ ಕ್ಯಾಬಿನ್ನು ಅಂದ ಮೇಲೆ ಮೇಜಿನ ತುಂಬಾ ಬರಹಗಾರರ ಪುಸ್ತಕಗಳು ಹರಡಿಕೊಂಡಿರಬಹುದೆಂಬ ನನ್ನ ಊಹೆ ಸುಳ್ಳಾಗಿತ್ತು.. ಭಟ್ಟರು ಗಂಭೀರವಾಗಿ ಕುಳಿತಿದ್ದರು ಅವರ ಕ್ಯಾಬಿನ್ ಸಹ ಅವರಷ್ಟೇ ಶಿಸ್ತಿನಿಂದ ಒಪ್ಪ ಓರಣವಾಗಿ ಸುಂದರವಾಗಿ ಇತ್ತು, ಮೇಜಿನ ಮೇಲಿದ್ದ ಪುಸ್ತಕಗಳು ಸಹ ಒಂದರ ಮೇಲೊಂದು ಸುಮ್ಮನೆ ಕುಳಿತಿದ್ದವು, ಭಟ್ಟರಿಗೆ ಪ್ರಸನ್ನನ ಪರಿಚಯವಿದ್ದಿದ್ದರಿಂದ ಏನು ಬಂದಿದ್ದು ಎಂದು ಮಾತಿಗೆ ತೊಡಗಿದರು, ಪ್ರಸನ್ನ ನನ್ನ ಪರಿಚಯ ಮಾಡಿಸಿದ ಇವನು ಮಹಾಬಲೇಶ್ವರ ಭಟ್ಟರ ಮೊಮ್ಮಗ ಎಂದು, ನಾನು ಸದಾಶಿವ ಮಾವ ಆಗಕ್ಕು ಎಂದೆ, ಅದಕ್ಕವರು ಹವ್ಯಕದಲ್ಲೆ ಮಾತನಾರಂಬಿಸಿದರು, ಗೊತಾತು ಮಹಾಬಲೇಶ್ವರ ಭಟ್ರು ಅಂದ್ರೆ ಸದಾಶಿವ ಚಂದ್ರನಾಥ ಎಲ್ಲ ಬಂತು, ಸದಾಶಿವ ಅವರು ನನಗೆ ಗುರುಗಳು ನಂಗ ತಪ್ಪು ಬರೆದಾಗ ಇದು ತಪ್ಪು ಸರಿ ಬರ್ಕಂಡು ಬಾ ಅಂತ ತಿದ್ದಿದವರೆ ಸದಾಶಿವ ಅಂದರು, ಅವರು ಆ ಮಾತು ಹೇಳಿದಾಗಲೆ ಅನ್ನಿಸಿದ್ದು ಓಹ್ ಭಟ್ಟರು ಇಷ್ಟೊಂದು ಸರಳ ವ್ಯಕ್ತಿ ಎಂದು, ನನ್ನ ಹತ್ತಿರ ಅವರು ಹೇಳಿಕೊಳ್ಳಲೇ ಬೆಕೆಂದೇನು ಇರಲಿಲ್ಲ, ಓಹ್ ಗೊತ್ತು ಸದಾಶಿವ ಕನ್ನಡ ಪ್ರಭದಲ್ಲಿದ್ದರು ಅಂದರೆ ಸಾಕಾಗಿತ್ತು, ಅವರೆ ಗುರುಗಳು ಅಂತ ಹೇಳಿದಾಗ ನನಗೆ ಅವರ ಮೇಲಿದ್ದ ಗೌರವ ಇನ್ನೂ ಹೆಚ್ಚಾಗಿದ್ದು. ಪ್ರಸನ್ನ ಮಠದ ಸಂಸ್ಥಾನದ ಬಗ್ಗೆ ಪುಸ್ತಕವೊಂದಕ್ಕೆ  ಮುನ್ನುಡಿ ಬರೆದುಕೊಡಬೇಕೆಂದು ವಿನಂತಿಸಿಕೊಂಡಾಗ, ಅದಕ್ಕೇನು ಸ್ವಲ್ಪ ಸಮಯ ಬೇಕು ಎಂದು ಒಪ್ಪಿಕೊಂಡಿದ್ದರು. ಭಟ್ಟರ ಕೈಕುಲುಕುವ ಅವಕಾಶ ನನಗೆ ದೊರೆತದ್ದು ಹೀಗೆ.

 ಕನ್ನಡ ಪ್ರಭದಲ್ಲಿದ್ದ ಭಟ್ಟರ ಟೀಮಿನವರ ಎಲ್ಲಾ ಕಾಲಂ ಗಳು ಅದೇ ಹೆಸರಿನಿನಲ್ಲಿ ಬರುತ್ತವಾ ಅಥವಾ ಬದಲಾಗುತ್ತದೆಯಾ, ಯಾವ ಯಾವ ಅಂಕಣ(ಕಾಲಂ)ಗಳು ಬರುತ್ತೆ ಅನ್ನೋ ಕಾತರ, ಅಂದಹಾಗೆ ಕನ್ನಡ ಪ್ರಭದಲ್ಲಿದ್ದ ತಪ್ಪಾಯ್ತು ತಿದ್ಕೋತೀವಿ ಅಂಕಣ ಮತ್ತೆ ಬರುತ್ತದೆಯಾ? ಬಂದ್ರೆ ಅದನ್ನ ತಪ್ಪಾಯ್ತು ಬಿಡಿ ಅಂತ ಮಾಡಿ, ತಿದ್ಕೋತೀವಿ ಅನ್ನೋ ಟ್ಯಾಗ್ ಲೈನ್ ಇರೋದು ಬೇಡ... 

ವಿಶ್ವವಾಣಿ ಪತ್ರಿಕೆಯ ಪ್ರತಿಯೊಬ್ಬರಿಗೂ ಶುಭ ಹಾರೈಕೆಗಳು.

ತುಂಬಾ ದಿನದ ನಂತರ ಬ್ಲಾಗಿನಲ್ಲಿ ಬರೆದಿದ್ದೇನೆ, ಅನಿಸಿಕೆ ತಿಳಿಸ್ತೀರಿ ಅಲ್ವಾ.ಕಾಯ್ತಾ ಇದ್ದೀನಿ ನಿಮ್ಮ ಅನಿಸಿಕೆಗಳಿಗೆ.



Wednesday, October 15, 2014

ನಂಗೊತ್ತಿರೋ ಒಂದಷ್ಟು ಮಾಹಿತಿ


ಖಾಲಿ ಹಾಳೆ ಬಾಲ್ ಪೆನ್ನು ಎದುರಿಗೇ ಅನಾಥವಾಗಿ ಬಿದ್ದುಕೊಂಡಿದ್ದರೂ ಅದನ್ನೆತ್ತಿಕೊಂಡು ಒಂದಕ್ಷರ ಬರೆಯಲಾಗದ ಸೋಮಾರಿತನದಲ್ಲಿ ನನ್ನೊಳಗಿನ ಬರಹಗಾರನಿದ್ದನಲ್ಲ...

ಒಂದು ವಾರವಾಯಿತು ಗಂಟಲು ನೋವು ಶುರುವಿಟ್ಟುಕೊಂಡು, ಮಳೆಯ ಕಾರಣಕ್ಕೋ.. ಅಥವಾ ಕಾರ್ಯದ ಮನೆಗಳಲ್ಲಿ ಬಿಸಿಲರಿ ಬಾಟಲಿಯ ಯೋಚನೆ ಮಾಡದೆ (ಬಿಸ್ಲರಿ,ಬಿಸಿನೀರು ಅಥವಾ ಕಾದಾರಿದ ನೀರು ಕುಡಿದು ಅಭ್ಯಾಸವೇ ಇಲ್ಲ, ಅದು ಬೇರೆಯ ವಿಚಾರ. ಆಂಟೀಬಯಾಟಿಕ್ ತೆಗೆದುಕೊಳ್ಳೋದು  ಯಾಕೆ ಸುಮ್ಮನಿದ್ದುದೇ ಈಗ ವಿಪರೀತಕ್ಕಿಟ್ಟುಕೊಂಡಿದೆ. ಎಂಜಲು ನುಂಗುವಾಗಲೆಲ್ಲ ಕಣ್ಣು ತಾನೇ ತಾನಾಗಿ ಮುಚ್ಚಿಕೊಳ್ಳುತ್ತಿದೆ ನೋವು ತಾಳಲಾರದೇ. ಅಂದಹಾಗೆ ಗಾರ್ಗಲಿಂಗು ಅದು ಇದು ಎಲ್ಲಾ ಮಾಡಿ ಆಯ್ತು ಹೋಗುತ್ತೆ ಬಿಡಿ, ಬ್ಲಾಗ್ ನಲ್ಲಿ ಬರೆಯದೇ ಸೋಮಾರಿತನ ಮಾಡಿದ್ದಕ್ಕೆ ಇದೊಂತರ ನೆಪ ಕೊಡೋಣವಾ ಅನ್ನಿಸಿತು. ಸಕಾರಣವಲ್ಲ ಅನ್ನೋದು ನನಗೂ ಗೊತ್ತು.. ಬರೆಯದೇ ಇದ್ದುದಕ್ಕೆ ಕ್ಷಮೆ ಇರಲಿ.


ಕೇಂದ್ರ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ ಅದರಲ್ಲಿ..  ಸೂರ್ಯನ ಬೆಳಕಿನಿಂದ ಉತ್ಪಾದಿಸುವ ಸೋಲಾರ್ ವಿದ್ಯುತ್ತನ್ನು ರೈತರು, ಸಂಘ, ಸಂಸ್ಥೆಗಳು ಬೇಕಾದರೂ ತಮ್ಮ ಜಾಗಗಳಲ್ಲಿ ಸೋಲಾರ್ ಪ್ಯಾನಲ್ಲುಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸಿ ಸ್ವಂತಕ್ಕೆ ಬಳಸಿಕೊಂಡು ಉಳಿದಿರುವುದನ್ನು ಮಾರಾಟ ಮಾಡುವಂತಹ ಯೋಜನೆ.ಆದರೆ ಒಂದು ಮೆಘಾ ವ್ಯಾಟ್ ಉತ್ಪಾದನೆಗೆ ಕನಿಷ್ಟ ಐದು ಎಕರೆ ಜಾಗ,ಅರ್ಜಿಯ ಜೊತೆಗೆ ನಿಗದಿ ಮಾಡಿದ ಹಣ(ಮರುಪಾವತಿಸಲಾಗುತ್ತದೆ) ಆಮೇಲೆ ಮತ್ತೆ ಒಂದು ಲಕ್ಷ ರೂಪಾಯಿ ಕಟ್ಟಬೇಕೆಂದಿದೆ, ಒಟ್ಟು  ಯೋಜನೆಗೆ ಬಂಡವಾಳ ಏಳರಿಂದ ಎಂಟು ಕೋಟಿಯೆಂದಿದೆ, ಸರಿಯಾಗಿ ಯೋಜನೆ ಅರ್ಥವಾಗಿಲ್ಲ ನನಗೆ. ಹೆಚ್ಚಿನ ವಿವರಕ್ಕೆ ಲಾಗ್ ಇನ್ ಆಗಿ www.kredlinfo.in ಇದು ಸಾಮಾನ್ಯ ರೈತರಿಗೋ ಅಥವಾ ಹೈ ಟೆಕ್ ಕಾರ್ಪೋರೇಟ್ ಅಗ್ರಿ ಕಲ್ಚರಿಷ್ಟ್ ಗಳಿಗಾ ಅನುಮಾನ!

ಸೂಪರ್ ಮಾರ್ಕೇಟ್, ಶಾಪಿಂಗ್ ಬಜಾರ್ ಗಳು ಗ್ರಾಹಕನನ್ನು ಕೊಳ್ಳುಬಾಕನನ್ನಾಗಿ ಮಾಡುತ್ತಿವೆಯೋ ಅಥವಾ ಆಯ್ಕೆಯ ಸ್ವಾತಂತ್ರ್ಯವನ್ನು ಮುಕ್ತಗೊಳಿಸುತ್ತಿದೆಯೋ ಅನ್ನೋದು ಮತ್ತೆ ಗೊಂದಲಕ್ಕೀಡು ಮಾಡುತ್ತಿದೆ, ಅದರ ಜೊತೆ ಜೊತೆಗೆ ಆನ್ ಲೈನ್ ಶಾಪಿಂಗ್ ವೆಬ್ ಸೈಟುಗಳನ್ನು ನೋಡಿದರಂತೂ ಉಚಿತ ಡಿಸ್ಕೋಂಟು ಅದೂ ಇದು  ಅಂತ ಏನಾದರೂ ಖರೀದಿ ಮಾಡಿಸದೆ ಸುಮ್ಮನಿರೋಲ್ಲ ಅಂತ ತನ್ನೆದುರಿಗೆ ಕುಳಿತ ಗ್ರಾಹಕನ ಮೆದುಳಿನಾಳಕ್ಕೆ ಮುಟ್ಟುವಂತ ವರ್ಣರಂಜಿತ ಜಾಹೀರಾತು ಪ್ರಕಟಿಸಿ ಪುಟ ಬಿಟ್ಟು ಹೋಗದಂತೆ ಮಾಡುತ್ತಿದೆ. ಆನ್ ಲೈನ್ ವ್ಯವಹಾರಗಳು  ಡೀಲರ್ ನಿಂದ ನೇರವಾಗಿ ಗ್ರಾಹಕನ ಕೈ ಸೇರೋದರಿಂದ ಮಧ್ಯವರ್ತಿಗಳ ಕಮಿಷನ್ ಉಳಿಯೋದರಿಂದ ನಿಮಗೆ ಬೇಕಾದ ವಸ್ತು ಅಂಗಡಿಗಳಲ್ಲಿ ಇರುವ ಬೆಲೆಗಿಂತ ಸಾಕಷ್ಟು ಕಡಿಮೆ ಬೆಲೆಗೆ ಸಿಗುತ್ತದೆ.. ಇನ್ನು ಹಬ್ಬ ಹರಿದಿನಗಳು ಬಂತೆಂದರೆ ಉತ್ಪಾದಕರಿಗೆ ತಮ್ಮ ಉತ್ಪನ್ನವನ್ನು ಮಾರಲು ಇರುವ ಒಂದು ಸದಾವಕಾಶ. ರಿಯಾಯ್ತಿ ಅದು ಇದು ಅಂತ ಗ್ರಾಹಕನ ಮನಗೆದ್ದು ಅವರ ಮನೆ ಸೇರುವ ಶತ ಪ್ರಯತ್ನ ಮಾಡುತ್ತಿದೆ. ಆದರೇ ಅದೇ ಉತ್ಪನ್ನಗಳು ಸ್ವಲ್ಪ ಸಮಯದ ನಂತರ ಅಂಗಡಿಗಳಲ್ಲೇ ಕಡಿಮೆ ದರಕ್ಕೆ ಸಿಗುತ್ತವೆ, ಹಳೆಯದಾಗುವ ವರೆಗೆ ಕಾಯುತ್ತಾ ಕುಳಿತರೆ ಏನನ್ನೂ ಕೊಳ್ಳಲು ಸಾಧ್ಯವೇ ಆಗೋದಿಲ್ಲ. ಇದು ವಾಸ್ತವ!

ಮೊದಲಿನಂತೆ ದೊಡ್ಡ ದೊಡ್ಡ CRT ಟೀವಿಗಳು ಅಂಗಡಿಗಳಲ್ಲಿ ಸಿಗುತ್ತಿಲ್ಲ..

 ಅದರ ಬದಲಾಗಿ ಬಳುಕುವ ಬಳ್ಳಿಯಂತಿರುವ ತೆಳ್ಳನೆ ಮೈ ಹೊಂದಿದ LED TV ಗಳು ಮಾರುಕಟ್ಟೆಯಲ್ಲಿ ತನ್ನ ಸಾಮ್ರಾಜ್ಯ ಮೆರೆಯುತ್ತಿದೆ, ಹೂಂ ನಿಮ್ಮ ಮನಸ್ಸಿಗೆ ಬಂದಿದ್ದು  ಸರಿ, ಜಗತ್ತು ಬದಲಾವಣೆಯಾಗುತ್ತಿದೆ ಯಾರು ಅದೇ ಹಳೇಯ ಡೂಮ್ ಟೀವಿಗಳನ್ನು ಒಯ್ಯುತ್ತಾರೆ, ನೀವು ಅಂಗಡಿಗಳಲ್ಲಿ  CRT ಟೀವಿಗಳಲ್ಲಿ 32 ಇಂಚಿನ ಟೀವಿ ಬೇಕೆಂದು ಹುಡುಕಿದರೂ ಅದು ದೊರೆಯೋದಿಲ್ಲ,ಉತ್ಪಾದಕರು ಮಾರುಕಟ್ಟೆಯಲ್ಲಿ ಎಲ್ ಈ ಡಿ, ಎಲ್ ಸೀ ಡಿ ಟೀವಿಗಳನ್ನು  ಮಾತ್ರ ಕೊಳ್ಳುವಂತೆ ಮಾಡಿದ್ದಾರೆ.


ಇನ್ನು ಮೊಬೈಲ್ ಫೋನುಗಳ ವಿಚಾರಕ್ಕೆ ಬರೋದಾದರೆ ಈಗ ಹೆಚ್ಚಿನ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನುಗಳಿದ್ದೆ ಇರುತ್ತದೆ, ಅದಕ್ಕೆ ಅಂತರ್ಜಾಲ ಸಂಪರ್ಕ ಅನಿವಾರ್ಯ, ಇಂಟರ್ನೆಟ್ ಇಲ್ಲದೆ ಹೋದರೆ ಅದು ಮತ್ತದೇ ಸಾದಾ ಫೋನಾಗಿ ಹೋಗುತ್ತೆ!.. ನೆಟ್ ಪ್ಯಾಕ್ ಹಾಕಿಕೊಳ್ಳೋದು ಮತ್ತದೇ ಅನಿವಾರ್ಯವಾಗಿ ಬಿಡುತ್ತದೆ, ಕಂಪೆನಿಗಳು ಮೊದಲು ಕಡಿಮೆ ಬೆಲೆಗೆ ನೆಟ್ ಪ್ಯಾಕುಗಳನ್ನು ಕೊಡುತ್ತಿದ್ದವರೆಲ್ಲ ದಿನದಿಂದ ದಿನಕ್ಕೆ MBಗಳನ್ನು ಕಡಿತಗೊಳಿಸುತ್ತಾ ಪ್ಯಾಕೇಜ್ ದರಗಳನ್ನು ಹೆಚ್ಚಿಸತೊಡಗಿದ್ದಾರೆ, ಅವರಿಗೂ ಗೊತ್ತು ನಮ್ಮ ಅನಿವಾರ್ಯತೆ.ಎಷ್ಟು ಬೆಲೆ ತೆತ್ತಾದರೂ ನೆಟ್ ಪ್ಯಾಕ್ ಹಾಕಿಸಿಕೊಳ್ಳಲಿ ಅನ್ನೋ ಯೋಜನೆ. ಇದರ ವಿರುದ್ಧ ಹೋರಾಟಕ್ಕೆ ಗ್ರಾಹಕರೇ ಇಳಿಯಬೇಕಾಗಿದೆ, ವಾಟ್ಸ್ ಆಫ್ ನಲ್ಲಿ ಹರಿದಾಡುತ್ತಿರುವ ಸಂದೇಶ ನೀವು ಓದಿರಬಹುದು, ಅಕ್ಟೋಬರ್ 31ರಂದು ಮೊಬೈಲ್ ಇಂಟರ್ನೆಟ್ ಒಂದು ದಿನದ ಮಟ್ಟಿಗೆ ನಿಲ್ಲಿಸೋಣ...ನಾನು ಆ ಒಂದು ದಿನ ಖಂಡಿತಾ ಮೊಬೈಲ್ ಅಂತರ್ಜಾಲ ಬಳಸೋದಿಲ್ಲ ಅಂತ ನಿಷ್ಚಯಿಸಿಯಾಗಿದೆ, ನೀವು?

ಮೊಬೈಲ್ ಜಗತ್ತಿನಲ್ಲಿ ಅದರಲ್ಲೂ ಆಂಡ್ರಾಯ್ಡ್ ಫ್ಲಾಟ್ ಪಾರಂನಲ್ಲಿ ಮೊನ್ನೆ ಮೊನ್ನೆ ಆದ ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು, ಆಂಡ್ರಾಯ್ಡ್ ಹೆಸರು ಹೇಳಿದಾಕ್ಷಣಕ್ಕೆ ನೆನಪಿಗೆ ಬರೋದೆ ಗೂಗಲ್ಲು... ಆಂಡ್ರಾಯ್ಡ್ ಒನ್ ಬಗ್ಗೆ ಕೇಳಿದ್ದೀರಾ..


ಇದು ಗೂಗಲ್ಲಿನವರು ಮಾಡಿದ ಅತ್ಯಂತ ಉತ್ತಮ ಕಾರ್ಯ, ಪ್ರತಿಯೊಂದು ಆಂಡ್ರಾಯ್ಡ್ ಒನ್ ಉತ್ಪನ್ನವು ಸಹ ಕನಿಷ್ಟ ಒಂದು ಜಿಬಿ ರಾಮ್, ಕ್ವಾಡ್ ಕೋರ್ ಪ್ರೊಸೆಸರ್, ಕನಿಷ್ಟ 4.5 ಇಂಚಿನ ಸ್ಕ್ರೀನ್.. ಹಾಗೂ ಕಿಟ್ ಕ್ಯಾಟ್ ಓ ಎಸ್, ಅದೆಲ್ಲಕ್ಕೂ ಮಿಗಿಲಾಗಿ ಇದರ ಬೆಲೆ ಗರಿಷ್ಟ 7000 ದ ಒಳಗೆ ಇರಬೇಕು.. ಈಗ ಸ್ಪೈಸ್, ಮೈಕ್ರೋಮಾಕ್ಸ್ ಮತ್ತು ಕಾರ್ಬನ್ ಕಂಪೆನಿಗೆ ಮಾತ್ರ ಆಂಡ್ರಾಯ್ಡ್ ಒನ್ ಆಧಾರಿತ ಮೊಬೈಲ್ ಗಳ ಮಾರಾಟಕ್ಕೆ ಸಧ್ಯಕ್ಕೆ ಅನುಮತಿ ನೀಡಿದೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕೆಲ ಕಂಪೆನಿಗಳು ಮೇಲೆ ಹೇಳಿದ Specification ಹೊಂದಿದ ಮೊಬೈಲಿಗೆ ಏನಿಲ್ಲವೆಂದರೂ  ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಬೆಲೆಗೆ ಮಾರಲು ಯತ್ನಿಸುತ್ತಿದ್ದರು, ಈಗ ಮೊಬೈಲ್ ಮಾರುಕಟ್ಟೆಯಲ್ಲಿ ಏನಾದರೂ ಬದಲಾವಣೆಯಾಗುತ್ತ ಕಾದು ನೋಡಬೇಕಾಗಿದೆ.

ಇನ್ನು ತಂತ್ರಜ್ಞಾನ ಮುಂದುವರೆಯುತ್ತಿದ್ದಂತೆ ಅವು ನಮ್ಮನ್ನು ಸೋಮಾರಿಗಳನ್ನಾಗಿಸುತ್ತವೆಯಾ ಎಂಬ ಅನುಮಾನಕ್ಕೆ ಕುಮ್ಮಕ್ಕು ನೀಡುವಂತೆ ಸ್ಮಾರ್ಟ್ ವಾಚುಗಳು ಜನರನ್ನು ತಮ್ಮತ್ತ ಆಕರ್ಷಿಸುತ್ತಿವೆ... 5 ಇಂಚಿನ  ಸ್ಕ್ರೀನಿನ ಫೋನಿಟ್ಟುಕೊಂಡು ವಾಚಿನಲ್ಲಿ ನೋಟಿಪಿಕೇಷನ್ ನೋಡುವಂತೆ ಆದರೆ ಅದಕ್ಕೆ ಏನು ಹೇಳಲಿ, ಲೈಫ್ ಅಷ್ಟು ಫಾಸ್ಟ್ ಆಗಿದೆ ಅಂತೀರಾ.. ನಮಗೆ ವಾಚು ನೋಡೋಕು ಸಮಯ ಇಲ್ಲ ಅನ್ನೋರು ಅದರ  ಫೋಟೋ ಕ್ಲಿಕ್ಕಿಸಿ ಮಾರಿಬಿಡಿ ;) ಆ ವಾಚನ್ನು ಕಟ್ಟಿಕೊಂಡು ಓಡಾಡಿದರೂ ರಸ್ತೆಯಲ್ಲಿ ಯಾರಾದರೂ ಟೈಮೆಷ್ಟು ಅಂದರೆ ಇದು ಸ್ಮಾರ್ಟ್ ವಾಚ್ ಕಣಯ್ಯ ಅನ್ನೋಕಾಗಲ್ಲ, ಟೈಮ್ ಹೇಳಲೇ ಬೇಕಾಗುತ್ತೆ. ಬೆಲೆ ಕೂಡ ಮತ್ತೊಂದು ಸ್ಮಾರ್ಟ್ ಫೋನ್ ನಷ್ಟೇ ಇದೆ ಅನ್ನೋದು ಗಮನಿಸಬೇಕಾದ ಅಂಶ.

OUTERNET ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತವಾಗಿ ಮಾಹಿತಿ ಅಂತರ್ಜಾಲ ಸೇವೆ ಸಿಗುವಂತೆ ಮಾಡಲು ಹೊರಟಿದೆ, ಅದರಲ್ಲಿ ಕಣ್ಣಾಡಿಸುತ್ತಿದ್ದಾಗ ಕಂಡದ್ದು Raspberry ಮಿನಿ ಪೀಸಿ, ಅದನ್ನು ಔಟರ್ ನೆಟ್ ಗೆ ರೆಕಮೆಂಡ್ ಮಾಡಲಾಗಿದೆ, ಅದರ ಬಗ್ಗೆ ಗೊತ್ತಿದ್ದರೂ ಅಷ್ಟೇನು ಯೋಚಿಸದ ನಾನು ಅದರ ಬಗ್ಗೆ ಯೋಚಿಸುವಂತಾಗಿದೆ

ಇನ್ನೂ ಹೀಗೆ ಗೀಚ್ತಾ ಹೋದ್ರೆ ನಿಮಗೆ ಬೋರ್ ಆಗಿ ಬಿಟ್ಟರೆ ಕಷ್ಟವಾಗುತ್ತೆ, ನನಗೆ ತಿಳಿದ ಅಲ್ಪ ಸ್ವಲ್ಪ ಮಾಹಿತಿ ನಿಮ್ಮೊಂದಿಗೆ ಹಂಚಿಕೊಂಡಿದ್ದೀನಿ, ನಿಮ್ಮ ಅನಿಸಿಕೆ ತಿಳಿಸುತ್ತೀರ ಅಲ್ವಾ?




Thursday, October 17, 2013

ಕಥೆಯೊಳಗಿನ ಕಥೆ

     ಇವತ್ತೇನಾದರೂ ಆಗಲಿ ಕಥೆ ಬರೆಯಲೇ ಬೇಕೆಂಬ  ನಿರ್ಧಾರಕ್ಕೆ ಬಂದವನು ಪೆನ್ನು ಪೇಪರನ್ನು ಕೈಗೆ ತೆಗೆದುಕೊಂಡು ಬರೆಯಬೇಕೆಂದು ಒಂದೆರಡಕ್ಷರ  ಬರೆದಾಗಿದೆ ಅಷ್ಟೆ, ಅದ್ಯಾಕೋ ಅಕ್ಷರಗಳು ಮಬ್ಬು ಮಬ್ಬಾಗಿ ಕಾಣತೊಡಗಿತು,  ಪಕ್ಕದಲ್ಲಿದ್ದ ಅವನ ಕನ್ನಡಕ ಅವನನ್ನು ನೋಡಿ ನಕ್ಕಂತೆ ಭಾಸವಾಯಿತು, ತಥ್ ಇದರ ಎಂದು ಬೈಯಬೇಕೆಂದುಕೊಂಡವನಿಗೆ ತನ್ನ ಎರಡನೇ ಕಣ್ಣಿನ ಜೋಡಿಗಳನ್ನು ಬೈಯ್ಯಲು ಮನಸ್ಸಾಗಲೇ ಇಲ್ಲ... ಕನ್ನಡಕ ಹಾಕಿಕೊಂಡು ನೋಡುತ್ತಾನೆ ಮೊದಲು ಮುದ್ದಾಗಿ ಕಾಣಿಸುತ್ತಿದ್ದ ಅವನ ಬರವಣಿಗೆ ಈಗ ವಕ್ರ ವಕ್ರವಾಗಿದೆ ಅನಿಸಲಿಕ್ಕೆ ಶುರುವಾಗಿದೆ, ಕೈ ನಡುಗುತ್ತಿದೆ, ದೇಹಕ್ಕೆ ವಯಸ್ಸಾಗಿದ್ದರೂ ಮನಸ್ಸು ಇನ್ನೂ ಇಪ್ಪತ್ತರ ಹತ್ತಿರವೇ ಗಿರಕಿ ಹೊಡೆಯುತ್ತಿದೆ.. ಕಥೆ ಬರೆಯಲೋ ಅಥವಾ ಹಳೆಯ ನೆನಪುಗಳನ್ನೆ ಮೆಲಕುಹಾಕುತ್ತಾ  ಬರೆಯಲೋ. ಈ ತರಹದ ದ್ವಂದ್ವ ಇತ್ತೀಚಿಗೆ ಹೆಚ್ಚಾಗಿ ಹೋಗಿದೆ. ಮರೆವು ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಅನುಭವಕ್ಕೆ ಹೆಂಡತಿಯ ಗೊಣಗಾಟದಿಂದಲೇ ತಿಳಿದದ್ದು.. ಆದರೆ ಯೌವನದ ನೆನಪುಗಳು ಹಾಗೇ ಹಚ್ಚ ಹಸಿರಾಗೆ ಇವೆ.. ಅದರಲ್ಲಂತೂ ತಾನು ಪ್ರೀತಿಸಿದವಳ ನೆನಪನ್ನು ಮರೆಯಲು ಸಾಧ್ಯವೇ.. ಆಗಾಗ್ಗೆ ಹೆಂಡತಿಯ ಹೆಸರು ಕರೆಯಲು ಹೋಗಿ ಸುಧಾ ಎಂದು ಜೋರಾಗಿ ಕೂಗಿದಾಗ ಹೆಂಡತಿ ಇದ್ಯಾಕೋ ಅತಿ ಆಯ್ತು ನಿಮ್ದು ಅಂದಾಗಲೇ ಗೊತ್ತಾಗುತ್ತಿದ್ದದ್ದು ತಾನು ಕರೆದದ್ದು ಹೆಂಡತಿಯ ಹೆಸರಲ್ಲವೆಂದು.  

     ಅವಳ ಹೆಸರು ಅದೆಷ್ಟು ಹಿತವಾಗಿದೆ ಸುಧಾ...  ಕೂಗೋಕು ಸುಲಭವಾದ ಹೆಸರೇ ಅದು..  ಅವಳ ನೆನಪಿಗಾಗೇ ಅಲ್ವ ಸುಧಾ ವಾರಪತ್ರಿಕೆಯನ್ನ ಪ್ರತಿವಾರ ತಾನೇ ನೆನಪು ಮಾಡಿಕೊಂಡು ಅಂಗಡಿಗೆ ಹೋಗಿ ಒಂದು ಕಿಂಗ್ ಹಾಗೆ ಸುಧಾ ಕೊಡಿ ಅನ್ನೋದು... ಇತ್ತೀಚಿಗೆ ಸುಧಾ ವಾರಪತ್ರಿಕೆ ಮೊದಲಿನಷ್ಟು ದಪ್ಪವಾಗಿಲ್ಲ.. ಈಗ ಬಳಕುವ ಬಳ್ಳಿಯ ಸೊಂಟದ ತರಹ ಚಿಕ್ಕದಾಗುತ್ತಿದೆ.. ಪುಟಗಳೂ ತುಂಬಾ ಸ್ಲಿಮ್ ಆಗಿ ಹೋಗಿದೆ.. ಅಂದಹಾಗೆ ಸುಧಾಳನ್ನು ಮೊದಲ ಬಾರಿ ಕಾಲೇಜಿನ ಕ್ಯಾಂಪಸ್ಸಿನಲ್ಲಿ  ಮೊದಲ ಕಣ್ಣೋಟದಲ್ಲೇ ಕಣ್ಣು ಕಣ್ಣುಗಳು ಒಬ್ಬರೊಬ್ಬರನ್ನು ಮೆಚ್ಚಿಕೊಂಡುಬಿಟ್ಟಿದ್ದವು... ಅವಳ ಉದ್ದದ ಜಡೆ ತನಗೆ ತುಂಬಾ ಇಷ್ಟಾವಾಗಿಬಿಟ್ಟಿತ್ತು.. ಅವಳ ಮುಖದ ಮೇಲೆ ತಿಳಿಯಾದ ಮಂದಹಾಸ ಅಲಂಕರಿಸಿತ್ತು.. ಅವಳ ಮನೆಯಲ್ಲಿ ಅಷ್ಟೆಲ್ಲಾ ಕಷ್ಟಗಳಿವೆ ಅಂತ ಗೊತ್ತಾಗಿದ್ದೆ ಒಂದು ವರ್ಷದ ಬಳಿಕ.. ಒಂದು ದಿನವೂ ತನ್ನ ಮನೆಯ ಕಷ್ಟಗಳನ್ನ ಹೇಳಿಕೊಂಡೇ ಇರಲಿಲ್ಲ.. ಅದ್ಯಾಕೋ ಆವತ್ತು ಅವಳ ಮುಖದಲ್ಲಿ ಆ ಮಂದಹಾಸ ಇರಲೇ ಇಲ್ಲ ಕಣ್ಣುಗಳು ಅತ್ತು ಅತ್ತು ಬತ್ತಿಹೋದಂತಿದ್ದವು. ಏನಾಯ್ತು ಅಂದಾಗಲೇ ಗೊತ್ತಾಗಿದ್ದು ಅವಳ ಮನೆಯಲ್ಲಿನ ಕಿತ್ತು ತಿನ್ನುವ ಬಡತನ, ಕುಡುಕ ತಂದೆಯು ತನ್ನ ತಾಯಿಗೆ ನೀಡುವ  ಹಿಂಸೆಗಳು.. ಅವಳು ಹೇಳಿದ್ದನ್ನು ಈಗ ನೆನಸಿಕೊಂಡರೂ ಹೃದಯ ಹಿಂಡಿದಂತಾಗುತ್ತೆ. 

     ರೀ ದಿನಾ ಇದೇ ಗೋಳಾಗಿ ಹೋಯ್ತು ಬನ್ನಿ ಊಟಕ್ಕೆ ಎಂದಾಗಲೇ ತಾನು ವಾಸ್ತವ ಲೋಕಕ್ಕೆ ಬಂದಿದ್ದು... ಓಹ್ ಎಡಗಾಲು ಮರಗಟ್ಟಿ ಹೋಗಿದೆ ಅಲ್ಲಾಡಿಸದೇ ಒಂದೇ ಸಮನೆ ಯೋಚನೆಯೊಳಗೆ ಮುಳುಗಿಹೋಗಿದ್ದರ ಪ್ರಭಾವ.. ಹೆಂಡತಿಯೊಂದು ಕಡೆ ಬೈಯುತ್ತಿದ್ದಾಳೆ,  ಬಂದೇ ಕಣೇ ಸತ್ತ ಕಾಲು ಹಿಡಕೊಂಡಿದೆ ಅಂದ ಮೇಲೆ ಅವಳು ಶಾಂತವಾಗಿದ್ದು... ಹೆಸರು ಶಾಂತ ಅಂತಲೇ ಆದರೂ ಅಶಾಂತಿಯೇ ಜಾಸ್ತಿ ಅಂತ ಹಲವಾರು ಸಲ ತನಗನ್ನಿಸಿದ್ದು ಸರಿಯೇ...ಹೆಂಡತಿಯ ಹತ್ತಿರ ದಿನಕ್ಕೊಮ್ಮೆ ಕಡಿಮೆ ಅಂದರೂ ಮೂರ್ನಾಲ್ಕು ಸಾರಿಯಾದರೂ ಬೈಸಿಕೊಂಡರೆ ಮಾತ್ರ ತಿಂದದ್ದೆಲ್ಲಾ ಜೀರ್ಣವಾಗೋದು.. ಹೆಂಡತಿ ಬೈಯಲೇ ಇಲ್ಲವೆಂದರೇನೆ ಭಯ ಕಾಡೋಕೆ ಶುರುವಾಗುತ್ತೆ, ಎಲ್ಲೋ ವಿಪರೀತ ಕೋಪಕ್ಕಿಟ್ಟುಕೊಂಡಿದೆಯಾ ಶಾಂತೂ ಏನಾಯ್ತೆ ಅಂತ ಕೇಳಿಯಾದರೂ ಬೈಯಿಸಿಕೊಂಡರೇನೆ ಸಮಾದಾನವಾಗೋದು...

     ಕರಿ ಬಾಳೆಹಣ್ಣೆಂದರೆ ತುಂಬಾ ಇಷ್ಟ ಅಂತ ಎರಡು ಬಾಳೆ ಹಣ್ಣು ತಿಂದದ್ದು ಒಮ್ಮೆಲೆ ದೇಹದಲ್ಲಿ ಸಕ್ಕರೆ ಜಾಸ್ತಿ ಆಗಿರೋದು ಖಚಿತವಾಗಿ ಹೋಯ್ತು.. ಮಾತ್ರೆ ತಗೋಳೋಣ ಅಂದರೆ ಹೆಸರು ನೆನಪಾಗುತ್ತಿಲ್ಲ, ಹೆಂಡತಿಯ ಹತ್ತಿರ ಕೇಳಿದರೆ ಬೈಗುಳ ಗ್ಯಾರಂಟಿ.. ಅದೇನೋ ಜಿ ಇಂದ ಆರಂಭವಾಗುತ್ತಲ್ಲಾ ಎಂದು ಯೋಚಿಸ ತೊಡಗಿದ.. ಅದೇ ಉದ್ದ ಮಾತ್ರೆ ಏನದೂ.. ಹಾಂ ಫೋರ್ಟ್.. ನೆನಪಾಯ್ತು ಗ್ಲೂಕೋರೆಡ್ ಫೋರ್ಟ್..  ಡಯಾಬಿಟೀಸ್ ಬಂದಾಗಲಿಂದಲೂ ಅದೇ ಮಾತ್ರೆ ಆದರೂ ಹೆಸರೇ ಮರೆತು ಹೋಯ್ತಲ್ಲಾ ಅಂತ ಪರಿತಪಿಸಿದ.


     ಮೇಜಿನ ಮೇಲಿದ್ದ ಬಿಳಿ  ಹಾಳೆ ಪೆನ್ನು ಪೇಪರ್ ಹಾಗೇ ಅನಾಥವಾಗಿ ಮೇಜಿನ ಮೇಲೆ ಬಿದ್ದುಕೊಂಡಿದೆ...  ಗೀಚಿದ್ದು ಬರೀ ಎರಡು ಮೂರು ಸಾಲು ಅಷ್ಟೆ.. ಅದೂ ಸಹ ಮತ್ತೊಮ್ಮೆ ಓದಿದಾಗ ಇನ್ನೂ ಚನ್ನಾಗಿ ಬರೆಯಬಹುದಿತ್ತು ಆರಂಭವೇ ಸರಿಯಿಲ್ಲವಲ್ಲ ಅನ್ನಿಸತೊಡಗಿ  ಆ ಪೇಪರ್ ಕೂಡ ಮೇಜಿನ ಪಕ್ಕದ ಮೂಲೆಯಲ್ಲಿದ್ದ ಕಸದ ಬುಟ್ಟಿಯಲ್ಲಿ ಸುರಳಿ ಸುತ್ತಿದ ಉಂಡೆಯಾಗಿ ಬಿದ್ದುಕೊಂಡಿತು... ಇವತ್ತೇನಾದರಾಗಲಿ ಬರೆದು ಮುಗಿಸಲೇಬೇಕೆಂದು ಪೆನ್ನು ಪೇಪರನ್ನು ತೆಗೆದುಕೊಂಡ.. ಮತ್ತೆ ಯೋಚನೆಗಳ ಸರಮಾಲೆ ಆತನನ್ನು ಸುತ್ತಿಕೊಳ್ಳತೊಡಗಿತು.

ಅವಳು ಎದುರಿಗೆ ಸಿಕ್ಕಾಗ ತನ್ನ ಮೇಲೆ ಅವಳಿಗೆ ಅದೇ ಪ್ರೀತಿ ವಾತ್ಸಲ್ಯ ಗೌರವಗಳು ಹಾಗೇ ಇದೆ, ತನಗೂ ಅಷ್ಟೆ ಅವಳನ್ನು ಮರೆಯಲಾಗುತ್ತಿಲ್ಲ, ನಾವಿಬ್ಬರೂ ಜೊತೆಗಾರರಾಗಲು ಯಾಕೆ ಸಾಧ್ಯವಾಗಲೇ ಇಲ್ಲ? ಪ್ರಶ್ನೆಗಳ ಸುರುಳಿ ಸುರುಳಿಗಳೇ ಕಣ್ಮುಂದೆ ಹಾದು ಹೋದವು ಇವೆಲ್ಲದಕ್ಕೂ ಉತ್ತರಗಳಿಲ್ಲದ ಪ್ರಶ್ನೆಗಳು ಕಥೆಗಾರನ ಮನಸಿನಾಳದಲ್ಲಿ ಬತ್ತದೇ ಹಾಗೇ ಉಳಿದು ಹೋಗಿದೆ. ಮನಸ್ಸು ತಿಳಿಯಾಗುವವರೆಗೂ ಕಿಟಕಿಯಾಚೆ ನೋಡುತ್ತಾ ನಿಲ್ಲುವ ಮನಸ್ಸಾಗಿ ನೀಲಿ ಆಗಸದೆಡೆಗೆ ನೋಡತೊಡಗಿದ. ಮಿಂಚೊಂದು ಮಿಂಚಿ ಮಾಯವಾಯಿತು..

Monday, August 26, 2013

ನೀರ ಕೊರತೆ, ನೀರ ವರತೆ

     ನೀರಿಗೆ ಜೀವಜಲ ಎನ್ನುವ ಹೆಸರೂ ಇದೆ, ಆದರೆ ಅಮೃತವೂ ಅತಿಯಾದರೆ ವಿಷವಾಗುತ್ತದೆ ಎನ್ನುವ ಮಾತು ಸತ್ಯ.. , ಅಡಿಕೆಗೆ ಕೊಳೆರೋಗ ಬಂದಿದೆ ಜಿಟಿಜಿಟಿ ತಿಂಗಳಾನುಗಟ್ಟಲೆ ಹೊಯ್ದ ಜಡಿಮಳೆ ರೈತರಿಗೆ ಅಪಾರ ಬೆಳೆ ಹಾನಿ ಮಾಡಿವೆ, ಅಡಿಕೆ ಬೆಲೆ ಗಗನಕ್ಕೇರಿದ್ದರೂ ಅದರಿಂದ ಬೆಳೆಗಾರರಿಗೆ ಯಾವುದೇ ಲಾಭಾಂಶ ದೊರೆಯುತ್ತಿಲ್ಲ... ಈ ಸಾರಿಯ ಮಳೆಗಾಲವನ್ನು ನೋಡಿದರೆ ಮೊದಲು ಮಳೆಯಿಲ್ಲದೆ ಅನಾವೃಷ್ಟಿ ಅನಿಸಿದ್ದೂ ಅತಿವೃಷ್ಟಿಯಾಗಿ ಮಾಡಿದ ಹಾನಿ ಅಶ್ಟಿಷ್ಟಲ್ಲ... ಅಂದಹಾಗೆ ಬೆಂಗಳೂರಿನಲ್ಲಿರುವ  ಬಹುತೇಕ ಜನರಿಗೆ  ನೀರು ಅಮೂಲ್ಯ ಅಂತ ಅನಿಸಿಕೊಂಡಿದ್ದು ಬಹುಶಃ ದುಡ್ಡುಕೊಟ್ಟು ಟ್ಯಾಂಕರಿನಲ್ಲಿ ತರಿಸಿಕೊಳ್ಳಬೇಕಾದವರಿಗೆ ಖಂಡಿತ ಅನಿಸಿರುತ್ತೆ.. ನೀರು ವ್ಯರ್ಥವಾಗುತ್ತಿದ್ದರೆ ನೋಡಿ ಅಯ್ಯೋ ಅನ್ನಿಸಿರಲಿಕ್ಕೂ ಸಾಕು, ಮೊನ್ನೆಯೊಂದು ದಿನಪತ್ರಿಕೆಯ ಜಾಹೀರಾತು ನೋಡಿದೆ  ಅದರಲ್ಲಿ ನೀರಿನ ಪೈಪಿನಿಂದ ಕಾರು ತೊಳೆಯುತ್ತಿರುವ ಚಿತ್ರ ಅದರ ಕೆಳಗೆ ನೀವು ಹೀಗೆ ಕಾರು ತೊಳೆದರೆ ಹನ್ನೆರೆಡು ಜನರಿಗೆ ನೀರಿಲ್ಲದಂತೆ ಮಾಡುತ್ತಿದ್ದೀರಿ ಎಂದರ್ಥ ಎಂದು.. ನಮ್ಮೂರು ಸಾಗರದ ನಗರವೂ ನೀರಿಲ್ಲದೆ ಟ್ಯಾಂಕರ್ ನೀರಿಗಾಗಿ ಪರಿತಪಿಸಿತು. ಈಗ ಮಳೆಗಾಲ ಮುಗಿದರೆ ಸಾಕು ಅನ್ನಿಸುತ್ತಿದೆ. ಮಳೆಯಾಗಲಿ ಎಂದು ಹರಕೆ ಹೊತ್ತವರೆಲ್ಲಾ ಮತ್ತೆ ಮಳೆ ನಿಲ್ಲಲಿ ಎಂದು ಹರಕೆ ಮಾಡಿಕೊಳ್ಳಬೇಕು ಆ ಪರಿಸ್ಥಿತಿ ಬಂದೊದಗಿದೆ.

     ನೀರು ಇಲ್ಲದೆ ಹೋದರೆ ಜೀವಿಗಳು ಬದುಕೋದು ಅಸಾಧ್ಯ, ಬರೀ ನೀರೊಂದೇ ಎಲ್ಲೆಡೆ  ತುಂಬಿಹೋದರೂ ಬದುಕು ಕಷ್ಟವಾಗಿ ಬಿಡುತ್ತದೆ.. ಅಂದಹಾಗೆ ಹೇಳೋಕೆ ಮರೆತಿದ್ದೆ... ಹೂಂ ಕೇಳೋದು ಇದೆ ಅನ್ನಿ.. ನೀವು ದಿನಕ್ಕೆಷ್ಟು ಲೀಟರ್ ನೀರು ಕುಡಿಯುತ್ತೀರಿ? ಉತ್ತರ ಒಬ್ಬಬ್ಬರದ್ದು ಒಂದೊಂದು ಲೀಟರ್ ಒಬ್ಬರು ದಿನಕ್ಕೆ ಕನಿಷ್ಟ ನಾಲ್ಕರಿಂದ ಐದು ಲೀಟರ್ ವರೆಗೂ ಕುಡಿಯುತ್ತೇವೆ ಅನ್ನುವ ಉತ್ತರ ನಿರೀಕ್ಷಿಸಬಹುದಲ್ಲಾ? ನಾನು ಇದುವರೆಗೂ ದಿನಕ್ಕೆಷ್ಟು ನೀರು ಕುಡಿದೆ ಎನ್ನುವ ಲೆಕ್ಕವನ್ನೇ ಇಟ್ಟಿಲ್ಲ, ಲೀಟರ್ ಗಟ್ಟಲೆ ನೀರು ನೆನಪು ಮಾಡಿಕೊಂಡು ಕುಡಿದವನೂ ಅಲ್ಲ... ಬಾಯರಿಕೆಯಾದರೆ ದೇಹಕ್ಕೆ ನೀರು ಬೇಕೆಂದಾಗಲಲ್ಲ ಅದು ಮೆದುಳಿಗೆ ನೀರು ನೀರು ಎನ್ನುವ ಸೂಚನೆ ರಕ್ತದಲ್ಲಿರುವ ಜೀವಕಣಗಳು ಸೂಚನೆ ನೀಡುತ್ತದೆ. ನೀರು ಇಂತಿಷ್ಟೇ ಕುಡಿ ಎಂದು ನಮ್ಮ ದೇಹದ ಮೇಲೆ ನಾವೇ ಅತ್ಯಾಚಾರ ಮಾಡಿಕೊಳ್ಳೋದು ಯಾಕೆ!

     ನೀರಿನ ಬಗ್ಗೆ ಎಷ್ಟು ಹೇಳಿದರೂ ಹೇಳುವುದು ಇನ್ನಷ್ಟಿರುತ್ತದೆ.. ನೀರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯತ್ಯಾಸವಾಗುತ್ತಾ ಹೋಗುತ್ತದೆ, ವಿಚಿತ್ರವಾದರೂ ಸತ್ಯ ನಿಮ್ಮ ಮನೆಯ ಭಾವಿಗೂ ಪಕ್ಕದ ಮನೆ ಭಾವಿಗೂ ನೀರಿನ ಅಂತರ್ಜಲದ ಮೂಲದಲ್ಲಿ ವ್ಯತ್ಯಾಸವಾದರೆ ಅದರ ಗುಣವೂ ವ್ಯತ್ಯಸವಾಗಿಬಿಡುತ್ತದೆಯಲ್ಲಾ.. ಏನು ವಿಸ್ಮಯ ಅಲ್ಲವಾ... ನೀರು ಬದಲಾವಣೆಯಾದ ತಕ್ಷಣವೇ ದೇಹ ಅದನ್ನು ಗುರುತಿಸಿ ಹೋರಾಟಕ್ಕೆ ಇಳಿದೇ ಬಿಡುತ್ತಲ್ಲ ಅದೇ ತಂಡಿ ಶೀತ, ಇನ್ನೂ ಒಂಚೂರು ನೀರಿಗೆ ಶಕ್ತಿ ಹೆಚ್ಚಿದ್ದರೆ ಗಂಟಲಿನಲ್ಲಿ ಅಲರ್ಚಿ ನೋವು ಬಂದೇ ಬಿಡುತ್ತೆ.. ಓಹ್ ನೀರು ಬದಲಾಗಿದ್ದಕ್ಕೆ ಇಷ್ಟೆಲ್ಲಾ ಅಂತ ಗೊಣಗಿಕೊಳ್ಳುತ್ತೇವೆ.. ಮಿನರಲ್ ವಾಟರ್ ಕುಡಿಯಬೇಕಿತ್ತು ಎಂದುಕೊಳ್ಳುತ್ತೇವೆ.. ಅದೂ ಬೇರೆಯ ನೀರಲ್ಲವಾ...  ನಿಜವಾಗಲೂ ಶುದ್ದೀಕರಣವಾಗಿದೆಯಾ, ಖನಿಜಾಂಶ ಇದೆಯಾ ನೋಡೋದೆ ಇಲ್ಲ.. ಮಿನರಲ್ ವಾಟರ್ ಹೆಸರಿನಲ್ಲಿ ನೇರವಾಗಿ ನಲ್ಲಿ ನೀರನ್ನು ತುಂಬಿ ಮಾರುವ ದಂದೆಯೂ ಎಗ್ಗಿಲ್ಲದೆ ನೆಡೆಯುತ್ತಲೇ ಇದೆ... ನೀರೊಂದೆ ನೋಡಿ ಅದಕ್ಕೆ ಬಣ್ಣ ವಾಸನೆಯಿಲ್ಲ... ಜೀವಾಮೃತವೇ ಸರಿ..

    ನೀರಿನ ಬಗೆಗೆ ಹೇಳೋಕೆ ಸಾಕಷ್ಟು ಇದೆ ಹೇಳಿದಷ್ಟೂ ಹೇಳುತ್ತಲೆ ಹೋಗಬಹುದು... ಮನಸ್ಸಿನ ತುಂಬಾ ಪ್ರಶ್ನೆಗಳ ಸಾಲು ಸಾಲು ಉದ್ಬವವಾಗುತ್ತಿದೆ, ನೀರಿನದೇ  ನಿಮ್ಮ ಅನಿಸಿಕೆಗಳಲ್ಲಿ ನೀರಿನ ಬಗ್ಗೆ ತಿಳಿಸುತ್ತೀರಲ್ವಾ...

Monday, March 25, 2013

ಆಲೆಮನೆಯ ಕಬ್ಬಿನ ಹಾಲೂ ನೊರೆಬೆಲ್ಲವೂ ಆಹಾ...

ಆಲೆಮನೆಯೆಂಬ ಶಬ್ದ ಕೇಳಿದಾಕ್ಷಣ ಕಬ್ಬಿನ ಹಾಲಿನ ರುಚಿಯನ್ನು, ನೊರೆಬೆಲ್ಲದ ಸವಿಯ ನೆನೆಸಿಕೊಂಡರೆ ನಾಲಿಗೆಯಲ್ಲಿ ನೀರೂರದೆ ಇರಲಾರದು...

                                                      ಚಿತ್ರ ಕೃಪೆ: ಅಂತರ್ಜಾಲ


                                                         ಚಿತ್ರ ಕೃಪೆ: ಅಂತರ್ಜಾಲ

ಕೆಲವು ವರ್ಷಗಳ ಹಿಂದೆ ಕೋಣವನ್ನು ಕಟ್ಟಿ ಆಲೆಕಣೆಯನ್ನು(ಶುಗರ್ ಕೇನ್ ಕ್ರಷರ್) ತಿರುಗಿಸಿ ಕಬ್ಬಿನ ಹಾಲು ತೆಗೆಯುತ್ತಿದ್ದರು, ಆಗ ತಿಂಗಳಾನುಗಟ್ಟಲೆ ಆಲೆಮನೆ ನೆಡೆಯುತ್ತಿತ್ತು.. ಕ್ರಷರ್ ನಿಂದ ಕೋಣಕ್ಕೆ ಕಟ್ಟಿದ ಮರದ ತೊಲೆಯು ಕೋಣ ತಿರುಗಿದಂತೆ ಕಬ್ಬಿನಹಾಲು ಭಾನಿಗೆ ಬಂದು ಬೇಳುತ್ತದೆ, ತಿರುಗುತ್ತಿರುವಾಗ ಅದು ನಮ್ಮ ತಲೆಗೆ ಬಡಿಯದಂತೆ ಬಗ್ಗಿ ಆಲೆ ಕಣೆಯ ಹತ್ತಿರ ಹೋಗಿ ನಾವೇ ಆಯ್ದು ಕೊಂಡ ಕಬ್ಬಿನ ಹಾಲನ್ನು ಪಾತ್ರೆ ಕ್ಯಾನುಗಳಲ್ಲಿ ತುಂಬಿಸಿಕೊಂಡು ಬರುತ್ತಿದ್ದ ಅನುಭವ ಈಗ ಸಿಗಲಾರದು...  ಈಗ ಯಂತ್ರಚಾಲಿತ ಕ್ರಷರ್(ಆಲೆಕಣೆ) ಬಂದಿರುವುದರಿಂದ ಒಂದು ವಾರದಲ್ಲೆ ಆಲೆಮನೆಯ ಮಜ ಮುಗಿದೇ ಹೋಗುತ್ತದೆ. ಬೆಂಗಳೂರಿನಲ್ಲೂ ಕೆನೋಲಾ ಇದೆ ಅಂತೀರಾ.. ಊಹೂಂ ಅದು ಗಂಟಲನ್ನು ತಂಪಾಗಿಸುತ್ತದೆ ನಿಜ, ಆದರೆ ಆಲೆಮನೆಯನ್ನು ಸ್ವತಃ ನೋಡಿ ಆನಂದಿಸಿದಾಗಲೆ ಅದರ ನೆನಪು ಮತ್ತೆ ಮತ್ತೆ ಕಾಡೋದು...


ಕಬ್ಬಿನ ಹಾಲನ್ನು ಕೊಪ್ಪರಿಗೆಯಲ್ಲಿ ಹಾಕಿ ಕುದಿಸಿ, ಹಾಲಿನಲ್ಲಿದ್ದ ಕಬ್ಬಿನ ಸಿಪ್ಪೆಯ ಝಂಡುಗಳು(ತ್ಯಾಜ್ಯವಸ್ತುಗಳು ಅನ್ನಬಹುದು) ಮೇಲೆ ತೇಲಲಾರಂಬಿಸಿದಾಗ ಅದನ್ನು ಎರೆಡು ಜನರು ಸೇರಿ ಬಟ್ಟೆಯಿಂದ ಶೋಧಿಸಿ, ಸರಿಯಾದ ಪಾಕ ಬಂದಾಕ್ಷಣ ಕೊಪ್ಪರಿಗೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿ ಬೆಲ್ಲದ ಸಂಗ್ರಹಕ್ಕೆಂದೆ ಮಣ್ಣಿನೊಳಗೆ ಹುದುಗಿಸಿಟ್ಟ ಡಬ್ಬಕ್ಕೆ ಹಾಕಿದಾಗ ಅದರಲ್ಲಿನ ಮೇಲಿನ ಪದರದಲ್ಲಿ ನೊರೆ ನೊರೆಯಂತ ಬೆಲ್ಲವನ್ನು ಬಾಳೆಯಲ್ಲಿ ಹಾಕಿಕೊಂಡು ಕಬ್ಬಿನ ಅಳ್ಳಟ್ಟೆ(ಕಬ್ಬಿನ ಸಿಪ್ಪೆ)ಯ ತುಂಡು ಮಾಡಿಕೊಂಡು ಬೆಲ್ಲವನ್ನು ಹಾಗೇ ನಾಲಿಗೆಯ ಮೇಲಿಟ್ಟುಕೊಂಡರೆ ಸಾಕು ಅದರ ರುಚಿಯೇ ಬೇರೆ ಆಹಾ ಎನ್ನುವ ಉದ್ಗಾರ ಮನಸಿನೊಳಗೆ ಮೂಡದೆ ಇರಲಾರದು!, ಮತ್ತೆ ಮತ್ತೆ ತಿನ್ನಬೇಕೆನ್ನಿಸುತ್ತಲೇ ಇರುತ್ತದೆ.. ರುಚಿಕರ ಬೆಲ್ಲ ತಯಾರಾಗುತ್ತಿದ್ದಂತೆ ಬಿಸಿ ಬಿಸಿಯಾಗಿ ತಿನ್ನಲು ಸಿಗೋದೆ ಆಲೆಮನೆಯಲ್ಲಿ...




                                                                 ಚಿತ್ರ ಕೃಪೆ: ಅಂತರ್ಜಾಲ


(ಆಲೆಮನೆಯ ಬಗ್ಗೆ ಬರೆಯಬೇಕೆಂದನಿಸಿದ್ದೇ ಆಲೆಮನೆಗಳು ಮುಗಿದಾದ ಮೇಲೆ, ಅದೂ ಅಲ್ಲದೇ ರಾತ್ರಿ ಹೊತ್ತು    ಹೋಗಿದ್ದರಿಂದ ಛಾಯಚಿತ್ರಗಳನ್ನು ತೆಗೆಯಲಾಗಲಿಲ್ಲ ಕ್ಷಮೆ ಇರಲಿ..)     ಬೆಲ್ಲದ ಕೊಪ್ಪರಿಗೆ ಒಲೆಯಿಂದ ಇಳಿಸಿ ಬೆಲ್ಲದ ಮರಿಗೆ ಅಥವಾ ಡಬ್ಬಕ್ಕೆ ಹಾಕಿಯಾದ ಮೇಲೆ ಕೊಪ್ಪರಿಗೆಯನ್ನು ನೀರುಹಾಕಿ ಕತ್ತದ ಸುಗುಡು(ತೆಂಗಿನ ನಾರು) ಹಾಕಿ ತಿಕ್ಕುವವನ ಮುಖದಲ್ಲೊಂದು ಮಂದಹಾಸ ಮೂಡುತ್ತದೆ, ಹೀಗೆ ತೊಳೆದ ನೀರನ್ನು ಕ್ಯಾನುಗಳಲ್ಲಿ ಶೇಖರಿಸಿಡಲಾಗುತ್ತದೆ, ಇದೇ ಕಾಕಂಬಿಯಾಗುತ್ತದೆ.


ಇನ್ನು ಸಾಮಾನ್ಯವಾಗಿ ಶುಂಟಿ, ನಿಂಬೆ ಹಣ್ಣನ್ನು ಸೇರಿಸಿದರೆ ಕಬ್ಬಿನಹಾಲಿಗೆ ಮತ್ತೊಂದು ತರಹದ ರುಚಿ ಬರುತ್ತದೆ, ಅದು ಕೆಲವರಿಗೆ ಇಷ್ಟವಾದರೆ, ಕೆಲವರಿಗೆ ಬರೀ ಕಬ್ಬಿನಹಾಲೇ ರುಚಿಕರ ಅನಿಸುತ್ತದೆ. ಕೆಲವರು ಕಬ್ಬನ್ನು ನೆಡುವುದೇ ಜನರನ್ನು ಕರೆದು ಕಬ್ಬಿನ ಹಾಲನ್ನು ಕೊಟ್ಟು ಖುಷಿ ಪಡಲಿಕ್ಕಾಗಿ.



ಕಬ್ಬಿನಹಾಲಿಗೆ ಬಂಗಿಸೊಪ್ಪನ್ನು ಸೇರಿಸಿ ಕುಡಿಯುವವರೂ ಇದ್ದಾರೆ.. ಬಂಗಿಸೊಪ್ಪಿನ ಬಗೆಗೆ ಹೇಳೋದಾದರೆ ಅದೊಂತರಾ ಅತ್ಯಂತ ರುಚಿಕರ ಅನಿಸುವ ತಾಕತ್ತು ಬಂಗಿಸೊಪ್ಪಿಗೆ ಇದೆ, ಬಂಗಿ ಪಾನಕ ತಯಾರಿಕೆಯಲ್ಲಿ ಗೋಡಂಬಿ, ದ್ರಾಕ್ಷಿ, ಗಸಗಸೆ ಮುಂತಾದವುಗಳನ್ನು ಸೇರಿಸಲಾಗುತ್ತದೆ ಇದರ ಜೊತೆ ಸಿಹಿ ಪದಾರ್ಥ ಸೇರಿದರಂತೂ ಮತ್ತು ಬೇಗನೆ ಮತ್ತು ಏರಲಾರಂಬಿಸುತ್ತದೆ.. ಬಂಗಿಸೊಪ್ಪಿನ ಪಾನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಮನುಷ್ಯ ಅತೀ ಪುಕ್ಕಲು ಸ್ವಭಾವದವನಾಗಿಬಿಡುತ್ತಾನೆ, ನಗಲಾರಂಬಿಸಿದರೆ ಬಂಗಿ ಸೊಪ್ಪಿನ ಮತ್ತು ಇಳಿಯುವವರೆಗೂ ನಗುತ್ತಲೇ ಇರುತ್ತಾರೆ..


                                             
 ಚಿತ್ರ ಕೃಪೆ: ಅಂತರ್ಜಾಲ
ಇನ್ನು ಆಲೆಮನೆಯಲ್ಲಿ ಕಬ್ಬಿನಹಾಲು ಬೇಕಾದಷ್ಟು ಕುಡಿಯಬಹುದಾ ಅಥವಾ ಒಂದು ಲೋಟಕ್ಕೆ ಸೀಮಿತವಾ ಅನಿಸುತ್ತಿದೆಯಾದರೆ, ಆಲೆಮನೆಯಲ್ಲಿ ನಿಮಗೆ ತಾಕತ್ತು ಇದ್ದಷ್ಟು ಕುಡಿಯಬಹುದು... ನಾನಂತು ಎಷ್ಟು ಕುಡಿದೆ ಎನ್ನುವ ಲೆಕ್ಕ ಇಡಲೇ ಇಲ್ಲ ಇಲ್ಲಿಯವರೆಗೆ! ಜೊತೆಗೆ ಮಾವಿನ ಮಿಡಿ ಉಪ್ಪಿನಕಾಯಿ, ಮೆಣಸಿನಕಾಯಿ ಬೋಂಡಾ, ಮಸಾಲೆ ಮಂಡಕ್ಕಿ ಎಲ್ಲವೂ ಇರುತ್ತದೆ, ಕಾಲ ಬದಲಾದಂತೆ ಆಲೆಮನೆಗೆ ಕರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಅದಕ್ಕೆ ಕಾರಣ ಇಲ್ಲವೆಂದಲ್ಲ, ಕರೆಯದೇ ಇದ್ದವರು ಗುರುತು ಪರಿಚಯ ಇಲ್ಲದವರು, ಪಟ್ಟಣ ಪ್ರದೇಶದಿಂದ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡುವ ಜನರಿಂದ ಕಬ್ಬು ಬೆಳೆದವರು ಬೇಸರಗೊಂಡಿರುವುದರಿಂದ ಯಾರನ್ನೂ ಕೆರೆಯಬೇಕೆಂದೆ ಅನಿಸುತ್ತಲೇ ಇಲ್ಲವೇನೊ...


ಆಲೆಮನೆಗಳು ಗತಕಾಲದ ವೈಭವಗಳಾಗದೆ ಆಲೆಮನೆಯ ಸವಿ ಎಲ್ಲರೂ ಸದಾ ಸವಿಯುಂತಾಗಬೇಕೆಂಬುದೇ ನನ್ನ ಆಶಯ.

Saturday, December 29, 2012

ಹಳೆಯ ವರ್ಷ ಕಳೆಯುತ್ತಿದೆ, ಪ್ರಳಯ ಮುಂದೆ ಹೋಗಿದೆ, ಹೊಸ ವರ್ಷ ಬರುತ್ತಿದೆ

     ನನ್ನದೊಂದು ಬ್ಲಾಗ್ ಇದೆ ಅನ್ನೋದೆ ಮರೆತುಹೋಗುವಷ್ಟು ದಿನಗಳಾಗಿವೆ ಏನೂ ಬರೆಯದೆ.. ಪದೇ ಪದೇ ಅದೇ ರಾಗ ಅದೇ ತಾಳ ಅಂದ್ರಾ? ಹೂಂ ಒಂತರಾ ಹಾಗೇ ಅನ್ನಬಹುದೇನೊ... ಬರಹ ಪ್ಯಾಡಿನಲ್ಲಿ ಗೀಚಲೂ ಮನಸ್ಸಿಲ್ಲದ ಸಿಕ್ಕಾಪಟ್ಟೆ ಸೋಮಾರಿತನ...ವರುಷದ ಅಂತ್ಯಕ್ಕೆ ನಾವು ತಲುಪಿಯಾಗಿದೆ, ಇತ್ತೀಚಿನ ದಿನಗಳಲ್ಲಿ ದಿನಪತ್ರಿಗಳಲ್ಲೆಲ್ಲಾ ಬ್ಲಾಗ್ ಬರಹಗಳು ಮೂಡಿಬರುತ್ತಿವೆ..ಬ್ಲಾಗ್ ಗಳು ಎಂದರೆ ನಾಯಿಕೊಡೆಗಳು ಅನ್ನುವಷ್ಟರ ಮಟ್ಟಿಗೆ ತಾತ್ಸಾರ ಮಾಡುತ್ತಿದ್ದವರು ಬ್ಲಾಗ್ ಬರಹಗಳನ್ನು ಸಹ ಓದಿ(ಓದದೇ ಹೋದರೂ CTRL+C  CTRL+V ಒತ್ತುವಾಗಲಾದರೂ ಮೊದಲನೇ ಹಾಗೂ ಕೊನೆಯ ಸಾಲುಗಳನ್ನು ಓದಿರುತ್ತಾರಲ್ಲ) ಪತ್ರಿಕೆಗಳಲ್ಲಿ ಪ್ರಕಟಣೆ ಮಾಡುತ್ತಿದ್ದಾರಲ್ಲಾ ಅದು ತುಂಭಾ ಖುಷಿ ಕೊಟ್ಟ ಸಂಗತಿ...

ಆದರೆ ಬ್ಲಾಗ್ ಬರಹಗಳನ್ನು ಪ್ರಕಟಿಸಲು ಬ್ಲಾಗ್ ನ ಒಡೆಯರಿಗೆ ತಿಳಿಸಿ ಅವರ ಬರಹಗಳನ್ನ ಪ್ರಕಟಿಸುತ್ತಿದ್ದಾರ ಅಥವಾ ಬ್ಲಾಗ್ ಒಡೆಯರಿಗೆ ತಮ್ಮ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುವ ಬಗ್ಗೆ ಮಾಹಿತಿ ಇರುತ್ತದೆಯಾ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ, ಬ್ಲಾಗ್ ನಲ್ಲಿ ಬರೆಯುವವರಿಗೆ ಏನೂ ಗೊತ್ತಿಲ್ಲ ಸುಮ್ಮನೆ ಕಾಟಾಚಾರಕ್ಕೆ ಬರ್ಕೊತಾರೆ(ಬರೆಯುತ್ತಾರೆ ಅಲ್ಲ ಬರ್ಕೊತಾರೆ) ಅನ್ನುವ ಮನೋಭಾವ ದೂರವಾಗಿದೆ ಅನಿಸುತ್ತೆ... ಬ್ಲಾಗ್ ನಲ್ಲಿ ಬರೆಯುವವರು ಬೇರೆಯವರು ಓದಲಿ ಅಂತಲೇ ಪ್ರಕಟಿಸಿರುತ್ತಾರೆ, ಅನಿಸಿದ್ದೆಲ್ಲವನ್ನೂ ಹಂಚಿಕೊಂಡರೆ ಅದೊಂತರಾ ಆತ್ಮ ತೃಪ್ತಿ.. , ಸಂಪೂರ್ಣ ಹಕ್ಕು ನಮ್ಮದೇ... ಎಡಿಟರ್, ಸಬ್ ಎಡಿಟರ್, ಪ್ರೂಫ್ ರೀಡರ್ರು ಎಲ್ಲರೂ ನಮಗೆ ನಾವೇ( ನನ್ನದು ಫ್ರೂಫ್ ರೀಡಿಂಗ್ ಅಲ್ಲ ಬಿಡಿ, ತಪ್ಪುಗಳನ್ನು ಸರಿ ಮಾಡ್ಕೊಳಕ್ಕೆ ಆಗದಷ್ಟು ನನಗೆ ಗೊತ್ತಾಗದ ಕಣ್ತಪ್ಪುಗಳಿರುತ್ತೆ ನನ್ನ ಬರವಣಿಗೆಯಲ್ಲಿ.. ) ಇವೆಲ್ಲದರ ಮಿತಿ ಇದ್ದರೂ ಸಹ ಇಷ್ಟವಾದವರು ಅನಿಸಿಕೆ ತಿಳಿಸುತ್ತಾರಲ್ಲ ಅದು ಮತ್ತೊಂದು ಮಗದೊಂದು ಲೇಖನಗಳ ಬರೆಯಲು ಪ್ರೇರೇಪಿಸುತ್ತೆ,


     ಈ ಬಾರಿ ಮನೆಯಿಂದ ಹೊರಗೆ ಹೋಗಲಾಗದೇ ಇರುವಷ್ಟು ಜಿಟಿ ಜಿಟಿ ಮಳೆ ದೋ ಗುಡುವ ಮಳೆಯ ಆರ್ಭಟಗಳು ಇರಲೇ ಇಲ್ಲ, ಇಪ್ಪತ್ನಾಲಕ್ಕು ಘಂಟೆಗಳು ಕಿಟಿ ಕಿಟಿ ಮಳೆ ಹೊಯ್ದು ಕಾಡುತ್ತಿದ್ದ ವರುಣ ಈ ಭಾರಿ ಬರೀ ಕೆಲವು ಘಂಟೆಗಳ ಮಳೆ ಬರಿಸಲಷ್ಟೇ ಶಕ್ತನಾಗಿದ್ದಾನೆ, ಇದೆಲ್ಲಾ ಪ್ರಳಯದ ಮುನ್ಸೂಚನೆಯಾ ಅನಿಸಿತ್ತು?? ಟೀವಿಯಲ್ಲಿ ಪ್ರಳಯದ ಡೇಟ್ ಯಾವುದು ಅಂತ ಎಲ್ಲಾ ಟೀವಿ ಚಾನಲ್ ಗಳ ಆಸ್ಥಾನ( ಟೀವಿ ಚಾನಲ್ ನವರಿಗೊಬ್ಬೊಬ್ಬ ಖಾಯಂ ಜೋತಿಷಿಗಳಿದ್ದಾರೆ) ಜೋತಿಷಿಗಳು ಪ್ರಳಯದ ಎಕ್ಸ್ಯಾಕ್ಟ್ ಡೇಟ್! ಪ್ರಿಡಿಕ್ಟ್ ಮಾಡಿಯಾಗಿತ್ತು, ವರುಷದ ಅಂತ್ಯವಾಗುತ್ತಿದೆ ಆದರೆ ಪ್ರಳಯವಾಗಿ ಮಾನವ ಕುಲದ ಅಂತ್ಯ ಆಗಲೇ ಇಲ್ಲ, ಆಗಿದ್ದರೆ ಪ್ರಳಯದ ಬಗೆಗೆ ಬರೆಯಲು ಅದನ್ನು ಓದಲು ಯಾರೂ ಇರುತ್ತಲೇ ಇರಲಿಲ್ಲ.


ಹೊಸ ವರ್ಷಕ್ಕೆ ಇನ್ನು ಎರಡೇ ದಿನಗಳು ಬಾಕಿ ಉಳಿದಿದೆ, ಮುಂಚಿತವಾಗಿ ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

Saturday, March 10, 2012

ಅನಿಸಿದ್ದು, ತೋಚಿದ್ದು ಗೀಚಿದ್ದು ಹಾಗೇ ಸುಮ್ಮನೆ.....

ನಾನು ಬ್ಲಾಗ್ ನಲ್ಲಿ ಬರೆಯೋದನ್ನು ಬಿಟ್ಟು ಬಿಟ್ಟೆನಾ, ಮರೆತು ಹೋಗಿದೆಯಾ.. ಬರೆಯಬೇಕು, ಬರವಣಿಗೆ ಪುನಃ ಆರಂಭವಾಗಬೇಕು, ಅದೇ ಲಯ ಇದೆಯಾ, ಅಥವಾ ಅಕ್ಷರ, ಪ್ರಾಸಗಳು, ಪದ ಪುಂಜಗಳು ಹೊಳೆಯದೇ ತಡವರಿಸುತ್ತದೆಯಾ ಮನಸ್ಸು, ಹೀಗೆಲ್ಲಾ ಪ್ರಶ್ನೆಗಳು ನನ್ನ ಕಾಡ ತೊಡಗಿತು...ಚಿತ್ರಕ್ಕ ಹೇಳಿದಂತೆ ಬರವಣಿಗೆಯ ಇಳಿಕೆಯ ಕಾಲವಾ ಎಂದು ಯೋಚಿಸಿದರೆ ನಾನು ಬರವಣಿಗೆಯ ಉತ್ತುಂಗಕ್ಕೆ ಏರಲೇ ಇಲ್ಲ, ಟೈಮ್ಲೀ ಅಪ್ಡೇಟುಗಳು ಅಂತ ಆಗಲಿ, ವಾರಕ್ಕೊಂದು ಲೇಖನ ಅಂತಲೋ, ಈ ತಿಂಗಳು ಬರೆಯಲೇ ಬೇಕು ಅಂತಲೋ ಒಂದು ಕಟ್ಟುನಿಟ್ಟಾದ ಅಲಿಖಿತ ಶರತ್ತನ್ನು ಸಹ ವಿಧಿಸಿಕೊಂಡವನಲ್ಲ, ಅದು ನನ್ನಿಂದ ಸಾಧ್ಯವಿಲ್ಲವೆಂದು ನನಗೇ ಗೊತ್ತು.

     ಮುಂಚೆಯಾದರೆ ಸ್ನೇಹಿತರು ಬ್ಲಾಗಲ್ಲಿ ಏನಾದರೂ ಬರೆದಿದ್ದೀಯ ಕೇಳುತ್ತಿದ್ದರು, ಈಗ ಅವರೆಲ್ಲರಿಗೂ ಮನದಟ್ಟಾಗಿ ಹೋಗಿದೆ, ಇವನು ಹೇಳಿದ ತಕ್ಷಣ ಬರೆಯುವವನಲ್ಲ ಎಂದು. ನನ್ನ ಬ್ಲಾಗ್ ಇದೇ ಅನ್ನೋದೆ ಮರೆತು ಹೋಗುವಷ್ಟು ದಿನಗಳಾಗಿ ಹೋಗಿದೆ, ಬ್ಲಾಗ್ ಖಾಲಿ ಬಿಟ್ಟು... ಅದೇ ಹಳತಾದ ಪೋಸ್ಟನ್ನೇ ನೋಡಿ ನೋಡಿ ಅನೇಕರಿಗೆ ಬೇಸರ ಬಂದಿರಬಹುದು, ಇದೊಂದು ಅಪ್ಡೇಟಾಗದ ಬ್ಲಾಗ್ ಇರಬೇಕು ಎಂದು ಅನ್ನಿಸಿರಲು ಸಾಕು,

     ಏನಾದರೂ ಬರೆಯೋಕು ಸಹ ಮೂಡ್ ಅನ್ನೋದು ಬೇಕು.. ಮೂಡ್ ಇಲ್ಲದೇ ಯಾವ ಕೆಲಸ ಮಾಡಿದರೂ ಅದು ತೃಪ್ತಿದಾಯಕವಾಗಲು ಸಾಧ್ಯವೇ ಇಲ್ಲ, ನನಗೇ ಅನ್ನಿಸಬೇಕು ಬರೆಯಬೇಕು ಎಂದು ಅಲ್ಲಿಯ ತನಕ ಒತ್ತಾಯಕ್ಕೋ ಬರೆಯಬೇಕಲ್ಲಾ ಎಂದು ಬರೆದ ಬರವಣಿಗೆಯಲ್ಲಿ ಸತ್ವದ ಕೊರತೆ ಇದ್ದೇ ಇರುತ್ತದೆ,...

     ಹಾಗೇ ಸುಮ್ಮನೆ ಅಂತ ನನ್ನ ಬ್ಲಾಗ್ ಆಗಿರೋದರಿಂದ ಹಾಗೇ ಸುಮ್ಮನೆ ಅನ್ನಿಸಿದ್ದೆಲ್ಲವನ್ನೂ ಹಾಗೇ ಬರೆದುಬಿಡಬೇಕು ಅಂತ ಕುರ್ಚಿಗೆ ಒರಗಿಕೊಂಡು ಬೆರಳುಗಳಿಗೆ ಕೆಲಸ ಕೊಡಲು ಆರಂಬಿಸಿದ್ದೇನೆ

     ಅಂತರ್ಜಾಲ ವ್ಯವಸ್ಥೆಯಿಂದ ಎಲ್ಲವೂ ಕುಳಿತಲ್ಲಿಯೇ ಮಾಡಬಹುದು... ಆದರೆ ಕೆಲವು ಸಾರಿ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅದರಲ್ಲಿಯೂ ಸಹ ಅನೇಕ ಕುಂದು ಕೊರತೆಗಳಿವೆ ಅನಿಸಿದ್ದಕ್ಕೂ ಸಕಾರಣವಿದೆ, ಫೋನ್ ಬಿಲ್ಲುಗಳನ್ನು ಮನೆಯಲ್ಲಿ ಕುಳಿತೇ ಕಟ್ಟಿಬಿಡಬಹುದು, ಅದ್ಬುತ! ಕುಳಿತಲ್ಲಿಯೇ ಕಷ್ಟಪಡದೇ ಎಲ್ಲಾ ಕೆಲಸ ಮಾಡಿಬಿಡಬಹುದು ಎಂದು ನಾನು ಹಲವು ಬಾರಿ ನೆಟ್ ಬ್ಯಾಂಕಿಂಗ್ ಮುಖಾಂತರ ಕಟ್ಟಿದ್ದೆ. ಮುಂದಿನ ಬಿಲ್ಲಿನಲ್ಲಿ ಶೇಕಡಾ ೧ರಷ್ಟು ರಿಯಾಯಿತಿ ಬೇರೆ, ಯಾರಿಗುಂಟು ಯಾರಿಗಿಲ್ಲ ಎಂದು ಖುಷಿ ಪಟ್ಟಿದ್ದಿದೆ, ಸರಿಯಾಗಿದ್ದರೆ ಎಲ್ಲಾ ಸೌಲಭ್ಯ ಬಳಸಿಕೊಳ್ಳಬಹುದು.. ಆದರೆ ಕಟ್ಟಿದ ಬಿಲ್ಲು ಸಹ ಕಟ್ಟಿಲ್ಲವೆಂದು ಮುಂದಿನ ಬಿಲ್ಲಿನಲ್ಲಿ ಬಂದಾಗ ಅದನ್ನು ಸರಿ ಮಾಡಿಸಲು ಮತ್ತೆ ಅಲೆಯಬೇಕಲ್ಲಾ ಅದಕ್ಕಿಂತ ಕ್ಯೂನಲ್ಲಿ ನಿಂತು ಬಿಲ್ಲು ಕಟ್ಟಿ ಅಧಿಕೃತ ರಶೀದಿ ಪಡೆಯುವುದೇ ಪರಮ ಸುಖ ಅನ್ನಿಸಿಬಿಡುತ್ತೆ.

     ತಂತ್ರಜ್ಞಾನ ಎಷ್ಟೇ ಮೈಲುಗಲ್ಲುಗಳನ್ನು ದಾಟಿ ಬೆಳೆದರೂ ಜನರ ಯೋಚನಾ ಲಹರಿಯೇನು ಬದಲಾವಣೆಯಾಗಿಲ್ಲ ಅನಿಸಿಬಿಟ್ಟಿದೆ, ಉದಾಹರಣೆಗೆ ಯಾರನ್ನಾದರೂ ಮೊಬೈಲ್ ನಲ್ಲಿ ಎಸ್ ಎಂ ಎಸ್ ಮಾಡಿ ಯಾವುದಾದರೂ ಮದುವೆ ಅಥವಾ ಇನ್ಯಾವುದೋ ಶುಭ ಸಮಾರಂಭಕ್ಕೆ ಬನ್ನಿ ಎಂದು ಕಳುಹಿಸಿ ನೋಡಿ, ನೂರಕ್ಕೆ ತೊಂಬತ್ತು ಜನ ಬರುವುದಿಲ್ಲ.. ಉಚಿತ ಮೆಸೇಜ್ ಇದೆ ಎಂದು ಕಳುಹಿಸಿದ್ದಾರೆ ಎಂದು ಯೋಚಿಸುವವರೇ ಹೆಚ್ಚು, ಇನ್ನು ಇಮೇಲ್(ಮಿಂಚಂಚೆ) ನಲ್ಲಿ ಮಂಗಳ ಪತ್ರಿಕೆಯ ಸ್ಕ್ಯಾನ್ ಪ್ರತಿಯೊಂದಿಗೆ ಶುಭ ಕಾರ್ಯಕ್ಕೆ ಆಮಂತ್ರಣ ಕಳುಹಿಸಿದರೆ, ಏನು ಯೋಚನೆ ಮಾಡಬಹುದು?.. ಅದು ಸ್ಪ್ಯಾಮ್ ಲೆಖ್ಖಕ್ಕೆ ಬರುತ್ತದೆಯಂತೆ! ಎಲ್ಲರಿಗೂ ಕಳುಹಿಸಿದ್ದಾರೆ ಇದೊಂದು ಕರೆಯವಾ? ಇಡೀ ಲೀಸ್ಟಿಗೆ ಕಳುಹಿಸಿದ್ದಾರೆ ಉಹೂಂ ಇದಕ್ಕೆ ಬೆಲೆಯಿಲ್ಲವಂತೆ? ಒಬ್ಬರಿಗೆ ಕಳುಹಿಸಿದ್ದು ಮತ್ತೊಬ್ಬರಿಗೆ ಹೋಗಿದೆ ಎಂದು ಗೊತ್ತಾಗಬಾರದಂತೆ! ಅದಕ್ಕೆ To CC BCC ಅಂತಿರೋದು ಅಂತಾರೇನೋ.. ಲೀಸ್ಟ್ ತಯಾರಿಸುವುದು ನನ್ನಂತವನಿಗೆ ಕಷ್ಟದ ಕೆಲಸವೇ ಹೌದು, ಏಕೆಂದರೆ ಸೋಶಿಯಲ್ ನೆಟ್ ವರ್ಕಗಳಿಗೆ ಬೇರೆಯ ಮಿಂಚಂಚೆ ಮಾಡಿಕೊಂಡ ನನಗೆ ಅಲ್ಲಿಂದ ನನ್ನ ಸ್ವಂತ ಮಿಂಚಂಚೆ ವಿಳಾಸಕ್ಕೆ ಒಬ್ಬೊಬ್ಬರ ಮಿಂಚಂಚೆ ವಿಳಾಸ ಹುಡುಕಿ ಅವನ್ನೆಲ್ಲಾ ಒಂದುಕಡೆ ಬರೆದಿಟ್ಟುಕೊಂಡು ಮತ್ಯಾರದ್ದಾದರೂ ಬಿಟ್ಟುಹೋಗಿದೆಯಾ ನೋಡಿಕೊಳ್ಳಬೇಕು, ಅದೂ ಅಲ್ಲದೆ ಇಂಟರ್ನೆಟ್ ಸಹ ಆಮೆ ವೇಗದ್ದೇ ಆಗಿರೋದ್ರಿಂದ ಈ ಮೇಲು ಹೋಯ್ತೋ ಇಲ್ಲವೋ ಅಂತ ನೋಡಿಕೊಳ್ಳಬೇಕು, ಲೀಸ್ಟಿಗೆ ಕಳುಹಿಸಿದ್ದಾಯ್ತಲ್ಲಾ ಅಂತ ಸುಮ್ಮನಿರಲು ಸಾಧ್ಯವಾ ಅದೂ ಇಲ್ಲ, ಮಿಂಚಂಚೆ ಕಿಂಚಿತ್ ಬೆರಳ್ತಪ್ಪಿನಿಂದ ಮುದ್ರಿತವಾಗಿದ್ದರೆ ಸೀದಾ ವಾಪಸ್ಸು ಬಂದು ಬಿದ್ದಿರುತ್ತದೆ ಡೆಲಿವರಿ ಪೇಲ್ಡ್ ಅಂತ ಅದು ಯಾವ ವಿಳಾಸ ನೋಡಿಕೊಳ್ಳಬೇಕು, ಒಬ್ಬೊಬ್ಬರಿಗೆ ಬೇರೆ ಬೇರೆಯಾಗಿ ಮಿಂಚಂಚೆ ಮಾಡುತ್ತಾ ಕುಳಿತಿದ್ದರೆ ಮುದುವೆ ಮಂಟಪಕ್ಕೆ ಹೋಗುವ ತನಕವೂ ಕಂಪ್ಯೂಟರಿನ ಮುಂದೆ ಕುಳಿತು ಬಿಡಬೇಕಿತ್ತೇನೋ.... ಮದುವೆಯಂತ ಕಾರ್ಯಕ್ರಮಗಳಲ್ಲಿ ಅತಿ ಮುಖ್ಯವಾದವರನ್ನೇ ಕರೆಯಲು ಮರೆತುಹೋಗುವಂತಹದ್ದೂ ಸಹ ಇಲ್ಲೆವೆಂದಿಲ್ಲ. ಇನ್ನು ಕೆಲವು ಕಡೆ ಫೋನ್ ನಲ್ಲಿ ಕರೆದರೂ ಬಾರದವರಿದ್ದಾರೆ, ಫೋನಲ್ಲಿ ಕರದಿದ್ದಾರೆ, ನಮಗೇನು ಬೆಲೆಯೇ ಇಲ್ಲವಾ , ಫೋನ್ ನಲ್ಲಿ ಕರೆಯೋದೊಂದು ಅಕ್ಷಮ್ಯ ಅಪರಾಧ, ಮನೆಗೇ ಬಂದು ಕರೆಯಬೇಕಾಗಿತ್ತು ಎನ್ನುವುದು ಅವರ ಆಕ್ಷೇಪಣೆ.

     ಸೌಲಭ್ಯಗಳಿರುವುದೇ ಬಳಸಿಕೊಳ್ಳುವುದಕ್ಕಾಗಿ, ಈಮೇಲ್ ಚಾಟ್ ಗಳು ಇನ್ನೂ ಹರಟೆಗಷ್ಟೇ ಸೀಮಿತವಾಗಿರುವುದೇ ವಿಪರ್ಯಾಸ, ಶುಭ ಕಾರ್ಯಗಳ ಮಂಗಳ ಪತ್ರ(ಇನ್ವಿಟೇಶನ್) ಲಗತ್ತಿಸಿ ಕಳುಹಿಸಿದರೇ ಅದೂ ಸಹ ನೇರವಾಗಿ ಕರೆಯೋಲೆ ಕೊಟ್ಟಂತೆ ಅಲ್ಲವಾ? ಮೊಬೈಲ್ ಮೆಸೇಜಿಗೂ ಸಹ ಕಾಲ್ ನಷ್ಟೇ ಮಹತ್ವವಿಲ್ಲವಾ? ಮೆಸೇಜು ಸಹ ಅದೇ ವ್ಯಕ್ತಿಯ ಮೊಬೈಲಿನಿಂದ ಬಂದಿದ್ದು ಅಂದ ಮೇಲೆ ಅದು ಸಹ ಅದಿಕೃತವೇ ಅಲ್ಲವೇ? ಪ್ರತಿಯೊಬ್ಬರನ್ನೂ ಮನೆಗೇ ಹೋಗಿ ಕರೆದಾಗಲೂ ಅವರಿಲ್ಲವೆಂದು ಮತ್ತೆ ಮತ್ತೆ ಮೂರ್ನಾಲ್ಕು ಭಾರಿ ಕರೆಯುವುದು ಸಾಧ್ಯವಾ? ಮನೆಗೆ ಪತ್ರಿಕೆ ಕೊಟ್ಟಿದ್ದಾರೆ ತಾನು ಬರುವ ತನಕ ಕಾಯಬೇಕಿತ್ತು ಅನ್ನುವುದು ಎಷ್ಟು ಸರಿ.ಎಲ್ಲವೂ ಕಲ್ಪಿಸಿಕೊಂಡೂ ಬರೆದದ್ದಲ್ಲ, ಅನುಭವಕ್ಕೆ ಬಂದವುಗಳೇ ಆಗಿವೆ. ಆಗಿದ್ದೆಲ್ಲವೂ ಒಳ್ಳೆಯದಕ್ಕೆ ಎಂದು ಸುಮ್ಮನಾಗೋದೆ ಒಳ್ಳೇದೇನೋ ಅನಿಸಿಬಿಡುತ್ತೆ.

ಹಾಂ ನಾಳೆ ಅಂದರೆ ಮಾರ್ಚ 11ಕ್ಕೆ ನನ್ನ ಮಗಳು "ನಿಧಿ"ಯನ್ನು ಮೊದಲಬಾರಿಗೆ ಮನೆಗೆ ಕರೆದುಕೊಂಡು ಬರುತ್ತಿದ್ದೇನೆ ಅವಳ ಅಜ್ಜನ ಮನೆಯಿಂದ, ನಿಮ್ಮೆಲ್ಲರ ಹಾರೈಕೆ ಬೇಕು ಅವಳ ಮೇಲೆ, ಮಕ್ಕಳಂದ ತಕ್ಷಣ ಎಷ್ಟು ಖುಷಿ ಇರುತ್ತೆ... ಈಗಂತೂ ಚಂದ ಚಂದದ ಬಟ್ಟೆಗಳನ್ನು ತೊಡಿಸಿ ಸಂತೋಷ ಪಡಬಹುದು... ಸಮಯ ಹೋದದ್ದೆ ಗೊತ್ತಾಗೋದಿಲ್ಲ... ಮಕ್ಕಳ ಜೊತೆಯಲ್ಲಿ ನಾವು ಸಹ ಚಿಕ್ಕವರಾಗಬಹುದೇನೋ.. ಸಿರಸಿಯಲ್ಲಿ ಜಾತ್ರೆ ಆರಂಭವಾಗಿದೆ, ಮಗಳಿಗೆ ಆಟಿಕೆ ತರುವ ನೆಪದಲ್ಲಿ ಸುತ್ತಿ ಬರಬಹುದೇನೋ ಅನ್ನಿಸುತ್ತಿದೆ, ಅಂತೆಯೇ ಅಂಗಡಿಗಳಲ್ಲಿರುವ ಕಾರು ಬೈಕು ಇಮಾನ, ಹೂಂ ವಿಮಾನ ಅಲ್ಲ ಇಮಾನನೇ ಅದು, ಎಲ್ಲವನ್ನೂ ತರಬೇಕು.... ಬನ್ನಿ ಸಿರಸಿ ಜಾತ್ರೆ ಒಂದು ಸುತ್ತು ಸುತ್ತಾಡಿ ಬರೋಣ ಏನಂತೀರಾ........

Thursday, September 29, 2011

ಮೌನ ಮಾತಾಡಿದಾಗ

ಮಾತೊಂದೆ ಎಲ್ಲವೂ ಅಲ್ಲ

ಮೌನವೇ ಎಲ್ಲ ಅಂದವರೇ ಮೌನವಾಗೊಲ್ಲ

ಮಾತು ಸಾಕಾದಾಗ ಮೌನ ಹಿತ

ಮೌನ ಹೆಚ್ಚಾಗಿ ಕೊರೆದಾಗ ಮಾತೇ ಸುಖ


ಭಾವನೆಗಳ ವ್ಯಕ್ತ ಪಡಿಸುವ ಪರಿ ನೀ ತಿಳಿ

ಮೌನದಲಿ ಅವ್ಯಕ್ತವಾದ ಭಾವನೆಯು ಕಣ್ಣಲ್ಲಿ ವ್ಯಕ್ತವಾಗಲಿ

ಮಾತಾಡಿ ಕೊಲ್ಲಬೇಡ, ಮೌನವಾಗಿ ಕೊರಗಬೇಡ



ಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ

ಮಾತೇ ಎಲ್ಲವು ಅಲ್ಲ, ನೀ ಅತಿ ಮೌನಿಯಾಗಬೇಡ

ಮಾತು ಮೌನದ ನಡುವೆ ಅಂತರ ನಿರಂತರ

ಮೌನ ನೀ ಮಾತಾಡು, ಮಾತೇ ಮಾತು ನೀ ಮೌನಿಯಾಗು.

Tuesday, July 5, 2011

ಚಿತ್ರರಂಗದ ಬಗ್ಗೆ ಒಂದಿಷ್ಟು ತಿಳಿದಷ್ಟು ಮತ್ತು ಅಮೃತ ಘಳಿಗೆ ಚಲನ ಚಿತ್ರದಲ್ಲಿ ಬಾಲನಟನಾಗಿ ನನ್ನ ಅಭಿನಯ!

     ನನ್ನೊಳಗಿನ ಬರಹಗಾರ ಅನಾಮತ್ತಾಗಿ ತಲೆಗೆ ಕೈ ಕೊಟ್ಟು ಕುಂಭಕರ್ಣನಂತೆ ದೀರ್ಘ ನಿದ್ರೆಗೆ ಜಾರಿದ್ದನೇನೋ ಎನ್ನುವ ಅನುಭವ,ಅಲ್ಲಾಡಿಸಿದರೂ ಏಳಲು ಒಪ್ಪದ ಜಾಯಮಾನದ ಆತ ನಿನ್ನೆ ಇಂದ ಒಂದೇ ಸಮನೆ ಸುರಿಯುತ್ತಿರುವ ಮಲೆನಾಡಿನ ಜಡಿ ಮಳೆಯ ದೊಡ್ಡ ದೊಡ್ಡ ಹನಿ ಮೈಗೆ ಸಿಡಿದಿರಬೇಕು.. ತಟಪಟ ಸದ್ದು ಕಿವಿಗೆ ಬಿದ್ದಿರಬೇಕು, ಮೈ ಕೈ ಮುರಿಯುತ್ತಾ ಎದ್ದು ಕುಳಿತಂತೆ ಅನ್ನಿಸುತ್ತಿದೆ, ಪೀಠಿಕೆ ಅತಿಯಾಗುತ್ತಿದೆ ಅನ್ನಿಸುವ ಮೊದಲು ಲೇಖನ ಆರಂಭಿಸಿ ಬಿಡುತ್ತೇನೆ




     ಚಿತ್ರ ಜಗತ್ತು ಅನ್ನೋದು ಚಿತ್ರ, ವಿಚಿತ್ರ, ಅದ್ಬುತ, ವಿಸ್ಮಯ, ರೋಮಾಂಚನ, ನೋವು, ನಲಿವು, ದುಃಖ, ಕಷ್ಟ, ಸುಖ, ಹೆಸರು, ಕೀರ್ತಿ, ಹಣ, ಯಶಸ್ಸು, ಎಲ್ಲವನ್ನೂ ಒಟ್ಟೋಟ್ಟಿಗೆ ನೀಡಬಲ್ಲದು, ಆದರೂ ಚಿತ್ರ ಜಗತ್ತಿನ ಆಳ ಅಷ್ಟು ಸುಲಭವಾಗಿ ಅರಿವಾಗೋದಿಲ್ಲ, ಆದರೂ ಗೊತ್ತಿರುವಷ್ಟು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ.

     ನಾನು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಅಮೃತ ಘಳಿಗೆ ಚಲನಚಿತ್ರದಲ್ಲಿ ಶ್ರೀಧರ ನ ಮಗನಾಗಿ ಅಭಿನಯಿಸಿದ್ದೇನೆ, ನಮ್ಮ ಊರಿನ ರಾಮಯ್ಯನವರ ಹಳೆಯ ಕಾಲದ ಮನೆಯಲ್ಲಿ ಶ್ರೀಧರ ನ ಮನೆಯ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು... ನಾನು ಅಭಿನಯಿಸಿದ ದೃಶ್ಯ - ಮೂರುಗಾಲಿಯ ಚಿಕ್ಕ ಗಾಡಿಯನ್ನು ದೂಡಿಕೊಂಡು ಹೋಗುವ ಪುಟ್ಟ ಮಗುವಿನ ಪಾತ್ರ! ನನಗಾಗ ಎರಡು ವರ್ಷ ವಾಗಿತ್ತು! ಇನ್ನೊಂದು ಚಾನ್ಸ್ ಕೊಡಿ ಅಂತ ಕೇಳೋಕು ಗೊತ್ತಾಗಲೇ ಇಲ್ಲ! ಪಾಪ ಅಂದ್ರಾ? ಹೂಂ ನಾನು ಪಾಪುನೇ ಆಗಿದ್ದೆ! ಅಂದಹಾಗೆ ಆ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಅಲೋಕ ಎಂದಾಗಿತ್ತು, ಇಂದಿಗೂ ಸಹ ನಮಗೆ ಆಪ್ತರಾದ ಕುಂಟಗೋಡಿನ ಗಣಪತಿಯವರು ನನ್ನನ್ನು ಕಂಡಾಗೆಲ್ಲಾ ಅಲೋಕ್ ಎಂದೇ ಕರೆಯುತ್ತಾರೆ, ಅನೇಕರು ಗೊತ್ತಿಲ್ಲದೇ ಹೋದವರು ಅಲೋಕ್ ಅಲ್ಲ ಆದಿತ್ಯ ಅಂದರೂ ಸಹ "ಗೊತಿದಾ ಅವ ನಮ್ಮ್ ಅಲೋಕ್" ಎಂದೇ ಹೇಳುತ್ತಾರೆ, ಮೊನ್ನೆ ಹೀಗೆ ಆಯಿತು, ನನ್ನ ಹೆಂಡತಿ ಸೋದರ ಮಾವನ ಮನೆಗೆ ಹೋಗಿದ್ದಳು ಅಲ್ಲಿಗೆ ಗಣಪತಣ್ಣ ಬಂದಿದ್ದರಂತೆ ಅಲ್ಲಿ ಓಹ್ ಅಲೋಕ ನ ಹೆಂಡ್ತಿ ಅಲ್ದಾ ಕೇಳಿದರಂತೆ! ಅಲ್ಲಿದ್ದವರಿಗೆಲ್ಲಾ ಏನು ಅರ್ಥವಾಗದೆ ಕಕ್ಕಾಬಿಕ್ಕಿಯಾಗಿ ನೋಡಿದರಂತೆ, ನನ್ನ ಹೆಂಡತಿಗೆ ಮುಂಚೆಯೇ ನಾನು ತಿಳಿಸಿದ್ದರಿಂದ ಅವಳು ಎಲ್ಲರಿಗೂ ಅಮೃತಗಳಿಗೆ ಸುದ್ದಿ, ಅಲೋಕ ಅಂತಲೇ ಕರೆಯೋದು ಗಣಪತಣ್ಣ ಅಂತ ವಿವರಿಸಿದ ಮೇಲೆ ಎಲ್ಲರಿಗೂ ಅರ್ಥವಾಗಿಯಿತಂತೆ.

     ಚಿತ್ರರಂಗ ಹೀಗಿದೆ ಅಂತ ಹೇಳೋದು ಕಷ್ಟ, ಅಲ್ಲಿ ಎಲ್ಲರೂ ಒಂದಾಗಿ ದುಡಿದರೆ ಮಾತ್ರ ಗೆಲುವು, ಅಲ್ಲಿ ಹೀರೋ, ಹೀರೋಯಿನ್ ಗೆ ಆಕ್ಟಿಂಗ್ ಒಂದು ಬಂದರೆ ಆಗೋದಿಲ್ಲ, ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ, ಲೈಟ್ ಬಾಯ್ ನಿಂದ ಹಿಡಿದು ಎಲ್ಲರೂ ಎಲ್ಲರೂ ನುರಿತ ಕೆಲಸಗಾರರಾಗಿರಬೇಕು, ಯಾರೇ ಒಬ್ಬರು ಶ್ರದ್ದೆಯಿಂದ ಕೆಲಸ ಮಾಡದೇ ಹೋದರೆ ಚಿತ್ರದಲ್ಲಿ ಎಡವಟ್ಟಾಗೋದು ಗ್ಯಾರಂಟಿ. ಉದಾಹರಣೆಗೆ, ಹೀರೋ ಮತ್ತು ಹೀರೋಯಿನ್ ಹೊಟೆಲ್ ನಲ್ಲಿ ಕುಳಿತು ಶರಬತ್ತು, ಅದೇ ಜೂಸ್ ಹೀರುತ್ತಾ ಮಾತನಾಡುವ ದೃಶ್ಯ,ದೃಶ್ಯ ಒಂದೇ ಟೇಕ್ ನಲ್ಲಿ ಸಾಧ್ಯವಿಲ್ಲವಾದರೆ ಪ್ರತಿಯೊಂದನ್ನು ಬರೆದುಕೊಳ್ಳಬೇಕಾಗುತ್ತದೆ, ಟೇಬಲ್ ಮೇಲೆ ಏನೇನು ಇತ್ತು, ನಾಯಕಿ ಹೀರುತ್ತಿದ್ದ ಜ್ಯೂಸ್ ನ ಬಣ್ಣ ಯಾವುದು, ಎಷ್ಟು ಇತ್ತು, ಸ್ಟ್ರಾ ಬಣ್ಣ ಯಾವುದು, ಅವಳು ದರಿಸಿದ್ದ ಬಟ್ಟೆಯ ಬಣ್ಣ ಯಾವುದು ಎಲ್ಲವನ್ನು ಯಥಾವತ್ ಬರೆದಿಟ್ಟುಕೊಳ್ಳಬೇಕು, ಇಲ್ಲವಾದರೆ ಅರ್ಧ ಚಿತ್ರೀಕರಣವಾಗಿ ಮತ್ತೊಂದು ದಿನ ಮುಂದಿನ ಭಾಗ ಚಿತ್ರೀಕರಣ ಮಾಡುವಾಗ ಆರೇಂಜ್ ಜ್ಯೂಸ್ ನ ಬದಲಾಗಿ ಮರೆತು ಕೋಕ್ ಬಾಟಲಿಯನ್ನು ಇಟ್ಟರೆ, ಮೊದಲು ಆರೇಂಜ್ ಜ್ಯೂಸ್ ಕುಡಿಯುತ್ತಿದ್ದ ನಟಿ, ಹೀರೋ ಮಾತನಾಡಿ ಮುಗಿಸಿ ಮತ್ತೆ ಮಾತಾಡುವಾಗ ಆಕೆಯ ಕೈನಲ್ಲಿ ಕೋಕ್ ಬಾಟಲಿ ಬಂದಿರುತ್ತದೆ!



     ಅನೇಕ ಚಿತ್ರಗಳು ಪೋಷಕ ನಟರ, ಹಾಸ್ಯ ನಟರ ಕೊರತೆಯಿಂದ ಚಿತ್ರ ಯಶಸ್ವಿಯಾಗೋದಿಲ್ಲ, ಚಿತ್ರ ಚನ್ನಾಗಿಲ್ಲ ಎಂದು ಮೊದಲ ಶೋ ನೋಡಿ ಹೊರಬಂದವರು ಹೇಳಿದರೆ ಮುಗಿಯಿತು, ಚಿತ್ರ ಮಕಾಡೆ ಮಲಗುತ್ತೆ ಅನ್ನೋದು ಮತ್ತೆ ಹೇಳಬೇಕಾಗಿಲ್ಲ, ಪತ್ರಿಕೆಗಳಲ್ಲಿ ಬರುವ ಚಿತ್ರ ವಿಮರ್ಶೆಗಳಲ್ಲಿ ಚಿತ್ರ ವಿಮರ್ಶಕ ತನ್ನ ಮೂಗಿನ ನೇರಕ್ಕೆ ಚಿತ್ರದಲ್ಲಿ ಹುರುಳಿಲ್ಲ, ನಾಯಕ ನಟನಿಗೆ ತಲೆಯಲ್ಲಿ ಹುಲುಸಾಗಿ ಕೂದಲೊಂದು ಬೆಳೆದಿದೆ, ಚಿತ್ರ ತರಬೇತಿಯ ಜೊತೆ ಕಟಿಂಗ್ ಶಾಫಿಗೂ ಹೋಗಿಬರಬೇಕು, ದುಡ್ಡು ಕೊಟ್ಟು ನೋಡುವ ಚಿತ್ರವಲ್ಲ ಎಂದು ಬರೆದರೆ ಹೇಗಾಗಬೇಡ, ಅತಿ ಹೆಚ್ಚಿನ ಜನರು ಚಿತ್ರ ವಿಮರ್ಶೆಗಳನ್ನು ಓದುತ್ತಾರೆ ಮತ್ತು ನಂಬುವವರೇ ಹೆಚ್ಚು. ಇನ್ನು ಗಾಂಧೀನಗರ ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗ, ಅಲ್ಲಿಯೇ ಗಾಸಿಪ್ಪುಗಳು ಹುಟ್ಟೋದು, ಗಾಂಧೀನಗರ ಏನು ಮಾತಾಡಿಕೊಳ್ಳುತ್ತೆ ಎನ್ನೋದು ಮುಖ್ಯವಾಗಿ ಬಿಡುತ್ತದೆ.



ಇನ್ನು ಸ್ಟಾರ್ ನಂ ೧ ಪಟ್ಟ ನಾಯಕ ನಾಯಕಿಯರಿಗೆ ಸದಾ ಇರುತ್ತೆ ಅಂತ ಹೇಳೋಕ್ಕೆ ಆಗೋದಿಲ್ಲ, ಅನೇಕ ಕಾರಣಗಳಿಂದ, ಉದಾಹರಣೆಗೆ ಹೊಸ ಮುಖ, ಹೊಸ ಪ್ರತಿಭೆ, ಹೆಚ್ಚು ಜನಪ್ರಿಯತೆ ಪಡೆದರೆ ಸ್ಟಾರ್ ಪಟ್ಟ ಅವರದ್ದಾಗುತ್ತೆ, ಇನ್ನು ನಟಿಯರು ಸ್ವಲ್ಪ ಡುಮ್ಮಿಯರಾದರೂ, ಫಿಟ್ ನೆಸ್ ಕೊರತೆಯಿದ್ದರೆ ನಂ ೧ ಪಟ್ಟ ಕೈಬಿಟ್ಟು ಹೋದಂತೆ. ಬ್ಯೂಟಿ ವಿದ್ ಬ್ರೈನ್ ಅಂತಾರಲ್ಲ ಅದು ಇರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನಾಯಕ/ನಾಯಕಿಗೆ ಅಭಿನಯ ಚಾತುರ್ಯತೆ ಇರಬೇಕಾಗುತ್ತದೆ!

     ಹಿಂದಿನ ಕಾಲದಲ್ಲಿ ಡಬಲ್ ರೋಲ್ಗಳನ್ನು ಚಿತ್ರೀಕರಣ ಮಾಡುವುದು ಸುಲಭವಾಗಿರಲಿಲ್ಲ, ಡಬಲ್ ರೋಲ್ ಚಿತ್ರೀಕರಣ ಛಾಯಾಗ್ರಾಹಕನಿಗೊಂದು ಸವಾಲೇ ಆಗಿತ್ತು, ಒಂದು ದ್ವಿಪಾತ್ರದ ಚಿತ್ರೀಕರಣ ಮಾಡಬೇಕಿದ್ದಲ್ಲಿ ಕ್ಯಾಮರಾ ಲೆನ್ಸ್ ನ ಒಂದು ಭಾಗವನ್ನು ಎಕ್ಸ್ಪೋಸ್ ಆಗದಂತೆ ಮುಚ್ಚಿ ಚಿತ್ರೀಕರಿಸಬೇಕಿತ್ತು, ನಂತರ ಚಿತ್ರೀಕರಣವಾದ ಸೈಡನ್ನು ಮುಚ್ಚಿಕೊಂಡು ರಿವೈಂಡ್ ಮಾಡಿ ಮತ್ತೊಂದು ಪಾತ್ರದ ಚಿತ್ರೀಕರಣ ಮಾಡುತ್ತಿದ್ದರು, ಅದಕ್ಕೆ ಹಳೆಯ ಚಿತ್ರಿಗಳನ್ನು ನೋಡಿ ದ್ವಿಪಾತ್ರಭಿನಯದಲ್ಲಿ ಆ ಇಬ್ಬರು ಏಕವ್ಯಕ್ತಿಗಳ ನಡುವೆ ಗೆರೆಯೊಂದು ಮೂಡಿರುತಿತ್ತು! ಎರಡೂ ಪಾತ್ರಗಳನ್ನು ಒಟ್ಟೊಟ್ಟಿಗೆ ತೋರಿಸುತ್ತಿರಲಿಲ್ಲ, , ಅವರಿಬ್ಬರು ಅಣ್ಣ ತಮ್ಮಂದಿರೆಂದು ಗೊತ್ತಾಗಿ ಅಪ್ಪಿಕೊಳ್ಳುವ ದೃಶ್ಯವಿದ್ದಾಗ ಏನು ಮಾಡುವುದು? ಒಬ್ಬರನ್ನೊಬ್ಬರು ತಬ್ಬಿಕೊಂದು ಅಳುವಾಗ ಹೀರೊನನ್ನೆ ಹೋಲುವ ಮತ್ತೊಬ್ಬ ವ್ಯಕ್ತಿಯ ಬೆನ್ನು ತೋರಿಸುತ್ತಿದ್ದರು.ಹಿಂದೆ ಈಗಿರುವಂತೆ ಮಿಕ್ಸಿಂಗ್ ತಂತ್ರಜ್ಞಾನಗಳು ಬಂದಿರಲಿಲ್ಲ,ಈಗಿನ ಗ್ರಾಫಿಕ್ಸ್ ಅನಿಮೇಷನ್ ಯುಗದಲ್ಲಿ ಏನು ಬೇಕಾದರು ಸುಲಭವಾಗಿ ಮಾಡಬಹುದು.ಇಬ್ಬರಲ್ಲ ಎಷ್ಟು ದ್ವಿಪಾತ್ರ, ತ್ರಿಪಾತ್ರಗಳನ್ನಾದರು ನೈಜ ಅನ್ನಿಸುವಷ್ಟರ ಮಟ್ಟಿಗೆ ಒಟ್ಟೊಟ್ಟಿಗೆ ತೆರೆಯ ಮೇಲೆ ಮೂಡಿಸಬಹುದು.



ಹಳೆಯ ಚಲನಚಿತ್ರಗಳ ಹಾಡುಗಳು ಸುಮಧುರವಾಗಿರುತ್ತಿದ್ದವು, ಹಾಡಿಗೊಂದು ಸಾಹಿತ್ಯವಿರುತ್ತಿತ್ತು, ಅರ್ಥವಿರುತ್ತಿತ್ತು, ಕ್ಯಾಬರೇ ಹಾಡುಗಳು ಸಹ ಮಧುರವಾಗಿರುತ್ತಿದ್ದವು, ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು..., ನಂತಹ ಹಾಡುಗಳು ಹಿತವಾಗಿದ್ದವು,..



     ಈಗಿನ ಕಾಲದ ಹಾಡುಗಳು ಕೆಲವು ಅರ್ಥವಾಗುವುದಿರಲಿ, ಯಾವ ಭಾಷೆಯಲ್ಲಿ ಹಾಡುತ್ತಿದ್ದಾರೆ ಎಂದು ತಿಳಿಯಲು ಎರಡು ನಿಮಿಷಗಳು ಬೇಕು. ಇನ್ನು ಕ್ಯಾಬರೇ ನರ್ತಕಿಯರೇ ಬೇರೆ ಇರುತ್ತಿದ್ದರು, ಈಗಿನಂತೆ ಹಿರೋಯಿನ್ ಗಳೇ ತಾವೆ ಐಟಂ ಸಾಂಗ್ ಗೆ ಕುಣಿಯಲು ತಯಾರಿರುತ್ತಿರಲಿಲ್ಲ, ಈಗ ಊರಿಗೊಬ್ಬಳೆ ಪದ್ಮಾವತಿ ಮುಂತಾದ ಹಾಡಿಗೆ ಹಿರೋಯಿನ್ ಗಳೆ ಕುಣಿಯಲು ಸಿದ್ದರಾಗಿದ್ದಾರೆ. ಹಳೆಯ ಹಾಡುಗಳನ್ನು ನೆನೆಸಿಕೊಳ್ಳುತ್ತಿರುವುದರ ನಡುವೆ ಇಲ್ಲಿ ನನಗೆ ತಕ್ಷಣಕ್ಕೆ ನೆನಪಿಗೆ ಬಂದಿದ್ದು ಮೈಸೂರು ಆನಂದ್ ರವರ ದಶಕಗಳ ಹಿಂದಿನ ಹಳೆಯ ಕಾಲದ ಹಾಡುಗಳು ಹೇಗಿದ್ದವು ಈಗ ಹೇಗಿದೆ ಎನ್ನುವುದರ ಏಕಪಾತ್ರಾಭಿನಯ, ಆಗಿನ ಕಾಲದಲ್ಲಿ ಕ್ಯಾಮರಾಗಳು ಈಗಿನಂತೆ ಇರಲಿಲ್ಲವಂತೆ ನಿರ್ದೇಶಕರು ಹೇಳುತ್ತಿದ್ದರಂತೆ ನೋಡಮ್ಮ ಒಂದೇ ಕ್ಯಾಮರ ಇರೋದು ಅದರ ಎದುರು ನೀನು ಕಾಲುಗಳನ್ನು ಕುಣಿಸುತ್ತಾ(ಮೈ ಕುಲಕಿಸಬೇಕು ಎಂದು ಮತ್ತೆ ಆಕೆಗೆ ಹೇಳಬೇಕಾಗಿರಲಿಲ್ಲವೇನೋ!) ಬಲಗಡೆಯಿಂದ ಎಡಕ್ಕೆ ಹಾಗು ಬಲಕ್ಕೆ ಸ್ವಲ್ಪ ನೆಡೆದು ಮತ್ತೆ ಎಡಕ್ಕೆ ಬರಬೇಕು ಎಂದು! ಅಂತೆಯೆ ರಜಕುಮಾರ್ ಗೆ ಬೇಡರ ಕಣ್ಣಪ್ಪ ದ ಹಾಡಿನ ಚಿತ್ರೀಕರಣದಲ್ಲಿ ಹೇಳಿದ್ದರಂತೆ ಕ್ಯಾಮರ ನಿಮ್ಮ ಎದುರು ಮಾತ್ರವಿರುತ್ತದೆ ಬರಿ ಕೈ ಮೇಲೆ ಕೆಳಗೆ ಮಾಡುತ್ತಾ ಹಾಡಿದರೆ ಸಾಕು ಎಂದು! ಆಗ ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿದೇವ ಹಾಡುತ್ತ ಬಲಗೈ ಮೇಲೆ ಕೆಳಗೆ ಆಡಿಸಿದ್ದು ಸಹ ಅದ್ಬುತವಾಗಿ ಮೂಡಿಬಂದಿತ್ತು ಅಣ್ಣಾರವರ ಅಭಿನಯ. ಇನ್ನು ಈಗಿನವರು ಜನಸಾಮಾನ್ಯರ ಹೆಸರಿನ ಮೇಲೆ ಆಹ ಅವನ ಕಣ್ಣು ನನ್ನ ಮೇಲೆ, ಅಂತ ಹಾಡಿಬಿಡುತ್ತಾರಂತೆ, ಇದನ್ನು ನಾನು ಹೇಳುವುದಕ್ಕಿಂತ ಎಲ್ಲಾದರೂ ಟಿವಿಯಲ್ಲಿ ಮೈಸೂರು ಆನಂದ್ ಅವರ ಕಾರ್ಯಕ್ರಮ ಪ್ರಸಾರವಾದಗ ನಾನು ಬರೆದದ್ದನ್ನು ನೆನಸಿಕೊಳ್ಳಿ.

     ಇನ್ನು ಚಿತ್ರೀಕರಣಕ್ಕೆ ಅತೀ ಹೆಚ್ಚಿನ ದುಡ್ಡು ಸುರಿಯುವವರ ಸಾಲಿನಲ್ಲಿ ಬರುವ ಮೊದಲ ಹೆಸರು ರವಿಚಂದ್ರನ್. ಪ್ರೇಮಲೋಕದಂತ ಅದ್ಬುತ ಚಿತ್ರವನ್ನು ಬೆಳ್ಳಿ ತೆರೆಯ ಮೇಲೆ ಮೂಡಿಸಿದಾತ, . ಕಾರು ಸುಡುವ ದೃಶ್ಯವಿದ್ದರೆ ಹೊಸ ಕಾರನ್ನು ಕೊಂಡು ತಂದು ಸುಟ್ಟರೂ ಅದೇನು ವಿಶೇಷವಲ್ಲ! ಅದೇ ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ಪೆಷಾಲಿಟಿ, ಹಾಳು ಮಾಡುವುದಕ್ಕಂತಲೆ ಕೋಟಿ ಕೋಟಿ ಸುರಿಯಲು ಹಿಂಜರಿಯದ ಜಾಯಮಾನ ರವಿಚಂದ್ರನ್ ನದು. ಹೊಸ ಹೊಸ ಹೀರೋಯಿನ್ ಗಳನ್ನು ಅಮದು ಮಾಡಿಕೊಂಡು ಜೊತೆ ಮರಸುತ್ತುವ ದೃಶ್ಯಗಳಲ್ಲಿ ಅಭಿನಯಿಸುವ ರಸಿಕ,ರವಿಚಂದ್ರನ್ ಅಪ್ಪ ನಿರ್ದೇಶಕ ಎನ್ ವೀರಾಸ್ವಾಮಿ ಇದ್ದಿದ್ದರೆ ಎಷ್ಟು ಬಾರಿ ಹೃದಯಾಘಾತವಾಗುತ್ತಿತ್ತೋ ಏನೋ ಮಗ ಮಾಡುವ ಖರ್ಚು ವೆಚ್ಚಗಳನ್ನು ನೋಡಿ! ಆದರೂ ಏನೇ ಪ್ರಯೋಗಗಳಿರಲಿ ಏನಿದ್ದರೂ ಕನ್ನಡಕ್ಕೆ ಮಾತ್ರ ಸೀಮಿತ ಎನ್ನುವುದು ರವಿಚಂದ್ರನ್ ನೋಡಿ ಅನೇಕರು ಕಲಿಯಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ.

ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲದ ವಿಚಾರಗಳು ಇನ್ನೂ ಅನೇಕವಿದೆ, ಗೊತ್ತಿಲ್ಲದ ವಿಚಾರಗಳನ್ನು ಕಲ್ಪಿಸಿಕೊಂಡು ಬರೆಯುವುದು ಸರಿಯಲ್ಲ, ಸೆಟ್ ಗಳ ಬಗ್ಗೆ ಫಿಲಂ ಸಿಟಿಗಳ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ಎಷ್ಟೋ ಪುಟಗಳು ತುಂಬಿಹೋಗುತ್ತವೆಯೋ.. ಇಷ್ಟವಾಗಿದೆ ಬರವಣಿಗೆ ಅಂದು ಕೊಳ್ಳುತ್ತೇನೆ.


ಅಂದಹಾಗೆ, ಕೊನೆಯ ಮಾತು ನಿಮ್ಮ ಅನಿಸಿಕೆ ತಿಳಿಸಿ ಲೇಖನ ಹೇಗಿದೆ ಎಂದು.



Friday, May 27, 2011

ಸಾವಯವ ಕೃಷಿಯ ಬಗೆಗೆ ನಮಗೆಷ್ಟು ಗೊತ್ತು?

    ಸಂಪೂರ್ಣ ಸಾವಯವ ಕೃಷಿ ಈಗಿನ ಆಧುನಿಕ ಕೃಷಿಯಲ್ಲಿ ಸಾಧ್ಯವಾ? ರೋಗ ಭಾದೆಯಿಂದ/ ಹುಳ ಹುಪ್ಪಟೆಗಳ ಉಪಟಳದಿಂದ ಪಾರಾಗಲು ಸಾವಯವ ವಿಧಾನದಿಂದ ಸಾಧ್ಯವಿದೆಯಾ?

ರಾಸಾಯನಿಕ ಗೊಬ್ಬರ ಬಳಕೆ ಇಲ್ಲದೆ ಕೃಷಿ ಸಾಧ್ಯವಿಲ್ಲವಾ?? ಅನೇಕ ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ, ಅದೇ ರೀತಿ ಅಡಿಕೆ ಬೆಳೆಗೆ ಎಂಡೋ ಸಲ್ಫಾನ್ ನಂತ ಅಪಾಯಕಾರಿಯಾದ ಭೂಮಿಯಲ್ಲಿ ಅನೇಕ ತಲೆಮಾರುಗಳು ಕಳೆದರೂ ನಾಶವಾಗದೆ ಮುಂದಿನ ಪೀಳಿಗೆಯನ್ನೇ ಅಂಗವಿಕಲರನ್ನಾಗಿ ಮಾಡುವ ಎಂಡೋ ಸಲ್ಫಾನ್ ಕೀಟನಾಶಕ ಬಳಕೆ ಅಷ್ಟು ಅವಶ್ಯವಾ?

     ಉತ್ತರ ಅಷ್ಟೊಂದು ಸುಲಭವಲ್ಲ. ರಾಸಾಯನಿಕ ಗೊಬ್ಬರಗಳು ಅನಿವಾರ್ಯವೇನಲ್ಲ, ಇನ್ನು ಮಲೆನಾಡಿನ ಹಲವು ಅಡಿಕೆ ಕೃಷಿಕರು ತಮ್ಮ ತೋಟಗಳಿಗೆ ಈವತ್ತಿನವರೆಗೂ ಕೊಟ್ಟಿಗೆ ಗೊಬ್ಬರವನ್ನು ಬಿಟ್ಟು ಯಾವ ರಾಸಾಯನಿಕ ಗೊಬ್ಬರವನ್ನೂ ತಮ್ಮ ತೋಟಗಳಿಗೆ ಒದಗಿಸಿಲ್ಲ, ಪೋಷಕಾಂಶದ ಕೊರತೆಯಿಂದ ಫಸಲಿನಲ್ಲಿ ಹಾನಿಮಾಡಿಕೊಂಡವರು ಕಡಿಮೆಯೇನಿಲ್ಲ. ಮಣ್ಣಿನ ಫಲವತ್ತತೆ ಮತ್ತು ಮಣ್ಣಿನಲ್ಲಿರುವ ಫೋಷಕಾಂಶಗಳ ಪರೀಕ್ಷೆಮಾಡಿ ಬೇಕಾದಷ್ಟೇ ಪ್ರಮಾಣದ ಲಘು ಫೋಷಕಾಂಶಗಳನ್ನು ಭೂಮಿಗೆ ಒದಗಿಸುವುದು ಹೆಚ್ಚೇನು ಹಾನಿಕಾರಕವಲ್ಲವೇನೋ ಅನ್ನಿಸುತ್ತದೆ.

     ಇಂದಿನ ಕೃಷಿಕರ ಪರಿಸ್ಥಿತಿಯಲ್ಲಿ ಎಲ್ಲವೂ ಸವಾಯವ ವಿಧಾನ ಅಥವಾ ಶೂನ್ಯ ಕೃಷಿ ಎಂದು ತೋಟದಲ್ಲಿ ಹುಟ್ಟಿರುವ ಕಳೆಯನ್ನೂ ತೆಗೆಸದೆ ಓಡಾಡಲೂ ಬಾರದಂತಹ ಪರಿಸ್ಥಿತಿಯ ನಿರ್ಮಾಣ ಎಷ್ಟು ಸರಿ? ಮೇಲೆ ತಿಳಿಸಿದಂತ ತೋಟಗಳನ್ನು ನೋಡಿದಾಗ ಬೇಸರವಾಗದೆ ಇರಲಾರದು, ಕೆಲಸಗಾರರ ಕೊರತೆ ಇದೆ ನಿಜ, ಆದರೆ ತೋಟ ಗದ್ದೆಗಳ ಕೆಲಸ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಖಂಡಿತಾ ಬಂದಿಲ್ಲ, ಬರುವುದೂ ಇಲ್ಲವೆನೋ.



     ಸಾವಯವ ಕೃಷಿ ಮಾಡಲು ಹೋಗಿ ಬೆಳೆಗೆ ಹಾನಿಯಾದರೆ ಸ್ವಲ್ಪ ಪ್ರಮಾಣದ ರಾಸಾಯನಿಕ ಔಷದಿ ಬಳಸಿದ್ದರೆ ಬೆಳೆಯನ್ನು ಉಳಿಸಿಕೊಳ್ಳಬಹುದಿತ್ತೇನೋ ಅನಿಸಿಬಿಡುತ್ತಲ್ಲಾ.ಕೃಷಿ ತಜ್ಞರ ಸಲಹೆ ಪಡೆದು ಸರಿಯಾದ ಪ್ರಮಾಣದ ರಾಸಾಯನಿಕ ಔಷದಗಳ ಬಳಕೆ ಸೂಕ್ತವೇನೋ ಅನ್ನಿಸುತ್ತದೆ.



     ಅಂದಹಾಗೆ ನಾವು ಅಡಿಕೆ ತೋಟಕ್ಕೆ ಕೋಲ್ಮನ್ ಹೇಳಿ ಹೋದ ಅದೇ ಅಪ್ಪ ಹಾಕಿದ ಆಲದಮರ ಎನ್ನುವ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಿದರೂ ಅದು ಸಾವಯವ ಅನ್ನಿಸಿಕೊಳ್ಳಲಾರದು, ನಿಜ ಒಂದು ಪ್ರತಿಷತ ಪ್ರಮಾಣದಲ್ಲಿ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಿದಲ್ಲಿ ಸಾವಯವ ಕೃಷಿಯಂತೆ ಪರಿಗಣಿಸುವ ರಿಯಾಯತಿ ಇದೆ, ಆದರೆ ಅದು ಕೂಡ ಸಂಪೂರ್ಣ ಸಾವಯವ ಅನ್ನಿಸಿಕೊಳ್ಳಲಾರದು, ನೆನಪಿರಲಿ, ಬಯೋ ಎಂದು ಬರೆದದ್ದೆಲ್ಲವೂ ಸಾವಯವ ಎಂದು ಪರಿಗಣಿಸಿದರೆ ನಮ್ಮಂತಹ ಮೂರ್ಖರು ಮತ್ತಾರು ಇರಲಾರರು. ಒಂದು ಪರ್ಸೆಂಟ್ ಪ್ರಮಾಣದಲ್ಲಿ ಬೋರ್ಡೋ ಬಳಸಿದರೆ ಕೊಳೆರೋಗ ನಿಯಂತ್ರಣ ಎಷ್ಟು ಮಟ್ಟಿಗೆ ಸಾಧ್ಯ?

    ನಾವು ಎಷ್ಟು ಜನ ಕೃಷಿಕರು ಸರಿಯಾದ ಪ್ರಮಾಣದಲ್ಲಿ ಬೋರ್ಡೋ ಮಿಶ್ರಣ ತಯಾರಿಸಿದ್ದೇವೆ? ಒಬ್ಬೊಬ್ಬರದ್ದು ಒಂದೊಂದು ರೀತಿ, ಒಬ್ಬರು ಒಂದು ಕೇಜಿ ಸುಣ್ಣ, ಎರೆಡು ಕೇಜಿ ಮೈಲು ತುತ್ತ, ಇನ್ನೊಬ್ಬರದು ಮೂರುಕೇಜಿ ಸುಣ್ಣ ಒಂದು ಕೇಜಿ ಮೈಲುತುತ್ತ, ಮಿಶ್ರಣ ಸರಿಯಾಗಿದೆಯಾ, ಪಿ ಹೆಚ್ ಎಷ್ಟು ಎಂದು ಲಿಟ್ಮಸ್ ಟೆಸ್ಟ್ ಮಾಡುವುದು ಹೇಗೆ ಎನ್ನುವುದು ನಮ್ಮಲ್ಲಿ ಅನೇಕರಿಗೆ ಗೊತ್ತಿದೆಯೊ ಇಲ್ಲವೊ ಒಂದು ವೇಳೆ ಗೊತ್ತಿದ್ದರೂ ಲಿಟ್ಮಸ್ ಪೇಪರುಗಳು ಸಿಕ್ಕೋದಿಲ್ಲ. ಮೂರು ನಾಲ್ಕು ಬಾರಿ ಬೊರ್ಡೊ ಮಿಶ್ರಣ ಸಿಂಪರಣೆ ಮಾಡಿದರೂ ಕೊಳೆರೋಗ ನಿಯಂತ್ರಣ ಸಾಧ್ಯವಾಗಿಲ್ಲ.

     ಇನ್ನು ಮಳೆ ಬರುತ್ತಿರುವಾಗ ಕೊಳೆ ಔಷದಿ ಸಿಂಪಡಿಸಿದರೆ ಅದರ ಪ್ರಯೋಜನವಾಗುತ್ತಾ? ಮಳೆ ನೀರಿನಲ್ಲಿ ಔಷದಿ ಪ್ರಮಾಣ ಕಡಿಮೆಯಾಗದೆ ಉಳಿಯಲು ಸಾಧ್ಯವೇ?

      ಅಜ್ಜ ಮುತ್ತಾತನ ಕಾಲದಿಂದಲೂ ಬೋರ್ಡೋ ಮಿಶ್ರಣವನ್ನು ಮಳೆ ಸುರಿಯುತ್ತಿದ್ದಾಗ, ಕೊಳೆಯ ಲಕ್ಷಣಗಳು ಕಂಡಾಗ ಹೊಡೆಯುವ ಪರಿಪಾಠ ಅಷ್ಟು ಸುಲಭವಾಗಿ ಬಿಡಲು ಆಗುತ್ತಿಲ್ಲ, ಯಾರು ಏನೇ ಹೇಳಿದರೂ ಅಜ್ಜ ಮುತ್ತಾತನ ಕಾಲದಿಂದಲೂ ಮಾಡಿದ್ದನ್ನು ಬದಲಾಯಿಸಿಕೊಳ್ಳುವುದು ಕಷ್ಟವೇ ಅಲ್ಲವೇ?

Friday, December 31, 2010

ಗುಝಾರಿಶ್(Guzaarish) -ಇದು ಬಿಡುಗಡೆಯ ಬೇಡಿಕೆ, ಒಮ್ಮೆ ಚಿತ್ರ ನೋಡಿ ಎಂಬ ನನ್ನ ಗುಝಾರಿಶ್

ಗುಝಾರಿಶ್, ಸಂಜಯ್ ಲೀಲಾ ಬನ್ಸಾಲಿಯವರ ಮತ್ತೊಂದು ಕಲಾತ್ಮಕ ಚಿತ್ರ, ಗುಝಾರಿಶ್ ಎಂದರೆ ಬೇಡಿಕೆ ಅಥವಾ ಕೋರಿಕೆ ಎನ್ನುವ ಅರ್ಥ ಕೊಡುತ್ತದೆ ಅದು ಹೃತಿಕ್ ರೋಷನ್ ನ ಕಣ್ಣುಗಳಲ್ಲಿಯೇ ವ್ಯಕ್ತಾವಾಗಿ ಹೋಗುತ್ತೆ.

ಇದೊಂದು ಸಂಜಯ್ ಲೀಲಾ ಬನ್ಸಾಲಿಯವರ ದೃಶ್ಯಕಾವ್ಯ ಎಂದರೆ ತಪ್ಪಾಗಲಾರದು, ಇಲ್ಲಿ ಪಾತ್ರದ ಭಾವನೆಗಳಿಗೆ ಹೆಚ್ಚಿನ ಮಹತ್ವವಿದೆ, ಅದ್ಯಾಕೋ ಗೊತ್ತಿಲ್ಲ ಇಂದ್ರಜಾಲ ಅಥವಾ ಮ್ಯಾಜಿಕ್ ಶೋ ಗಳು ನನಗೆ ತುಂಬಾ ಇಷ್ಟವಾಗಿಬಿಡುತ್ತದೆ, ಕಣ್ಣು ಇಷ್ಟೆಲ್ಲಾ ಮೋಸ ಹೋಗುತ್ತಲ್ಲಾ ಅಂತಲೂ ಇರಬಹುದೇನೋ? ಅದೇನೋ ಒಂತರಾ ಖುಷಿ.

ಕಥಾನಾಯಕ ಈಥನ್ ಮಾಸ್ಕರೇನಸ್ (ಹೃತಿಕ್ ರೋಷನ್), ಒಂದು ಕಾಲದಲ್ಲಿ ಅದ್ಬುತ ಇಂದ್ರಜಾಲಿಗನಾಗಿ ಹೆಸರುಗಳಿಸುತ್ತಾನೆ, ಅದನ್ನು ಸಹಿಸದ ಆತನ ಗೆಳೆಯೆನೊಬ್ಬ ಈಥನ್ ನ ಅತಿ ಜನಪ್ರಿಯ ಕಾಂಡಲ್ ಲೈಟ್ ಟ್ರಿಕ್ ನಲ್ಲಿ ಗಾಳಿಯಲ್ಲಿ ತೇಲುತ್ತಿರುವಾಗ ಕ್ರೇನ್ ನ ತಂತಿಯನ್ನು ಕತ್ತರಿಸುವಂತೆ ಮಾಡಿ ಈಥನ್ ನ ಬೆನ್ನು ಮೂಳೆಗೆ ಪೆಟ್ಟು ಬಿದ್ದು ಪ್ಯಾರಲೈಸ್(ಪಾರ್ಶ್ವವಾಯು) ಆಗುವಂತಹ ಕ್ರೂರ ಕೃತ್ಯವನ್ನೆಸಗುತ್ತಾನೆ.ಈಥನ್ ಬೀಳುವ ದೃಶ್ಯ ಕಣ್ಣು ಮಂಜಾಗಿಸುತ್ತದೆ, ಕುತ್ತಿಗೆಯ ಮೇಲ್ಬಾಗ ಮಾತ್ರವೇ ಸ್ಪರ್ಶ ಜ್ಞಾನ ಮತ್ತು ಚಲಿಸಲು ಸಾಧ್ಯವಾಗುತ್ತದೆ, ಹೃತಿಕ್ ನ ಆಕರ್ಷಕ ಬಿಳಿ ಕಣ್ಣು ದೃಶ್ಯಕ್ಕೆ ಇನ್ನೊಂದಿಷ್ಟು ಭಾವನೆಗಳನ್ನು ತುಂಬಿದೆ ಅನ್ನಿಸುತ್ತೆ ಇಡೀ ಚಿತ್ರದ ಛಾಯಾಗ್ರಹಣ ಅದ್ಬುತ.

     ಬದುಕಿ ತೋರಿಸಬೇಕೆಂಬ ಛಲದಿಂದ ಹನ್ನೆರೆಡು ವರ್ಷಗಳನ್ನು ಕಳೆಯುವ ಈಥನ್ ಗೆ ನರ್ಸ್ ಆಗಿ ತೆರೆಯ ಮೇಲೆ ಆವರಿಸಿಕೊಳ್ಳುವುದು ಸೋಫಿಯಾ ಎನ್ನುವ ಚಲುವೆ, ಬರೀ ಚಲುವೆಯಲ್ಲ ಹಿಂದಿಚಿತ್ರರಂಗದ ಮೇರುತಾರೆ ಬಚ್ಚನ್ ಕುಟುಂಬದ ಸೊಸೆ ಐಶ್ ಬೇಬಿ, ಐಶ್ವರ್ಯ ರೈ, ನರ್ಸಗಳೆಲ್ಲಾ ಇಷ್ಟು ಸುಂದರವಾಗಿದ್ದರೆ ಅವರನ್ನು ಸಿಸ್ಟರ್ ಅಂತ ಕರೆಯೋದು ತುಂಬಾ ಕಷ್ಟಾವಾಗಿಬಿಡುತ್ತಿತ್ತೇನೋ ಅನ್ನುವಷ್ಟು ಸುಂದರವಾಗಿ ಕಾಣಿಸುತ್ತಾಳೆ. ಚಿತ್ರದ ಒಂದು ದೃಶ್ಯದಲ್ಲಿ ಹೃತಿಕ್ ಸಹ ಹೇಳುತ್ತಾನೆ ನಾನು ಈಕೆಯನ್ನು ಸಿಸ್ಟರ್ ಎಂದು ಕರೆಯಲು ಸಾದ್ಯವಾಗದಷ್ಟು ಅಂದಗಾತಿ ಎಂದು!.



     ಹಾಸಿಗೆ ಹಿಡಿದ ಹನ್ನೆರೆಡು ವರ್ಷಗಳಲ್ಲಿ ಈಥನ್ ರೇಡಿಯೋ ಜಾಕಿಯಾಗಿ "ರೇಡಿಯೋ ಜಿಂದಗಿ" ಎನ್ನುವ ಕಾರ್ಯಕ್ರಮದ ಮೂಲಕ ಲಕ್ಷಾಂತರ ಕೇಳುಗರ ಬದುಕಿನ ಆಶಾಕಿರಣವಾಗಿ ಬದುಕುವ ನಾಯಕನಿಗೆ ಬದುಕಿದ್ದು ಸಾಕು ಎನಿಸಲು ಆರಂಭವಾಗಿಬಿಡುತ್ತದೆ, ತನ್ನ ಅಸಹಾಯಕತೆಯನ್ನು ಸೋಫಿಯಾಳೊಂದಿಕೆ ತೋಡಿಕೊಳ್ಳುತ್ತಾನೆ, ಸಿಟ್ಟುಬಂದಾಗ ತನ್ನಿಂದ ಸಿಟ್ಟನ್ನು ವ್ಯಕ್ತಪಡಿಸಲು ಅಸಾಧ್ಯವೆನಿಸುತ್ತದೆ, ಮೂಗಿನ ಮೇಲೆ ಕುಳಿತ ನೊಣವನ್ನು ಸಹ ಬೆರೆಸುವುದು ಸಾಧ್ಯವಾಗದೇ ಹೋದಾಗ ಕಣ್ಣುಗಳಲ್ಲಿ ನೋವು ಮುಖದಲ್ಲಿ ನಗು ಬರುವ ದೃಶ್ಯ ಅದ್ಬುತವಾಗಿ ಮೂಡಿಬಂದಿದೆ. ದೋ ಎಂದು ಸುರಿಯುವ ಮಳೆ ಆರಂಭವಾದಾಗ ಮಾಳಿಗೆ( ಸೂರು)ಯಿಂದ ತೊಟ್ಟಿಕ್ಕುವ ಮಳೆ ಹನಿ ಈಥನ್ ನ ಮುಖದ ಮೇಲೆ ಬೀಳಲಾರಂಬಿಸುತ್ತದೆ ಮೊದಲ ನಾಲ್ಕು ಹನಿಗಳು ಆತನಿಗೆ ಖುಷಿ ನೀಡುತ್ತದೆ, ನನ್ನೊಂದಿಗೆ ಯುದ್ದಕ್ಕೆ ಬರುತ್ತೀಯಾ ಬಾ ಎಂದು ಹೇಳುತ್ತಾನೆ ಆ ನಂತರ ಅದು ಕಿರಿಕಿರಿ ನೀಡಲು ಆರಂಭವಾಗುತ್ತದೆ, ರಾತ್ರಿ ಸಮಯವಾದ್ದರಿಂದ ಸೂಫಿಯಾ ತನ್ನ ಮನೆಗೆ ತೆರಳಿರುತ್ತಾಳೆ, ಯಾರೂ ಸಹಾಯಕ್ಕೆ ಬರದೇ ಬೆಳಗ್ಗೆ ಸೋಫಿಯಾ ಬರುವ ತನಕವೂ ಅದೇ ಕಿರಿಕಿರಿ ಅನುಭವಿಸುವ ದೃಶ್ಯಗಳು ಮನ ಕಲಕುವಂತಿದೆ, ಹದಿನಾಲ್ಕು ವರ್ಷಗಳ ಕಾಲ ಯಾವುದೇ ಬೇಸರವಿಲ್ಲದೆ ತನ್ನ ಸೇವೆಮಾಡಿದ ಚಲುವೆಗೆ ಹೂಗುಚ್ಚದ ಗಡಿಗೆಯ(Flower Pot)ನ್ನು ಗೋಡೆಗೆ ಎಸೆಯುವಂತೆ ಹೇಳುತ್ತಾನೆ, ತನಗೆ ಸಿಟ್ಟನ್ನು ವ್ಯಕ್ತ ಪಡಿಸೋಕು ಆಗದ ಪರಿಸ್ಥಿತಿ ಎಂದು ನೋವನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ.

     ರೇಡಿಯೋ ಪ್ರೊಡ್ಯೂಸರ್ ಎಂದು ಸುಳ್ಳು ಹೇಳಿ ಮ್ಯಾಜಿಕ್ ಕಲಿಯಲು ಬಂದ ಓಮರ್ ಸಿದ್ದಗಿ(ಆದಿತ್ಯ ರಾಯ್ ಕಪೂರ್) ಸಿಕ್ಕಿ ಬೀಳುತ್ತಾನೆ, ತಾನು ಚಿಕ್ಕಂದಿನಲ್ಲಿ ನಿಮ್ಮಿಂದ ಪಡೆದ ಆಟೋಗ್ರಾಫ್ ಇಟ್ಟುಕೊಂಡಿದ್ದೇನೆ, ಮೆಜಿಷಿಯನ್ ಆಗೋದು ತನ್ನ ಮಹದಾಸೆ ಎಂದಾಗ, ನಾಯಕ ತಾನು ಕಲಿತ ಇಂದ್ರಜಾಲ(ಮ್ಯಾಜಿಕ್) ತನ್ನೊಂದಿಗೆ ಮಣ್ಣಾಗಬಾರದೆನ್ನುವ ಉದ್ದೇಶದಿಂದ ತನಗೆ ಈ ಪರಿಸ್ಥಿತಿಗೆ ತಂದ ಗೆಳೆಯನ ಮಗನೆಂದು ಗೊತ್ತಿದ್ದೂ ಸಂಪೂರ್ಣವಾದ ವಿದ್ಯೆ ಧಾರೆ ಎರೆಯುತ್ತಾನೆ.

     ಕಾನೂನಿನ ಸಲಹೆಗಾರ್ತಿಯಾಗಿ, ಮನೆಯ ಒಬ್ಬ ಸದಸ್ಯೆಯಂತೆ ಇರುವ ದೇವಯಾನಿ(ಶೆಹೆನಾಝ್)ಯ ಮೂಲಕ ಇಚ್ಛಾಮರಣಕ್ಕೆ ಕೋರ್ಟಗೆ ಅರ್ಜಿ ಹಾಕಿ ವಾದಿಸಿವುಂತೆ ಕೇಳಿಕೊಳ್ಳುತ್ತಾನೆ, ಅದಕ್ಕೆ ಒಪ್ಪದೆ ನಿನಗೆ ಸಾಯುವಂತಹದ್ದೇನಾಗಿದೆ ಎಂದಾಗ ಬದುಕಿದ್ದು ಏನು ಮಾಡಲು ಸಾಧ್ಯ, ನಿನ್ನ ಸಂಬಳ ನಿನ್ನ ಕೈ ಸೇರುತ್ತೆ ವಾದ ಮಾಡು ನೀನು ನನ್ನ ಲಾಯರ್ ಮಾತ್ರ ಎಂದು ಸಿಡುಕುವ ನಾಯಕನಿಂದ ಸಿಟ್ಟೆದ್ದು ದೇವಯಾನಿ ಇನ್ನೇನಾದರೂ ಬೇಕಾ ಎಂದಾಗ ಆತ ಹೇಳುವ ಮಾತು ತನಗೆ ಸುಂದರವಾದ ಹೆಣ್ಣು ಬೇಕು ಎನ್ನುವ ಮಾತುಗಳು ಆತನ ಅಸಾಹಾಯಕತೆಯ ಬಗ್ಗೆ ಸೂಚ್ಯವಾಗಿ ಹೇಳಿಕೊಳ್ಳುವ ಅದ್ಬುತ ವಾಕ್ಚಾತುರ್ಯದ ಸೀನುಗಳು,

     ಓಮರ್ ಹಾಸಿಗೆ ಸರಿಮಾಡಲೆಂದು ಈಥನ್ ನನ್ನು ಎತ್ತಿ ಕೂರಿಸಿ ಗೊತ್ತಾಗದೆ ಕೈ ಬಿಟ್ಟಾಗ ನೆಲಕ್ಕೆ ಬಿದ್ದಾಗ ಆತನನ್ನು ಎತ್ತಲಾಗದೆ ಸೋಫಿಯಾಳನ್ನು ಕೂಗಿ ಕರೆದಾಗ ಓಡಿ ಬಂದು ಎತ್ತಿ ಮಲಗಿಸುತ್ತಾಳೆ, ಆಗ ನಾಯಕ ಅವಳಿಗೆ ಹೇಳುತ್ತಾನೆ ಎಂತಾ ದುರಂತವಾಗಿ ಹೋಯಿತು, ಎಷ್ಟೇ ಪ್ರಯತ್ನ ಪಟ್ಟರೂ ನಿನ್ನ ಕಾಲುಗಳು ಕಾಣಲೇ ಇಲ್ಲ ಎಂದು, ಐಶ್ ಬೇಬಿ ಚಿತ್ರದುದ್ದಕ್ಕೂ ಉದ್ದ ಗೌನ್ ತೊಟ್ಟೇ ಓಡಾಡುತಾಳೆ, ನೀನು ಮಿನಿ ಸ್ಕರ್ಟ್ ಹಾಕಿಕೊಂಡು ಓಡಾಡಿದಾಗ ನಿನ್ನ ಸುಂದರ ಕಾಲುಗಳನ್ನು ನಾನು ನೋಡಿದಂದು ನಾನು ಮತ್ತೆ ನೆಡೆಯಲಾರಂಭಿಸಿಬಿಡುತ್ತೇನೆ ಎಂದು ಹಾಸ್ಯದ ಚಟಾಕಿ ಹಾರಿಸುವ, ತುಸು ಹೆಚ್ಚೆನಿಸುವ ಇಂಗ್ಲೀಷ್ ಭಾಷೆ ಬಳಸಲಾಗಿದೆ ಎಂದುಕೊಳ್ಳುವಾಗಲೇ ಹೃತಿಕ್ ಮಾತಿನ ಶೈಲಿ ಇಷ್ಟಾಗಿಬಿಡುತ್ತೆ!

     ಮುಂದೆ ಈಥನ್ ನ ಡಾಕ್ಟರ್ ನಾಯಕ್(ಸುಹೇಲ್ ಸೇಟ್)ಗೆ ದೇವಯಾನಿ ಈಥನ್ ಇಚ್ಛಾಮರಣದ ಇಂಗಿತ ವ್ಯಕ್ತ ಪಡಿಸಿದ್ದಾನೆಂದು ಹೇಳುತ್ತಾಳೆ, ನಂತರ ಡಾಕ್ಟರ್ ಕೂಡಾ ಮನ ಪರಿವರ್ತನೆಗೆ ಪ್ರಯತ್ನಿಸಿದಾಗ ಈಥನ್ ಕೇಳುವ ಪ್ರಶ್ನೆಗಳಿಗೆಲ್ಲಾ ಡಾಕ್ಟರ್ ಇಲ್ಲಾ ಎನ್ನುವ ಉತ್ತರವನ್ನಷ್ಟೇ ನೀಡಬೇಕಾಗುತ್ತದೆ.

ದೇವಯಾನಿಗೆ ಈಥನ್ ನೋವಿನ ಅರಿವಾಗಿ ಯುಥನೇಶಿಯಾ( ಇಚ್ಛಾ ಮರಣ)ದ ಅರ್ಜಿಯನ್ನು ಕೋರ್ಟ್ ನಲ್ಲಿ ಹಾಕುತ್ತಾಳೆ,ರೇಡಿಯೋ ಮೂಲಕ ನಿನ್ನೆಲ್ಲಾ ಕೇಳುಗರ ಒಗ್ಗಟ್ಟು ಸಂಪಾದಿಸುವ ಮೂಲಕ ನಿನ್ನ ಕೋರಿಕೆಯನ್ನು ಜಡ್ಜ್ ನಿರಾಕರಿಸಲಾಗದಷ್ಟು ಮಾಡು ಎಂದು ಸಲಹೆ ನೀಡುತ್ತಾಳೆ, ಪ್ರೊಜೆಕ್ಟ್ ಇಥನೇಶಿಯಾ(ಯುಥನೇಶಿಯಾ) ಕಾರ್ಯಕ್ರಮದಲ್ಲಿ ಮಾತಾಡುವ ದೃಶ್ಯಗಳನ್ನು ನೋಡಿದರೇ ಚೆನ್ನ. ವಾದ ಆರಂಭವಾದಾಗ ಪ್ರತಿವಾದಿ ಲಾಯರ್ ವಿರೋಧ ವ್ಯಕ್ತಪಡಿಸುವ ದೃಶ್ಯಗಳು, ಜಡ್ಜ್ ಈಥನ್ ನ ಮನೆಗೇ ಬಂದು ವಾದ ವಿವಾದಗಳನ್ನು ಆಲಿಸುವ, ನೀವೇನು ಹೇಳಲು ಇಚ್ಚಿಸುತ್ತೀರಿ ಎಂದು ನಾಯಕನನ್ನು ಕೇಳಿದಾಗ ನಾನೊಂದು ಮ್ಯಾಜಿಕ್ ತೋರಿಸುತ್ತೇನೆ ಯುವರ್ ಆನರ್ ಎಂದು, ಪೆಟ್ಟಿಗೆಯೊಳಕ್ಕೆ ಅರವತ್ತು ಸೆಕೆಂಡು ಇರುವಂತೆ ಪ್ರತಿವಾದಿ ಲಾಯರ್ ಗೆ ಹೇಳಿದಾಗ ಅದರೊಳಗಿದ್ದ ಲಾಯರ್ ಅಲ್ಲಿರಲಾರದೆ ಪೆಟ್ಟಿಗೆಯೊಳಗಿಂದಲೇ ಬಾಗಿಲು ಬಡಿಯುವ, ನಂತರ ಇಂತ ಕಿರುದಾದ ಪೆಟ್ಟಿಗೆಯಲ್ಲಿ ಉಸಿರುಗಟ್ಟುತ್ತೆ, ಅಲುಗಾಡಲೂ ಸಾಧ್ಯವಿಲ್ಲ ಎಂದಾಗ ನೀವು ನನ್ನ ಜೀವನದ ಅರವತ್ತು ಸೆಕೆಂಡ್ ಗಳನ್ನು ಕೆಳೆಯಲು ಸಾಧ್ಯವಿಲ್ಲ ಎಂದಾಯಿತು, ಇದೇ ನನ್ನ ಪರಿಸ್ಥಿತಿ ಎಂದು ಹೇಳುವ ಸೀನುಗಳು ಇಷ್ಟವಾಗುತ್ತೆ.

ಮುಂದೆ ಏನಾಯಿತು? ಜಡ್ಜ್ ನಾಯಕನ ಪರವಾಗಿ ತೀರ್ಪು ಕೊಡುತ್ತಾರಾ? ಸೋಫಿಯಾ ಗಂಡನಿಂದ ಡೈವೋರ್ಸ್ ಪಡೆಯುತ್ತಾಳ! ಸೋಫಿಯಾಳ ಗಂಡನ ಬಗೆಗಿನ ನಾನು ಹೇಳಲೇ ಇಲ್ಲ ಬೇಕಂತಲೇ!,ನಾಯಕ ನಾಯಕಿಯ ಮಧ್ಯೆ ಅದೊಂತರಾ ಸರಿ ಬರೋಲ್ಲ ;) ಎಷ್ಟೇ ಕಥೆ ಹೇಳಿದರೂ ಕೆಲವೊಂದು ವಿಚಾರಗಳು ಬಿಟ್ಟು ಹೋಗಿರುತ್ತದೆ, ಪೂರ್ತಿ ಕಥೆಯನ್ನು ನಾನೇ ಹೇಳಿದರೆ ಚಿತ್ರ ಇಷ್ಟೇನಾ ಅನ್ನಿಸಿಬಿಡಬಹುದು. ಇಲ್ಲಿ ಬರೆದದ್ದೆಲ್ಲಾ ಸಂಕಲನಕಾರ ನೋಡಿದರೆ ಬೈಯ್ಯುವ ಸಾಧ್ಯತೆ ಇಲ್ಲದಿಲ್ಲ, ನನಗೆ ನೆನಪಾದಂತೆಲ್ಲಾ ಬರೆದಿದ್ದೇನೆ, ಒಂದು ಆರ್ಡರ್ ಅಂತ ಇರುತ್ತಲ್ಲಾ ಅದು ಇಲ್ಲಿ ಮಿಸ್ಸಾಗಿ ಹೋಗಿದೆ!

ಕೆಲವು ಚಿತ್ರಗಳನ್ನು ನೋಡಿದಾಗ ಚಿತ್ರ ಎಷ್ಟು ಚನ್ನಾಗಿದೆ ಅನ್ನಿಸಿಬಿಡುತ್ತೆ, ಆದರೆ ಮನೋರಂಜನೆಗಾಗಿ ಥಿಯೇಟರಿಗೆ ಬರುವ ಪ್ರೆಕ್ಷಕನಿಗೆ ಅದೇ ನೋವು ಕಣ್ಣಿರು ಕರುಳಿನ ಕಥೆಗಳೆಲ್ಲಾ ದಿನನಿತ್ಯ ನೋಡಿ ಇಷ್ಟಾ ಅಗೋದೆ ಕಷ್ಟ, ಇಂತಹುದೇ ಕಾರಣಕ್ಕೆ ಸಿನಿಮಾ ಗೆದ್ದಿದ್ದೆ ಸೋತಿದೆ ಎಂದು ಪಟ್ಟಿಮಾಡೋದು ಅಸಾಧ್ಯದ ಕೆಲಸವೇ ಸರಿ.ಸಂಜಯ್ ಲೀಲಾ ಬನ್ಸಾಲಿ ಚಿತ್ರ ಅಂತಲೇ ಚಿತ್ರ ನೋಡೋಕೆ ಹೋದವರಿಗೆ ಚಿತ್ರ ಅದ್ಬುತವಾಗಿದೆ ಅನ್ನಿಸದೇ ಇರಲಾರದು. ಹಾಡುಗಳು ಕೇಳಲು ನೋಡಲು ಚನ್ನಾಗಿದೆ.
ನೋಡಿ ಅನಿಸಿಕೆ ಹೇಳ್ತೀರಾ ಅಲ್ವಾ?.

ಇನ್ನೇನು ಕೆಲವೇ ಘಂಟೆಗಳಲ್ಲಿ ಹೊಸ ವರ್ಷ ಆರಂಭವಾಗಿಬಿಡುತ್ತೆ.. ಹೊಸ ವರುಷ ಹೊಸ ಹರುಷ ತರಲಿ ಎಂದು ಹಾರೈಸುತ್ತೇನೆ,ಹೊಸ ವರುಷದ ಹಾರ್ದಿಕ ಶುಭಾಶಯಗಳು.